ಮೇ 4, 2011

ದೆಗಡಿ


(ವಿ.ಸೂ.: ಗಟ್ಟಿಯಾಗಿ ಓದಿಕೊಳ್ಳುವುದು)

ದೆಟ್ಟರೆದುರು ದಾಕು ಬಾತು
ಆಡದಿರುವುದು ಸಭ್ಯವೇ?
ಆದರೆದ್ದಯ ಬೂಗು ಕಟ್ಟಿದೆ
ಬಾತದಾಡಲು ಸಾಧ್ಯವೇ?

ಎಟ್ಟುದಿದಗಳು ಕಳೆದರಿದ್ದೂ
ಬೂಗು ಭರ್ತಿ ಕಟ್ಟಿದೆ
ಅವದು ಇವದು ಹೇಳಿದೆಲ್ಲ
ಬದ್ದು ಬಾಡಿ ಆಗಿದೆ

ಅಬ್ರತಾಜಡ ತಿಕ್ಕಿ ದೋಡಿ
ಎದ್ದರೊಬ್ಬರು ಗೆಳೆಯರು
ಸುಟ್ಟ ಅರಶಿಡ ಹೊಗೆಯ ಬೂಸಲು
ಅಳಲೆ ಪಡ್ಡಿತ ಕರೆದರು

ಅಬ್ರತಾಜಡ ತಿಕ್ಕಿ ತಿಕ್ಕಿ
ಬೂಗು ಸುಲಿದೇ ಹೋಯಿತು
ಅರಶಿಡ ಹೊಗೆಯ ಕಪ್ಪು ಕಾಡಿಗೆ
ಬೂಗಿದೊಳಗೆ ಅಟ್ಟಿತು

ಕಷಾಯ ತದ್ದರು ಅತ್ತೆ ಅದಕೆ
ಬೂಗಿದಿದ್ದ ಸೆಳೆಯಲು
ಕೊಚ್ಚ ಹೊತ್ತು ಬೂಗಲಿರಿಸಿ
ಬಳಿಕ ಬೂಗು ತೊಳೆಯಲು

ದೋಡೇ ಬಿಡುವ ಎದ್ದು ದಾದು
ಬೂಗಿದೊಳಗೆ ಸೆಳೆದೆದು
ದೆತ್ತಿಗೇರಿತು ಎದ್ದ ಪ್ರಾಡವು
ದೆಗಡಿ ಹಾಗೇ ಉಳಿಯಿತು

ಅಕ್ಕ ಒದ್ದು ದಶ್ಯ ಕೊಟ್ಟರು
ಸೆಳೆದು ದೋಡು ಎದ್ದರು
ದೆಗಡಿಯೊಬ್ಬೆ ಬುಗಿಯಲೆದ್ದು
ದೊಡ್ಡ ಚಿಟಕು ಹಿರಿದೆದು

ಕಡ್ಡು ಬೂಗಿಗೆ ಬೆಕ್ಕಿ ಹಿಡಿಯಿತು 
ಹತ್ತಿ ಉರಿಯಿತು ಲೋಕವು
ಅಕ್ಕ ದೀಡಿದ ದಶ್ಯವೆದ್ದರೆ
ಬೆಡಸು ಕಾಳಿದ ಹುಡಿಯದು 

ದಿಬಗೆ ತಿಳಿದ ಬದ್ದು ಇದ್ದರೆ
ದದಗೆ ಕೊಚ್ಚ ತಿಳಿಸಿರಿ
ಬೆಡಸು, ಕಾಳು, ದಶ್ಯ, ಅರಶಿಡ
ಬಿಟ್ಟು ಬೇರೆ ಹೇಳಿರಿ

- ಕೊಂಕಣಿ ಮೂಲ: ಫಾ. ಪಾವ್ಲ್ ಲುವಿಸ್ ಬೊತೆಲ್
-ಕನ್ನಡಕ್ಕೆ: ಗುರು ಬಾಳಿಗಾ

ಫೆಬ್ರವರಿ 3, 2011

ಒಂದು ಹೆಸರಿಲ್ಲದ ಕೊಂಕಣಿ ಕವಿತೆ


ಮನೆಯೊಳಗೆ ಬರೀ ಮನುಷ್ಯರಷ್ಟೇ ಅಲ್ಲ
ನಾಯಿ ಬೆಕ್ಕುಗಳೂ ಬೇಕು
ಅವಿಲ್ಲದೇ ಮನೆ ಮನೆಯಾಗುವುದಿಲ್ಲ


ಮನೆಯೊಳಗೆ ಇಲಿ ಇರಬೇಕು
ಮನೆಯೊಳಗೆ ಜಿರಲೆಗಳೂ ಬೇಕು
ಮನೆಯೊಳಗೆ ಬೇಕು ಹಲ್ಲಿ
ಮನೆಯೊಳಗಿರಬೇಕು ಸೊಳ್ಳೆಗಳು


ಮನೆಗೆ ಆಗಾಗ ಬರುತ್ತಿರಬೇಕು ನೆಂಟರು
ಆಯುಷ್ಯದಲ್ಲಿ ಒಮ್ಮೆಯಾದರೂ
ಮನೆಯೊಳಗೆ ಬರಬೇಕು ಹಾವು
ಹಾಗಾಗದೇ ಮನೆ ಮನೆಯೆನಿಸುವುದಿಲ್ಲ


ಮನೆ ಕೇವಲ ಮನುಷ್ಯನದೇ ಮತ್ತು
ಮನುಷ್ಯನಿಗಾಗಿಯಷ್ಟೇ ಅಲ್ಲ
ಮನೆ ಸರ್ವ ಪ್ರಾಣಿಸಂಕುಲಕ್ಕೆ ಸೇರಿದ್ದು


ನಾನು ವಾಸಿಸುವ ಮನೆಯೊಳಗೆ
ಅವೆಲ್ಲ ಇವೆ.
ನಾನೇ ಇಲ್ಲ!


- ಕಾಶಿನಾಥ್ ಶಾಂಬಾ ಲೋಲಿಯೆಂಕಾರ್


ಎಸ್. ಡಿ. ತೆಂಡುಲ್ಕರ್ ಎನ್ನುವ ಮಹಾನುಭಾವ ಕೊಂಕಣಿ ಕವಿತೆಗಳನ್ನು ಬರೆಯುವುದು ಕಾಶಿನಾಥ್ ಶಾಂಬಾ ಲೋಲಿಯೆಂಕಾರ್ ಎನ್ನುವ ಹೆಸರಿನಲ್ಲಿ.
ವಿಚಿತ್ರ ಸ್ವಭಾವದ ಈ ಕವಿ, ತನ್ನ ಫೋಟೋ ಯಾರಿಗೂ ಕೊಡುವುದಿಲ್ಲ. ಫೋಟೋ ತೆಗೆಯಲೂ ಬಿಡುವುದಿಲ್ಲ. ಪ್ರಶಸ್ತಿಗಳಿಗೆ ಪುಸ್ತಕ ಕಳುಹಿಸುವುದಿಲ್ಲ. ಯಾರಾದರೂ ತಾವಾಗಿಯೇ ಪ್ರಶಸ್ತಿ ನೀಡಿದರೂ ಸ್ವೀಕರಿಸುವುದಿಲ್ಲ. 
ಅವರ ಕವಿತೆಗಳೂ ಅವರಂತೆಯೇ, ಬೇರೇಯೇ ತರದವು. ಇಡೀ ಭಾರತೀಯ ಸಾಹಿತ್ಯದಲ್ಲೇ ಬೇರೆಯೇ ಎನಿಸುವಂತವು.


ಕೃಪೆ: http://www.kavitaa.com/

ಜನವರಿ 20, 2011

ಒಂದು ಗುಟ್ಟು

ಇಬ್ಬರು ಹುಡುಗಿಯರು
ಜೀವನದ ಗುಟ್ಟನ್ನು ಕಾವ್ಯದ
ಒಂದು ಅಚಾನಕ್ ಸಾಲಿನಲ್ಲಿ
ಕಂಡುಕೊಂಡರಂತೆ.

ಆ ಗುಟ್ಟನ್ನು
ತಿಳಿಯದಿರುವ ನಾನೇ 
ಆ ಸಾಲನ್ನು ಬರೆದಿದ್ದೆ. ಅವರು ನನಗೆ 
ಹೇಳಿ ಕಳುಹಿಸಿದರು,

(ಯಾರದೋ ಮೂಲಕ)
ಅವರು ಅದನ್ನು 
ಕಂಡುಕೊಂಡಿರುವರೆಂದು,
ಅದು ಏನೆಂದು ಅಥವಾ

ಯಾವ ಸಾಲಿನಲ್ಲೆಂದು 
ಕೂಡ ಅಲ್ಲ. ಒಂದು ವಾರಕ್ಕೆ 
ಮಿಗಿಲಾಯ್ತು, ಇದೀಗ ಅವರು
ಆ ಗುಟ್ಟನ್ನು ಮರೆತಿರುವುದರಲ್ಲಿ

ಸಂಶಯವಿಲ್ಲ,
ಆ ಸಾಲು ಮತ್ತು ಕವಿತೆಯ
ಹೆಸರನ್ನೂ ಕೂಡ. ನಾನೂ ಕಾಣದ್ದನ್ನು
ಅವರು ಕಂಡದ್ದಕ್ಕೆ, ನನಗೆ

ಅವರ ಮೇಲೆ ಪ್ರೀತಿ,
ಆ ಸಾಲನ್ನು ಬರೆದುದಕ್ಕಾಗಿ
ನನ್ನ ಪ್ರೀತಿಸಿದರಲ್ಲ ಅದಕ್ಕೂ, ಜೊತೆಗೆ
ಮರೆತುಬಿಟ್ಟದ್ದಕ್ಕೂ. ಅವರಿನ್ನು 

ಸಾವಿರ ಸಲ, ಸಾವು 
ಅವರನ್ನು ಅರಸುವ ತನಕ, 
ಮತ್ತೆ ಮತ್ತೆ ಕಂಡುಕೊಳ್ಳಬಹುದು, ಇತರ
ಸಾಲುಗಳಲ್ಲಿ,

ಇತರ ಘಟನೆಗಳಲ್ಲಿ. ಮತ್ತು
ಅದನ್ನು ತಿಳಿಯ 
ಬಯಸಿದ್ದಕ್ಕಾಗಿ, 
ಹಾಗೊಂದು ಗುಟ್ಟು 

ಇದೆಯೆಂದು
ಊಹಿಸಿದ್ದಕ್ಕಾಗಿ, ಹೌದು,
ಅದನ್ನು ಎಲ್ಲಕ್ಕಿಂತ ಹೆಚ್ಚು
ಪ್ರೀತಿಸುತ್ತೇನೆ.
_____________________
ಡೆನಿಸ್ ಲೆವೆರೆಟಾವ್

ಜನವರಿ 19, 2011

ಸೆಗಣಿ

ಊರೊಳಗೆ ಕಾಲಿಡಲು ಜಾಗವಿಲ್ಲ
ಎಲ್ಲಿ ನೋಡಿದರಲ್ಲಿ ಸೆಗಣಿ..

ಗಲ್ಲಿಗಲ್ಲಿಯಲ್ಲಿ,
ಹೆಜ್ಜೆ ಹೆಜ್ಜೆಗೂ,
ಬೀದಿಯಲ್ಲಿ, ಬಾಗಿಲಲ್ಲಿ,

ಚಪ್ಪಲಿ ಕೊಳೆಯಾದೀತೆಂದು
ಬರಿಗಾಲಲ್ಲಿ ನಡೆಯುತ್ತಿದ್ದರು ಜನರು
ನಾನೂ ಮೊದಲ ಬಾರಿಗೆ
ಬರಿಗಾಲಲ್ಲಿ, ಭಿಕಾರಿಯೆಂದಲ್ಲ.

ಕೊನೆಗೊಮ್ಮೆ ತುಳಿದೇ ಬಿಟ್ಟೆ!

ಎಷ್ಟೆಂದು ಹಾರಿ ಎಗರಲಿ ನಾನು,
ಎಷ್ಟೆಂದು ಟೊಂಕ ಹಾಕಲಿ,
ಎಷ್ಟೆಂದು ಆಡಲಿ ಕುಂಟಾಬಿಲ್ಲೆ,

ನೀರರಸಿ ನಡೆದಾಗ
ಬಳಿಯಲ್ಲೇ ಇತ್ತು ಇಗರ್ಜಿ

ಅಲ್ಲಿ, ಅಂತಿಮ
ಗುರುವಾರದ ಪೂಜೆ, 
ಪಾದರಿ ಆಪೋಸ್ತಲರ
ಕಾಲು ತೊಳೆಯುತ್ತಿದ್ದರು

ಕಿಟಕಿಯಿಂದ ಇಣುಕುತ್ತಾ ನಿಂತೆ

ಈ ಕೊಳೆ ತೊಳೆಯಲು
ಆ ’ಟೀಸ್ಪೂನ್’ ನೀರು ಎಲ್ಲಿ ಸಾಕು?
ಈ ಕಾಲು ಒರಸಲು
ಅವರ, ತುಣುಕು ಅಂಗೈಬಟ್ಟೆ ಎಲ್ಲಿ ಸಾಕು?

ಆ ಕ್ಷಣಕ್ಕೆ,
ಗುಡುಗು ಮಿಂಚು,
ಮಳೆ ಸುರಿದೇ ಸುರಿಯಿತು

ಸೂರಿನ ಅಂಚಿನಿಂದ ಸುರಿಯುತ್ತಿರುವ
ನೀರಧಾರೆಗೆ ಕಾಲೊಡ್ಡಿದೆ.
ಕೊಳೆಯೆಲ್ಲಾ ತೊಳೆದು ಹೋಯಿತು.

ಅಂಟಿರುವ ಕೊಳೆತೊಳೆದು ಪುನೀತನಾಗಲು
ಒಳಗೆ ಹೋಗಬೇಕೆಂದೇನೂ ಇಲ್ಲ.
ಹೊರಗೆ ನಿಂತರೂ ಸಾಕು
ಮೈಲಿಗೆಯ ಅಂಜಿಕೆಯೂ ಇಲ್ಲ.
____________________________
ಕೊಂಕಣಿ ಮೂಲ: ಮೆಲ್ವಿನ್ ರೊಡ್ರಿಗಸ್

ಆಗಸ್ಟ್ 23, 2009

ಮೊಳಕೆಯೊಡೆದ ಕತೆಗಳು

ಅಂದು ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದ್ದ ಕತೆಯನ್ನು ಓದಿ ಮುಗಿಸಿದ ವಿದ್ಯುತ್ ನಾರಾಯಣ ಶರ್ಮ "ಥುತ್ ಇದೆಂಥಾ ಕತೆ. ಇದಕ್ಕಿಂತ ಒಳ್ಳೆಯ ನೂರು ಕತೆಗಳನ್ನು ನಾನು ಬರೆಯಬಲ್ಲೆ" ಎಂದು ಪುರವಣಿಯನ್ನು ರೇಜಿಗೆಯಿಂದ ನೆಲಕ್ಕೊಗೆಯುತ್ತಿದ್ದಂತೆ ಅವನ ತಲೆಯೊಳಗೆ 'ಟಿನ್' ಎಂದು ಕಿರುಗಂಟೆ ಹೊಡೆದು ಕತೆಯೊಂದರ ಐಡಿಯಾವೊಂದು ಹುಟ್ಟಿಕೊಂಡಿತು.

ಇದಕ್ಕಿದ್ದಂತೆ ಉತ್ಸಾಹಿತನಾದ ವಿದ್ಯುತ್ ನಾರಾಯಣ ಶರ್ಮ. ಆ ಐಡಿಯಾವನ್ನು ಕುರಿತು ಯೋಚಿಸತೊಡಗಿದ. ಅಹೋ ಅದೊಂದು ಉತ್ತಮ ಕತೆಯಾಗಬಹುದು ಎಂದನಿಸಿತು ಅವನಿಗೆ. ಹಾಗೆ ತಿರುಗಿಸುತ್ತಾ ಅದನ್ನು ಬೆಳೆಸತೊಡಗುವಷ್ಟರಲ್ಲೇ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು ಮತ್ತೊಂದು ಐಡಿಯಾ ಅವನ ತಲೆಯೊಳಗೆ ಮೊಳಕೆಯೊಡೆಯಿತು. ಈ ಐಡಿಯಾ ಮೊದಲಿನಕ್ಕಿಂತ ರೋಚಕವಾಗಿತ್ತು. ಮತ್ತಷ್ಟು ಉತ್ಸಾಹಿತನಾದ ವಿದ್ಯುತ್ ನಾರಾಯಣ ಶರ್ಮ. ಹಳೆಯ ಐಡಿಯವನ್ನು ಅಲ್ಲೇ ಬಿಟ್ಟು ಹೊಸದರತ್ತ ಗಮನ ಹರಿಸತೊಡಗಿದ. ಅದಿನ್ನೂ ಅವನಿಗೆ ಸರಿಯಾಗಿ ನಿಲುಕುವಷ್ಟರಲ್ಲೇ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು ಮಗದೊಂದು ಐಡಿಯಾ ಅವನ ತಲೆಯೊಳಗೆ ಮೊಳಕೆ ಒಡೆಯಿತು. ಇದು ಆ ಎರಡಕ್ಕಿಂತ ಮಿಗಿಲಾದ ಹೊಳಪಿನಿಂದ ಕೂಡಿತ್ತು. ಶರ್ಮನೊಳಗಿನ ಉತ್ಸಾಹ ತುಂಬಿ ತುಳುಕಾಡತೊಡಗಿತು. ಹೊಸ ಹುರುಪಿನಿಂದ ಅವನು ಈ ಮೂರನೇ ಐಡಿಯಾದ ಹೊಳಪನ್ನು ಬೆಳೆಸತೊಡಗುತ್ತಿದ್ದಂತೆ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು... ಆದರೀಗ ಒಂದರ ಹಿಂದೊಂದು ಅವನಲ್ಲಿ ಹುಟ್ಟಿಕೊಳ್ಳುತ್ತಿರುವ ಐಡಿಯಾಗಳೂ ಅವು ಹುಟ್ಟಿಕೊಳ್ಳುವ ಮೊದಲು ಹೊಡೆಯುತ್ತಿದ್ದ ಕಿರುಗಂಟೆಯೂ ವಿದ್ಯುತ್ ನಾರಾಯಣ ಶರ್ಮನಲ್ಲಿ ಸಣ್ಣಗೆ ಸೋಜಿಗವನ್ನು ಮೂಡಿಸತೊಡಗಿದವು.

ಆದರೆ ಅವನ ಸೋಜಿಗದಿಂದ ಅವನ ತಲೆಯೊಳಗೆ 'ಟಿನ್' ಎಂದು ಕಿರುಗಂಟೆ ಹೊಡೆದು ಹುಟ್ಟಿಕೊಳ್ಳುತ್ತಿದ್ದ ಐಡಿಯಾಗಳಿಗೆ ನಿಲುಗಡೆಯಾಗಿರಲಿಲ್ಲ. ಹೊಸ ಹೊಸ ಐಡಿಯಾಗಳು ಮೊಳಕೆಯೊಡೆದು ಮಿನುಗುವಷ್ಟರಲ್ಲಿ ಮತ್ತೆ 'ಟಿನ್' ಎಂಬ ಸದ್ದಾಗುತ್ತಿತ್ತು. ಆ ಐಡಿಯಾಗಳ ಒಡನೆಯೇ ಹೊರ ಸೂಸುವ ಒಂದು ಅವ್ಯಕ್ತ ಉತ್ಸಾಹ ಶರ್ಮನ ಸೋಜಿಗವನ್ನು ಮರೆಸಿತ್ತು. ಆ ಉತ್ಸಾಹವನ್ನು ತಡೆಯಲಾಗದೇ ಹಪಹಪಿಸತೊಡಗಿದ ಶರ್ಮ. ಬರೆಯಬೇಕು, ಬರೆಯಲು ಶುರುಹಚ್ಚಬೇಕು ಎನ್ನುವ ಅದಮ್ಯ ತವಕ ಅವನಲ್ಲಿ ಉಕ್ಕತೊಡಗಿತು. ಲಗುಬಗೆಯಿಂದೆದ್ದು ಮೇಜಿನೆಡೆಗೆ ತೆರಳಿ ಪ್ಯಾಡುಪೆನ್ನು ಹೊಂದಿಸಿಕೊಂಡು ಶುರುಹಚ್ಚುವಷ್ಟರಲ್ಲಾಗಲೇ ಹೊಸದಾದ ಹದಿನೆಂಟು ಐಡಿಯಾಗಳು ಅವನ ತಲೆಯೊಳಗೆ ಕಿರುಗಂಟೆ ಬಾರಿಸಿಯಾಗಿತ್ತು.

ಆ ಅನೇಕ ಐಡಿಯಾಗಳಲ್ಲಿ ಅದಾಗ ತಾನೆ ಹುಟ್ಟಿಕೊಂಡ ತಾಜಾ ಐಡಿಯಾವನ್ನೆತ್ತಿಕೊಂಡು ಮೊದಲ ವಾಕ್ಯವನ್ನು ಬರೆಯಲು ಬೇಕಾದ ಅಕ್ಷರಗಳನ್ನು ಪದಪುಂಜಗಳನ್ನು ಜೋಡಿಸುವಷ್ಟರಲ್ಲಿ, ಹುಟ್ಟಿಕೊಳ್ಳುತ್ತಿದ್ದ ಮತ್ತೊಂದು ಹೊಸ ಐಡಿಯಾವು ಆ ರಚಿಸಲ್ಪಡುತ್ತಿದ್ದ ವಾಕ್ಯದ ಮೇಲೆ ಬಿದ್ದು ಪದಪುಂಜಗಳು ಒಡೆದು ಅಕ್ಷರಗಳು ಚದುರಿ ಹೋಗುತ್ತಿದ್ದವು. ಅವನೆಷ್ಟು ಬಲವಂತದಿಂದ ಹೊಸ ಐಡಿಯಾವನ್ನು ತಡೆಗಟ್ಟಿ ಹಳೆಯದನ್ನೇ ಬೆಳೆಸಲು ಯತ್ನಿಸಿದರೂ ಹೊಸದರ ಹೊಳಪಿಗೂ, ಹೊಡೆಯುತ್ತಿದ್ದ ಕಿರುಗಂಟೆಯ ಸದ್ದಿಗೂ ಅವನ ಪ್ರಜ್ಞಾವಲಯದ ವರ್ತಮಾನವು ತಲ್ಲಣಗೊಂಡು ಧ್ಯಾನವೆಲ್ಲ ಹೊಸದರೆಡೆಗೆ ಪಲ್ಲಟವಾಗುತ್ತಿತ್ತು.

ಹೀಗೆ ತನ್ನ ಯೋಚನೆಗಳನ್ನು ಬಲವಂತದಿಂದ ನಿಯಂತ್ರಿಸಲು ತನ್ನ ಪ್ರಜ್ಞೆಯನ್ನು ಕೇಂದ್ರೀಕರಿಸತೊಡಗಿದಂತೆ ಸಣ್ಣದೊಂದು ತಲೆನೋವು ಹುಟ್ಟಿಕೊಂಡಿತು. ಜೊತೆಗೆ ಲಯಬದ್ಧವಾಗಿ ಬಾರಿಸುತ್ತಿದ್ದ 'ಟಿನ್' ಎಂಬ ಕಿರುಗಂಟೆಯ ಸದ್ದು ಅವನ ತಲೆಯೊಳಗೆ ಕಂಪನವನ್ನುಂಟುಮಾಡುತ್ತಾ ತಲೆನೋವಿನ ತೀವ್ರತೆಯನ್ನು ಹೆಚ್ಚಿಸತೊಡಗಿತು. ತಲೆಭಾರವೆನಿಸತೊಡಗಿತು. ಹುಟ್ಟಿಕೊಂಡು ವಿಫಲವಾಗುವ ಐಡಿಯಾಗಳೆಲ್ಲ ತಲೆಯೊಳಗೆ ತುಂಬಿಕೊಳ್ಳುವ ಒತ್ತಡದಿಂದ ಉಸಿರುಕಟ್ಟತೊಡಗಿತು ಶರ್ಮನಿಗೆ. ಮಂಚದ ಮೇಲೆ ಬಿದ್ದುಕೊಂಡು ಆ ತಲೆನೋವನ್ನೂ, ಲಯಬದ್ಧ ಕಿರುಗಂಟೆಯ ಕಂಪನವನ್ನೂ, ಹೊಸ ಐಡಿಯಾದ ಉತ್ಸಾಹವನ್ನೂ, ಹಳೆಯ ಐಡಿಯಾಗಳ ಒತ್ತಡವನ್ನೂ ಒಟ್ಟಾಗಿ ಅನುಭವಿಸುತ್ತಾ ಒಂದು ತೆರನಾದ ಟ್ರಾನ್ಸ್ ನೊಳಗೆ ಮುಳುಗಿ ಚಡಪಡಿಸತೊಡಗಿದ ವಿದ್ಯುತ್ ನಾರಾಯಣ ಶರ್ಮ.

****
ಎಚ್ಚರವಾಯಿತು. ಕಿಟಕಿಯಿಂದ ಒಳಸೂಸುತ್ತಿದ್ದ ಸಂಜೆ ಬೆಳಕು ಅವನ ಮಬ್ಬಿಗೆ ಒದಗುತ್ತಿತ್ತು. ಹವೆ ತಣ್ಣಗಿದ್ದು ಇನ್ನೇನು ಮಳೆಸುರಿಯಬಹುದು ಎನ್ನುವಂತೆ ಸ್ಥಾಯಿಯಾಗಿತ್ತು. ತಲೆನೋವು ಮಾಯವಾಗಿದ್ದರೂ ಅದರ ಗುಂಗು ಕರಗಿರಲಿಲ್ಲ. ನಿರಂತರವೆಂಬಂತೆ ಹುಟ್ಟಿಕೊಳ್ಳುತ್ತಿದ ಐಡಿಯಾಗಳು ನಿಂತು ಹೋಗಿದ್ದವು. ಕಿರುಗಂಟೆ ಸದ್ದು ಸ್ತಬ್ಧವಾಗಿತ್ತು. ಆ ಎಲ್ಲಾ ಐಡಿಯಾಗಳು ಅವನೊಳಗೆ ಹುಟ್ಟುಹಾಕುತ್ತಿದ್ದ ಒತ್ತಡವು ಮರೆಯಾಗಿ ಅದೀಗ ನಿರಾಳವಾಗಿತ್ತು.

ಮೆಲ್ಲನೆ ಕೈಯನ್ನೆತ್ತಿ ತಲೆಯನ್ನೊಮ್ಮೆ ನೀವಿದ. ಪರಪರ್ರೆನ್ನುವ ಸದ್ದಿನಿಂದ ಅದೇನೋ ಕೂದಲಿಗಿಂತ ದೊರಗಾದ ಚಿಕ್ಕಚಿಕ್ಕ ಮುಳ್ಳಿನಂತವುಗಳು ಕೈಗೆ ತಗುಲಿ ಉದುರತೊಡಗಿದವು. ಜಗ್ಗನೆದ್ದು ಹಾಸಿಗೆಯ ಮೇಲೆ ಬಿದ್ದ ಅಂತಹದೊಂದು ಮುಳ್ಳನ್ನು ಕೈಗೆತ್ತಿಕೊಂಡ. ನಸುಕೆನೆ ಬಣ್ಣದ ಮೊಳಕೆಯಂತೆ ತಿರುವಿಕೊಂಡ ಆ ಸಣ್ಣ ವಸ್ತುವು ಹತ್ತಿಯಷ್ಟು ಹಗುರವಾಗಿದ್ದರೂ ಅದರ ಮೊನೆಗೊಂದು ಆಪ್ಯಾಯಮಾನ ತೀಕ್ಷ್ಣತೆಯಿತ್ತು. ತಾನು ಎರಡು ಬೆರಳುಗಳ ನಡುವೆ ಹಿಡಿದುಕೊಂಡಿದ್ದ ಆ ಮೊಳಕೆಯನ್ನೊಮ್ಮೆ ಮೆತ್ತಗೆ ಹಿಸುಕಿದ ಶರ್ಮ. ಹಾಗೆ ಹಿಸುಕಿದಾಕ್ಷಣ ಅವನ ಮನಃಪಟಲದ ಪರದೆಯ ಮೇಲೆ ಸರ್ರ್ ಎಂದು ಬೆಳಕು ಮೂಡಿ ಐಡಿಯಾವೊಂದರ ವಿವರಗಳು ಮೂಡತೊಡಗಿದವು. ಆ ಮೊಳಕೆಯ ಮೇಲಿನ ಒತ್ತಡವನ್ನು ಸಡಿಲಗೊಳಿಸಿದೊಡನೆ ಆ ಬೆಳಕಿನ ಪರದೆಯು ಮುಸುಕಾಗುತ್ತಿತ್ತು.

ತನ್ನ ತಲೆಯನ್ನು ಎರಡೂ ಕೈಗಳಿಂದ ಮೆಲ್ಲನೆ ಸವರತೊಡಗಿದ ಶರ್ಮ. ಅವನ ಕೂದಲೆಡೆಗಳಲ್ಲಿ ಹಾಗೆ ಮೂಡಿಕೊಂಡ ಮೊಳಕೆಗಳು ಹಾಸಿಗೆಯ ಮೇಲೆ ಉದುರತೊಡಗಿದವು. ಒಂದೊಂದೆ ಮೊಳಕೆಯನ್ನು ಕೈಬೆರಳುಗಳಿಂದ ಹಿಸುಕಿ ನೋಡತೊಡಗಿದ ಶರ್ಮ. ಅವನಲ್ಲಿ ಅಂದು ಬೆಳಗ್ಗೆ 'ಟಿನ್' ಎಂದು ಕಿರುಗಂಟೆ ಹೊಡೆಯುತ್ತಾ ಉತ್ಪನ್ನವಾಗಿದ್ದ ಎಲ್ಲ ಐಡಿಯಾಗಳೂ ಅದೀಗ ಅವನ ತಲೆಕೂದಲ ಎಡೆಗಳಲ್ಲಿ ಮೊಳಕೆಯೊಡೆದು ಅವನ ಹಾಸಿಗೆಯಲ್ಲಿ ಉದುರಿಬಿದ್ದಿದ್ದವು. ಒಂದೊಂದಾಗಿ ಆ ಮೊಳಕೆಗಳನ್ನು ಹಿಸುಕಿ ಅವುಗಳ ವಿವರಗಳನ್ನು ಗ್ರಹಿಸತೊಡಗಿದ ಶರ್ಮ.

ಕಿಟಕಿಯಿಂದ ತಣ್ಣಗೆ ಬೀಸಲಾರಂಭಿಸಿದ ಗಾಳಿ ಮೆಲ್ಲನೇ ಜೋರಾಗುತ್ತಾ ಮಳೆಯ ಮುನ್ಸೂಚನೆಯ ಬಿರುಗಾಳಿ ಬೀಸತೊಡಗಿತು. ವಿದ್ಯುತ್ ನಾರಾಯಣ ಶರ್ಮ ಕಿಟಕಿಯನ್ನು ಮುಚ್ಚಲೆಳಸುವಷ್ಟರಲ್ಲಿ ಅವನ ಹಾಸಿಗೆಯ ಮೇಲಿದ್ದ ಆ ಎಲ್ಲಾ ಮೊಳಕೆಗಳೂ ಗಾಳಿಗೆದ್ದು ಹಾರತೊಡಗಿದವು. ಹಾಗೆ ಹಾರುತ್ತಾ ಬಾಲ್ಕನಿಯತ್ತ ಹಾರಿ ಹೊರನುಸುಳಿ ಹೋಗುವುದನ್ನು ಶರ್ಮ ಆತಂಕದಿಂದ ನೋಡತೊಡಗಿದ. ಲಗುಬಗೆಯಿಂದ ಬಾಲ್ಕನಿಯತ್ತ ಧಾವಿಸಿದರೂ ಅವೆಲ್ಲ ಅದಾಗಲೇ ಆಗಸಕ್ಕೆ ಹಾರಿಯಾಗಿತ್ತು.

ಒಂದು ತೆರನಾದ ನಿರಾಸೆ ಶರ್ಮನಿಗೆ ಕಾಡತೊಡಗಿತು.

ಮರುಕ್ಷಣ "ಹೋದರೆ ಹೋಗಲಿ, ಇವೇನ್ಮಹಾ ಇಂಥ ಸಾವಿರ ಐಡಿಯಾಗಳನ್ನು ನಾನು ಸೃಷ್ಟಿಸಬಲ್ಲೆ" ಎಂದು ಗಟ್ಟಿಯಾಗಿ ಹೇಳುತ್ತಿದ್ದಂತೆ ಮೊದಲಿಗಿಂತ ಇಮ್ಮಡಿ ವೇಗದಲ್ಲಿ ಅವನೊಳಗೆ "ಟಿನ್ ಟಿನ್" ಎಂಬ ಕಿರುಗಂಟೆಗಳ ಜೊತೆಗೆ ಐಡಿಯಾಗಳು ಪುಂಖಾನು ಪುಂಖವಾಗಿ ಮೂಡತೊಡಗಿದವು. ಇನ್ನು ಇದರಿಂದ ತನ್ನಲ್ಲಿ ಹುಟ್ಟಬಹುದಾದ ತಲೆನೋವನ್ನೂ, ಆ ಐಡಿಯಾಗಳ ಒತ್ತಡದಿಂದ ತನ್ನೊಳಗೆ ಮೂಡಬಹುದಾದ ತಲ್ಲಣವನ್ನೂ ಮುನ್ನೋಡುತ್ತಾ ಬಸವಳಿದು ಕುಸಿದು ಕುಳಿತ ವಿದ್ಯುತ್ ನಾರಾಯಣ ಶರ್ಮ.

***
ಕೋಣೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಮೇಜಿನ ಮೇಲೆ ಹಾಸಿದ್ದ ಹಾಳೆಯ ಮೇಲೆ ಹರಡಿದ್ದ ಆ ಕಿರುಮೊಳಕೆಗಳ ರಾಶಿಯಿಂದ ಒಂದೊಂದನ್ನೆ ಹಿಚುಕಿ ಅವನ ಮನಃಪಟಲದ ಮೇಲೆ ಅವುಗಳ ವಿವರಗಳನ್ನು ಮೂಡಿಸಿನೋಡುತ್ತಿದ್ದ ವಿದ್ಯುತ್ ನಾರಾಯಣ ಶರ್ಮ. ಅವನೊಳಗೊಂದು ವಿಶೇಷ ಪ್ರಾಪ್ತಿಯ ಹುರುಪು ತುಂಬಿಕೊಂಡಿದ್ದರೂ ಆ ಐಡಿಯಾಗಳು ಅಷ್ಟೇನೂ ಸ್ಫೂರ್ತಿದಾಯಕವೆನಿಸಲಿಲ್ಲ. ಅವನೀಗಾಗಲೇ ಓದಿಕೊಂಡಿದ್ದ ಕನ್ನಡ, ಇಂಗ್ಲೀಷ್ ಮತ್ತು ಇನ್ನೂ ಹಲವು ಭಾಷೆಗಳ ಅಸಂಖ್ಯ ಕತೆಗಳ ಛಾಯೆಯು ಅವನಿಗೆ ಅವುಗಳಲ್ಲಿ ಕಾಣುತ್ತಿತ್ತು.

"ಈ ಸಾವಿರ ಐಡಿಯಾಗಳ ಬದಲಿಗೆ ತನಗೊಂದು ಉತ್ಕೃಷ್ಟ ಬಿಗ್ ಐಡಿಯಾ ಹೊಳೆದರೆ ಚೆನ್ನಾಗಿರುತ್ತಿತ್ತು" ಎಂದುಕೊಂಡ ಶರ್ಮ. ಅರೇ ಹೌದಲ್ಲ, ಯಾಕೆ ಹುಟ್ಟಬಾರದು ಎಂದುಕೊಂಡ. ಅವನು ನಿರೀಕ್ಷಿಸಲು ತೊಡಗಿದ ಅಂತಹ ಯಾವ ಕಿರುಗಂಟೆಯ ಸದ್ದೂ ಮತ್ತು ಐಡಿಯಾದ ಹುಟ್ಟೂ ಅವನಲ್ಲಾಗಲಿಲ್ಲ.

ಅಥವಾ ಹೀಗನ್ನಬಹುದು "ಈ ಸಾವಿರ ಐಡಿಯಾಗಳಿಗಿಂತ ಒಂದೇ ಒಂದು ಉತ್ಕೃಷ್ಟ ಐಡಿಯಾ ತನ್ನೊಳಗೆ ಹುಟ್ಟಬೇಕು" ಉಹೂಂ ಯಾವೊಂದು ಪರಿಣಾಮವೂ ಇಲ್ಲ. ಇನ್ನೊಂದು ಬಾರಿ..

"ಥುತ್ ಈ ಸಾವಿರ ಐಡಿಯಾಗಳೇನ್ಮಹಾ? ಇದಕ್ಕಿಂತ ನೂರುಪಟ್ಟು ಉತ್ತಮವಾಗಿರುವ ಒಂದು ಬಿಗ್ ಐಡಿಯಾವನ್ನು ನಾನು ಸೃಷ್ಟಿಸಬಲ್ಲೆ"

"ಢಣ್" ಎಂಬ ಚರ್ಚಿನ ಗಂಟೆ ಬಾರಿಸಿ, ಅಸಾಧ್ಯ ಕಂಪನ, ವಿಚಿತ್ರ ರಭಸ ಮತ್ತು ಕಣ್ಣುಕೋರೈಸುವ ಬೆಳಕಿನಿಂದ ಅವನ ತಲೆಯೊಳಗೆ ಹುಟ್ಟಿದ ಹೊಸ ಐಡಿಯವೊಂದನ್ನು ಗ್ರಹಿಸುವಷ್ಟರಲ್ಲಿ ಶರ್ಮ ಬೆವರಿ ನಿಸ್ತೇಜನಾಗಿ ಬವಳಿಬಿದ್ದ.

***
ಎಚ್ಚರವಾದಾಗ ಚುಮುಚುಮು ನಸುಕು. ಅಸಾಧ್ಯ ಹಸಿವು ಕಾಡುತ್ತಿತ್ತು. ಕ್ಯಾಂಟೀನಿಗೆ ಹೋಗಿ ತಿಂಡಿ ತಿಂದು ಬರಲೆಂದು ಎದ್ದು ಹಲ್ಲುಜ್ಜಿ ಮುಖತೊಳೆಯುತ್ತಿರುವಾಗ ಸಡನ್ನಾಗಿ ನಿನ್ನೆಯ ದಿನದ ವಿದ್ಯಮಾನಗಳೆಲ್ಲ ನೆನಪಾದವು. ತಲೆಯಮೇಲಕ್ಕೆಲ್ಲ ಕೈಯಾಡಿಸಿದ. ನಿನ್ನೆಯಂತೇ ಮೊಳಕೆಗಳು ಉದುರಲಿಲ್ಲ. ನಡುನೆತ್ತಿಯ ಮೇಲೊಂದು ಕಿರುಬೆರಳ ಗಾತ್ರದ ಮೊಳಕೆಯೊಂದು ಕೈಗೆ ತಗಲಿತು. ಎದುರಿಗಿರುವ ಕನ್ನಡಿಯಲ್ಲಿ ಆ ಮೊಳಕೆಯನ್ನು ಸರಿಯಾಗಿ ನೋಡಲೆತ್ನಿಸಿದ. ಕೂದಲುಗಳನ್ನು ಪಕ್ಕಕ್ಕೆ ಸರಿಸಿದಾಗ ಆ ಅಣಬೆಯಂತಹ ರೇಶೆಯೂ ನುಣುಪೂ ಇರುವ ನಸುಬೂದು ಬಣ್ಣದ ಮೊಳಕೆಯು ಕಾಣುತ್ತಿತ್ತು. ಮೆಲ್ಲನೆ ಬೆರಳುಗಳಿಂದ ಸವರಿದ. ಒಂದು ಬದಿಗೆ ತಳ್ಳಿ ಉದುರಿಸಲೆತ್ನಿಸಿದರೂ ಅದು ಬಲವಾಗಿ ನೆತ್ತಿಗೆ ಅವಚಿ ಕುಳಿತಿತ್ತು. ಅದನ್ನು ಎರಡು ಬೆರಳುಗಳಿಂದ ಗಟ್ಟಿಯಾಗಿ ಹಿಡಿದು ಮೇಲಕ್ಕೆ ಎತ್ತಲು ಕೊಂಚ ಬಲತೊಡಗಿಸಿದಾಗ ಫಟ್ಟನೇ ನಡುನೆತ್ತಿಯ ಮೇಲೊಂದು ಮೂರಂಗುಲದಷ್ಟು ಗಾತ್ರದ ಮುಚ್ಚಳವು ಮೂಡಿ ತೆರೆದುಕೊಂಡಿತು. ಮತ್ತು ಅವನ ತಲೆಯೊಳಗಿಂದ ವಿಶಿಷ್ಟ ಪ್ರಭೆಯೊಂದು ಸೂಸತೊಡಗಿತು.

ದಿಗಿಲಾಯಿತು ವಿದ್ಯುತ್ ನಾರಾಯಣ ಶರ್ಮನಿಗೆ. ಒಮ್ಮೆಲೆ ಕೈಬಿಟ್ಟುಬಿಟ್ಟ. ಮತ್ತೆ ಟಪ್ಪೆಂದು ಮುಚ್ಚಿಕೊಂಡಿತು ಆ ಮುಚ್ಚಳ. ಆ ಅಣಬೆಯಂತಹ ಮೊಳಕೆಯು ಮಗುಮ್ಮಾಗಿ ಅವನ ನೆತ್ತಿಯನ್ನವಚಿಕೊಂಡು ಕುಳಿತಿತ್ತು.

ಈ ಎಲ್ಲಾ ಪ್ರಕ್ರಿಯೆಯಲ್ಲಿ ವಿದ್ಯುತ್ ನಾರಾಯಣ ಶರ್ಮನಿಗೆ ಯಾವೊಂದು ರೀತಿಯ ನೋವು ಅನುಭವಕ್ಕೆ ಬಾರದಿದ್ದುದರಿಂದ ಅವನ ದಿಗಿಲು ಕೊಂಚ ಕಡಿಮೆಯಾಗಿ ಕುತೂಹಲ ಮೂಡಲಾರಂಭಿಸಿತು. ಮತ್ತೆ ಆ ಮೊಳಕೆಯನ್ನು ಹಿಡಿದು ತನ್ನ ನೆತ್ತಿಯ ಮೇಲೆ ಒದಗಿಕೊಂಡಿದ್ದ ಆ ಮುಚ್ಚಳವನ್ನು ತೆರೆದ. ಮೊದಲಿನಂತೆ ವಿಶಿಷ್ಟ ಪ್ರಭೆಯು ಹೊರಸೂಸುವುದು ಅವನಿಗೆ ತನ್ನೆದುರಿಗಿದ್ದ ಕನ್ನಡಿಯಲ್ಲಿ ಕಾಣುತ್ತಿತ್ತು. ಆದರೆ ತಲೆಯನ್ನು ಯಾವ ಕೋನದಲ್ಲಿ ಬಗ್ಗಿಸಿದರೂ ಹಾಗೆ ತೆರೆದುಕೊಂಡಿರುವ ತನ್ನ ತಲೆಯೊಳಗಿನ ದೃಶ್ಯವು ಕಾಣಲು ದೊರಕುತ್ತಿರಲಿಲ್ಲ. ಇದಕ್ಕೊಂದು ಪೆರಿಸ್ಕೋಪ್ ತಯಾರಿಸಬೇಕು ಎಂದುಕೊಂಡು ತಲೆಯ ಮುಚ್ಚಳವನ್ನು ಮುಚ್ಚಿದ ಶರ್ಮ. ಆ ಮೊಳಕೆ ಪ್ರತಿನಿಧಿಸುವ "ಬಿಗ್ ಐಡಿಯಾ" ಯಾವುದಿರಬಹುದು ಎನ್ನುವ ವಿಷಯಕ್ಕಿಂತ ತೆರೆದುಕೊಂಡಿರುವ ತನ್ನ ತಲೆಯೊಳಗೆ ಅಂತಹ ಬೆಳಕುಚೆಲ್ಲುವ ವಸ್ತು ಏನಿರಬಹುದು ಎನ್ನುವ ಕುತೂಹಲವೇ ಹೆಚ್ಚಾಗಿತ್ತು ಅವನಲ್ಲಿ.

***
ಉಡುಪು ಧರಿಸಿ ಕೋಣೆಗೆ ಬೀಗ ಹಾಕಿ ಮಹಡಿಯಿಂದಿಳಿದು ರಸ್ತೆಗೆ ಬಂದಾಗ ಅಂಗಡಿಗಳು ಇನ್ನೂ ತೆರೆದಿರಲಿಲ್ಲ. ಕ್ಯಾಂಟೀನಿನಲ್ಲಿ ತಿಂಡಿ ತಿಂದು ಸೆಂಟ್ರಲ್ ಮಾರ್ಕೆಟ್ ಕಡೆಗೆ ಹೋಗುವ ಬಸ್ ಹತ್ತಿದ. ಪೆರಿಸ್ಕೋಪ್ ತಯಾರಿಸಲು ಬೇಕಾದ ರಟ್ಟಿನ ಓಟೆಗಳು, ಪ್ರಿಸಂಗಳು ಮತ್ತು ಅಗಲದ ಗಂಟೇಪ್ ಮುಂತಾದವುಗಳನ್ನು ಖರೀದಿಸಿ ಮನೆಗೆ ಬಂದ.

ಮೊದಲಿಗೆ ಡಯಾಗ್ರಾಂ ಹಾಕಿಕೊಂಡು ಅದರಂತೆ ಪೆರಿಸ್ಕೋಪ್ ತಯಾರಿಸಿದ. ಒಟ್ಟು ಮೂರು ಕೋನಗಳಲ್ಲಿ ಹುದುಗಿಸಲು ಮೂರು ಪ್ರಿಸಂಗಳು ಬೇಕಾದವು. ಓಟೆಯ ಒಂದು ತುದಿಯನ್ನು ಕಣ್ಣ ಮುಂದಿಟ್ಟರೆ ಪೆರಿಸ್ಕೋಪು ಕೊಂಬಿನಂತೆ ಮೇಲಕ್ಕೆ ಹಿಂದಕ್ಕೆ ಬಗ್ಗಿಕೊಂಡು ಓಟೆಯ ಇನ್ನೊಂದು ತುದಿಯು ನಡುನೆತ್ತಿಗೆ ಕೂಡುತ್ತಿತ್ತು.

ಕೂತರೆ ತನ್ನ ತಲೆಗೆಟಕುವಷ್ಟೆತ್ತರಕ್ಕೆ ಹೊಂದಿಸಿ ಮಂಚದ ಸೊಳ್ಳೆಪರದೆಯ ಚೌಕಟ್ಟಿಗೆ ಪೇರಿಸ್ಕೊಪನ್ನು ಇಳಿಬಿಟ್ಟು ಅಲುಗಾಡದಂತೆ ಎರಡುಮೂರು ಕಡೆಗಳಿಂದ ಸರಿಗೆಯಿಂದ ಎಳೆದು ಕಟ್ಟಿದ. ಮಂಚದ ಮೇಲೆ ಕುಳಿತು ತನ್ನ ನಡುನೆತ್ತಿಯ ಮೇಲೆ ಮೂಡಿರುವ ಆ ಮೊಳಕೆಯನ್ನು ಗಟ್ಟಿಹಿಡಿದು ಎತ್ತಿದಾಗ ಫಟ್ಟನೆ ಅವನ ನೆತ್ತಿಯ ಮೇಲಿನ ಮುಚ್ಚಳವು ತೆರೆದುಕೊಂಡಿತು. ಅದನ್ನು ಪೆರಿಸ್ಕೋಪಿಗೆ ಹೊಂದಿಸಿ ತನ್ನ ಮುಂದಿನ ಓಟೆಯೊಳಗೆ ಕಣ್ಣು ಹಾಯಿಸಿದ ಶರ್ಮ. ಆ ತಣ್ಣಗೆ ಸೂಸುವ ಹೊನ್ನ ಬಣ್ಣದ ಬೆಳಕೇ ಪ್ರಿಸಂಗಳಲ್ಲಿ ಪ್ರತಿಫಲನಗೊಳ್ಳುತ್ತಾ ಕಣ್ಣು ಕುಕ್ಕುತ್ತಿತ್ತು. ಹಾಗೆ ದಿಟ್ಟಿಸತೊಡಗಿದ. ಆ ಬೆಳಕಿನ ಸೆಳೆತವು ತೀವ್ರವಾಗಲಾರಂಬಿಸಿತು. ಬೆಳಕು ಹೊರಸೂಸಿ ತನ್ನನ್ನು ಆವರಿಸುತ್ತಿರುವುದನ್ನು ಶರ್ಮ ಧಿಗ್ಭ್ರಮೆಯಿಂದ ನೋಡತೊಡಗಿದ. ಏನಾಗುತ್ತಿದೆ ಎಂದು ಶರ್ಮನ ಗ್ರಹಿಕೆಗೊದಗುವಷ್ಟರಲ್ಲಿ ಆ ಪ್ರಿಸಂನೊಳಗಿನ ಬೆಳಕಿನ ಸೆಳೆತಕ್ಕೆ ಒಳಗಾಗಿ ಸುಂಯ್ಯೆಂದು ನುಸುಳಿ ಪ್ರಿಸಂಗಳಲ್ಲಿ ಪ್ರತಿಫಲನಗೊಳ್ಳುತ್ತಾ ತನ್ನ ತಲೆಯೊಳಗೆ ತಾನೆ ಬಂದು ಬಿದ್ದು ಬಿಟ್ಟ.

ಹ್ಹೆ ಹ್ಹೆ.. ಎಂತಹ ಕತೆ ಮಾರಯ್‌ರೇ ಇದು..

***
ಆ ವಿದ್ಯುತ್ ನಾರಾಯಣ ಶರ್ಮನು ತನ್ನ ತಲೆಯೊಳಗೆ ತಾನೇ ಬಿದ್ದುಬಿಟ್ಟ ಕತೆಯು ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಲು ಲಾಯಕ್ಕಿಲ್ಲ ಎಂದು ಸಂಪಾದಕರು ನಿರ್ಧರಿಸಿದ್ದರು. ಆದರೆ ಕತೆ ಬರೆದ ಸ್ವತಹ ಶರ್ಮನೇ ಅವನ ತಲೆಯೊಳಗಿರುವಾಗ ತನಗೆ ಈ ಕತೆ ಬರೆದು ಕಳುಹಿಸಿದ್ದು ಯಾರು ಎಂದು ಸಂಪಾದಕರಿಗೆ ಗೊಂದಲವಾಯಿತು.
ಹ್ಹೆ ಹ್ಹೆ. ತಾನು ಈ ಕತೆಯನ್ನು ನಂಬಿಬಿಟ್ಟೆನೆ.
ನಂಬಿದರೆ ಅದು ಕತೆಯಾಗುವುದೇ. ಅಥವಾ ನಂಬುವಂತಿಲ್ಲದಿದ್ದರೆ ಕತೆಯೆನಿಸುವುದೇ.
ಮತ್ತಷ್ಟು ಗೊಂದಲವಾಯಿತು.

"ಥುತ್ ಯಾಕಾದರೂ ಇಂತಹ ಕತೆಗಳನ್ನು ಕಳುಹಿಸುತ್ತಾರೋ.. ಇದಕ್ಕಿಂತ ಒಳ್ಳೆಯ ನೂರು ಕತೆಗಳನ್ನು ತಾನು ಬರೆಯಬಲ್ಲೆ " ಎಂದು ಸಂಪಾದಕರೆಂದುಕೊಳ್ಳುತ್ತಿದ್ದಂತೆ 'ಟಿನ್' ಎಂದು ಕಿರುಗಂಟೆ ಹೊಡೆದು ಅವರ ತಲೆಯೊಳಗೊಂದು ಕತೆಯ ಐಡಿಯಾ ಮೊಳಕೆಯೊಡೆಯಿತು...

***
ಸಂಪಾದಕರಿಗೂ ವಿದ್ಯುತ್ ನಾರಾಯಣ ಶರ್ಮನಿಗೂ ಭೇಟಿಯಾಯಿತು. ಅವರಿಬ್ಬರೂ ನಿಜಕ್ಕೂ ಕೈ ಕೈ ಹಿಡಿದು ಮಿಲಾಯಿಸಿದ್ದರೂ ಸಂಪಾದಕರು ಮತ್ತು ಶರ್ಮನು ಅವರವರ ಸ್ವಂತ ತಲೆಯೊಳಗಿದ್ದರು.
"ಶರ್ಮರೇ ನಿಮ್ಮ ಕತೆ ಒಳ್ಳೆಯದಿತ್ತು. ನಾನು ಅದನ್ನು ಭಾನುವಾರದ ಪುರವಣಿಯಲ್ಲಿ ಪ್ರಕಟಿಸಬಹುದಿತ್ತು. ಆದರೆ ಅದೀಗ ನಿಮ್ಮ ಒಬ್ಬರದೇ ಕತೆಯಲ್ಲವಲ್ಲ. ನನ್ನದೂ ಅದೇ ಕತೆ." ಎಂದು ನಕ್ಕರು ಸಂಪಾದಕರು.

ಸುಮ್ಮನೆ ನಕ್ಕ ವಿದ್ಯುತ್ ನಾರಾಯಣ ಶರ್ಮ.
ಅವನಿಗೆ ಆ ಕತೆಯು ಪ್ರಕಟವಾಗುವುದು ಅಷ್ಟು ಮುಖ್ಯವೆನಿಸಲಿಲ್ಲ. ಏಕೆಂದರೆ ತನ್ನ ತಲೆಯೊಳಗೆ ಅವನಿರುವ ಜಾಗಕ್ಕೆ ಪತ್ರಿಕೆ ಸಿಗುತ್ತಿರಲಿಲ್ಲ.

ಜೂನ್ 28, 2009

ಇದ್ದಿಲ ಚೂರು ಮತ್ತು ಮಂತ್ರದಂಡ

ನಗರಗಳನ್ನು ವಿನ್ಯಾಸಗೊಳಿಸುವುದು ಹೇಗೆ ಎಂಬ ವಿಷಯದಲ್ಲಿ ಉನ್ನತ ವ್ಯಾಸಾಂಗ ಕೈಗೊಂಡು ಅಮೇರಿಕಾದ ಬಾಸ್ಟನ್ ನಗರದಿಂದ ಮರಳಿ ಬಂದಿದ್ದ ಮೋಹನದಾಸನಿಗೆ ವಿನ್ಯಾಸಗೊಳಿಸಲು ನಗರಗಳೇ ಇರಲಿಲ್ಲ. ತಾನು ಈ ಎರಡು ವರ್ಷಗಳ ವ್ಯಾಸಾಂಗದಲ್ಲಿ ಓದಿ ಅರಗಿಸಿಕೊಂಡಿದ್ದ ವಾಸ್ತು ವಿಜ್ಞಾನದ ಇತಿಹಾಸ, ನಾಗರಿಕ ನಿಬಿಡತೆ ಮತ್ತು ವಿಸ್ತಾರ, ಒಳ ಚರಂಡಿ, ಜಲಾನಯನ ವಿತರಣಾ ವಿಜ್ಞಾನ ಇತ್ಯಾದಿ, ಕಲಿತದ್ದನ್ನೆಲ್ಲ ಉಪಯೋಗಿಸಿ ಮಾನಸಿಕವಾಗಿ ರೂಪಿಸಿಕೊಂಡಿದ್ದ ಕನಸಿನ ನಗರವನ್ನು ಕಾಗದಕ್ಕೆ ಇಳಿಸಿದಾಗ, ಅರೇ ಇದು ತನ್ನೂರಿನಂತೇ ಇದೆಯಲ್ಲ ಎಂದೆನಿಸಿ ಆಶ್ಚರ್ಯವಾಗಿತ್ತು. ಊರಿಗೆ ಮರಳಬೇಕು ಎಂಬ ಬಯಕೆಗೆ ಇದು ಇಂಬು ಕೊಟ್ಟು ತುಡಿತ ಇನ್ನಷ್ಟು ತೀವ್ರವಾಗಲು ಕಾರಣವಾಗಿತ್ತು.

"ನೋ.. ನೋ.. ಮಿ. ದಾಸ್. ನೀವ್ಹೇಳಿದಷ್ಟು ಸುಲಭವಲ್ಲ ಇದೆಲ್ಲ. ನೀವೇನೋ ಸರಿ ಕಲಿತು ಬಂದಿದ್ದೀರಿ. ಆದರೆ ನೀವು ಚಿತ್ರ ಬಿಡಿಸಿದಷ್ಟು ಸುಲಭವಾಗಿ ನಾವು ನಗರ ಕಟ್ಟಲು ಸಾಧ್ಯಾನಾ? ಏನೊಂದು ತಾಪತ್ರಯಗಳಿವೆ ಗೊತ್ತಾ?"
ಇವನ ಪ್ಲಾನು ನೋಡಿ ಡಿ.ಸಿ.ಗೆ ಗಾಬರಿಯಾಯಿತು.

"ಸರ್ ನನ್ನ ವಿನ್ಯಾಸದ ಬೇಸಿಸ್‌ಗೆ ವಿಶ್ವ ಬ್ಯಾಂಕ್‌ನ ಮನ್ನಣೆ ಇದೆ. ಈ ಪ್ಲಾನನ್ನು ಎಡಿಬಿಗೆ ಕಳುಹಿಸಿದರೆ ಕೂಡಲೇ ಹಣ ಸ್ಯಾಂಕ್ಷನ್ ಆಗುತ್ತೆ."
"ದುಡ್ಡೊಂದೇ ಅಲ್ಲರೀ.. ನಿಮಗೆ ಅದೆಲ್ಲ ಅರ್ಥವಾಗಲ್ಲ.." ಅಸಹನೆ ಮತ್ತು ಕಾರ್ಯನಿಬಿಡತೆಯ ಗೊಂದಲದಲ್ಲಿ ನರಳುತ್ತಿದ್ದ ಡಿ.ಸಿ.ಯ ಆ ಕ್ಷಣದ ಪ್ರಮುಖ ಉದ್ದೇಶ ಇವನನ್ನು ಸಾಗಹಾಕುವುದಾಗಿತ್ತು.

"ನೋಡಿ.. ಹಣ ನೀವು ಹೇಳಿದಾಗೆ ಸ್ಯಾಂಕ್ಷನ್ ಆಗುತ್ತೆ ಅಂತ ಇಟ್ಕೊಳ್ಳೋಣ.. ಎಕ್ಸಿಕ್ಯೂಶನ್‌ಗೆ ಎಷ್ಟೆಲ್ಲ ಪರಿಪಾಟಲಿವೆ ಗೊತ್ತಾ. ಗ್ಲೋಬಲ್ ಟೆಂಡರ್ ಕರೀಬೇಕು. ವಿಶ್ವಮಾನ್ಯರನ್ನೆಲ್ಲ ಮೀರಿಸಿ ಟೆಂಡರ್ ಕಸಿಯುವ ಜನ ನಮ್ಮಲ್ಲೇ ಇದ್ದಾರೆ. ನಿಮ್ಮ ಪ್ಲಾನನ್ನು ಮೂರಕ್ಕಿಳಿಸಿ ಆರು ವರ್ಷಗಳಲ್ಲಿ ಸುಣ್ಣ ಮಾಡ್ತಾರೆ... ಏನಂತೀರಾ? ಸರಿ ಎಲ್ಲ ಸರಿ ಹೋಯ್ತು ಅನ್ನಿ, ಜನ ಸುಮ್ಮನಿರ್ತಾರಾ! ಇಲ್ಲಿಂದ ಕೆಲಸ ಶುರು ಮಾಡಿ ಅಲ್ಲಿ ಬರೂವಷ್ಟರಲ್ಲಿ ಹಲವು ವಿರೋಧಿ ಪತಾಕೆಗಳು ಏಳುತ್ತೆ. ನಿಮ್ಮ ಪ್ಲಾನು ಎಷ್ಟು ಅನ್‌ಸೈಂಟಿಫಿಕ್ ಅಂತ ನಿಮ್ಮ ಮೇಸ್ಟ್ರಿಗೆ ಅಹುದು ಅನ್ನಿಸುವಷ್ಟರ ಮಟ್ಟಿಗೆ ಪತ್ರಿಕೆಗಳಲ್ಲಿ ಚರ್ಚೆ ಶುರುವಾಗುತ್ತೆ."

ನಿರಾಶನಾಗಿ ಜಿಲ್ಲಾಧಿಕಾರಿ ಕಛೇರಿಯಿಂದ ಹೊರಬಂದ ಮೋಹನದಾಸ. ಅಲ್ಲೇ ಹೊರಗಡೆ ಇಕ್ಕಟ್ಟಾದ ಕೂಡು ರಸ್ತೆಯಲ್ಲಿ ಬಸ್ಸುಗಳು ದಾರಿಗಾಗಿ ಅರಚಿಕೊಳ್ಳುತ್ತಿದ್ದವು. ರಸ್ತೆ ಬದಿಯಲ್ಲಿ ನಡೆಯಲು ಜಾಗವೇ ಇರಲಿಲ್ಲ. ತನ್ನ ಪ್ಲಾನಿನ ಪ್ರಕಾರ ಈ ಪ್ರದೇಶದ ಪೂರ್ಣ ಬದಲಾವಣೆಯ ರೂಪುರೇಷೆಯನ್ನು ಮಾಡಿಕೊಂಡಿದ್ದ. ಬಹುಮಹಡಿ ಬಸ್ಸು ನಿಲ್ದಾಣದ ವಿನ್ಯಾಸ ದೇಶಕ್ಕೆ ಹೊಸದಾಗಿತ್ತು. ಈ ಬದಲಾವಣೆಯಿಂದ ಈಗಿರುವ ಪ್ರದೇಶದ ಅರೆವಾಸಿ ಜಾಗ ಉಳಿತಾಯವಾಗಿ ನಿಬಿಡತೆ ಕಡಿಮೆಯಾಗುತ್ತಿತ್ತು. ನಿಟ್ಟುಸಿರು ಬಿಟ್ಟು ಇಲ್ಲಿ ಜಾಗವಿಲ್ಲದೇ ನೆಹರೂ ಮೈದಾನದ ಬಳಿ ನಿಲ್ಲಿಸಿದ್ದ ತನ್ನ ಕಾರಿನತ್ತ ಹೆಜ್ಜೆ ಹಾಕಿದ ಮೋಹನದಾಸ.

ಮರಳಿ ಹೋಗಬೇಡವೆಂದು ಗೋಗರೆಯುತ್ತಿದ್ದ ಮರಿಯಾನ್ ನೆನಪಾದಳು. ತನ್ನ ಇಡೀ ಟೀಮ್ ನೆನಪಾಯಿತು. ಇನ್ಸ್ಟಿಟ್ಯೂಟ್‌ನಿಂದ ಹೊರಬಂದು ತಾವೆಲ್ಲ ಸೇರಿ ಕಟ್ಟಿಕೊಂಡಿದ್ದ ಇನ್‌ಫ್ಯಾಕ್ಟ್ (ಇನ್‌ಫ್ರಾಸ್ಟ್ರಕ್ಚರ್ ಕನ್ಸಲ್ಟೆನ್ಸಿ ಅಂಡ್ ಟೆಕ್ನಾಲಜೀಸ್ ಇನ್ಕ್)ಗೆ, ಲಾಸ್‌ವೇಗಸ್‌ನ ಉಪನಗರ ಸ್ಕೈಸಿಟಿಯ ವಿನ್ಯಾಸದ ಕಂಟ್ರಾಕ್ಟ್ ಸಿಕ್ಕಿದ ಮರುದಿನವಲ್ಲವೇ ತನ್ನ ಊರು ತನ್ನನ್ನು ಅತಿಯಾಗಿ ಕಾಡಿದ್ದು? ಊರನ್ನು ಕೊಳೆಯಲು ಬಿಟ್ಟು ಅಮೇರಿಕೆಯನ್ನು ಉಧ್ಧರಿಸುವ ವಿಷಯದಲ್ಲಿ ಗಿಲ್ಟಿ ಫೀಲ್ ಮಾಡಿಕೊಂಡು ಇಂಡಿಯಾಕ್ಕೆ ಮರಳಲು ತಾನು ನಿರ್ಧರಿಸಿದ್ದು?

ಮನೆಗೆಬಂದು ಇಂಟರ್‌ನೆಟ್‌ಗೆದುರಾಗಿ ಕೂತಾಗ ಮಲೇಶ್ಯಾದಲ್ಲಿ ನಿರ್ಮಾಣವಾಗುತ್ತಿರುವ ಆರು ಅಂತಸ್ತಿನ ಭೂಗತ ರಸ್ತೆ ವ್ಯೂಹ ಕಮ್ ನೆರೆ ವಿಮೋಚನಾ ಕಾಲುವೆಗಳ ನಿರ್ಮಾಣ ಪ್ರಗತಿಯ ಅಲರ್ಟ್, ಈಮೇಲ್‌ನಲ್ಲಿ ಬಂದಿತ್ತು. ತನ್ನ ಪ್ಲಾನ್‌ನಲ್ಲೂ ಇಂತದೇ ನಿರ್ಮಾಣವನ್ನು ಈಗಾಗಲೇ ಗುರುತಿಸಿಕೊಂಡಿದ್ದ ಅವನು. ವರ್ಷಕ್ಕೊಮ್ಮೆ ಮುಸಲಧಾರೆಯಿಂದಲೂ, ಊರನ್ನು ಸುತ್ತುವರೆದಿರುವ ಬೆಟ್ಟಗಳಿಂದ ಇಳಿದು ಬರುವ ಮಳೆ ನೀರಿನಿಂದಲೂ, ಉಂಟಾಗುವ ಪ್ರವಾಹವನ್ನು ಕೇಂದ್ರೀಕೃತಗೊಳಿಸಿ ಸಾಗರದತ್ತ ಚ್ಯಾನಲೈಸ್ ಮಾಡುವ ಈ ಭೂಗತ ವ್ಯೂಹ, ವರ್ಷದ ಉಳಿದ ಋತುಗಳಲ್ಲಿ ರಸ್ತೆಗಳಾಗಿ ಬಳಸಲ್ಪಡುತ್ತಿತ್ತು.

ಎದ್ದು ತನ್ನ ಡ್ರಾಫ್ಟ್ ಬೋರ್ಡಿನತ್ತ ಹೋಗಿ ಮೇಲಿನ ಕಪಾಟಿನಿಂದ ತಾನು ರಚಿಸಿದ್ದ ನಗರವಿನ್ಯಾಸದ ಫೈಲನ್ನು ತೆರೆದು ಅದರೊಳಗಿನಿಂದ ಮುಖ್ಯ ಲೇಔಟ್‌ನ ಹಾಳೆಯನ್ನು ಡ್ರಾಫ್ಟ್ ಬೋರ್ಡ್‌ನ ಮೇಲೆ ಹರಡಿದ. ಹಲವು ಮಡಿಕೆಗಳ ಚಿತ್ರಾಂಗ ಹರಡಿಕೊಳ್ಳುತ್ತಿದ್ದಂತೆಯೇ ರೇಖೆಗಳೆಲ್ಲ ಜೀವತಳೆದು, ದಡಬಡನೇ ರಸ್ತೆಗಳು, ಫ್ಲೈಒವರ್‌ಗಳು, ಬಿಲ್ಡಿಂಗ್ ಕಾಂಪ್ಲೆಕ್ಸ್‌ಗಳೂ, ಬಹು ಮಹಡಿ ಪಾರ್ಕಿಂಗ್ ಕಟ್ಟಡಗಳೂ, ಸ್ಟೇಡಿಯಂ, ಬಸ್ ನಿಲ್ದಾಣ ಎಲ್ಲವೂ ಆ ಕಾಗದದ ಹಾಳೆಯ ಮೇಲೆ ಎದ್ದು ನಿಂತವು. ರಸ್ತೆಯ ಇಕ್ಕೆಲಗಳಲ್ಲಿ ಪುತುಕ್ಕನೇ ಮೊಳಕೆಯೊಡೆದು ಮರಗಳು ಮೈಕೊಡವಿ ಕೊಂಡವು, ಪಾರ್ಕುಗಳು ಅರಳಿದವು. ಜನ, ಕಾರು ಬಸ್ಸುಗಳು ಇತ್ಯಾದಿ ವಾಹನಗಳು ಸರಸರನೇ ಪ್ರತ್ಯಕ್ಷರಾಗಿ ವಿನ್ಯಾಸದ ಹಾಳೆಯ ಮೇಲೆಲ್ಲ ಗಿಜಿಗಿಜಿ ಸುಳಿದಾಡತೊಡಗಿದರು.

ತಟ್ಟನೆ ತಲೆ ಕೊಡವಿಕೊಂಡ ಮೋಹನದಾಸ. ತನ್ನ ಕನಸುಗಳು ತನ್ನನ್ನು ಪೂರ್ಣ ಆವರಿಸಿಕೊಳ್ಳುವ ಮೊದಲು ಇದರಿಂದ ಬಿಡುಗಡೆಯಾಗಬೇಕೆಂದು ನಿರ್ಧರಿಸಿದ. ಹಾಳೆಯನ್ನು ಮಡಚಿ ಮರಳಿ ಫೈಲಿನಲ್ಲಿಟ್ಟು ಮೇಲಿನ ಕಪಾಟಿನಲ್ಲಿರಿಸಿದ. ಅಲ್ಲಿಂದ ಬಂದು ಅದಕ್ಕೆದುರಾಗಿರುವ ಸೋಫಾದ ಮೇಲೆ ಕುಳಿತು ತಾನು ಫೈಲನ್ನಿಟ್ಟ ಕಪಾಟನ್ನೇ ಸುಮ್ಮನೆ ದಿಟ್ಟಿಸಿ ಕುಳಿತ. ಕಪಾಟಿನ ಕೆಳಭಾಗದಿಂದ ಸುಯ್ಯೆಂದು ಒಂದು ಎಲಿವೇಟರ್ ಕೆಳಗಿಳಿಯಿತು. ನೆಲ ಮುಟ್ಟುತ್ತಿದ್ದ ಹಾಗೆ ಟ್ರಿಣ್ ಎಂದು ಗಂಟೆ ಹೊಡೆದು ಬಾಗಿಲು ತೆರೆದುಕೊಂಡಿತು.
ತೆರೆದ ಎಲಿವೇಟರ್ ಬಾಗಿಲಿನಿಂದ ಮತ್ತದೇ ಪ್ಲಾನಿನ ರೇಖೆಗಳು ಕೋಣೆಯ ನೆಲದ ತುಂಬೆಲ್ಲ ಹರಡಿಕೊಂಡವು. ರೇಖೆಗಳ ವಿನ್ಯಾಸ ಪೂರ್ಣಗೊಳ್ಳುತ್ತಿದ್ದಂತೆ ಒಂದೊಂದಾಗಿ ಎಲ್ಲ ವಿನ್ಯಾಸಗಳೂ ಮೇಲೆದ್ದು ನಿಲ್ಲತೊಡಗಿದವು.

ಮೋಹನದಾಸ ಎದ್ದು ಪರಿಶೀಲಿಸತೊಡಗಿದ. ಕೆಲವೊಂದು ಸಣ್ಣಪುಟ್ಟ ಮಾರ್ಪಾಡುಗಳನ್ನು ಅವಶ್ಯವೆಂದು ಗುರುತಿಸಿಕೊಂಡ, ಇಲ್ಲಿ ಫ್ಲೈಒವರ್‌ಗಿಂತ ಭೂಗತ ರಸ್ತೆ ಒಳ್ಳೆಯದು, ಅಲ್ಲಿ ಹೆಚ್ಚುವರಿ ಲೇನ್ ಬೇಕು, ಮತ್ತೊಂದು ಕಡೆ ಹೆಚ್ಚು ಕೆಪಾಸಿಟಿಯ ವಿದ್ಯುತ್ ಸಬ್‌ಸ್ಟೇಶನ್ ಬೇಕು...
ಮೊಬೈಲ್ ರಿಂಗಾಗುತ್ತಿದ್ದಂತೆ ಸರಸರನೆ ಎಲ್ಲ ವಿನ್ಯಾಸಗಳೂ ಸಪಾಟಾಗಿ ಮತ್ತೆ ರೇಖೆಗಳಾಗಿ ಕಪಾಟಿನ ಕೆಳಗೆ ನಿಂತುಕೊಂಡಿದ್ದ ಎಲಿವೇಟರ್‌ನ ಒಳಗೆ ಸುಳಿದು ಮಾಯವಾದವು. ಎಲಿವೇಟರು ಸರ್ರನೆ ಮೇಲೆ ಹೋಗಿ ಕಪಾಟಿನ ಬಿರಡೆಯಾಯಿತು. ಜಾಹ್ನವಿಯ ಹೆಸರು ಮೊಬೈಲ್ ಪರದೆಯ ಮೇಲೆ ಬ್ಲಿಂಕಾಗುತ್ತಿತ್ತು. ಬಟನ್ ಒತ್ತಿ ಹಲೋ ಎಂದ.

"ಮೋಹನ್! ನೀನು ಮತ್ತೆ ಮತ್ತೆ ಹೀಗ್ಯಾಕೆ ಕೈಕೊಡುತ್ತಿದ್ದಿ! ನೀನು ಖಂಡಿತ ಬರುತ್ತೇನೆಂದು ಮಾತು ಕೊಟ್ಟದ್ದಕ್ಕೆ ನಾನು ಒಂದು ಗಂಟೆಯಿಂದ ಆಡ್‌ಲ್ಯಾಬ್ಸ್ ಬಳಿ ವೆಯಿಟ್ ಮಾಡುತ್ತಿದ್ದೇನೆ."

"ಅರೇ ಸಾರಿ ಸಾರಿ! ಹತ್ತೇ ನಿಮಿಷದಲ್ಲಿ ಬಂದು ಬಿಡುತ್ತೇನೆ. ಪ್ಲೀಸ್ ಹೋಗಬೇಡಾ" ಎನ್ನುತ್ತಾ ಕಾರಿನತ್ತ ಧಾವಿಸಿದ.

ಕಾರನ್ನು ಹೊರತೆಗೆದು ರಸ್ತೆಗಿಳಿಸುತ್ತಿರುವಂತೆಯೇ ಮೋಡ ಬಿರಿದು ಕಪ್ಪಗಾದ ಆಗಸದಿಂದ ಮಳೆ ಸುರಿಯತೊಡಗಿತು. ವೈಪರನ್ನು ಚಾಲೂಗೊಳಿಸಿ, ಕಾರನ್ನು ಬಸ್ ನಿಲ್ದಾಣದ ಬಳಿಯ ಆಡ್‌ಲ್ಯಾಬ್ಸ್‌ನತ್ತ ಚಲಾಯಿಸಿದ. ಎಲ್ಲ ನಿಬಿಡತೆ, ಸಿಗ್ನಲ್ಲು, ಜ್ಯಾಮ್‌ಗಳಿಂದ ಮುಕ್ತನಾಗಲು ೧೮ ನಿಮಿಷ ವ್ಯಯಿಸಿತು. ಆಡ್‌ಲ್ಯಾಬ್ಸ್‌ನ ನೆಲಮಹಡಿಯ ಪಾರ್ಕಿಂಗ್‌ಗೆ ನುಗ್ಗಿಸಿ ಕಾರನ್ನು ಪಾರ್ಕ್ ಮಾಡಿದ. ಎಲಿವೇಟರ್ ಹಿಡಿದು ಎರಡನೇ ಮಹಡಿಯಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಮುಖ ಊದಿಸಿಕೊಂಡು ವಾಚು ನೋಡುತ್ತಿರುವ ಜಾಹ್ನವಿ ಕಂಡಳು. ಇವನ ಮುಖ ಕಾಣುತ್ತಿದ್ದಂತೆ ದುಮುಗುಡುತ್ತಾ ಮೆಟ್ಟಲ ಬಳಿ ತೆರಳಿ ಇಳಿಯತೊಡಗಿದಳು. ಇವನು ಸುಮ್ಮನೆ ಹಿಂಬಾಲಿಸಿದ. ಜಾಹ್ನವಿ ಎರಡು ಮಹಡಿ ಇಳಿದು ಬಂದು ಕೆಳ ಅಂತಸ್ತಿನಲ್ಲಿರುವ ಕಾಫಿಡೇ ಹೊಕ್ಕು ಮೂಲೆಯಲ್ಲಿನ ಒಂದು ವಿಶಾಲವಾದ ಸೋಫಾ ಒಂದರಲ್ಲಿ ಕುಕ್ಕರಿಸಿದಳು. ಎದುರಾಡಲು ಧೈರ್ಯವಾಗಲಿಲ್ಲ ಮೋಹನದಾಸನಿಗೆ. ಟೀಪಾಯ್ ಮೇಲಿದ್ದ ಪೇಪರ್ ನ್ಯಾಪ್‌ಕಿನ್ ತೆಗೆದು ಸರಸರನೆ ಏನೋ ಗೀಚತೊಡಗಿದ. ಜಾಹ್ನವಿಯ ಕುತೂಹಲ ಮೆಲ್ಲನೆ ಹೆಡೆ ಬಿಚ್ಚಿತು. ಆದರೂ ತೋರಿಸಿಕೊಳ್ಳದೇ ತನ್ನ ಉಗುರುಗಳತ್ತ ಹುಸಿಕಾಳಜಿಯಿಂದ ನೋಡತೊಡಗಿದಳು.

ಮೋಹನದಾಸ ಗೀಚುವುದನ್ನು ಮುಗಿಸಿ ನ್ಯಾಪ್‌ಕಿನ್ ಮಡಚಿ ಜಾಹ್ನವಿಯತ್ತ ಚಾಚಿದ. ಜಾಹ್ನವಿ ಪ್ರಶ್ನಾರ್ಥಕವಾಗಿ ಹುಬ್ಬು ಕುಣಿಸಿ ಮುಖ ಊದಿರುವ ಹಾಗೆಯೇ ನ್ಯಾಪ್‌ಕಿನ್ ಇಸಿದುಕೊಂಡು ತೆರೆದು ನೋಡಿದಳು. ಎರಡು ಕಡ್ಡಿ ಮನುಷ್ಯರು, ಎರಡುಜಡೆಯ ಹೆಣ್ಣೊಂದು ಮುನಿಸಿಕೊಂಡು ಅತ್ತ ಮುಖಮಾಡಿ ನಿಂತಿದ್ದರೆ ಒಂದು ಗಂಡು ಕೈಯಲ್ಲಿ ಹೂಗುಚ್ಛ ಹಿಡಿದು ಮೊಣಕಾಲೂರಿ ನಿಂತು ಓಲೈಸುತ್ತಿತ್ತು. ಹೆಣ್ಣು ಕಡ್ಡಿ ಪುತುಕ್ಕನೇ ನ್ಯಾಪ್‌ಕಿನ್‌ನಿಂದ ಹಾರಿ ಜಾಹ್ನವಿಯ ಎಡಗೈಯ ನುಣುಪಿನಲ್ಲಿ ಜಾರುತ್ತಾ ಅವಳ ಮಡಿಲ ಮೇಲಿದ್ದ ಹ್ಯಾಂಡ್‌ಬ್ಯಾಗ್‌ನ ಮೇಲೆ ಹಾರಿ ಕುಳಿತುಕೊಂಡಿತು. ಜಾಹ್ನವಿ ಬೆಚ್ಚಿ ನ್ಯಾಪ್‌ಕಿನ್ ಕೈಬಿಟ್ಟಳು. ಮೆಲ್ಲನೆ ತೇಲುತ್ತಾ ಟೀಪಾಯ್ ಮೇಲೆ ಬಿದ್ದ ನ್ಯಾಪ್‌ಕಿನ್‌ನಿಂದ ಕಂಗಾಲಾಗಿ ಹೊರಬಂದ ಗಂಡು ಕಡ್ಡಿ ಹೆಣ್ಣು ಕಡ್ಡಿಯನ್ನು ಹುಡುಕತೊಡಗಿತು. ಇತ್ತ ಹೆಣ್ಣು ಕಡ್ಡಿಗೂ ದಿಗಿಲಾಗಿ ಕೂತಲ್ಲಿಂದ ಎದ್ದು ಚಡಪಡಿಸತೊಡಗಿತು.

ಮೋಹನದಾಸ ಸುಮ್ಮನೆ ನೆಲ ನೋಡಿ ಕುಳಿತಿದ್ದ. ಅವನ ರೇಖೆಗಳ ಪ್ರಭಾವ ಅವನಿಗೆ ತಿಳಿದಿತ್ತು. ಇದೇ ರೇಖೆಗಳಿಂದಲ್ಲವೆ ಮರಿಯಾನ್‌ನಂತಹ ಧಿಮಾಕಿನ ಹುಡುಗಿ ಮೆದುವಾಗಿದ್ದು. ಅವಳು ಹೇಳುತ್ತಿದ್ದುದು ನೆನಪಾಯಿತು. "ನಿನ್ನ ವಿನ್ಯಾಸಗಳೆಲ್ಲ ತ್ರಿ-ಡಿ ಮ್ಯಾಜಿಕ್ ಇದ್ದಂಗೆ. ಒಮ್ಮೆ ನೋಡಿದರೆ ಅದರೊಳಗೆ ಹೋಗಿ ಬಿಡುತ್ತೇವೋ ಎನ್ನುವಷ್ಟು ಜೀವಂತವಾಗಿರುತ್ತವೆ. ಮೋಹನ್! ಎಲ್ಲಿ ಕಲಿತೆ ನೀನು ಈ ತರ ಬಿಡಿಸೋದನ್ನ"
"ಹಾಗೇನಿಲ್ಲ... ನಾನೂ ಸಾಮಾನ್ಯವಾಗಿ..." ಎನ್ನುತ್ತಾ ಜಾರಿಕೊಳ್ಳುತ್ತಿದ್ದ.

ತಲೆ ಎತ್ತಿ ನೋಡಿದರೆ ಜಾಹ್ನವಿಯ ಮುಖದ ತುಂಬ ನಗು ಬೆಳಕಾಡುತ್ತಿತ್ತು. ಮೋಹನ್ ಅವಳ ಮಂಡಿಯನ್ನು ಮೆಲ್ಲನೆ ತಟ್ಟಿ ’ಸಾರಿ’ ಅಂದ.
’ಸ್ಟುಪಿಡ್’ ಎನ್ನುತ್ತಾ ಮುಸಿ ನಕ್ಕಳು ಜಾಹ್ನವಿ.

ಟೀಪಾಯ್ ಮೇಲೆ ನ್ಯಾಪ್‌ಕಿನ್‌ನಲ್ಲಿ ಕಡ್ಡಿಗಳಿಬ್ಬರೂ ಮುತ್ತಿಡುತ್ತಿದ್ದರು. ಅವುಗಳ ಪ್ರೀತಿಗೆ ಹೊರಹೊಮ್ಮಿದ ಕಡ್ಡಿಹೃದಯಗಳು ನ್ಯಾಪ್‌ಕಿನ್‌ನಿಂದ ತೇಲುತ್ತಾ ಹೊರಬಂದು ಮೇಲಮೇಲಕ್ಕೆ ಸಾಗುತ್ತಿದ್ದವು.

ಬೆಚ್ಚನೆಯ ಕ್ಯಾಪುಚಿನೋ ಕುಡಿದು ಹೊರಬಂದರೆ ಮಳೆ ಇನ್ನೂ ಬಿಟ್ಟಿರಲಿಲ್ಲ. ಲಿಫ್ಟ್‌ನಲ್ಲಿ ಪಾರ್ಕಿಂಗ್ ಲಾಟ್‌ಗಿಳಿದು ಕಾರು ಹೊರತೆಗೆದು ಸುಮ್ಮನೆ ಬೀಚ್‌ನತ್ತ ಸಾಗಿದರು. ಹೆದ್ದಾರಿಯ ಬಳಿ ಹೊಸದಾಗಿ ರಚಿಸಲ್ಪಡುತ್ತಿದ್ದ ಫ್ಲೈಒವರ್‌ನ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ ಎನಿಸಿತು ಮೋಹನದಾಸನಿಗೆ. ಅದರ ಪ್ರತಿ ಇಂಚಿನಲ್ಲೂ ಕೊರತೆ ಕಂಡು ಬಂತು. ಒಂಥರಾ ಹೊಟ್ಟೆಗಿಲ್ಲದೇ ಸೊರಗಿದ ಮಗುವಿನ ಹಾಗೆ. ರೇಜಿಗೆ ಹುಟ್ಟಿ ಹಲ್ಲು ಕಡಿದ. ಯೂಸ್‌ಲೆಸ್ ಎಂದು ಬಯ್ದ.

"ಸಾಹೇಬ್ರು ಯಾರಿಗೆ ಬಯ್ಯುತ್ತಿರುವುದು? ಹಾಂ ಅಂದ ಹಾಗೆ ಡಿ.ಸಿ. ಜತೆ ನಿನ್ನ ಮೀಟಿಂಗ್ ಹೇಗಾಯಿತು?" ಎಂದ ಜಾಹ್ನವಿಯ ಪ್ರಶ್ನೆಗೆ ಚುಟುಕಾಗಿ ಬೆಳಗಿನ ಪ್ರಸಂಗದ ನಿಶ್ಫಲತೆಯನ್ನು ತೋಡಿಕೊಂಡ.

ಬೀಚ್ ಬಳಿ ಬಂದಾಗ ಅಲ್ಲಿ ಮಳೆಯೇ ಬಂದಿರಲಿಲ್ಲ. ಎಲ್ಲವೂ ಒಣಗಿಸಿಟ್ಟಂತೆ ಗರಿಗರಿಯಾಗಿತ್ತು. ಮೋಹನದಾಸ ಜಾಹ್ನವಿಯ ಕೈಹಿಡಿದು ಮರಳ ಮೇಲೆ ಸಮುದ್ರದಂಚಿನಲ್ಲಿ ಸಾಗಿದ. ತಟಕ್ಕನೇ ನಿಂತ. ಜೇಬಿನಿಂದ ಹಲವು ಮಡಿಕೆಗಳ ಹಾಳೆಯೊಂದನ್ನು ಹೊರತೆಗೆದು ಬಿಡಿಸಿದ. ಅದು ಅವನ ಕನಸಿನ ನೆಕ್‌ಲೇಸ್ ವಿನ್ಯಾಸ. ಕೊರಳ ಹಾರವಲ್ಲ.. ಬಂದರಿನ ಹೊರಮಡಿಲಿನಿಂದ ಸೇನೆಶ್ವರದವರೆಗೆ ಕೊರಳಹಾರದಂತೆ ವರ್ತುಲವಾಗಿ ಸಾಗುವ ಚತುಷ್ಪಥ ರಸ್ತೆಯ ವಿನ್ಯಾಸ. ನಗರದ ನಿಬಿಡತೆಯಿಲ್ಲದೆ ಸಮುದ್ರದಂಚಿನಲ್ಲೇ ನಿಸರ್ಗದ ಮಡಿಲಿನಲ್ಲಿ ಸಾಗುವ ರಸ್ತೆ ರಿಂಗ್ ರೋಡಿನಂತೆ ಬಳಸಬಹುದಾಗಿತ್ತು. ಹಾಳೆಯ ಮೇಲಿನ ರೇಖೆಗಳೆಲ್ಲ ಮತ್ತೆ ಜೀವ ತಳೆದು ಸರಿದಾಡಲು ಶುರು ಮಾಡಿದಾಗ ಜಾಹ್ನವಿಯ ಇರುವಿಕೆಯ ಅರಿವಾಗಿ ರಪ್ಪನೆ ಹಾಳೆಯನ್ನು ಮಡಚಿ ಜೇಬಿಗಿಳಿಸಿದ.

ಜಾಹ್ನವಿಗೆ ಇವನ ವರ್ತನೆಗಳೆಲ್ಲ ಅಭ್ಯಾಸವಾಗಿತ್ತು. ಅವನ ಈ ಇಮೋಷನಲ್ ವ್ಯಕ್ತಿತ್ವ ಅವಳಿಗೆ ಪ್ರಿಯವಾಗಿದ್ದರೂ ಗಂಟೆಗಟ್ಟಲೆ ಒಂದು ವಿಷಯದೊಳಗೆ ಹೊಕ್ಕಿ ಬಿಡುವ ರೀತಿ ಕೆಲವೊಮ್ಮೆ ಸಿಟ್ಟು ತರಿಸುತ್ತಿತ್ತು.

ಬೀಚಿನ ಆಗಸದಲ್ಲೂ ಕರಿ ಮೋಡ ತುಂಬಿಕೊಳ್ಳತೊಡಗಿತು. ಮೆಲ್ಲನೇ ಇಬ್ಬರೂ ಕಾರಿನತ್ತ ಹೆಜ್ಜೆ ಹಾಕಿದರು. ಜಾಹ್ನವಿಯನ್ನು ಮನೆಗೆ ಬಿಟ್ಟು ಅಲ್ಲೇ ಊಟ ಮಾಡಿ ಮನೆಗೆ ಮರಳಿದ ಮೋಹನದಾಸ ಮರುದಿನದ ಹೇಮರಾಜ್ ಜತೆಗಿನ ಮೀಟಿಂಗ್ ವಿಷಯದಲ್ಲಿ ನೋಟ್ಸ್ ಮಾಡತೊಡಗಿದ.

******

ತನ್ನೆದುರಲ್ಲಿ ಹೇಮರಾಜ್ ಎಸೆದ ಫೈಲನ್ನು ಮೆಲ್ಲನೆ ತೆರೆದ ಮೋಹನದಾಸ. "ಇಪ್ಪತ್ತು ವರುಷಗಳ ಹಿಂದೆ ನಾನೂ ನಿಮ್ಮ ಹಾಗೆ ವಿಚಿತ್ರ ಕನಸುಗಳನ್ನು ಕಾಣುತ್ತಾ ಈ ಊರಿಗೆ ಬಂದೆದ್ದೆ. ಆಗ ನಾನು ರಚಿಸಿದ ವಿನ್ಯಾಸಗಳು ಇವು... ಇಡೀ ಸಿಸ್ಟಮ್ ನನ್ನನ್ನೂ ಕರಪ್ಟ್ ಮಾಡಿತು. ಇವತ್ತು ನಾನು ಹೇಳಿದ್ದನ್ನು ಅಲ್ಲ ಎನ್ನುವ ಛಾತಿ ಇಡೀ ಸಿಸ್ಟಂನಲ್ಲೇ ಯಾರಿಗೂ ಇಲ್ಲ. ಆದರೆ ನನ್ನ ಈ ಫೈಲಿನ ಕನಸುಗಳು ಎಷ್ಟು ನಿರರ್ಥಕ ಎನ್ನುವುದು ನನಗೆ ಅರಿವಾಗಿದೆ."

ಎದ್ದು ಅವನ ವಿಶಾಲ ಛೇಂಬರ್‌ನ ವಿಸ್ತಾರವಾದ ಕಿಟಕಿಯ ಬಳಿ ನಿಂತು ಅತ್ತ ಬರುವಂತೆ ಸನ್ನೆ ಮಾಡಿದ ಹೇಮರಾಜ್.
ಏಳನೆ ಮಹಡಿಯಿಂದ ಕೆಳಗೆ ನೋಡಿದರೆ ಮಹಾತ್ಮಾ ಗಾಂಧಿ ರಸ್ತೆ ನೀಳವಾಗಿ ಆರು ಕಿ.ಮಿ. ಉದ್ದಕ್ಕೆ ಪೂರ್ತಿ ಕಾಣುತ್ತಿತ್ತು. ಬೆಳ್ಳಗೆ ಸ್ವಚ್ಛವಾಗಿ, ನೀಟಾಗಿರುವ ರಸ್ತೆ ಇಡೀ ಊರಲ್ಲೇ ಬೇರೆ ಇರಲಿಲ್ಲ. ಯಾರೋ ಪ್ರೀತಿಯಿಂದ ಮಾಡಿದ್ದಾರೆ ಅನ್ನುವಷ್ಟು ಉತ್ತಮವಾಗಿತ್ತದು.

"ಈ ರಸ್ತೆ ನೋಡಿ. ಪ್ರತಿ ಮಳೆಗಾಲದಲ್ಲಿ ಕರಗಿ ಹೊಂಡ ಬಿದ್ದು ಜನರು ಶಾಪ ಹಾಕುತ್ತಿದ್ದರು. ಕಳೆದ ವರ್ಷ ನಾನು ಸ್ವತಹ ನಿಂತು ಕಾಂಕ್ರಿಟೈಸ್ ಮಾಡಿಸಿದೆ. ಸರಕಾರನೇ ಖರ್ಚು ಮಾಡಿರುವುದು. ಬ್ಯೂರೋಕ್ರಸಿಯ ವ್ಯವಸ್ಥೆಯಲ್ಲಿ ಈ ಕ್ವಾಲಿಟಿ ಕೊಡೋದು ಯಾರಿಗೂ ಸಾಧ್ಯವಿಲ್ಲ. ನಾನು ಲಾಭ ನಷ್ಟ ನೋಡಲಿಲ್ಲ. ಊರು ಹೆಮ್ಮೆ ಪಡುವಂತಹ ರಸ್ತೆ ಬೇಕು ಅಂದುಕೊಂಡೆ. ಈಗ ಜನ ಏನು ಹೇಳ್ತಾರೆ ಗೊತ್ತಾ? ಹೇಮರಾಜ ಹಣ ಮಾಡಿದ ಅಂತಾರೆ.."
"ರಸ್ತೆ ಬಳಕೆಗೆ ಬಿಟ್ಟುಕೊಟ್ಟ ಕೂಡಲೇ ಪೇಪರ್‌ನವರು ಹುಳುಕೆತ್ತಲು ಶುರುಮಾಡಿದರು. ಒಂದು ಅಪಘಾತ ಆದರೆ ರಸ್ತೆವಿನ್ಯಾಸ ಸರಿಯಿಲ್ಲ ಅದರಿಂದ ಅಪಘಾತವಾಯಿತು ಅಂತ ಬರೆದರು. ರಾಜಕೀಯದವರು ತನಿಖೆ ಆಗಬೇಕು ಅಂತ ಧರಣಿ ಕೂತರು.
ನಾನು ನನ್ನ ಇಪ್ಪತ್ತು ವರ್ಷಗಳಲ್ಲಿ ಗಳಿಸಿದ್ದನ್ನ ಈ ಊರಿಗೆ ಮರಳಿ ಕೊಡಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಹಾಳಾಗಿ ಹೋಗಲಿ. ಬಿಟ್ಟು ಬಿಟ್ಟೆ."
"ಹೈವೇಯ ಫ್ಲೈಒವರ್ ನೋಡಿದ್ರಾ? ನ್ಯಾಷನಲ್ ಟೆಂಡರ್. ಮದರಾಸಿನ ರೆಡ್ಡಿ ಮಾಡ್ತಿರೋದು. ಹೇಗಿದೆ. ಜನರಿಗೆ ಹೀಗೆ ಬದುಕಿ ಅಭ್ಯಾಸವಾಗಿದೆ. ಒಳ್ಳೆಯದು ಕಾಣುವುದಿಲ್ಲ. ಒಳ್ಳೆಯದು ಸಿಗುವುದೂ ಇಲ್ಲ."
"ನಿಮಗೊಂದು ಸಲಹೆ ಕೊಡಲೇನು.." ಅವನ ಅಗಾಧವಾದ ಡೆಸ್ಕ್ ಬಳಸಿ ಬಂದು ತನ್ನ ಖುರ್ಚಿಯಲ್ಲಿ ಕುಳಿತು ಒರಗಿ ಇವನತ್ತ ನೋಡಿದ ಹೇಮರಾಜ್.

ದಯವಿಟ್ಟು ಹೇಳಿ ಎನ್ನುವಂತಹ ವಿನಯ ಸಹಜವಾಗಿ ಮೋಹನದಾಸನ ಮುಖದಲ್ಲಿ ಮೂಡಿತು.

"ನಿಮ್ಮಲ್ಲಿ ಕ್ರಿಯಾಶೀಲತೆ ಇದೆ. ಹೊಸದನ್ನು ಮಾಡುವ ಹುಮ್ಮಸ್ಸಿದೆ. ನಿಮ್ಮಂತವರು ನನಗೆ ಬೇಕು. ನೀವು ಕೇಳಿದಷ್ಟು ಸಂಬಳ, ಕೇಳಿದ ಸ್ಟೇಟಸ್ ಎಲ್ಲವನ್ನೂ ಕೊಡುತ್ತೇನೆ. ಆದರೆ ಈ ನಗರ ಕಟ್ಟುವ ಹುಚ್ಚುತನ ಬಿಟ್ಟುಬಿಡಿ. ನಾನು ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ." ಎಂದ ಹೇಮರಾಜ್.

"ಸರಿ ಸರ್! ನಾನು ಯೋಚನೆ ಮಾಡಿ ಹೇಳುತ್ತೇನೆ" ಎಂದುತ್ತರಿಸಿದ ಮೋಹನದಾಸ.

ಅತೀವ ನಿರಾಶೆ ಕಾಡುತ್ತಿತ್ತು. ನಿರಾಶೆ ನರನರಗಳಲ್ಲಿ ಹರಡತೊಡಗಿತು. ಹೃದಯ ತಣ್ಣಗಾಗತೊಡಗಿತು. ರಕ್ತದೊತ್ತಡ ಇಳಿಯತೊಡಗಿತು. ನಿಧಾನವಾಗಿ ಮಂಕು ಕವಿಯತೊಡಗಿತು.

ಮನೆಗೆ ಬಂದು ಮಲಗಿಕೊಂಡ. ಎಚ್ಚರವಾದಾಗ ಕತ್ತಲೆಯಾಗಿತ್ತು. ಹಾಸಿಗೆಯಲ್ಲಿ ಕಣ್ಣುಬಿಟ್ಟುಕೊಂಡು ನಿಶ್ಚಲವಾಗಿ ಬಿದ್ದುಕೊಂಡಿರುವವನಿಗೆ ಹೊರಬಾಗಿಲ ಕರೆಗಂಟೆ ಸದ್ದಿಗೆ ತಾನು ಎಚ್ಚರವಾಗಿದ್ದೇನೆ ಎನ್ನುವ ಅರಿವುಂಟಾಯಿತು. ತಾನೀಗ ಏಳಬೇಕು, ಎದ್ದು ಹೊರಬಾಗಿಲನ್ನು ತೆರೆಯಬೇಕು. ಆದರೆ ಅಲುಗಾಡಲೂ ಸಾಧ್ಯವಾಗುತ್ತಿಲ್ಲ! ಮತ್ತೊಮ್ಮೆ ಕರೆಗಂಟೆ ಹೊಡೆಯಿತು. ಈ ಬಾರಿ ಕೊಂಚ ಹೆಚ್ಚು ಅಸಹನೆಯೂ ಕೂಡಿತ್ತು ಕರೆಗಂಟೆಯ ಸದ್ದಿನಲ್ಲಿ.

ಬಲವಂತದಿಂದ ಶಕ್ತಿಯನ್ನು ಮೈಗೂಡಿಸಿ ಹಾಸಿಗೆಯಿಂದೆದ್ದು ತೂರಾಡುತ್ತಾ ಹೋಗಿ ಬಾಗಿಲು ತೆರೆದ. ಜಾಹ್ನವಿ ನಿಂತಿದ್ದಳು.

"ಏನಾಯಿತು? ಬೆಳಗ್ಗಿನಿಂದ ಫೋನ್ ಎತ್ತುತ್ತಿಲ್ಲ! ಇಲ್ಲಿ ನೋಡಿದರೆ ಬಾಗಿಲೇ ತೆರೆಯುತ್ತಿಲ್ಲ! ನಾನು ಹದಿನೈದು ಸಾರಿ ಬೆಲ್ ಮಾಡಿದೆ. ಗಾಬರಿಯಾಗಿತ್ತು ನನಗೆ. ಆರಾಮವಾಗಿದ್ದಿ ತಾನೆ?!" ಕಳವಳದಿಂದ ಆವರಿಸಿಕೊಂಡಳು ಜಾಹ್ನವಿ.

"ಏನಿಲ್ಲ ಸ್ವಲ್ಪ ಜಾಡ್ಯ ಮೈಗೂಡಿತ್ತು..." ಎಂದವನು ಮತ್ತೆ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡ. ಚಹ ಮಾಡಲು ಅಡಿಗೆ ಕೋಣೆಗೆ ಹೋದ ಜಾಹ್ನವಿಗೆ ಆದಿನ ಒಲೆ ಹಚ್ಚಿಲ್ಲ ಎನ್ನುವುದು ಅರಿವಾಯಿತು.

ಜಾಹ್ನವಿ ಮಾಡಿತಂದ ಚಹ ಕುಡಿದಾಗ ಮಂಕು ಕೊಂಚ ಕಡಿಮೆಯಾಯಿತು. ನೆಟ್ಟ ನೋಟದಿಂದ ಗೋಡೆ ನೋಡುತ್ತಾ ಮೈಮರೆತಿದ್ದ ಮೋಹನದಾಸನಿಗೆ ಜಾಹ್ನವಿಯ ಕೈ ಹಣೆಯನ್ನು ಸ್ಪರ್ಶಿಸಿದಾಗ ಚಿಕ್ಕ ಸಾಂತ್ವನದ ಅನುಭೂತಿಯಾಯಿತು.

ಅವಳ ಕೈಯನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದಿಟ್ಟಿಸತೊಡಗಿದ. ತುಂಬು ಕೈಗಳವು. ಕೊಂಚವೂ ನರಗಳ ಚೇಷ್ಟೆಯಾಗಲೀ, ಎಲುವುಗಳ ಒತ್ತಾಗಲೀ ಮೇಲೆ ಕಾಣದಿರುವ ನುಣುಪಾದ ಹಿಂಗೈ, ಮಿದುವಾದ ನಸುಗೆಂಪು ಬಣ್ಣದ ಅಂಗೈ, ನಿಚ್ಚಳ ರೇಖೆಗಳು. ಮೆಲ್ಲನೇ ರೇಖೆಗಳನ್ನು ತನ್ನ ಬೆರಳುಗಳಿಂದ ಸವರಿದ. ರೇಖೆಗಳು ಪುಟಿದೆದ್ದು ಅಲುಗತೊಡಗಿದವು. ಕಚಗುಳಿಯೆನಿಸಿ ಕೈಸೆಳೆದುಕೊಂಡ ಜಾಹ್ನವಿ ಹುಬ್ಬು ಕುಣಿಸಿದಳು. ಸುಮ್ಮನೆ ನಕ್ಕ.

"ನಿನಗೆ ಸುಸ್ತಾಗಿರಬೇಕು. ನೀನು ಊಟ ಮಾಡಿದ್ದೆಯೇನು? ರಾತ್ರಿ ಊಟಕ್ಕೇನು ಮಾಡ್ತೀಯಾ?" ಎಂದು ಹೇಳುತ್ತಾ ಅಡಿಗೆ ಕೋಣೆಗೆ ಬಂದು ಚಕಚಕನೇ ಪಲ್ಯ, ತೊವ್ವೆ ಮತ್ತು ಅನ್ನ ಮಾಡಿಟ್ಟು ಹೊರಬಂದರೆ ಇನ್ನೂ ಮೋಹನದಾಸನ ಗುಂಗು ಇಳಿದಿರಲಿಲ್ಲ. ಅವನು ಅದೇ ಭಂಗಿಯಲ್ಲಿ ಕಪಾಟಿನತ್ತ ದೃಷ್ಟಿ ನೆಟ್ಟು ಕೂತಿದ್ದ.

"ನನಗಿನ್ನು ಹೊತ್ತಾಯ್ತು.. ಊಟ ಮಾಡು, ಎಲ್ಲ ರೆಡಿ ಮಾಡಿಟ್ಟಿದ್ದೇನೆ. ನಿನಗೆ ಸುಸ್ತಾಗಿರಬೇಕು, ಊಟ ಮಾಡಿ ನಿದ್ರೆ ಮಾಡು, ನಾಳೆ ಬೆಳಗ್ಗೆ ಬರುತ್ತೇನೆ" ಎನ್ನುತ್ತಾ ಅವನ ಉತ್ತರಕ್ಕೂ ಕಾಯದೇ ಚಪ್ಪಲಿ ಮೆಟ್ಟಿ ಬಾಗಿಲೆಳೆದು ಜಾಹ್ನವಿ ಹೋದ ದಿಕ್ಕಿನತ್ತ ನೋಡಿದ ಮೋಹನದಾಸ.

ಕೊಂಚ ಹೊತ್ತಿನ ಬಳಿಕ ಮೂಗು ಕಚಗುಳಿಯೆನಿಸಿ ಬಲವಾಗಿ ಸೀನಿದ. ಅಂಗಾಂಗ ಅದುರಿ ಗುಂಗು ಕೊಂಚ ಕರಗಿತು. ಮೆಲ್ಲನೆ ಎದ್ದು ತನ್ನ ಆಫೀಸು ಕೋಣೆಯ ಬಾಗಿಲನ್ನು ತೆರೆದ.

ಅಣೆಕಟ್ಟೆಯ ತೂಬು ತೆರೆದಂತೆ ರಭಸದಿಂದ ರೇಖೆಗಳೆಲ್ಲ ಹೊರಚೆಲ್ಲಿಕೊಂಡು ಸರಿದಾಡತೊಡಗಿದವು. ಕೋನಗಳು ಪೂರ್ಣವಾಗಿ ಸ್ಥಾವರಗಳು ಎದ್ದು ನಿಂತುಕೊಂಡವು. ಇವನ ವಿನ್ಯಾಸಗಳು ಇದೀಗ ಮನೆಯನ್ನು ಆವರಿಸಿಕೊಂಡು ಬೆಳೆಯತೊಡಗಿದವು. ಒಂದೊಂದಾಗಿ ವಿನ್ಯಾಸಗಳು ಎದ್ದುನಿಲ್ಲುತ್ತಿದ್ದಂತೆ ಪರಿಣಾಮವೆನ್ನುವಂತಹ ರೀತಿಯಲ್ಲಿ ಅದರ ಒತ್ತಿನ ವಿನ್ಯಾಸಗಳು ಸುಧಾರಿತ ರೂಪಕ್ಕೆ ಮಾರ್ಪಾಡಾಗುತ್ತಿದ್ದವು. ಒಂದು ರಸ್ತೆಯಲ್ಲಿ ಫ್ಲೈಒವರ್ ಮೂಡುತ್ತಿದ್ದಂತೆಲ್ಲ ಅಕ್ಕಪಕ್ಕದ ಕಟ್ಟಡಗಳು ಗಾಜುತಳೆದು ಸುಂದರವಾಗುತ್ತಿದ್ದವು.

ಮೆಲ್ಲನೆ ಸುತ್ತಾಡುತ್ತಾ ಭೂಗತ ಸಬ್‌ವೇಯತ್ತ ಕಾಲು ಹಾಕಿದ ಮೋಹನದಾಸ. ಎಸ್ಕಲೇಟರ್ ನಿರುಮ್ಮಳವಾಗಿ ಇವನನ್ನು ಕೆಳಕ್ಕೊಯ್ಯಿತು. ಭೂಗತ ಮೆಟ್ರೋ ನಿಲ್ದಾಣವದು. ಪ್ಲಾಟ್‌ಫಾರಂನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ನಿಂತು ಕಾಯುತ್ತಿದ್ದರು.

ಮೇಲ್ಛಾವಣಿಗೆ ತೂಗುಹಾಕಿದ್ದ ಇಲೆಕ್ಟ್ರಾನಿಕ್ ಫಲಕ ಮುಂದಿನ ರೈಲು ಬರಲು ೩೦ ಸೆಕೆಂಡುಗಳಿವೆ ಎಂದು ಸೂಚಿಸುತ್ತಿತ್ತು. ಅಂಕಿಗಳು ಶೂನ್ಯವಾಗಲು ಮತ್ತು ರೈಲು ಬಂದು ನಿಲ್ಲಲ್ಲೂ ತಾಳೆಯಾಯಿತು.

ಇವನು ನಿಂತಿದ್ದಲ್ಲಿಯೇ ರೈಲಿನ ಬಾಗಿಲು ತೆರೆದುಕೊಂಡಿತು. ಮೋಹನದಾಸ ಒಳಹೊಕ್ಕ ಕೂಡಲೇ ಬಾಗಿಲು ಮುಚ್ಚಿಕೊಂಡು ಚಲಿಸತೊಡಗಿತು ಮೆಟ್ರೋ. ೧೮ ಡಿಗ್ರೀ ಏಸಿಯಲ್ಲಿ ಚಳಿಯೆನಿಸಿ ತಾನು ಜಾಕೆಟ್ಟು ತರಬೇಕಿತ್ತು ಎಂದುಕೊಂಡ.

ವಿರಳವಾಗಿ ಜನ ಕೂತಿದ್ದರು. ಅಲ್ಲೇ ಒಂದು ಸೀಟು ನೋಡಿ ಕೂತುಕೊಂಡ. ಎದುರುಗಡೆ ಕುಳಿತ ಹಿರಿಯನೊಬ್ಬ ಇವನತ್ತ ನೋಡುತ್ತಾ ಸ್ನಿಗ್ಧ ಸುಂದರ ನಗುವನ್ನು ಬೀರುತ್ತಿದ್ದ. ತುಂಬ ಆಪ್ಯಾಯಮಾನವಾಗಿ ತಟ್ಟುತ್ತಿದ್ದ ಅವನ ನಗುವಿಗೆ ಪ್ರತಿಕ್ರಿಯೆಯಾಗಿ ಮೋಹನದಾಸನೂ ನಗು ಸೂಸಿದ.
ಬೆಳ್ಳನೆಯ ಗಡ್ಡ, ಬೆಳ್ಳನೆಯ ಮೀಸೆ, ಭುಜದವರೆಗೂ ಇಳಿಬಿದ್ದಿದ್ದ ಬೆಳ್ಳನೆಯ ತಲೆಗೂದಲನ್ನು ಒತ್ತಾಗಿಟ್ಟಿದ್ದ ಪಶ್ತೂನ್ ಟೋಪಿ. ಹುಬ್ಬುಗಳ ನಡುವೆ ಬೋಳಾಗಿದ್ದರೂ ಕುಂಕುಮ ಹಚ್ಚಿರುವ ಹಾಗಿನ ದೇದೀಪ್ಯಮಾನತೆ. ಕಣ್ಣುಗಳಲ್ಲಿ ತುಳುಕಾಡುವ ಕಾಂತಿ. ನಸು ಖಾಕಿ ಬಣ್ಣದ ಕ್ರಿಶ್ಚಿಯನ್ ಪಾದರಿಯ ನಿಲುವಂಗಿ.

"ಎಲ್ಲಿವರೆಗೆ ಬಂತು ನಿನ್ನ ಪ್ಲಾನು" ಎಂದು ಕೇಳಿದ ಹಿರಿಯ.

ಅರೇ ಈತ ಆಸ್ಥಾ ಚ್ಯಾನಲ್‌ನಲ್ಲಿ ಪ್ರವಚನ ನೀಡುವ ಅಳಗಿರಿಯಂತಿದ್ದಾನಲ್ಲ ಎಂದುಕೊಂಡ ಮೋಹನದಾಸ. ಆತ ಬೀರುತ್ತಿದ್ದ ಸ್ನಿಗ್ಧ ನಗುವಿನಲ್ಲಿ ಆವರಿಸಿಕೊಳ್ಳುವ ಮಮತೆಯಿತ್ತು.

"ಎಲ್ಲಿವರೆಗೆ ಬಂತು ನಿನ್ನ ಪ್ಲಾನು" ಮತ್ತೆ ಕೇಳಿದ ಬೆಳ್ಳಿಗಡ್ಡದ ಅಳಗಿರಿ.

ಎದೆಯೊಳಗೆ ನಿರಾಶೆ ಮತ್ತೆ ಜಗ್ಗೆಂದು ತಿವಿಯಿತು.

ನಿಟ್ಟುಸಿರು ಬಿಟ್ಟು ಅಳಗಿರಿಯನ್ನೇ ದಿಟ್ಟಿಸಿದ ಮೋಹನದಾಸ. ಎದ್ದು ಹಿಂಬಾಲಿಸುವಂತೆ ಸನ್ನೆ ಮಾಡಿದ ಅಳಗಿರಿ. ಮೋಹನದಾಸ ಎದ್ದು ನಿಲ್ಲುತ್ತಿದ್ದಂತೆ ಮೆಟ್ರೋ ಕ್ಷಣ ನಿಲುವಾಗಿ ಬಾಗಿಲು ತೆರೆಯಿತು. ಹೊರಗೆ ಕಾಲಿಟ್ಟ ಅಳಗಿರಿಯನ್ನು ಯಾಂತ್ರಿಕವಾಗಿ ಹಿಂಬಾಲಿಸಿದ.
"ನೀನು ಬಾಸ್ಟನ್‌ನಿಂದ ಮರಳಿ ಬಂದದ್ದು ಈ ರೀತಿ ಜೋಲುಮೋರೆ ಹಾಕಿ ಕೂಡಲೇನು?" ಚಾಟಿಯೇಟು ಚುರುಕಾಗಿತ್ತು. ಬೆಚ್ಚಿಬಿದ್ದ ಮೋಹನದಾಸ ಅಳಗಿರಿಯತ್ತ ನೋಡಿದ. ಅರೇ ಈತನಿಗೆ ಎಲ್ಲವೂ ತಿಳಿದಿದೆಯಲ್ಲ ಎಂದು ಅಚ್ಚರಿಗೊಂಡ.

ಎಸ್ಕಲೇಟರ್ ಹಿಡಿದು ಮೇಲಕ್ಕೆ ಹೋದಾಗ ವಿಶಾಲ ಮರುಭೂಮಿ. ಸೂರ್ಯನ ಪ್ರಖರ ಬೆಳಕು ಕಣ್ಣು ಕುಕ್ಕುತ್ತಿತ್ತು. ದೂರದೂರಕ್ಕೆ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳುಗಾಡಿನ ಮೃಗಜಲದ ಹಬೆ ಹರಿದಾಡುತ್ತಿತ್ತು.

"ಎಷ್ಟು ಛಲವಿದೆ ನಿನ್ನಲ್ಲಿ? ಹೋರಾಡುತ್ತೀಯ ಇಲ್ಲ ಮರಳಿ ಬಾಸ್ಟನ್‌ಗೆ ಹೋಗುತ್ತೀಯ? ಏನು ನಿನ್ನ ನಿರ್ಧಾರ!." ಮತ್ತೆ ಬೀಸಿತು ಚಾಟಿ. ಛಲ ಮೈಗೂಡಿತ್ತು. ಒತ್ತರಿಸಿಕೊಂಡು ಹೊರಬಂದು ಮಾತಾಯ್ತು. "ಇಲ್ಲ!.. ಇಲ್ಲೇ ಇದ್ದು ಹೋರಾಡುತ್ತೇನೆ."

"ವೆರಿಗುಡ್! ತಗೋ ಇದನ್ನು ಹಿಡಿ..."

ಚಾಚಿದ ಅಳಗಿರಿಯ ಕೈಯಲ್ಲಿ ಇದ್ದಲ ಚೂರೊಂದು ಕರ್ರಗೆ ಹೊಳೆಯುತ್ತಿತ್ತು. ಮೋಹನದಾಸ ತೆರೆದ ಅಂಗೈಯಲ್ಲಿ ಇದ್ದಲ ಚೂರನ್ನು ಗಮನಿಸತೊಡಗಿದ. ಅಳಗಿರಿ ಮತ್ತೆ ಆಗಸದತ್ತ ಕೈಚಾಚಿ ಏನೋ ಜಪಿಸತೊಡಗಿದ. ಜಗ್ಗೆಂದು ಒಂದಡಿಯ ಕೋಲು ಅವನ ಕೈಯಲ್ಲಿ ಪ್ರತ್ಯಕ್ಷವಾಯಿತು. ಅದನ್ನೂ ಮೋಹನದಾಸನಿಗೆ ನೀಡಿದ ಅಳಗಿರಿ.

"ಇದೀಗ ನಾನು ಹೇಳುವುದನ್ನು ಗಮನವಿಟ್ಟು ಕೇಳು"

"ಮೊದಲು ನಿನ್ನ ಪ್ಲಾನನ್ನು ಗಟ್ಟಿ ಮಾಡು. ಎಲ್ಲಾ ಸರಿಯಾಗಿದೆ ಅಂದು ಅನಿಸಿದ ಮೇಲೆ ಇದ್ದಲ ಚೂರಿನಿಂದ ಸಂಪೂರ್ಣ ನಗರದ ನಕಾಶೆಯನ್ನು ಬಿಡಿಸು. ಇಂಚಿಂಚೂ ಡಿಟೈಲ್ ಆಗಿರಲಿ. ನಿನ್ನ ಪ್ಲಾನನ್ನು ರಿಯಲೈಸ್ ಮಾಡಲು ಈ ಮಂತ್ರದಂಡ ನಿನಗೆ ಸಹಾಯ ಮಾಡುತ್ತೆ." ಎನ್ನುತ್ತಾ ಅದೇ ಮಮತೆಯ ನಗೆ ಬೀರಿದ ಅಳಗಿರಿ.

ಪ್ರಶ್ನೆಗಳ ಪುಂಖ ಒತ್ತಿಕೊಂಡು ನುಗ್ಗತೊಡಗಿತು. ಅಳಗಿರಿಯ ಕಣ್ಣುಗಳ ಕಾಂತಿಯ ಆಳಕ್ಕೆ ಕರಗಿ ಹೋಗತೊಡಗಿದ ಮೋಹನದಾಸ. ಮೊಬೈಲ್ ಮತ್ತೆ ರಿಂಗಾಯ್ತು. ಅಳಗಿರಿ ಚಕ್ಕೆಂದು ಕಣ್ಮರೆಯಾದ. ಮರಳುಗಾಡು ಕರಗಿಹೋಯಿತು. ಕತ್ತಲ ಕೋಣೆಯಲ್ಲಿ ಮೊಬೈಲ್ ಪರದೆಯ ಮೇಲೆ ಜಾಹ್ನವಿಯ ಹೆಸರು ಬ್ಲಿಂಕಾಗುತ್ತಿತ್ತು.

"ಹೆಲೋ! ಊಟ ಮಾಡಿದ್ಯಾ?" ಆಸ್ತೆಯಿಂದ ಕೇಳಿದಳು ಜಾಹ್ನವಿ. "ಇನ್ನೂ ಇಲ್ಲ" ಎಂದ. "ಓಕೆ, ಊಟ ಮಾಡಿ ಮಲಗು, ಸುಮ್ಮನೆ ಏನೇನೋ ತಲೆಗೆ ಹಚ್ಕೋಬೇಡ" ಎಂದು ಕಾಳಜಿಯಿಂದ ಗದರಿದಳು. ಮೋಹನದಾಸನಿಗೆ ಗಲಿಬಿಲಿಯಾಗಿತ್ತು. ತಾನು ಈಗ ತಾನೆ ಕಂಡಿರುವುದು ಕನಸೋ, ನಿಜವೋ ಎನ್ನುವ ಭ್ರಮೆಯಿಂದ ಹೊರಬರಲಾರದೆ ಜಾಹ್ನವಿಯ ಮಾತಿಗೆ ಹೂಂಗುಟ್ಟಿ ಫೋನಿಟ್ಟ.

ಮೊದಲು ತಾನು ಎಲ್ಲಿದ್ದೇನೆಂದು ಸುತ್ತ ನೋಡಿದ. ಕಣ್ಣು ಕತ್ತಲೆಗೆ ಹೊಂದಿಕೊಂಡು ಅಂಧಕಾರ ತಿಳಿಯಾಗಿತ್ತು. ತಾನು ಕೆಳಗೆ ಗರಾಜಿನಲ್ಲಿದ್ದೇನೆ ಎನ್ನುವುದು ಅರಿವಾಗುತ್ತಲೇ ತಡಕಾಡಿ ಲೈಟು ಹಾಕಿದ. ಕ್ಷಣದಲ್ಲಿ ಗರಬಡಿದು ತನ್ನ ಕೈಯಲ್ಲಿರುವ ವಸ್ತುಗಳನ್ನೇ ದಿಟ್ಟಿಸತೊಡಗಿದ.
ಒಂದು ಇದ್ದಿಲ ಚೂರು ಹಾಗೂ ಒಂದಡಿಯ ಒಂದು ಮರದ ಕೋಲು.

ತನ್ನ ಕೋಣೆಗೆ ಮರಳಿ ತುಂಬು ಬೆಳಕಿನಲ್ಲಿ ಆ ಕೋಲನ್ನು ಸೂಕ್ಷ್ಮವಾಗಿ ದಿಟ್ಟಿಸತೊಡಗಿದಾಗ ಅದು ಮಾಮೂಲಿ ಮರದ ತುಂಡಲ್ಲ ಎಂದು ಖಾತರಿಯಾಯಿತು. ನುಣುಪಾದ ಮೈಯಿರುವ ಈ ಒಂದಡಿ ಉದ್ದದ ತೇಗದ ಕೋಲು ಮಂತ್ರದಂಡವೇ? ಎಂದು ಅಚ್ಚರಿಯಾಯಿತು. ಬಹಳ ಸೂಕ್ಷ್ಮವಾಗಿ ಅದರ ಮೇಲೆ ದೇವನಾಗರಿ ಅಕ್ಷರಗಳಲ್ಲಿ ಒಂದು ವಾಕ್ಯವನ್ನು ಕೆತ್ತಲಾಗಿತ್ತು. ಅವನು ಟೇಬಲ್ ಮೇಲೆ ಇಟ್ಟಿದ್ದ ಇದ್ದಿಲ ಚೂರು ಕರ್ರಗಿದ್ದರೂ ಹೊಳಪಿನಿಂದ ಕೂಡಿತ್ತು. ಅದನ್ನೂ ಕೈಗೆ ತೆಗೆದುಕೊಂಡು ಸೂಕ್ಷ್ಮವಾಗಿ ಪರೀಕ್ಷಿಸಿದ. ಶಾರ್ಪನರ್‌ನಿಂದ ಅದಕ್ಕೊಂದು ಚೂಪು ಕೊಡಲು ಯತ್ನಿಸಿದ. ಅವನು ಅಂದುಕೊಂಡದ್ದಕ್ಕಿಂತ ಹೆಚ್ಚು ಗಟ್ಟಿಯಾಗಿತ್ತದು. ಇದಕ್ಕೆ ಸಾಣೆಯೇ ಬೇಕು ಎಂದುಕೊಳ್ಳುತ್ತಾ ತಾನು ಈ ಮಾಯಕದ ವಸ್ತುಗಳಿಂದ ಮಾಡಬೇಕಾದ ಕಾರ್ಯದತ್ತ ಗಮನ ಹರಿಸಲು ನಿರ್ಧರಿಸಿದ ಮೋಹನದಾಸ.

ಭಯಂಕರ ಹಸಿವು ಭಗ್ಗೆಂದು ಎಚ್ಚರಾಗಿ ಕಾಡತೊಡಗಿತು. ಮಂತ್ರದಂಡವನ್ನೂ ಇದ್ದಿಲ ಚೂರನ್ನೂ ಡ್ರಾವರ್‌ನೊಳಗಿಟ್ಟು ಅಡಿಗೆ ಮನೆಯತ್ತ ನಡೆದ. ಜಾಹ್ನವಿಯ ಮೇಲೆ ಪ್ರೀತಿ ಉಕ್ಕೇರಿ ಬಂತು. ಬಟ್ಟಲಲ್ಲಿ ಅನ್ನ ಹಾಕಿ ತೊವ್ವೆ ಸುರಿದುಕೊಂಡ. ನಿದ್ರೆ ಒತ್ತರಿಸಿಕೊಂಡು ಬರುತ್ತಿತ್ತು. ದೀಪಗಳನ್ನೆಲ್ಲ ಆರಿಸಿ ಹಾಸಿಗೆಯಲ್ಲಿ ಬಿದ್ದುಕೊಂಡವನಿಗೆ ಗಾಢ ನಿದ್ರೆ.

ಬೆಳಿಗ್ಗೆ ಎಚ್ಚರವಾದಾಗ ನಿದ್ರೆಯ ನಶೆಯಿನ್ನೂ ಕಣ್ಣೆಳೆಯುತ್ತಿತ್ತು. ಮತ್ತೆ ಹೊರಳಿ ಮಲಗಬೇಕೆನ್ನುವಷ್ಟರಲ್ಲಿ ಡ್ರಾವರಿನಲ್ಲಿಟ್ಟ ವಸ್ತುಗಳು ನೆನಪಾದವು. ಜಗ್ಗೆಂದು ಎದ್ದು ಡ್ರಾವರನ್ನು ತೆರೆದು ಅವುಗಳನ್ನು ಕೈಯಲ್ಲಿ ಹಿಡಿದುಕೊಂಡಾಗಲಷ್ಟೆ ಹಿಂದಿನ ರಾತ್ರಿ ನಡೆದದ್ದು ನಿಜವೆಂದು ಖಾತರಿಯಾಯಿತು.

*****

ಮುಂದಿನ ಕೆಲವು ದಿನ ಮೋಹನದಾಸ ತಪಸ್ಸಿನಂತೆ ತನ್ನ ಪ್ಲಾನನ್ನು ಸ್ಫುಟಗೊಳಿಸುವುದರಲ್ಲಿ ನಿರತನಾದ. ಯಾವೊಂದು ಕೊರತೆಯಿಲ್ಲದಂತೆ ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿದ. ಪೂರ್ತಿ ಪ್ಲಾನನ್ನು ಸಂಕುಚಿತ ಗಾತ್ರದಲ್ಲಿ ಮುದ್ರಿಸಿಕೊಂಡ. ಇದ್ದಿಲ ಚೂರನ್ನು ಸಾಣೆ ಹಿಡಿದು ಚೂಪು ಮಾಡಿಕೊಂಡಿದ್ದ. ಒಂದು ಲೇಖನಿಯ ಬಾಲವನ್ನು ಹಿಡಿಯ ಹಾಗೆ ಬಳಸಲು ಆ ಸಾಣೆ ಮಾಡಿದ ಇದ್ದಿಲ ಚೂರಿಗೆ ಸಿಕ್ಕಿಸಿದ್ದ. ವಿಶಾಲ ಬಿಳಿ ಹಾಳೆಯನ್ನು ಡ್ರಾಫ್ಟ್ ಬೋರ್ಡಿಗೆ ಸಿಕ್ಕಿಸಿ ತಯಾರಾದ. ಸೂಕ್ಷ್ಮವಾಗಿ ಅಳತೆಯ ಗೆರೆಗಳೂ ಆ ಹಾಳೆಯಲ್ಲಿ ಬರೆಯಲ್ಪಟ್ಟಿದ್ದವು.
ಇದೀಗ ಕಾರ್ಯಾಚರಣೆಯ ಮೊದಲ ಹಂತ ಪ್ರಾರಂಭವಾಗಿತ್ತು. ಮೋಹನದಾಸ ಕಂಪಿಸುತ್ತಿರುವ ಕೈಯನ್ನು ತಹಬಂದಿಗೆ ತಂದುಕೊಂಡು ಇದ್ದಿಲ ಚೂರಿನಿಂದ ಮೊದಲ ಗೆರೆಯನ್ನೆಳೆದ. ಬೆಣ್ಣೆಯಲ್ಲಿ ಕೂದಲೆಳೆದಂತೆ ಸರಾಗವಾಗಿ ಬರೆಯಿಸಿಕೊಂಡು ಹೋಗತೊಡಗಿತು ಇದ್ದಿಲು. ಚಕಚಕನೇ ಒಂದೊಂದಾಗಿ ಎಲ್ಲ ವಿನ್ಯಾಸಗಳೂ ಆ ವಿಶಾಲ ಹಾಳೆಯಲ್ಲಿ ಮೂಡತೊಡಗಿದವು.

ಸುದೀರ್ಘ ೧೪ ಗಂಟೆಗಳ ಅವಧಿಯಲ್ಲಿ ಅಂತಿಮ ನಕಾಶೆ ಸಿದ್ಧವಾಗಿತ್ತು. ಅಳಗಿರಿ ಆ ಮರಳುಗಾಡಿನ ಸ್ಟೇಶನ್‌ನಲ್ಲಿ ಸೃಷ್ಟಿಸಿಕೊಟ್ಟ ಇದ್ದಿಲ ಚೂರು ಕೊಂಚವು ಸವೆದಿರಲಿಲ್ಲ.

ಒಮ್ಮೆ ಮೆಚ್ಚುಗೆಯಿಂದ ನಕಾಶೆಯ ಮೇಲೆ ಕಣ್ಣಾಡಿಸಿದ ಮೋಹನದಾಸ. ತನ್ನ ಕನಸಿನ ನಗರ ಅಲ್ಲಿ ರೂಪುಗೊಂಡಿತ್ತು. ತಾನು ಇಷ್ಟು ಕಾಲ ಆಸ್ಥೆಯಿಂದ ಯೋಚಿಸಿ, ಧ್ಯಾನಿಸಿ, ಪರಿತಪಿಸಿ, ಹಂಬಲಿಸಿ, ಕನವರಿಸಿದ ಆ ನಗರದ ನಕಾಶೆಯ ಮುಂದೆ ಯೋಗಿಯಂತೆ ಕುಳಿತಿದ್ದ ಅವನು. ಆ ೧೪ ಗಂಟೆಗಳಲ್ಲಿ ತನ್ನ ಪ್ರಜ್ಞೆಯ ಹನಿಹನಿ ಸಾಮರ್ಥ್ಯವನ್ನು ಬಸಿದು ಆ ನಕಾಶೆಯಲ್ಲಿ ಧಾರೆಯೆರೆದಿದ್ದ. ತನ್ನ ಕ್ರಿಯಾಶೀಲತೆಯ ಪಾರಮ್ಯವನ್ನೂ ಅದರಲ್ಲಿ ಮುಟ್ಟಿದ್ದ. ಅತೀವ ಸುಸ್ತಿನಿಂದ ಬಸವಳಿದು ಕೂತಲ್ಲೇ ಒರಗಿಕೊಂಡ ಮೋಹನದಾಸ. ಅವನೊಳಗೆ ಒಂದು ಅವ್ಯಕ್ತ ಖಾಲಿತನ ಉಂಟಾಗಿತ್ತು. ಪ್ರತಿ ಕ್ಷಣವೂ ಹೊಸಹೊಸ ಐಡಿಯಾಗಳಿಂದ ಗಿಜಿಗುಡುತ್ತಿದ್ದ ಅವನ ಯೋಚನಾ ವ್ಯೂಹ ಇದೀಗ ಸ್ಥಬ್ದವಾಗಿತ್ತು.
ಎಚ್ಚರವಾದಾಗ ಕೋಣೆಯಲ್ಲಿ ಅಂಧಕಾರ ಕವಿದಿತ್ತು. ಆಗೊಮ್ಮೆ ಈಗೊಮ್ಮೆ ಮಿಣಕ್ಕೆನ್ನುತ್ತಿದ್ದ ಮಾನಿಟರ್‌ನ ಇಂಡಿಕೇಟರ್ ಬಿಟ್ಟರೆ ಬೇರೆ ಯಾವ ಬೆಳಕಿನ ಸ್ರೋತವೂ ಅಲ್ಲಿರಲಿಲ್ಲ. ಆದರೆ ಡ್ರಾಫ್ಟ್ ಬೋರ್ಡಿನ ಮೇಲೆ ಅವನು ಇದ್ದಲ ಚೂರಿನಿಂದ ರಚಿಸಿದ್ದ ನಗರದ ನಕಾಶೆ ಸ್ವಯಂ ಪ್ರಭೆಯಿಂದ ಹೊಳೆಯುತ್ತಿತ್ತು.

ಮೋಹನದಾಸನಿಗೆ ತಾನೊಂದು ಹೊಸ ಪ್ರಪಂಚವನ್ನು ಇಣಕಿಂಡಿಯಿಂದ ನೋಡುತ್ತಿರುವ ಭ್ರಮೆಯುಂಟಾಯಿತು. ತಾನು ಆ ಕಪ್ಪು ಇದ್ದಿಲ ಚೂರಿನಿಂದ ರಚಿಸಿದ ವಿನ್ಯಾಸಗಳೆಲ್ಲ ಬಣ್ಣಗಳಿಂದ ತುಂಬಿ ನೈಜವಾಗಿ ಕಾಣುತ್ತಿದ್ದವು. ಮರಗಿಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಅದೊಂದು ನಕಾಶೆಯೊ, ಚಿತ್ರವೊ, ಚಲನಚಿತ್ರವೋ ಅಥವಾ ತಾನು ನಿಜಕ್ಕೂ ಒಂದು ಹೊಸ ಪ್ರಪಂಚವನ್ನು ಕಿಟಕಿಯಿಂದ ಇಣುಕಿ ನೋಡುತ್ತಿದ್ದೇನೋ ಎನ್ನುವ ಗೊಂದಲ ಉಂಟಾಗಿ ಆ ನಕಾಶೆಯಿಂದ ಕಣ್ಣು ಕೀಳಲಾಗದೇ ಗರಬಡಿದು ನಿಂತ ಮೋಹನದಾಸ.

ಮುಂದೇನು ಎಂಬ ಬಗ್ಗೆ ನಿಶ್ಚಿತ ಅರಿವಿರಲಿಲ್ಲ. ಅಳಗಿರಿಯ ಬಳಿ ಕೇಳಲಾಗದ ಹಲವು ಪ್ರಶ್ನೆಗಳಿಗೆ ಇದೀಗ ಉತ್ತರ ಹುಡುಕಬೇಕಾಗಿತ್ತು. ಮಂತ್ರದಂಡವನ್ನು ಬಳಸುವುದು ಹೇಗೆ? ಅದರಲ್ಲಿ ನಿಜಕ್ಕೂ ತನಗೆ ನಂಬಿಕೆ ಇದೆಯೇ? ಇದೆಲ್ಲವೂ ಒಂದು ರಸವತ್ತಾದ ಅಡುಗೂಲಜ್ಜಿಯ ಕತೆಯಂತೆ ನಡೆದು ಹೋಗಿತ್ತು. ಅಡಗೂಲಜ್ಜಿಯ ಕತೆಯೇ ನಿಜವಾದರೆ ಮಂತ್ರದಂಡಕ್ಕೊಂದು ಮಂತ್ರವೂ ಬೇಕಲ್ಲ. ವರ್ಷಕ್ಕೊಮ್ಮೆ ತಿರುಗಾಟಕ್ಕೆ ಬರುವ ಜಾದೂಗಾರ ಕುದ್ರೋಳಿ ಗಣೇಶನಂತೆ ಅಬ್ರಕಡಬ್ರ ಎನ್ನಲೇ? ಎಂದಾಕ್ಷಣ ಏನಾಗಲಿದೆ? ತಾನು ಬಿಡಿಸಿದ ಈ ನಕಾಶೆ ಈ ಜೀವಕಳೆಯ ಚಿತ್ರದಿಂದ ಹೊರಬಂದು ನಗರವನ್ನು ಆವರಿಸಲಿರುವುದೇ?

ಗೊಂದಲ ಹೆಚ್ಚಾಗಿ ವೈಚಾರಿಕತೆಯ ಪ್ರಶ್ನೆಗಳೂ ಮೂಡತೊಡಗಿದಾಗ ನಕಾಶೆಯ ಪ್ರಭೆ ಮಂಕಾಗತೊಡಗಿತು. ಮೋಹನದಾಸ ಟ್ರಾನ್ಸ್‌ನಿಂದ ಇಹಕ್ಕಿಳಿದ. ಮಂತ್ರದಂಡವೆನ್ನಲಾದ ಆ ತೇಗದ ಕಡ್ಡಿಯನ್ನು ಹೊರತೆಗೆದು ಅದರ ಮೇಲೆ ಸೂಕ್ಷ್ಮವಾಗಿ ಕೆತ್ತಿರುವ ವಾಕ್ಯವನ್ನು ಮತ್ತೊಮ್ಮೆ ಓದಿಕೊಂಡ.

"ನಾಸದಾಸೀತ್ ನೋಸದಾಸೀತ್ ತದಾನೀಂ..."

ಇದೇ ಮಂತ್ರವಾಕ್ಯವೇ? ಅದರರ್ಥವನ್ನು ತನಗೆ ಬಿಡಿಸಿ ಹೇಳುವಂತಹ ಯಾವ ಪಂಡಿತನ ಪರಿಚಯವೂ ಯಾವ ಗ್ರಂಥವೂ ಮೋಹನದಾಸನ ಬಳಿಯಿರಲಿಲ್ಲ. ಆ ವಾಕ್ಯವನ್ನು ಗೂಗಲ್ ಮಾಡಿದಾಗ ಅಂದುಕೊಂಡದ್ದಕ್ಕಿಂತ ಹೆಚ್ಚು ಸರ್ಚ್ ರಿಸಲ್ಟ್ ಒದಗಿ ಅಚ್ಚರಿಯಾಯಿತು.ಜಗತ್ತಿನ ಸೃಷ್ಟಿಯ ಜಿಜ್ಞಾಸೆಯಿರುವ ಋಗ್ವೇದದ ನಾಸದೀಯ ಸೂಕ್ತದ ಪ್ರಾರಂಭದ ವಾಕ್ಯವಾಗಿತ್ತದು. ನಾಸದೀಯ ಸೂಕ್ತದ ಪೂರ್ಣ ಪಾಠವೂ ಅನುವಾದವೂ ಇರುವ ವೆಬ್‌ಪೇಜನ್ನು ಮುದ್ರಿಸಿಕೊಂಡ. ಅನುವಾದವಿತ್ತಷ್ಟೇ ಹೊರತು ಸರಳ ಅರ್ಥ ತಿಳಿಸುವ ಯಾವ ಸೈಟ್ ಕೂಡ ಮೋಹನದಾಸನಿಗೆ ಸಿಗಲಿಲ್ಲ. ಸಂಪದದಲ್ಲಿ ಹಂಸಾನಂದಿ ಬರೆದ ಕನ್ನಡ ತರ್ಜುಮೆಯೂ ದೊರೆಯಿತು.

ಆದರೆ ತನ್ನ ಬುದ್ಧಿಮತ್ತೆ ಇಷ್ಟು ಗಹನವಾದ ಫಿಲಾಸಫಿಕಲ್ ವಿಷಯಗಳನ್ನು ಚರ್ಚಿಸುವಷ್ಟು ಪ್ರೌಢವಾಗಿಲ್ಲ, ಸರಳವಾಗಿ ತಾನೀಗ ಮಾಡ ಬೇಕಾಗಿರುವ ಅಥವಾ ಮಾಡಲು ಯತ್ನಿಸಬೇಕಾಗಿರುವ ಬಗ್ಗೆ ಯೋಚಿಸಬೇಕು ಎಂದು ನಿರ್ಧರಿಸಿದ.ನಾಸದೀಯ ಸೂಕ್ತವನ್ನು ದೇವನಾಗರಿಯಲ್ಲಿ ಓದಲು ಯತ್ನಿಸಿದ. ತುಂಬ ಕ್ಲಿಷ್ಟವಲ್ಲದಿದ್ದರೂ ನಾಲಗೆ ಮಗಚುವುದು ಆಚೀಚೆಯಾಯಿತು. ಸರಾಗವಾಗಿ ಓದುವಷ್ಟು ರೂಢಿಯಾದಾಗ ಕಾಗದವನ್ನು ಮಡಚಿ ಜೇಬಿಗಿಳಿಸಿದ.
ಇದೀಗ ಆ ಸೃಷ್ಟಿ ಕಾರ್ಯದ ಎರಡನೇ ಹಂತಕ್ಕೆ ತಯಾರಿ ನಡೆಸತೊಡಗಿದ ಮೋಹನದಾಸ. ತನ್ನ ವಿನ್ಯಾಸ ಈ ನಗರಕ್ಕೆ ಆವರಿಸುವುದನ್ನು ತಾನು ಕಣ್ಣಾರೆ ನೋಡಬೇಕು ಎಂದು ನಿರ್ಧರಿಸಿದ. ನಕಾಶೆಯ ಹಾಳೆಯನ್ನು ರೋಲ್ ಮಾಡಿ ರಟ್ಟಿನ ಉದ್ದ ಓಟೆಯೊಳಗೆ ತೂರಿಸಿದ. ಅಗತ್ಯದ ಕೆಲ ಸಾಮಾನುಗಳನ್ನು ಹೊಂದಿಸಿಕೊಂಡು ವಿನ್ಯಾಸವಿರುವ ರಟ್ಟಿನ ಓಟೆ, ಮಂತ್ರದಂಡ ಇತ್ಯಾದಿಗಳೊಂದಿಗೆ ಅವನು ಮನೆಯಿಂದ ಹೊರಬಿದ್ದಾಗ ನಡುರಾತ್ರಿ ಕಳೆದು ಗಂಟೆ ಒಂದು ಇಪ್ಪತ್ತಾಗಿತ್ತು.

ಆಗಸದಲ್ಲಿ ಮೋಡ ತುಂಬಿ ನಕ್ಷತ್ರಗಳನ್ನೂ ಆವರಿಸಿಕೊಂಡು ಕಡುಕತ್ತಲು ಹರಡಿತ್ತು. ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಬಂದರಿನತ್ತ ಬರುತ್ತಿದ್ದ ವ್ಯಾಪಾರಿ ನಾವೆಗಳಿಗೆ ಕತ್ತಲ ದಾರಿ ತೋರಿಸಲು ನಿರ್ಮಾಣವಾಗಿದ್ದ ದೀಪಸ್ಥಂಭವೊಂದು ನಗರದ ಮಧ್ಯದ ನಡುಗುಡ್ಡೆಯ ತುದಿಯಲ್ಲಿತ್ತು. ತನ್ನ ಕಾರನ್ನು ಚಾಲು ಮಾಡಿ ಅದರತ್ತ ಚಲಾಯಿಸಿದ ಮೋಹನದಾಸ.

ಸ್ಥಂಭದ ತುತ್ತ ತುದಿಯಲ್ಲಿ ಒಂದು ಚಚ್ಚೌಕದ ಕೋಣೆ. ಕಂಬದ ಹೊಟ್ಟೆಯೊಳಗೆ ಸುರುಳಿಸುತ್ತುವ ಮೆಟ್ಟಲ ಸಾಲು ಹತ್ತಿ ಕೋಣೆ ಪ್ರವೇಶಿಸಿದ. ಮಸೂರ ಲಾಂದ್ರವಿರಿಸುವ ಒಂದು ಕಟ್ಟೆಯಂತಹ ನಿರ್ಮಾಣ ಕೋಣೆಯ ನಡುವೆ ಬಿಟ್ಟರೆ ಬೇರಾವ ವಸ್ತೂ ಆ ಕೋಣೆಯೊಳಗಿರಲಿಲ್ಲ. ನಾಲ್ಕು ಸುತ್ತಲೂ ಗಾಜಿನ ಚೌಕಟ್ಟುಗಳ ಕಿಡಕಿ ಸಾಲು. ಮೇಲೆ ಮಂಗಳೂರು ಹೆಂಚು ಹೊದೆಸಿದ ಮಾಡು.

ಹೊರಗೆ ಮೋಡಬಿರಿದು ಮಳೆ ಹನಿಯಲು ಪ್ರಾರಂಭವಾಗಿದ್ದು ಮಾಡಿನ ಮೇಲೆ ಅವು ಮಾಡುತ್ತಿದ್ದ ಶಬ್ದದಿಂದ ತಿಳಿಯುತ್ತಿತ್ತು. ಆಗೊಮ್ಮೆ ಈಗೊಮ್ಮೆ ಜಗ್ಗೆನ್ನುವ ಮಿಂಚಿನಿಂದ ಇಡೀ ನಗರ ಗೋಚರವಾಗುತ್ತಿತ್ತು. ಈ ಮಳೆಗಾಲದ ನಡುರಾತ್ರಿಯಲ್ಲಿ ನಗರವಿಡೀ ಮಲಗಿ ಸುದೀರ್ಘ ಉಸಿರೆಳೆಯುತ್ತಿತ್ತು. ಇವನೊಬ್ಬ ತನ್ನ ಕನಸನ್ನು ಹುಚ್ಚುಕಟ್ಟಿ ನಗರದ ತುತ್ತ ತುದಿಯಲ್ಲಿದ್ದ.

ವಿನ್ಯಾಸದ ಹಾಳೆಯನ್ನು ರಟ್ಟಿನ ಓಟೆಯೊಳಗಿಂದ ಹೊರತೆಗೆದು ಕಟ್ಟೆಯ ಮೇಲೆ ಹರಡಿದ. ಜೇಬಿನಲ್ಲಿರಿಸಿದ್ದ ನಾಸದೀಯ ಸೂಕ್ತದ ಕಾಗದವನ್ನು ಬಿಡಿಸಿ ಬೆಳಕಿಗೆಂದು ತಾನು ತಂದ ಬ್ಯಾಟರಿಯ ಲಾಟೀನನ್ನು ಹೊಂದಿಸಿಕೊಂಡ. ಬಲಗೈಯಲ್ಲಿ ಮಂತ್ರದಂಡವೆಂಬ ಆ ತೇಗದ ಮರದ ಕಡ್ಡಿಯನ್ನು ಹಿಡಿದುಕೊಂಡು ಸಿದ್ಧನಾದ. ಅವನು ಮಾಡುತ್ತಿರುವುದೆಲ್ಲ ಅವನಿಗೆ ತುಂಬ ಅಪ್ರಬುದ್ಧವೆನಿಸಿ ನಗುಬಂತು. ಇದರಿಂದ ಏನೊಂದು ನಿಶ್ಚಿತ ಪರಿಣಾಮವಾದೀತು ಎಂಬ ಬಗ್ಗೆ ಅವನಿಗೆ ಅನುಮಾನವಿತ್ತು.

ನಾಸದೀಯ ಸೂಕ್ತ ಓದಲಾರಂಭಿಸಿದ ಮೋಹನದಾಸ. ಅಪಭ್ರಂಶ ಉಚ್ಛಾರಗಳಿಂದ ತನಗೆ ಮಂತ್ರ ಸಿದ್ಧಿಸುವುದು ಅಷ್ಟರಲ್ಲೇ ಇದೆ ಎಂದು ಸಣ್ಣಗೆ ನಕ್ಕ. ಪೂರ್ತಿ ಓದಿದ ಮೇಲೆ ಒಮ್ಮೆ ಮಂತ್ರದಂಡವನ್ನು ಬೀಸಿ ಸಣ್ಣ ಜರ್ಕ್ ಕೊಟ್ಟು ನಕಾಶೆಗೆ ಮುಟ್ಟಿಸಿದ. ಯಾವ ಪವಾಡ ಕೂಡ ಜರಗಲಿಲ್ಲ. ಮತ್ತೆ ನಗು ಬಂತು ಮೋಹನದಾಸನಿಗೆ. ಕೆಳಗೆ ನಗರ ಮಳೆಗೆ ಒದ್ದೆಯಾಗುತ್ತ ತಣ್ಣಗೆ ಮಲಗಿತ್ತು.

ಮಳೆ ಜೋರಾಗತೊಡಗಿತ್ತು. ಮಾಡಿನ ಹೆಂಚು ಬಿಟ್ಟಿದ್ದ ಬಿರುಕುಗಳಿಂದ ಮಳೆನೀರು ಒಳಗೆ ಸುರಿಯತೊಡಗಿತು. ತಂದಿದ್ದ ಕೊಡೆಯನ್ನು ಬಿಡಿಸಿ ನಕಾಶೆಯ ಮೇಲೆ ಬೀಳದಂತೆ ಪ್ರಯತ್ನಿಸಿದ. ಆದರೆ ನೀರು ಕೋಣೆಯೊಳಗೆ ಸುರಿಯುವ ರಭಸ ಹೆಚ್ಚಾಗಿ ಇಡೀ ನಕಾಶೆ ಒದ್ದೆಯಾಗಿತ್ತು. ಮೋಹನದಾಸ ನೋಡನೋಡುತ್ತಿದ್ದಂತೆ ಅವನು ಆ ಹಾಳೆಯ ಮೇಲೆ ಇದ್ದಲ ಚೂರಿನಿಂದ ರಚಿಸಿದ್ದ ಆ ರೇಖೆಗಳೆಲ್ಲ ನೀರು ಬಿದ್ದು ಕರಗತೊಡಗಿದವು. ಹಾಗೆ ಕರಗಿದ ಮಸಿ ಮೆಲ್ಲನೆ ಚಲಿಸುತ್ತಾ ಒಟ್ಟಾಗಿ ಹಾಳೆಯಿಂದ ಹೊರ ಹರಿಯತೊಡಗಿತು.

ಮೋಹನದಾಸ ನೋಡನೋಡುತ್ತಿದ್ದಂತೆ ಅವನು ತಪಸ್ಸಿನಂತೆ ಧ್ಯಾನಿಸಿ ೧೪ ಗಂಟೆಗಳಕಾಲ ಕುಳಿತು ರಚಿಸಿದ ಆ ಹಾಳೆಯಲ್ಲಿರುವ ರೇಖೆಗಳೆಲ್ಲ ಮಸಿಯಾಗಿ ಹೊರಹರಿದು ಹಾಳೆ ಮತ್ತೆ ಸ್ವಚ್ಛವಾಗತೊಡಗಿತು. ಹಾಗೆ ಹೊರಹರಿದ ಮಸಿಯು ಕಟ್ಟೆಯ ಮೇಲಿಂದ ಕೆಳಗಿಳಿದು ಕೋಣೆಯಲ್ಲಿ ಹರಿಯತೊಡಗಿದ್ದ ನೀರಿನಲ್ಲಿ ದಾರಿ ಮಾಡಿಕೊಂಡು ತೇಲುತ್ತಾ ದೀಪಸ್ಥಂಭದ ತುತ್ತ ತುದಿಯಲ್ಲಿ ನಿರ್ಮಾಣವಾಗಿದ್ದ ಆ ಕೋಣೆಯ ಮೂಲೆಯಲ್ಲಿದ್ದ ತೂಬಿನಿಂದ ಹೊರ ಚೆಲ್ಲತೊಡಗಿತು.

ಪೆಚ್ಚುಪೆಚ್ಚಾಗಿ ದೀಪಸ್ಥಂಭದಿಂದ ಕೆಳಗಿಳಿದು ಕಾರು ಹತ್ತಿದ ಮೋಹನದಾಸ ಮನೆ ಸೇರುವಾಗ ಗಡಿಯಾರ ಮೂರು ಮುಕ್ಕಾಲು ತೋರಿಸುತ್ತಿತ್ತು.

*****

ಮೊಬೈಲ್ ಕರೆಯ ಸದ್ದಿಗೆ ಎಚ್ಚರವಾದಾಗ ಗಂಟೆ ಹನ್ನೊಂದಾಗಿತ್ತು. ಮೊಬೈಲ್ ರಿಂಗ್ ಹೊಡೆದು ಸುಮ್ಮನಾಗಿತ್ತು. ೨೭ ಮಿಸ್ಡ್ ಕಾಲ್‌ಗಳನ್ನು ನೋಡಿ ದಂಗಾದ. ಜಾಹ್ನವಿ ೧೫ ಸಲ, ಹೇಮರಾಜ್ ೮ ಸಲ ಮತ್ತು ಅಚ್ಚರಿಯ ವಿಷಯ ಡಿ.ಸಿ. ಆಫೀಸು ನಂಬರಿಂದ ೪ ಸಲ ಕಾಲ್ ಬಂದಿತ್ತು.

ಜಾಹ್ನವಿಗೆ ಕರೆ ಮಾಡಿದ."ಹಾಂ! ಮೋಹನ್! ಇನ್ನೂ ಮಲಗಿದ್ದಿಯಾ? ಒಮ್ಮೆ ಹೊರಗೆ ಬಾ. ಇಡೀ ನಗರವೇ ಬದಲಾಗಿದೆ. ನೀನು ಹೇಳುತ್ತಿದ್ದ ಎಲ್ಲ ಕನಸುಗಳೂ ರಾತೋರಾತ್ರಿ ನಿಜವಾಗಿದೆ. ಯಾವ ಪವಾಡ ಮಾಡಿದೆ ಮೋಹನ್!" ಜಾಹ್ನವಿ ತಮಾಷೆ ಮಾಡಿ ನಕ್ಕಳು. ಎದೆ ಚಳಕ್ಕೆಂದಿತು. ಸಿಡಿಲು ಬಡಿದಂತೆ ವಿಭ್ರಾಂತನಾಗಿ ಕುಳಿತ ಮೋಹನದಾಸ. ತಾನು ಅಪ್ರಬುದ್ಧನಂತೆ ಅಪಭ್ರಂಶವಾಗಿ ಓದಿ ಆ ತೇಗದ ಕಡ್ಡಿಯನ್ನು ಬೀಸಿದ್ದರಿಂದಲೇನು ಇದೆಲ್ಲ ಪವಾಡ ನಡೆದದ್ದು?

ಮತ್ತೆ ಮೊಬೈಲ್ ರಿಂಗಾಯಿತು. ಹೇಮರಾಜ್ ಕರೆ. "ಹೆಲೋ! ಹಾಂ! ನಾನು ಹೇಮರಾಜ್ ಮಾತಾಡೂದು. ಇದೆಲ್ಲ ನೀನೇ ಮಾಡಿದ್ದೋ ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ!. ಆದರೆ ಯೂ ಆರ್ ಇನ್ ಡೇಂಜರ್ ಮೈ ಬಾಯ್! ದಿ ವ್ಹೋಲ್ ಸಿಟಿ ಈಸ್ ಇನ್ ಅಟರ್ ಕೆಯಾಸ್! ಇವತ್ತು ಹೊರಗೆ ಬರಬೇಡ. ಹೆಲ್ಪ್ ಬೇಕಾದರೆ ಫೋನ್ ಮಾಡು. ಪ್ಲೀಸ್ ಟೇಕ್ ಕೇರ್" ಎಂದು ಫೋನಿಟ್ಟ ಹೇಮರಾಜ್.

ಗಂಟಲಿಂದ ಸ್ವರವೇ ಹೊರಡುತ್ತಿರಲಿಲ್ಲ. ಟಿ.ವಿ. ಆನ್ ಮಾಡಿದ. ಎಲ್ಲ ಚ್ಯಾನಲ್‌ಗಳಲ್ಲೂ ಇದೇ ಸುದ್ದಿ. ಬಾತ್ಮಿದಾರರು ನಗರದ ಹಿನ್ನೆಲೆಯನ್ನಿಟ್ಟು ವರದಿ ಮಾಡುತ್ತಿದ್ದರು. ನಗರ ಸುಂದರವಾಗಿ ಕಾಣುತ್ತಿತ್ತು. ಖುಶಿಯಾಯಿತು ಮೋಹನದಾಸನಿಗೆ. ಮೆಲ್ಲನೇ ಅವರಾಡುತ್ತಿರುವ ಶಬ್ದಗಳೆಲ್ಲ ಕಿವಿಗೆ ಬಿದ್ದು ಒಳಗೆ ಇಳಿಯತೊಡಗಿದಾಗ ಅದರರ್ಥ ಅರಿವಾಯಿತು. ತಾನೆಣಿಸಿದ ಹಾಗೆ ಜನರು ಖುಶಿ ಪಟ್ಟಿಲ್ಲ ಬದಲಾಗಿ ವಾಚಾಮಗೋಚರ ಶಾಪ ಹಾಕುತ್ತಿದ್ದರು.

ಟಿ.ವಿ. ಚ್ಯಾನಲ್‌ಗಳು ಬದಲಾದ ಈ ನಗರವಿನ್ಯಾಸದಿಂದ ಹುಸಿಹುಳುಕುಗಳನ್ನೆತ್ತಿ ಬುದ್ಧಿವಂತರಂತೆ ಚರ್ಚಿಸುತ್ತಿದ್ದವು.

ಫ್ಲೈಒವರ್‌ಗಳ ಮುಂದೆ ಗೊಂದಲ ನಿರ್ಮಾಣವಾಗಿತ್ತು. ಅಗಾಧ ಗಾತ್ರದ ದಾರಿಫಲಕಗಳು ಮೇಲೆ ತೂಗಾಡುತ್ತಿದ್ದರೂ ಕುರುಡರಂತೆ ರಸ್ತೆ ಮಧ್ಯದಲ್ಲೆ ನಿಲ್ಲಿಸಿ ಅಕ್ಕಪಕ್ಕದವರ ಬಳಿ ದಾರಿ ಕೇಳುತ್ತಿದ್ದರು. ಇಡೀ ನಗರದ ರಸ್ತೆಗಳ ಚಲನೆಯ ಸ್ವರೂಪದಲ್ಲಿ ಬಹಳಷ್ಟು ಬದಲಾವಣೆಯಾದ ಪರಿಣಾಮವಾಗಿ ಗೊಂದಲದಿಂದ ಎಲ್ಲ ಕಡೆ ಕೃತಕ ಜಾಮ್ ಉಂಟಾಗಿತ್ತು. ಯಾವ ರಸ್ತೆವ್ಯೂಹವನ್ನು ಇವನು ಸರಾಗ ವಾಹನ ಸಂಚಾರಕ್ಕೆಂದು ರೂಪಿಸಿದ್ದನೋ ಅದೇ ಈಗ ಚಲನೆಯನ್ನು ನಿರ್ಬಂಧಿಸಿತ್ತು.

ಇವನು ಹೆಚ್ಚು ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಿದ್ದ ಬಸ್ ರಾಪಿಡ್ ಟರ್ಮಿನಲ್ ಎಂಬ ಬಹುಲೇನ್ ವ್ಯವಸ್ಥೆಯ ರಸ್ತೆಯಲ್ಲೆಲ್ಲ ದೊಂಬಿ ನಡೆಯುತ್ತಿತ್ತು. ಬಸ್ಸುಗಳಿಗೂ ಕಾರುಗಳಿಗೂ ದ್ವಿಚಕ್ರಗಳಿಗೂ ಪ್ರತ್ಯೇಕ ಸ್ಪಷ್ಟವಾಗಿ ನಿರ್ದಿಷ್ಟ ಬಣ್ಣಬಳಿದ ಲೇನ್‌ಗಳು, ಬಸ್ಸುಗಳಿಗೆ ಕ್ಷಿಪ್ರ ನಿಲುಗಡೆಯ ವಿನ್ಯಾಸ, ಇತ್ಯಾದಿ ಬಹಳ ಪುರೋಗಾಮಿ ವ್ಯವಸ್ಥೆ ಜನರಿಗೆ ಅರ್ಥವೇ ಆಗಿರಲಿಲ್ಲ. ಬಸ್ ಲೇನ್‌ನಲ್ಲಿ ಕಾರುಗಳು, ದ್ವಿಚಕ್ರಿಗಳು ನುಗ್ಗಿ ಗೊಂದಲ ಏರ್ಪಟ್ಟಿತ್ತು. ದ್ವಿಚಕ್ರಿಯೊಬ್ಬ ಬಸ್ಸಿನಡಿಗೆ ಬಿದ್ದು ಸತ್ತಿದ್ದ. ಜನ ಉದ್ರಿಕ್ತರಾಗಿ ಬಸ್ಸನ್ನು ಸುಟ್ಟು ಹಾಕಿದ್ದರು. ಬಸ್ಸಿನವರು ಮಿಂಚಿನ ಸ್ಟ್ರೈಕ್ ಹೂಡಿ ತಾವು ಈ ಅವೈಜ್ಞಾನಿಕ ಬಿ.ಆರ್.ಟಿಯನ್ನೂ ಬಹುಮಹಡಿ ಬಸ್ಸು ನಿಲ್ದಾಣವನ್ನೂ ಬಳಸುವುದಿಲ್ಲ ಎನ್ನುವ ಶಪಥ ಹಾಕಿದ್ದರು. ಸರಕಾರಕ್ಕೆ ಆರು ದಿನಗಳ ಗಡುವು ನೀಡಿ ಅಷ್ಟರೊಳಗೆ ಬಿ.ಆರ್.ಟಿ.ಯನ್ನು ನಿರ್ನಾಮಗೊಳಿಸಿ ರಸ್ತೆಯನ್ನು ಸುಗಮಗೊಳಿಸದಿದ್ದರೆ ಅನಿರ್ದಿಷ್ಟ ರಸ್ತೆ ತಡೆ ಹೂಡುವುದಾಗಿ ಬೆದರಿಕೆ ಹಾಕಿದ್ದರು.

ಸಮುದ್ರದಂಡೆಯ ಗುಂಟ ಇವನು ನಿರ್ಮಿಸಿದ್ದ ನೆಕ್‌ಲೇಸ್ ಕಾರಿಡಾರ್ ಮೀನುಗಾರರ ತೀವ್ರ ಪ್ರತಿಭಟನೆಗೆ ಈಡಾಗಿತ್ತು. ಸಮುದ್ರ ಕೊರೆತ ಇದರಿಂದ ಹೆಚ್ಚಾಗಲಿದೆ ಎನ್ನುವ ವಾದವನ್ನು ಅವರು ತಮ್ಮ ಹೇಳಿಕೆಯಲ್ಲಿ ಮಂಡಿಸಿದ್ದರು.

ನಗರದ ಶಾಲೆಗಳಿಗೆ ಹೋಗುವ ಪ್ರತಿ ಮಗುವೂ ರಸ್ತೆ ದಾಟುವ ಗೊಂದಲವಿಲ್ಲದೆ, ಅವಘಡದ ಹೆದರಿಕೆಯಿಲ್ಲದೇ ಪ್ರಯಾಣಿಸಬೇಕೆನ್ನುವ ಉದ್ದೇಶದಿಂದ ಮೋಹನದಾಸ ಬಹಳ ಯೋಚಿಸಿ ರೂಪಿಸಿದ್ದ ಭೂಗತ ಟ್ರಾಮ್ ವ್ಯವಸ್ಥೆಯಾಗಲೀ, ಸುವ್ಯವಸ್ಥಿತ ನಗರ ಸಾರಿಗೆ ಮೆಟ್ರೋ ರೈಲ್ ಆಗಲೀ ಯಾರ ಗಮನಕ್ಕೂ ಬರದೇ ಅದರ ಬಗ್ಗೆ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿರಲಿಲ್ಲ.

ಟಿ.ವಿ.ಗಳಲ್ಲಿ ಚರ್ಚೆ ನಡೆಯುತ್ತಿತ್ತು. ರಾಜಕಾರಣಿಗಳು, ಆರ್ಕಿಟೆಕ್ಟ್‌ಗಳು, ಎನ್ಜಿಓಗಳು, ಮಹಿಳಾ ಸಂಘಗಳು, ಕಾರ್ಮಿಕ ಸಂಘಗಳು, ಬಸ್ಸು, ರಿಕ್ಷಾ, ಟ್ಯಾಕ್ಸಿ ಮಾಲಕ-ಚಾಲಕರ ಸಂಘಟನೆಗಳು ಇನ್ನೂ ಹಲವು ಗುಂಪುಗಳನ್ನು ಪ್ರತಿನಿಧಿಸುವವರು ತಲೆಗೊಂದು ಕಾರಣ ನೀಡಿ ಬದಲಾವಣೆಯನ್ನು ವಿರೋಧಿಸುತ್ತಿದ್ದರು.

ಇಷ್ಟೆಲ್ಲ ಗೊಂದಲ, ದೊಂಬಿಗಳ ನಡುವೆ ಈ ಬದಲಾವಣೆಯ ಪರವಾಗಿ ಯಾರೂ ಮಾತನಾಡಿರಲಿಲ್ಲ.

ರಾಜಕಾರಣಿಗಳಿಗೆ ಈ ಬದಲಾವಣೆಯು ತಮಗೆ ತಿಳಿದೇ ಇರಲಿಲ್ಲವೆಂದು ಹೇಳಲು ಸಂಕೋಚವಾಗಿ, ಆಡಳಿತ ಪಕ್ಷ ಹಿಂದಿನ ಸರಕಾರದ ಮೇಲೂ, ಹಿಂದಿನ ಸರಕಾರ ನಡೆಸಿ ಇಂದು ವಿರೋಧಿ ಸ್ಥಾನದಲ್ಲಿ ಕುಳಿತಿದ್ದ ಇನ್ನೊಂದು ಪಕ್ಷ ಸರಕಾರದ ಮೇಲೂ ಪರಸ್ಪರ ದೋಷಾರೋಪಣೆ ನಡೆಸಿ ಕೃತಾರ್ಥರಾಗುತ್ತಿದ್ದರು.

ಮೋಹನದಾಸ ಧಿಗ್ಮೂಢನಾಗಿ ಕುಳಿತಿದ್ದ. ಹೊರ ಬಾಗಿಲ ಕರೆಗಂಟೆಯಾಯಿತು.

ಬಾಗಿಲು ತೆರೆದರೆ ಸ್ವತಹ ಜಿಲ್ಲಾಧಿಕಾರಿ ನಿಂತಿದ್ದರು. ಹಿಂದೆ ಪೋಲಿಸ್ ಅಧಿಕಾರಿಗಳೂ ಇದ್ದರು. ಗೇಟಿನ ಹೊರಗೆ ಹಸಿರು ಬಣ್ಣದ ಬಸ್ಸು ನಿಂತಿತ್ತು. ಅದಾಗಲೇ ಸ್ಟೆನ್ ಗನ್ ಹಿಡಿದ ಒಂದು ಹಿಂಡು ಸಿ.ಆರ್.ಪಿ. ಪಡೆ ಇವನ ಮನೆಯನ್ನು ಸುತ್ತುವರೆದಿತ್ತು. ನೀಟಾಗಿ ಸೂಟ್ ಧರಿಸಿದ ಹದಿನಾರು ಮಂದಿ ಎಫ್.ಬಿ.ಐ. ಮಾದರಿಯಲ್ಲಿ ಮನೆ ಒಳಗೆ ನುಗ್ಗಿ ಶೋಧಿಸಲಾರಂಭಿಸಿದರು.

ಮೋಹನದಾಸ ಗರಬಡಿದು ಬಾಗಿಲಲ್ಲಿ ನಿಂತಿದ್ದ.

ಜೂನ್ 16, 2009

ಕೊಂಕಣಿಗಳು ಮತ್ತು ಸಂಘನಿಷ್ಟೆ

ಮಂಗಳೂರಿನ ಸ್ಥಿತ್ಯಂತರಗಳ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ, ವೆಬ್ಸೈಟುಗಳಲ್ಲಿ ಪ್ರಕಟವಾದ ವಿಶ್ಲೇಷಣೆಗಳಲ್ಲಿ ಹಲವು ಬರಹಗಳು ನನ್ನ ಈ ಬರಹವನ್ನು ಪ್ರೇರೇಪಿಸಿದೆ. ಅವುಗಳನ್ನು ಬರಹದ ಮೊದಲಿಗೆ ಉಲ್ಲೇಖಿಸುತ್ತೇನೆ.

೧. ಸಂವಾದ ಪತ್ರಿಕೆಯ ೨೦೦೬ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಡಾ.ವಿ.ಲಕ್ಷ್ಮೀನಾರಾಯಣ ಅವರ ಕರಾವಳಿ ಕೋಮು ಸಂಘರ್ಷದ ಸುತ್ತ ಎನ್ನುವ ಲೇಖನ. ಇದರ ಉಧೃತ ಭಾಗ:
ಕರ್ನಾಟಕದ ಇತೆರೆಡೆಯ ಮುಸ್ಲಿಮರಂತೆ ಕರಾವಳಿಯ ಮುಸ್ಲಿಮರು ತೀರ ಬಡತನ ಹಾಗೂ ಭೂಹೀನತೆಯಿಂದ ಪರದಾಡುತ್ತಿಲ್ಲ. ತಮ್ಮ ಕುಶಲಕರ್ಮಿಕಾಯಕ ಮತ್ತು ವ್ಯಾಪಾರದಿಂದ ಹಿಂದೂ ವ್ಯಾಪಾರಿಗಳ ಮುಖ್ಯವಾಗಿ ಕೊಂಕಣಿಗಳ ಅಧಿಪತ್ಯಕ್ಕೆ ಸವಾಲೆಸೆದಿರುವುದರಿಂದ ಎರಡೂ ವ್ಯಾಪಾರಿ ಸಮುದಾಯಗಳ ನಡುವೆ ಪೈಪೋಟಿಗಳೇ ಕೋಮುವಾದದ ಮೂಲವಾಗಿ ಪರಿಣಮಿಸಿವೆ.

೨. ಮಂಗಳೂರಿನ ಚರ್ಚ್ ದಾಳಿಗಳ ಬಳಿಕ ಚುರುಮುರಿ.ಕಾಮ್ ನಲ್ಲಿ ಪ್ರಕಟವಾದ ಸಿ.ಎನ್.ಬಿ.ಸಿ. ಟೀವಿ ೧೮ರ ಇಕಾನಮಿಕ್ ಪಾಲಿಸಿ ಎಡಿಟರ್ ಆಗಿರುವ ವಿವಿಯನ್ ಫೆರ್ನಾಂಡಿಸ್‌ರವರ ‘The Bajrang Dal doesn’t belong in Mangalore’ ಎನ್ನುವ ಲೇಖನ. ಈ ಲೇಖನದಲ್ಲಿ ನಾನು ಉಲ್ಲೇಖಲಿಚ್ಛಿಸುವ ಭಾಗ :
“While Hindus are the majority in Mangalore, Christians and Muslims have a sizeable strength and peace had held all along, even though the Konkani-speaking Hindus (more than the Tulu-speaking ones) have a particular affinity to the RSS.”

೩. ಪ್ರಜಾವಾಣಿಯ ಪ್ರಖ್ಯಾತ ದೆಹಲಿ ನೋಟ ಅಂಕಣದಲ್ಲಿ ಬರೆಯುವ ಪ್ರಜಾವಾಣಿಯ ದೆಹಲಿ ಪ್ರತಿನಿಧಿ ದಿನೇಶ್ ಅಮೀನ್ ಮಟ್ಟು ಮಂಗಳೂರಿನ ಪಬ್ ದಾಳಿಯ ಬಳಿಕ ಪ್ರಕಟವಾದ ತಮ್ಮ ಕೂಡಿ ಕಟ್ಟಿದ್ದನ್ನು ಒಡೆದು ಮುರಿದರು ಎಂಬ ಲೇಖನದಲ್ಲಿ ಹೀಗೆ ಬರೆಯುತ್ತಾರೆ. (ಪ್ರಜಾವಾಣಿ ಫೆ. ೨೦೦೯)
"ವ್ಯಾಪಾರ ಎನ್ನುವುದು ಶಕ್ತಿ ಹೇಗೋ, ಅದು ದ.ಕ. ಮಂದಿಯ ದೌರ್ಬಲ್ಯ ಕೂಡ ಹೌದು. ಈ ಸತ್ಯವನ್ನು ಮೊದಲು ಅರಿತುಕೊಂಡವರು ಸಂಘ ಪರಿವಾರದ ನಾಯಕರು. ಒಬ್ಬ ಮುಸ್ಲಿಂ ವ್ಯಾಪಾರಿಯ ದಮನವನ್ನು ಒಬ್ಬ ಹಿಂದೂ ವ್ಯಾಪಾರಿ ಕೇವಲ ಧರ್ಮ ರಕ್ಷಣೆಯ ದೃಷ್ಟಿಯಿಂದಲ್ಲ, ವ್ಯಾಪಾರದ ಲಾಭದ ದೃಷ್ಟಿಯಿಂದಲೂ ನೋಡುತ್ತಾನೆ ಎನ್ನುವದು ಅವರಿಗೆ ತಿಳಿದಿತ್ತು. ವ್ಯಾಪಾರದ ಮೂಲಕ ಸಮೃದ್ಧಿಯನ್ನು ಕಂಡ ಕೊಂಕಣಿಗಳು (ಗೌಡ ಸಾರಸ್ವತ ಬ್ರಾಹ್ಮಣರು) ನೀಡುತ್ತಿದ್ದ ದೇಣಿಗೆಯಿಂದಾಗಿ ರಾಜ್ಯ ಸಂಘಟನೆಯ ರಿಮೋಟ್ ಕಂಟ್ರೋಲ್ ಕೂಡ ದ.ಕ.ದಲ್ಲಿಯೇ ಇತ್ತು. ಆದರೆ ಕೊಂಕಣಿ ಬ್ರಾಹ್ಮಣರಿಂದಾಚೆಗೆ ಬೆಳೆಯಲು ಸಂಘಕ್ಕೆ ಸಾಧ್ಯವಾಗಿರಲಿಲ್ಲ."

೪. ಶಶಿಧರ ಭಟ್ ಬರೆಯುವ ಕೋಮು ಸಂಘರ್ಷವಾದ ಆರ್ಥಿಕ ಸಂಘರ್ಷ (ಕಡಲತಡಿಯ ತಲ್ಲಣ: ಸೃಷ್ಟಿ ಪಕೇಶನ್ಸ್, ಬೆಂಗಳೂರು ೨೦೦೯):
"ಕರ್ನಾಟಕದಲ್ಲಿ ಜನಸಂಘ ಎಲ್ಲೂ ಇರದಿದ್ದಾಗ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯಕ್ಷವಾಗಿತ್ತು. ನಾವು ಸಣ್ಣವರಿದ್ದಾಗೆಲ್ಲ ಜನಸಂಘ ಎಂದರೆ ವ್ಯಾಪಾರಿಗಳ ಪಕ್ಷ. ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಿರಾಣಿ ಅಂಗಡಿಗಳನ್ನಿಟ್ಟುಕೊಂಡವರು ಕೊಂಕಣಿಗಳಾದುದರಿಂದ ಜನಸಂಘ ಕೊಂಕಣಿಗಳ ಪಕ್ಷ ಎಂದೇ ನಾವು ತಿಳಿದುಕೊಂಡಿದ್ದೆವು.
ದಕ್ಷಿಣ ಕನ್ನಡದಲ್ಲಿ ಜನಸಂಘಕ್ಕೆ ಮೊದಲು ಬೆಂಬಲ ನೀಡಿದವರು ವ್ಯಾಪಾರಿಗಳು, ಇವರಿಂದ ರೂಪುಗೊಂಡ ಒಂದು ರಾಜಕೀಯ ಪಕ್ಷ ತುಂಬ ಸಹಜವಾಗಿ ವ್ಯಾಪಾರಿ ಅಜೆಂಡಾವನ್ನು ಹೊಂದಿರಲೇ ಬೇಕು. ಮತ್ತು ಆ ಪಕ್ಷದ ರಾಜಕೀಯ ಸಿದ್ಧಾಂತ ಮತ್ತು ಹೋರಾಟಕ್ಕೆ ವ್ಯಾಪಾರಿ ಟಚ್ ಇರಲೇ ಬೇಕು. ಇಲ್ಲಿ ಆದದ್ದು ಇದೇ"

ಈ ಮೇಲಿನ ಬರಹಗಳ ಉಲ್ಲೇಖಗಳು ದಕ್ಷಿಣ ಕನ್ನಡದ ಕೊಂಕಣಿಗಳ ಅಂದರೆ ಗೌಡ ಸಾರಸ್ವತರ ಸಂಘನಿಷ್ಟೆಯನ್ನು ಉಲ್ಲೇಖಿಸುತ್ತವೆ. ಜೊತೆಗೆ ತಾರ್ಕಿಕವಾಗಿ ಮತ್ತು ಕೆಲವೊಮ್ಮೆ ನೇರವಾಗಿ ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳ ನೈತಿಕ ಹೊಣೆಗಾರಿಕೆಯ ತೋರುಬೆರಳನ್ನು ಕೊಂಕಣಿ ಸಮುದಾಯದತ್ತ ಚಾಚುತ್ತವೆ. ನನಗೆ ಇದು ಬರೇ ವ್ಯಕ್ತಿಗಳ ವೈಯಕ್ತಿಕ ಅಭಿಪ್ರಾಯದಂತೆ ಕಾಣದೇ ಕೊಂಕಣಿಗಳ ಬಗ್ಗೆ ದಕ್ಷಿಣಕನ್ನಡದ ಸಮಾಜದ ಒಟ್ಟು ಅಭಿವ್ಯಕ್ತಿಯಾಗಿ ನನಗೆ ಭಾಸವಾಗುತ್ತಿದೆ. ಇದನ್ನು ಒಂದು ಮರುಪೂರಣ (ಫೀಡ್ ಬ್ಯಾಕ್) ಎಂಬ ಧನಾತ್ಮಕ ಭಾವದಿಂದ ಗ್ರಹಿಸಿಕೊಂಡು ಕೊಂಕಣಿ ಸಮುದಾಯ (ಗೌಡಸಾರಸ್ವತ) ತನ್ನ ಸಾಮಾಜಿಕ ಬದ್ಧತೆಗಳನ್ನು ಪುನರಾವಲೋಕನ ಮಾಡಿಕೊಳ್ಳಬೇಕಾದ ಗಳಿಗೆ ಬಂದಿದೆ.

ಈ ಪುನರಾವಲೋಕನದ ಪೂರ್ವಭಾವಿಯಾಗಿ ನಾನು ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಕೆಲವೊಂದು ಅಂಶಗಳನ್ನು ಮುನ್ನಡೆಯಾಗಿ ಇಟ್ಟುಕೊಂಡು ಮುಂದುವರೆಯಲು ಇಚ್ಛಿಸುತ್ತೇನೆ.

ತುಳುನಾಡಿನ ವ್ಯಾಪಾರದ ಮೇಲೆ ಕೊಂಕಣಿಗಳ ನಿಯಂತ್ರಣ:
ತುಳುನಾಡಿನ ವ್ಯಾಪಾರದ ಮೇಲೆ ಕೊಂಕಣಿಗಳ ಪ್ರಾಬಲ್ಯ ೧೭ನೇ ಶತಮಾನದ ಪೂರ್ವಾಧದಿಂದ ಬೆಳೆದು ಬಂದದ್ದು. ಗೋವಾದ ವ್ಯಾಪಾರದಲ್ಲಿ ಗೌಡಸಾರಸ್ವತರ ಪ್ರಾಬಲ್ಯ, ಕೊಂಕಣಿಗಳ ಮೇಲೆ ಕೆಳದಿ ಅರಸೊತ್ತಿಗೆಯ ಅಖಂಡ ವಿಶ್ವಾಸ ಮುಂತಾದ ಕಾರಣಗಳು ಆವರೆಗೆ ತುಳುನಾಡಿನಲ್ಲಿ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿದ್ದ ಜೈನ, ಲಿಂಗಾಯತ (ಬಣಜಿಗ) ಮತ್ತು ಆರ್ಯವೈಶ್ಯ (ಕೋಮಟಿ ಸೆಟ್ಟಿ) ಸಮುದಾಯಗಳಿಗೆ ಸೇರಿದ ಸೆಟ್ಟಿಕಾರರ ಪ್ರಾಬಲ್ಯವನ್ನು ಕೊನೆಗಾಣಿಸಿ ಕೊಂಕಣಿ ವ್ಯಾಪಾರಿಗಳು ಕರಾವಳಿಯ ವ್ಯಾಪಾರದಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾದವು. ಆದರೆ ಮುಸ್ಲಿಂ ವ್ಯಾಪಾರಿಗಳು ಕ್ರಿ.ಶ. ೭ನೇ ಶತಮಾನದಲ್ಲೇ ತುಳುನಾಡಿನಲ್ಲಿ ನೆಲೆಸಿದ್ದಕ್ಕೆ ಪುರಾವೆಗಳಿವೆ. ಮುಸ್ಲಿಂ ವ್ಯಾಪಾರಿಗಳ ಒಕ್ಕೂಟವಾದ ಹಂಜಮಾನದ ಉಲ್ಲೇಖವು ತುಳುನಾಡಿನ ಮಧ್ಯಕಾಲೀನ ಶಿಲಾಶಾಸನಗಳಲ್ಲಿ ದೊರಕುತ್ತದೆ. ಈ ಉಲ್ಲೇಖವು ಕೊಂಕಣಿಗಳ ಆಗಮನಕ್ಕಿಂತ ಮೊದಲೇ ಮುಸ್ಲಿಂ ವ್ಯಾಪಾರಿಗಳು ತುಳುನಾಡಿನ ವ್ಯಾಪಾರದ ಪ್ರಮುಖ ಭಾಗವಾಗಿದ್ದರು ಎಂಬುದನ್ನು ಸೂಚಿಸುತ್ತದೆ.

ತುಳುನಾಡಿನಲ್ಲಿ ಮಧ್ಯಕಾಲೀನ ಇತಿಹಾಸದಲ್ಲಿ ಮುಸ್ಲಿಮರ ಬಗ್ಗೆ ಉಲ್ಲೇಖಗಳು:
ಮಂಗಳೂರಿನ ಬಂದರ್ ಪ್ರದೇಶದ ಬೆಲಿಯ ಪಳ್ಳಿ ಎಂದು ಹೆಸರಾಗಿರುವ ಮಸ್ಜಿದ್ ಜೀನತ್ ಬಕ್ಷ್ ಹಿಜರಿ ಶಕ ೨೨(ಕ್ರಿ.ಶ. ೬೪೪)ರಲ್ಲಿ ಸ್ಥಾಪನೆಯಾಯಿತು. ಮುಸ್ಲಿಮರು ಆಗಿನಿಂದಲೂ ತುಳುನಾಡಿನ ವ್ಯಾಪಾರದ ಒಂದು ಪ್ರಮುಖ ಭಾಗವಾಗಿದ್ದರು. ತುಳುನಾಡಿನ ಮಧ್ಯಕಾಲೀನ ಇತಿಹಾಸ ಮಂಗಳೂರಿನ ಮುಸ್ಲಿಮರ ಮತ್ತು ಇತರರ ನಡುವೆ ಆಗಾಗ ನಡೆಯುತ್ತಿದ್ದ ಗಲಭೆಗಳನ್ನು ಉಲ್ಲೇಖಿಸುತ್ತದೆ. ಆ ಹೊತ್ತಿಗೆ ಕೊಂಕಣಿಗಳಿನ್ನೂ ತುಳುನಾಡಿನಲ್ಲಿ ನೆಲೆಯೂರಿರಲಿಲ್ಲ. (ವಹಾಬ್ ದೊಡ್ಡಮನೆ : ತುಳುನಾಡಿನ ಮುಸ್ಲಿಮರು)
ಕ್ರಿ.ಶ. ೧೩೨೫-೧೩೫೪ರ ನಡುವೆ ಮಂಗಳೂರಿಗೆ ಭೇಟಿನೀಡಿದ ಅರಬ್ಬಿ ಪ್ರವಾಸಿ ಇಬ್ನ್ ಬಟೂಟ ಮಂಗಳೂರಿನಲ್ಲಿ ೪,೦೦೦ ಮುಸ್ಲಿಮರ ಒಂದು ಕಾಲನಿ ಇದ್ದು ಸ್ಥಳೀಯರಿಗೂ ಮುಸ್ಲಿಮರಿಗೂ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಮತ್ತು ದೊರೆ ರಾಮದೇವ ಇದನ್ನು ವ್ಯಾಪಾರದ ಹಿತಾಸಕ್ತಿಯಿಂದ ಮಧ್ಯಪ್ರವೇಶಿಸಿ ಸಂತೈಸುತ್ತಿದ್ದ ಎಂದು ತನ್ನ ಪ್ರವಾಸ ಕಥನದಲ್ಲಿ ಉಲ್ಲೇಖಿಸುತ್ತಾನೆ. (ಸೆಲೆಕ್ಷನ್ ಫ್ರಂ ದಿ ಟ್ರಾವೆಲ್ಸ್ ಇನ್ ಏಸಿಯ ಅಂಡ್ ಆಫ್ರಿಕ ೧೩೨೫-೧೩೫೪: ಈಬ್ನ್ ಬಟೂಟ: ಪುಟ ಸಂಖ್ಯೆ ೨೩೩)
ಮಂಗಳೂರಿನಲ್ಲಿ ದೊರಕಿದ ಕ್ರಿ.ಶ. ಸುಮಾರು ೧೪೧೮ಕ್ಕೆ ಸಂಬಂಧಿಸಿದ ಶಿಲಾಶಾಸನವೊಂದರ ಪ್ರಮುಖ ಭಾಗವೊಂದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ತಿಂಮಣ ಒಡೆಯನೆಂಬಾತ ಮಂಗಲೂರು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಮುಸ್ಲಿಂ ವ್ಯಾಪಾರಿ ಸಂಘವಾದ ಹಂಜಮಾನದವರು ಸಲ್ಲುವ ಸುಂಕಗಳನ್ನು ಕಟ್ಟುತ್ತಿದ್ದರೂ ವಿನಾ ಕಾರಣ ತನ್ನ ಜನರನ್ನು ಕಳಿಸಿ ನಾಲ್ಕೈದು (ನಾಕಯಿದು) ಮಸೀದಿಗಳನ್ನು ಸುಟ್ಟು ಹಾಕಿದಾಗ ತಿಂಮಣ ಒಡೆಯನ ಮೇಲಧಿಕಾರಿಯಾದ ಬಯಿಚದಂಣಾಯಕನು ಬಂದು ಬಂಗರು, ಚೌಟರು, ಅಜಿಲರು ಸಮಸ್ತ ಕಟ್ಟಳೆಯವರು ಕೂಡಿರಲು ಹಂಜಮಾನದವರಿಗೆ ಪರಿಹಾರವನ್ನು ಕೊಡಿಸಿದ ಬಗ್ಗೆ ಈ ಶಾಸನ ವಿವರಿಸುತ್ತದೆ.(ಶಾಸನ ಸಂ: ೧೮೨ ಸೌತ್ ಇಂಡಿಯನ್ ಇನ್ಸ್ಕ್ರಿಪ್ಶನ್ಸ್ ಸಂಪುಟ: ೭)
ಭಟ್ಕಳದಲ್ಲಿ ದೊರೆತ ಕ್ರಿ.ಶ. ೧೪೨೭ ನೇ ಇಸವಿಯ ವೀರಗಲ್ಲೊಂದರಲ್ಲಿ ಹಂಜಮಾನದ ಮುಖ್ಯಸ್ಥ ಕಾಸರಕೋಡಿನ ಉಮರ ಮರಕಾಲ, ಅವನ ಹೆಂಗಸರು ಮತ್ತು ಪರಿವಾರದ ಮೇಲೆ ಶ್ರೀ ಮನ್ಮಹಾಪ್ರಧಾನ ತಿಂಮಣ ಒಡೆಯನೆಂಬಾತ ಮೋಸದಿಂದ ಮುತ್ತಿಗೆ ಹಾಕಿ ಹಲ್ಲೆ ನಡೆಸಲು ಈ ಉಮರ ಮರಕಲನು ನಗಿರೆಯ ಸಂಗಿರಾಯ ಒಡೆಯರ ಬೆಂಬಲ ಕೋರಿದಾಗ ಅವರ ರಕ್ಷಣೆಗಾಗಿ ಸಂಗಿರಾಯ ಕಳುಹಿಸಿದ ಸಾವಿರ ಆಳು ಸೈನ್ಯದ ನಾಯಕನಾದ ಕೋಟೀಶ್ವರ ನಾಯಕನು ಈ ಸಂಬಂಧವಾಗಿ ಕಾಸರಕೋಡಿನಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟದ್ದು ಉಲ್ಲೇಖವಾಗಿದೆ. (೪೮, ಕರ್ನಾಟಕ ಇನ್ಸ್ಕ್ರಿಪ್ಶನ್ಸ್ ಸಂಪುಟ ೧)
ಈ ಮೇಲಿನ ಉಲ್ಲೇಖಗಳನ್ನು ಗಮನಿಸಿದಾಗ ಮುಸ್ಲಿಮರ ಬಗ್ಗೆ ಗಣನೀಯ ಪ್ರಮಾಣದ ಸಾಮಾಜಿಕ ಅಸಹನೆಯು ತುಳುನಾಡಿನಲ್ಲಿ ಕೊಂಕಣಿಗಳ ಆಗಮನಕ್ಕಿಂತ ಹಿಂದೆಯೇ ಇತ್ತು ಎನ್ನುವುದನ್ನು ಗ್ರಹಿಸಬಹುದು.
ಆದರೆ ತುಳುನಾಡಿನ ವ್ಯಾಪಾರದಲ್ಲಿ ಕೊಂಕಣಿಗಳ ಪ್ರಾಬಲ್ಯದ ಬಳಿಕ ಕೊಂಕಣಿಗಳ ಮತ್ತು ಮುಸ್ಲಿಮರ ನಡುವೆ ಸೌಹಾರ್ದತೆಗೆ ಕೊರತೆಯಿರಲಿಲ್ಲ ಎನ್ನುವುದಕ್ಕೆ ಹಲವು ಪುರಾವೆಗಳನ್ನು ಈ ಲೇಖನದುದ್ದಕ್ಕೂ ವಿವರಿಸಲಾಗಿದೆ. ಈ ಎರಡು ಸಮುದಾಯಗಳ ನಡುವೆ ಕೋಮು ಗಲಭೆಗಳು ಹುಟ್ಟಿಕೊಂಡ ಬಗ್ಗೆ ತುಳುನಾಡಿನ ಇತಿಹಾಸದಲ್ಲಿ ಪುರಾವೆಗಳು ನನಗೆ ಇದುವರೆಗೆ ದೊರಕಿಲ್ಲ.

ತುಳುನಾಡಿನ ವ್ಯಾಪಾರದಲ್ಲಿ ಮುಸ್ಲಿಂ ಮತ್ತು ಕೊಂಕಣಿ ವರ್ತಕರು:
೧೮೦೦ ನೇ ಇಸವಿಯ ಹೊತ್ತಿಗೆ ದಕ್ಷಿಣ ಕನ್ನಡದ ವ್ಯಾಪಾರ ವಹಿವಾಟುಗಳಲ್ಲಿ ಕೊಂಕಣಿಗಳು ಮತ್ತು ಮುಸ್ಲಿಮರು, ಈ ಎರಡೇ ಸಮುದಾಯಗಳು ವ್ಯಾಪಕ ನಿಯಂತ್ರಣ ಸಾಧಿಸಿದ್ದರು ಎನ್ನುವುದನ್ನು ಫ್ರಾನ್ಸಿಸ್ ಬುಕಾನನ್ ಬರೆದ ಅ ಜರ್ನಿ ಫ್ರಂ ಮದ್ರಾಸ್.. ತಿಳಿಸುತ್ತದೆ. ಉಳಿದ ಪಾರಂಪರಿಕ ವ್ಯಾಪಾರಿ ಸಮುದಾಯಗಳಾದ ಹರಿಶೆಟ್ಟಿ ಸಮುದಾಯ, ತೆಲುಗು ಬಣಜಿಗರು ಮತ್ತು ಲಿಂಗಾಯತ ಬಣಜಿಗರು ಕೆಲವು ಕುಟುಂಬಗಳಷ್ಟೆ ಉಳಿದುಕೊಂಡಿದ್ದರೂ ವ್ಯಾಪಾರದಿಂದ ನಿರ್ಗಮನವಾಗಿದ್ದರು. ಆ ಹೊತ್ತಿಗೆ ಇಡೀ ದಕ್ಷಿಣ ಕನ್ನಡದಲ್ಲಿದ್ದ ಗುಜರಾತಿಗಳು ೪ ಮನೆಗಳು ಮಾತ್ರ. ಕೊಂಕಣಿಗಳದ್ದು ೨೪೩೪ ಮನೆಗಳಿದ್ದರೆ ಮುಸ್ಲಿಮರದ್ದು ೫೨೩೩ ಮನೆಗಳಿದ್ದವು - ಇದರಲ್ಲಿ ಮುಸ್ಲಿಂ ವ್ಯಾಪಾರಿಗಳಾದ ಮೊಪ್ಲಾಗಳದ್ದು ೩೮೨೫ ಮನೆಗಳಾದರೆ ಇತರ ಮುಸಲ್ಮಾನರದ್ದು ೧೩೮೮ ಮನೆಗಳು.
ಆ ಹೊತ್ತಿಗೆ ಕೊಂಕಣಿಗಳ ಹದಿನೆಂಟಕ್ಕೂ ಹೆಚ್ಚು ಪೇಟೆಗಳು ತುಳುನಾಡಿನಲ್ಲಿದ್ದವು ಎನ್ನುವುದನ್ನು ಮಂಜೇಶ್ವರ ಮದನಂತೇಶ್ವರ ದೇವಸ್ಥಾನದ ೧೮ನೇ ಶತಮಾನದ ಶಾಸನಗಳು, ಕರಾರುಗಳು ಉಲ್ಲೇಖಿಸುತ್ತವೆ.
ಹೈದರಾಲಿಯ ಆಡಳಿತದಲ್ಲಿ ತುಳುನಾಡಿನ ಪ್ರಮುಖ ವ್ಯಾಪಾರಿ ಸಮುದಾಯಗಳು ಮೋಪ್ಲಾ ಮತ್ತು ಕೊಂಕಣೀಸ್ ಆಗಿದ್ದರೂ ಬ್ರಿಟಿಷರು ತುಳುನಾಡನ್ನು ವಶಪಡಿಸಿಕೊಂಡ ಬಳಿಕ ಸೂರತ್, ಕಛ್, ಬಾಂಬೇ ಮತ್ತು ಇತರ ಉತ್ತರ ಭಾರತದ ಪಟ್ಟಣಗಳಿಂದ ವ್ಯಾಪಾರಿಗಳು ತುಳುನಾಡಿಗೆ ಬಂದು ನೆಲೆಯೂರಿದ್ದರು ಎನ್ನುವುದನ್ನು ಬುಕಾನನ್ ತಿಳಿಸುತ್ತಾನೆ. ಬಂಟ ಸಮುದಾಯದವರೂ ವ್ಯಾಪಾರಕ್ಕಿಳಿಯಲು ಪ್ರಾರಂಭಿಸಿದ್ದಾರೆ ಆದಾಗ್ಯೂ ಹೆಚ್ಚಿನ ವ್ಯಾಪಾರಿಗಳಿನ್ನೂ ಕೊಂಕಣಿಗಳು ಮತ್ತು ಮೋಪ್ಲಾಗಳೇ ಆಗಿದ್ದಾರೆ ಎನ್ನುವುದನ್ನೂ ಸೂಚಿಸುತ್ತಾನೆ.

ಕೊಂಕಣಿಗಳ ಸಾಮಾಜಿಕ ನಾಯಕತ್ವ :
ಇತರ ಮೇಲ್ವರ್ಗದ ಭೂಮಾಲಕರಂತೆ ಪ್ರಭುತ್ವ ನಿಷ್ಟರಾಗಿದ್ದ ಕೊಂಕಣಿಗಳು ೧೯ನೇ ಶತಮಾನದ ಅಂತ್ಯದೊಂದಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಗಣನೀಯ ಪ್ರಮಾಣದಲ್ಲಿ ಪಾಲ್ಗೊಂಡರು. ಮತ್ತು ಅಪ್ಪಟ ಕಾಂಗ್ರೆಸಿಗರಾಗಿ ನಿರ್ಮಾಣಗೊಂಡರು. ಅನೇಕ ಕೊಂಕಣಿಗಳು ಮಹಾತ್ಮಾ ಗಾಂಧಿಯವರ ಸಂದೇಶಕ್ಕೆ ಮಿಡಿದು ಅಸಹಕಾರ ಚಳುವಳಿ ಮತ್ತು ಸ್ವದೇಶಿ ಚಳುವಳಿಯಲ್ಲಿ ತೊಡಗಿಕೊಂಡರು. ಅನೇಕ ಬಟ್ಟೆವ್ಯಾಪಾರಿ ಕೊಂಕಣಿಗಳು ಖಾದಿ ಚಳುವಳಿಯಲ್ಲಿ ತೊಡಗಿಕೊಂಡು ಮಗ್ಗದ ಶಾಲೆಗಳನ್ನು ಸ್ಥಾಪಿಸಿದ ಪುರಾವೆಗಳಿವೆ. ಅನೇಕ ಕೊಂಕಣಿ ವ್ಯಾಪಾರಿಗಳ ಹೊಸ ಪೀಳಿಗೆ ಆಂದೋಲನದಲ್ಲಿ ತೊಡಗಿ ವ್ಯಾಪಾರದಿಂದ ಆ ಕುಟುಂಬಗಳು ಹೊರಬರಬೇಕಾಗಿ ಬಂದ ಹಲವು ಉಲ್ಲೇಖಗಳನ್ನು ನೀಡಬಹುದು. ದಕ್ಷಿಣಕನ್ನಡದಲ್ಲಿ ಕಾಂಗ್ರೆಸ್ ಕಟ್ಟಲು ಮುಂಚೂಣಿಯಲ್ಲಿ ನಿಂತವರು ಇದೇ ಕೊಂಕಣಿ ವ್ಯಾಪಾರಿ ಸಮುದಾಯ.
ಕಾಂಗ್ರೆಸ್ ಸಿಧ್ಧಾಂತಗಳಿಂದ ಮತ್ತು ಗಾಂಧಿವಾದದಿಂದ ಪ್ರೇರಿತರಾದ ಹಲವು ಕೊಂಕಣಿಗಳು ಸ್ವಾತಂತ್ರ್ಯೋತ್ತರ ಸಹಕಾರ ಚಳುವಳಿಯಲ್ಲಿ ತೊಡಗಿಕೊಂಡರೆ ನೆಹರೂ ಆಧುನಿಕತೆಯಿಂದ ಪ್ರೇರಿತರಾದ ಕೊಂಕಣಿ ಯುವಕರು ಉದ್ಯಮಗಳಲ್ಲಿ ತೊಡಗಿಕೊಂಡರು. ಜೊತೆಯಲ್ಲಿ ತಮ್ಮ ಕುಲಕಸುಬಾದ ವ್ಯಾಪಾರವನ್ನು ಮೊದಲಿನ ಚಾತುರ್ಯಗಳಿಂದಲೇ ಮುಂದುವರೆಸಿದ ಅನೇಕ ಕುಟುಂಬಗಳೂ ಇದ್ದೇ ಇದ್ದವು.
ಸ್ವಾತಂತ್ರ್ಯೋತ್ತರ ಕಾಲದಲ್ಲಿ ನೆಹರೂ ತೀರಿಕೊಂಡಾಗ ಕಾಂಗ್ರೆಸ್ಸಿನಲ್ಲಿ ಉದ್ಭವವಾದ ನಾಯಕತ್ವದ ಗೊಂದಲಗಳನ್ನು ನಿವಾರಿಸುವಲ್ಲಿ ಸಂಜೀವ ರೆಡ್ಡಿ, ನಿಜಲಿಂಗಪ್ಪ, ಕಾಮರಾಜ್ ನಾಡರ್, ಅತುಲ್ಯ ಘೋಶ್ ಮತ್ತು ಶ್ರೀನಿವಾಸ ಮಲ್ಯ ಈ ಐವರ ಸಿಂಡಿಕೇಟ್ ಪ್ರಧಾನ ಪಾತ್ರವಹಿಸಿತು ಎನ್ನುವುದು ಇಂದು ಇತಿಹಾಸ. ಶ್ರೀನಿವಾಸ ಮಲ್ಯರು ದಕ್ಷಿಣ ಕನ್ನಡದ ಕೊಂಕಣಿ ಸಮುದಾಯ ಕಾಂಗ್ರೆಸ್ ಪಕ್ಷದ ಒಳಗಿನ ಶಕ್ತಿರಾಜಕಾರಣದಲ್ಲಿ ಎಂತಹ ಪಾತ್ರವಹಿಸಿತ್ತು ಎಂಬುದಕ್ಕೆ ಒಂದು ಪುರಾವೆ. ಇದೇ ಸಾಲಿನಲ್ಲಿ ಹೆಚ್.ವಿ.ಕಾಮತ್, ಟಿ.ಏ.ಪೈ, ವೈಕುಂಠ ಬಾಳಿಗ, ಮಣೇಲ್ ಶ್ರೀನಿವಾಸ ನಾಯಕ್, ವೆಂಕಟ್ರಾಯ ಬಾಳಿಗ, ಯು.ಪಿ.ಮಲ್ಯ, ರಂಗನಾಥ ಶೆಣೈ, ಬಂಟ್ವಾಳ ನಾರಾಯಣ ನಾಯಕ್ ಮುಂತಾದ ಕಾಂಗ್ರೆಸ್ ಮುತ್ಸದ್ದಿಗಳನ್ನು ನಾನು ಉಲ್ಲೇಖಿಸಬಯಸುತ್ತೇನೆ. ಇವರೆಲ್ಲರೂ ಮತ್ತು ಇನ್ನೂ ಅನೇಕ ಕೊಂಕಣಿಗಳು ದಕ್ಷಿಣ ಕನ್ನಡದಾದ್ಯಂತ ಆ ಹೊತ್ತಿಗೆ ಕಾಂಗ್ರೆಸ್ ಸಂಘಟಿಸಿದವರು.
ಉಳಿದಂತೆ ಕೊಂಕಣಿಗಳು ಜನಸಂಘವನ್ನೂ ಕಟ್ಟಿದರು, ಪ್ರಜಾ ಸೋಷಲಿಸ್ಟ್ ಪಕ್ಷದಲ್ಲೂ (ಉಪೇಂದ್ರ ನಾಯಕ್) ಇದ್ದರು. ಕಮ್ಯುನಿಷ್ಟ್ ಪಕ್ಷದಲ್ಲೂ ಇದ್ದರು (ಎ. ಶಾಂತಾರಾಮ ಪೈ) ಕೊಂಕಣಿಗಳು ಆ ಹೊತ್ತಿಗೆ ಸುಶಿಕ್ಷಿತರೂ, ವೈಚಾರಿಕರೂ ಆಗಿದ್ದುದರಿಂದ ಎಲ್ಲದರಲ್ಲಿಯೂ ಕೈಯಾಡಿಸಿದವರು. ಇದು ಕೊಂಕಣಿಗಳು ಎಲ್ಲಾ ವಿಚಾರಧಾರೆಗಳಿಗೂ ತಮ್ಮನ್ನೊಡ್ಡಿಕೊಂಡಿದ್ದರು ಎನ್ನುವುದನ್ನು ತೋರಿಸುತ್ತದೆ. ಸಮಕಾಲೀನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಚಟುವಟಿಕೆಗಳಲ್ಲೂ ದಕ್ಷಿಣ ಕನ್ನಡದಲ್ಲಿ ಕೊಂಕಣಿಗಳು ಮುಂಚೂಣಿಯಲ್ಲಿದ್ದುದೂ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಕೊಂಕಣಿಗಳ ಪ್ರಥಮ ನಿಷ್ಟೆ ಆ ಸಮಯಕ್ಕೆ ಕಾಂಗ್ರೆಸಿನಲ್ಲಿತ್ತು.
ಲೋಕಸಭಾ ಚುನಾವಣೆಗಳಲ್ಲಿ ೧೯೫೧, ೫೭, ೬೨, ೭೧, ೭೭ ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಕೊಂಕಣಿ ಕಾಂಗ್ರೆಸಿಗ ಚುನಾಯಿತನಾಗಿದ್ದ. ಅಂದರೆ ದಕ್ಷಿಣ ಕನ್ನಡದಲ್ಲಿದ್ದ ಎರಡು ಲೋಕಸಭಾ ಸ್ಥಾನಗಳಲ್ಲಿ ಒಂದು ಸ್ಥಾನ ಕೊಂಕಣಿಗಳಿಗೆ ಮೀಸಲೋ ಎಂಬಷ್ಟು ಪ್ರಾಬಲ್ಯವನ್ನು ಕಾಂಗ್ರೆಸ್ಸಿನಲ್ಲಿ ಕೊಂಕಣಿಗರು ಗಳಿಸಿದ್ದರು ಎನ್ನುವುದನ್ನು ಗ್ರಹಿಸಬಹುದು. ೧೯೫೧, ೬೨, ೬೭ ರಲ್ಲಿ ತಲಾ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕೊಂಕಣಿ ಕಾಂಗ್ರೆಸಿಗರು ಶಾಸಕರಾಗಿ ಆರಿಸಿಬಂದಿದ್ದರು. ೧೯೫೭ರಲ್ಲಿ ಒಬ್ಬ ಕೊಂಕಣಿ ಶಾಸಕ ಆಯ್ಕೆ ಆಗಿದ್ದರು.
ಅಂಕಿಅಂಶಗಳ ಹೆಚ್ಚಿನ ವಿಶ್ಲೇಷಣೆಗಾಗಿ ೧೯೫೭ರ ಮಂಗಳೂರು ೧ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಗಮನಿಸಬಹುದು.
೧ ವೈಕುಂಠ ಬಾಳಿಗಾ /ಭಾ.ರಾ.ಕಾಂಗ್ರೆಸ್ ೧೬,೩೬೫ (೪೮.೯೪% )
೨. ಶಾಂತಾರಾಮ್ ಪೈ/ ಸಿ.ಪಿ.ಐ. ೧೦,೩೬೪ (೩೦.೯೯%)
೩. ಲೌರಾ ಪಾಯಸ್ / ನಿರ್ದಲೀಯ ೪,೭೬೬ (೧೪.೨೫% )
೪. ಪ್ರಭಾಕರ / ಭಾ.ಜನಸಂಘ ೧,೯೪೫ (೫.೮೨% )

ವೈಕುಂಠ ಬಾಳಿಗರು ರಾಜ್ಯ ಸಂಪುಟದಲ್ಲಿ ಸಚಿವರೂ ಆಗಿದ್ದರು ಬಳಿಕ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಟಿ.ಎ.ಪೈಗಳು ಕೇಂದ್ರ ಸಂಪುಟದಲ್ಲಿದ್ದು ಬ್ಯಾಂಕು ರಾಷ್ಟ್ರೀಕರಣ, ಕೃಷಿಸಾಲಗಳ ಮುಕ್ತ ನೀತಿ, ವಿಮಾರಂಗ ಮುಂತಾದ ರಾಷ್ಟ್ರ ಮಟ್ಟದ ಸೇವೆಯನ್ನು ಕಾಂಗ್ರೆಸ್ ನಲ್ಲಿದ್ದುಕೊಂಡು ನೀಡಿದವರು. ಇದರಿಂದ ದಕ್ಷಿಣಕನ್ನಡದ ಕಾಂಗ್ರೆಸ್ ನಲ್ಲಿ ಕೊಂಕಣಿಗಳ ಸ್ಥಾನ ಪ್ರಧಾನವಾಗಿತ್ತು ಎನ್ನುವುದನ್ನು ಊಹಿಸಬಹುದು.
ಇಂದಿರಾಗಾಂಧಿಯ ಇಪ್ಪತ್ತು ಅಂಶಗಳ ಕಾರ್ಯಕ್ರಮದಡಿಯಲ್ಲಿ ದೇವರಾಜು ಅರಸು ಜಾರಿಗೆ ತಂದ ಭೂಸುದಾರಣಾ ಕಾಯಿದೆಯಿಂದ ಅನೇಕ ಕೊಂಕಣಿ ಭೂಮಾಲಿಕರು ನೆಲಕಳಕೊಂಡರೂ ಅದಾಗಲೇ ನೆಲೆಯೂರಿ ದೇಶಾದ್ಯಂತ ವಿಸ್ತರಿಸತೊಡಗಿದ್ದ ಕೊಂಕಣಿಗಳೇ ಹುಟ್ಟುಹಾಕಿದ್ದ ಬ್ಯಾಂಕಿಂಗ್ ರಂಗ ಕೊಂಕಣಿ ಯುವಕರಿಗೆ ಆಧಾರವಾಯಿತು.
೧೯೬೭ ಒಂದು ನಿರ್ಣಾಯಕ ಕಾಲಘಟ್ಟ, ಕಾಂಗ್ರೆಸ್ ಎರಡು ಭಾಗವಾಗಿತ್ತು. ಶ್ರೀನಿವಾಸ ಮಲ್ಯರ ನಿಧನವಾಗಿತ್ತು. ಇಂದಿರಾ ಆಡಳಿತ ಹಳೆಯ ಕಾಂಗ್ರೆಸ್ ನಿಷ್ಟಾವಂತರಿಗೆ ಭ್ರಮನಿರಸನವಾಗಿತ್ತು. ಹಿರಿಯ ಕಾಂಗ್ರೆಸಿಗರು ಮೆಲ್ಲನೆ ಹಿಂದೆ ಸರಿಯತೊಡಗಿದ ಕಾಲವದು. ಇಂದಿರಾಗಾಂಧಿ ಬಲಿಷ್ಟರಾಗಿದ್ದರು.
೧೯೬೮ರಲ್ಲಿ ದಕ್ಷಿಣ ಕನ್ನಡ ಕೋಮುಗಲಭೆಯೊಂದಕ್ಕೆ ಸಾಕ್ಷಿಯಾಯಿತು. ಎಪ್ರಿಲ್ ೧೮ರಂದು ಕುದ್ರೋಳಿಯಲ್ಲಿ ಜೂಜಾಟದ ವಿವಾದವೊಂದು ೨ ದಿನಗಳ ವ್ಯಾಪಕ ಗಲಭೆಗೆ ಕಾರಣವಾಗಿ ಓರ್ವನ ಹತ್ಯೆಗೆ ಕಾರಣವಾಯಿತು. ಇದಕ್ಕೆ ಕಾರಣವಾದದ್ದು ಕೊಂಕಣಿಗಳಲ್ಲ ಎಂಬುದನ್ನು ಉಲ್ಲೇಖಿಸುತ್ತಾ ಈ ಗಲಭೆಯಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿದವರು ವ್ಯಾಪಾರಿಗಳು ಎಂಬುದನ್ನು ನೆನಪಿಸಬಯಸುತ್ತೇನೆ. ಅನೇಕ ಕೊಂಕಣಿ ಮತ್ತು ಮುಸ್ಲಿಂ ಭಂಡಸಾಲೆಗಳು ಸುಟ್ಟು ಹೋಗಿದ್ದವು. ಜೊತೆಗೆ ಇಲ್ಲೊಂದು ಆಸಕ್ತಿಕರ ಅಂಕಿಅಂಶಗಳತ್ತ ಓದುಗರ ಗಮನವನ್ನು ಸೆಳೆಯಬಯಸುತ್ತೇನೆ.
ಭಾರತದಲ್ಲಿ ೧೯೫೪ರಿಂದ ೧೯೬೬ರ ವರೆಗೆ ನಡೆದ ಸರಾಸರಿ ಕೋಮು ಗಲಭೆಗಳ ಸಂಖ್ಯೆ ೭೦.೨ ಆದರೆ ೧೯೬೭ರಲ್ಲಿ ದೇಶದಾದ್ಯಂತ ನಡೆದ ಕೋಮುಗಲಭೆಗಳು ೨೦೯, ೧೯೬೮ರಲ್ಲಿ ೩೪೬, ೧೯೬೯ರಲ್ಲಿ ೫೧೯ ಕೋಮು ಗಲಭೆಗಳು ದೇಶದಾದ್ಯಂತ ನಡೆದವು. ಆದುದರಿಂದ ಸ್ಥಳೀಯ ಕೋಮುಗಲಭೆಗಳಿಗೊಂದು ರಾಷ್ಟ್ರೀಯ ಆಯಾಮವಿರುತ್ತದೆ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು.
೧೯೬೮ರಲ್ಲಿ ನಡೆದ ಕೋಮುಗಲಭೆಗೆ ಮೊಗವೀರ ಮತ್ತು ಮುಸ್ಲಿಮರ ನಡುವೆ ಸಂಭವಿಸಿದ ಸಣ್ಣಗಲಾಟೆಯು ಮೂಲವಾದರೂ ಆ ಬಳಿಕ ಅದು ಸಮಗ್ರ ಸಮಾಜವನ್ನು ಆವರಿಸಿಕೊಳ್ಳುವಾಗ ಮೂಲ ಕಾರಣದಿಂದ ಬೇರೆಯೇ ಆಯಾಮವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಯಾವುದಾದರೂ ಒಂದು ಸಮುದಾಯವನ್ನು ಕಾರಣವೆಂದು ಸೂಚಿಸುವುದು ಅಸಮಂಜಸವಾಗುತ್ತದೆ.

ಈ ಹಂತದಲ್ಲಿ ಮತ್ತೊಮ್ಮೆ ದಿನೇಶ್ ಅಮೀನ್ ಮಟ್ಟೂ ಅವರ ಬರಹದ ಒಂದು ಭಾಗವನ್ನು ಉಲ್ಲೇಖಿಸಲಿಚ್ಛಿಸುತ್ತೇನೆ.
ದೇವರಾಜ್ ಅರಸರ ರಾಜಕೀಯ ಕ್ಷೇತ್ರದ ಸೋಷಿಯಲ್ ಇಂಜಿನೀರಿಂಗ್‌ನಿಂದಾಗಿ ಜಿಲ್ಲೆಯಲ್ಲಿ ಬಂಟರು ಮತ್ತು ಬ್ರಾಹ್ಮಣರ ಕೈಯಲ್ಲಿದ್ದ ರಾಜಕೀಯ ಅಧಿಕಾರ ಕೂಡ ಹಿಂದುಳಿದ ಜಾತಿಯ ಬಿಲ್ಲವರು ಮತ್ತು ಅಲ್ಪಸಂಖ್ಯಾತ ಕೋಮುಗಳ ಕಡೆಗೆ ಸರಿದು ಹೋಗಿತ್ತು. (ಅದೇ ಬರಹ: ಪ್ರಜಾವಾಣಿ ಫೆ. ೨೦೦೯)
ಇಲ್ಲಿ ಬ್ರಾಹ್ಮಣರು ಎನ್ನುವದನ್ನು ಕೊಂಕಣಿಗಳು ಎಂದು ಕೂಡ ಓದಿಕೊಳ್ಳಬೇಕು. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ಸಿನ ಮನಿಬ್ಯಾಗ್ ಎಂದೇ ಪರಿಗಣಿತವಾಗಿದ್ದ ಕೊಂಕಣಿ ಸಮುದಾಯ ಈ ಸಾಮಾಜಿಕ ಪಲ್ಲಟದಿಂದ ಕಾಂಗ್ರೆಸ್ಸಿನಲ್ಲಿ ಮೆಲ್ಲನೆ ನೇಪಥ್ಯಕ್ಕೆ ಸರಿಯಿತು. ಅದುವರೆಗೆ ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕೊಂಕಣಿಗಳಿಗೆ ದೊರಕುತ್ತಿದ್ದ ಪ್ರಾತಿನಿಧ್ಯ ೭೨ರ ವಿಧಾನಸಭಾ ಚುನಾವಣೆಯಲ್ಲಿ ದೊರಕಲಿಲ್ಲ.

ತುರ್ತು ಪರಿಸ್ಥಿತಿಯ ಭುಗಿಲು:
ಹಳೆಯ ಕೊಂಕಣಿ ಕಾಂಗ್ರೆಸಿಗರು ತಮ್ಮ ಉತ್ಸಾಹವನ್ನು ಕಳೆದುಕೊಂಡಿದ್ದರು. ಯುವಕರ ಅಭಿಪ್ರಾಯಗಳು ದಲಾಗತೊಡಗಿದ್ದವು. ಸಾಮಾಜಿಕ ಪಲ್ಲಟದ ಪರಿಣಾಮವಾಗಿ ಮಧ್ಯಮವರ್ಗಕ್ಕೆ ಕಡೆಗಣಿಸಲ್ಪಟ್ಟಂತಹ ಆಸಹನೆ ಕಾಡಲಾರಂಭಿಸಿತ್ತು. ಈ ಅಸಹನೆ, ಭ್ರಮನಿರಸನ ಒಟ್ಟಾಗಿ ಕೂಡಿ ಪ್ರತಿಭಟನೆಯಾಗಿ ಹೊರಹೊಮ್ಮಲು ಇಂದಿರಾಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ ಒಂದು ಭೂಗತ ಚಟುವಟಿಕೆಯ ರಂಗವನ್ನು ನಿರ್ಮಿಸಿತು. ಈ ಭೂಗತ ಚಟುವಟಿಕೆಗಳ ಉತ್ಸಾಹ ರಾಷ್ಟ್ರಪ್ರೇಮದ ಹೊಸ ಉನ್ಮಾದದಂತೆ ಭಾಸವಾಗಿ ರಾ.ಸ್ವ.ಸಂಘ ರಾಷ್ಟ್ರಪ್ರೇಮದ ಹೊಸ ಹರಿಕಾರನಂತೆ ಮುಂದೊತ್ತಿ ಬಂದು ಅಸಂತೃಪ್ತ ಮಧ್ಯಮವರ್ಗವನ್ನು ತೆಕ್ಕೆಗೆ ಸೆಳೆದುಕೊಂಡಿತು. ಈ ಸಂದರ್ಭದಲ್ಲಿ ಬರೇ ಕೊಂಕಣಿಗಳಲ್ಲದೇ ಅನೇಕ ಹಿಂದುಳಿದ ವರ್ಗದವರೂ ಸೇರಿದಂತೆ ಗಣನೀಯ ಪ್ರಮಾಣದ ಮೇಲ್ವರ್ಗದವರು ಸಂಘದ ಭೂಗತ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ೧೯೭೫ರಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಸತ್ಯಾಗ್ರಹದ ಕರೆಗೆ ಓಗೊಟ್ಟು ತುರ್ತುಪರಿಸ್ಥಿತಿಯ ವಿರುದ್ಧ ಪ್ರತಿಭಟಿಸಿ ದೇಶದ ಎಲ್ಲೆಡೆಯಲ್ಲಿ ಬಂಧಿತರಾದ ೮೦,೦೦೦ ಸತ್ಯಾಗ್ರಹಿಗಳಲ್ಲಿ ೧೫,೦೦೦ ಸತ್ಯಾಗ್ರಹಿಗಳು ಕರ್ನಾಟಕದಲ್ಲಿ ಬಂಧಿತರಾದವರು. ಈ ಸಂಖ್ಯೆ ಸಾಧ್ಯವಾದದ್ದು ಮಂಗಳೂರಿನಲ್ಲಿ ನಡೆದ ವ್ಯಾಪಕ ಸಂಘಟನೆಯಿಂದ ಎಂದು ಈ ಘಟನೆಯನ್ನು ದಾಖಲಿಸಿದ ಮೂಲಗಳು ತಿಳಿಸುತ್ತವೆ.
ಮೊದಲು ಊರಿಗೆ ಊರೇ ಕಾಂಗ್ರೆಸ್ಸಿನ ನಿಷ್ಟಾವಂತ ಮತದಾರರಾಗಿದ್ದ ಕೊಂಕಣಿ ಸಮುದಾಯ ಊರಿಗೆ ಊರೇ ಜನತಾ ಪಾರ್ಟಿಗೆ ಓಟು ಹಾಕುವ ಮೂಲಕ ಒಂದು ವ್ಯಾಪಕ ಸ್ಥಿತ್ಯಂತರಕ್ಕೆ ಕಾರಣವಾಯಿತು. ಬಳಿಕದ ದಿನಗಳಲ್ಲಿ ಕಾಂಗ್ರೆಸ್ ನಿಷ್ಟೆಯಿರುವ ಕೊಂಕಣಿಗರು ಬೆರಳೆಣಿಕೆಯ ಮನೆಗಳಾಗಿ ಉಳಿದುಹೋದವು.
ತುರ್ತು ಪರಿಸ್ಥಿತಿಯ ಎರಡು ಮುಖ್ಯ ಪರಿಣಾಮಗಳೆಂದರೆ ತೀವ್ರ ಬಲಪಂಥ (ಸಂಘ) ಮತ್ತು ತೀವ್ರ ಎಡಪಂಥ (ನಕ್ಸಲ್ಬಾರಿ) ಗಳು ಶಕ್ತಿಗಳಿಸಿಕೊಂಡಿದ್ದು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಇದು ದಕ್ಷಿಣ ಕನ್ನಡಕ್ಕೆ ಸೀಮಿತವಾದ ವಿಷಯವಲ್ಲ. ರಾಷ್ಟ್ರ ಮಟ್ಟದ ಒಂದು ಪರಿಣಾಮ.
ಹೀಗೆ ಕಾಂಗ್ರೆಸ್ ನಿಷ್ಟವಾಗಿದ್ದ ಒಂದು ಸಮುದಾಯ ಸಾಮಾಜಿಕ, ರಾಜಕೀಯ ಮತ್ತು ಭಾವನಾತ್ಮಕ ಕಾರಣಗಳಿಂದಾಗಿ ಭಾರತೀಯ ಜನಸಂಘ ಮತ್ತು ಅದರ ಹೊಸ ಅವತರಣಿಕೆ ಭಾರತೀಯ ಜನತಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಹೊಸ ಪಕ್ಷವನ್ನು ದಕ್ಷಿಣ ಕನ್ನಡದಾದ್ಯಂತ ಕಟ್ಟುವಲ್ಲಿ ನಿರ್ಣಾಯಕವಾಯಿತು.
ತುರ್ತುಪರಿಸ್ಥಿತಿಯ ಬಳಿಕವೂ ೭೭ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ವಿಜಯಿಯಾಗಿದ್ದರೂ ಟಿ.ಏ.ಪೈ ಸಂಜಯಗಾಂಧಿಯೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ತಮ್ಮ ಪದವಿಗೆ ರಾಜೀನಾಮೆ ನೀಡಿದರು ಮತ್ತು ೮೦ರ ಚುನಾವಣೆಯಲ್ಲಿ ಕಾಂಗ್ರೆಸ್ (ಅರಸು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಆಗ ಅವರ ಸೋಲಿಗೆ ಕಾರಣ, ಇದೇ ಕೊಂಕಣಿಗಳು ಜನತಾ ಪಕ್ಷದ ವಿ.ಎಸ್. ಆಚಾರ್ಯರಿಗೆ ಮತನೀಡಿದ್ದರಿಂದ ಎಂಬುದನ್ನು ನೆನಪಿಸಿಕೊಳ್ಳಬಹುದು. ಅದು ಟಿ.ಎ.ಪೈ ಸೋಲಿಗೆ ಕಾರಣವಾಯಿತಲ್ಲದೇ ಕಾಂಗ್ರೆಸ್ ಗೆಲುವಿಗೆ ತೊಡಕಾಗಲಿಲ್ಲ ಎಂಬುದು ರುಜುವಾತಾಯಿತು. ಅಲ್ಲಿಗೆ ಕೊಂಕಣಿಗಳ ಕಾಂಗ್ರೆಸ್ ಸಂಬಂಧದ ಎಲ್ಲ ಅಧ್ಯಾಯಗಳೂ ಮುಗಿದವು.
ಈ ಒಟ್ಟೂ ಸ್ಥಿತ್ಯಂತರದ ಪರಿಣಾಮವಾಗಿ ೮೩ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಜಿಲ್ಲೆಯ ೧೫ರಲ್ಲಿ ಎಂಟು ಸ್ಥಾನಗಳನ್ನು ಗೆದ್ದುಕೊಂಡಿತಲ್ಲದೆ ಬಿ.ಜೆ.ಪಿ ಬೆಂಬಲಿತ ಮೂವರು ಜನತಾ ಪಕ್ಷದ ಅಭ್ಯರ್ಥಿಗಳೂ ಚುನಾಯಿತರಾದರು.

ಕೊಂಕಣಿಗಳ ಔದ್ಯಮಿಕ ಮುನ್ನೋಟ:
೨೦ನೇ ಶತಮಾನದ ಪೂರ್ವಾರ್ಧ ಕೊಂಕಣಿಗಳು ದಕ್ಷಿಣ ಕನ್ನಡದ ಸಾಮಾಜಿಕ ನಾಯಕತ್ವವನ್ನು ಸಾಧಿಸಿದ ಒಂದು ಕಾಲಘಟ್ಟ. ದಕ್ಷಿಣ ಕನ್ನಡದ ಪ್ರತೀ ಉದ್ಯಮ ಕ್ಷೇತ್ರದಲ್ಲೂ ಕೊಂಕಣಿಗಳು ಮುಂಚೂಣಿಯಲ್ಲಿದ್ದರು. ಔದ್ಯಮಿಕವಾಗಿ ಮುಂಚೂಣಿಯಲ್ಲಿದ್ದ ಸಮುದಾಯ ಸಹಜವಾಗಿ ಎಲ್ಲ ಜಾತಿ ವರ್ಗಗಳವರ ಉದ್ಯೋಗಕ್ಕೂ ಕಾರಣವಾಗಿದ್ದರು. ಇದು ಸಮಾಜದಲ್ಲಿ ಒಂದು ರೀತಿಯ ನಿಯಂತ್ರಣವನ್ನೂ ಅವರಿಗೆ ಕಲ್ಪಿಸಿತು.
ಆದರೆ ಈ ಹೊತ್ತಿಗೆ ಕೊಂಕಣಿ ಸಮಾಜದ ಒಳಗೊಂದು ಸ್ಥಿತ್ಯಂತರ ಆಗಲಾರಂಭಿಸಿತ್ತು. ಆರ್ಥಿಕವಾಗಿ ಬಲಾಡ್ಯರಾಗಿದ್ದ ಕೊಂಕಣಿಗಳ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಪಡೆಯಲು ಮತ್ತು ಪಡೆದು ಬಂದ ಬಳಿಕ ನೆಲೆಸಲು ಹೊರನಾಡುಗಳಿಗೆ, ಮಹಾನಗರಗಳಿಗೆ ತೆರಳಲು ಪ್ರಾರಂಭವಾಗಿತ್ತು. ಆರ್ಥಿಕವಾಗಿ ಅಷ್ಟೊಂದು ಸಬಲರಾಗಿರದ ಸಾಮಾನ್ಯ ಕೊಂಕಣಿಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಗಳಿಸಿಕೊಂಡು ನೌಕರವರ್ಗವಾಗಿ ಬದಲಾಗತೊಡಗಿದ್ದರು. ಚಿಲ್ಲರೆ ವ್ಯಾಪಾರದಲ್ಲಿ ಅಂತದ್ದೊಂದು ಲಾಭದಾಯಕ ಆಕರ್ಷಣೆಯೂ ಇರಲಿಲ್ಲ. ಕೊಂಕಣಿಗಳ ಉದ್ಯಮಶೀಲತೆಯ ಪ್ರತಿಭಾವಂತ ಯುವಕರು ಭಾರತದಲ್ಲಿ ಅದಾಗ ತಲೆಯೆತ್ತುತ್ತಿದ್ದ ಕಾರ್ಪೋರೆಟ್ ರಂಗದ ಹೊಸ್ತಿಲಲ್ಲಿ ನಿಂತಿದ್ದರು. ಇಂದು ಕಾರ್ಪೋರೇಟ್ ಜಗತ್ತಿನಲ್ಲಿ ಕೇಳಿಬರುತ್ತಿರುವ ಅನೇಕ ಕೊಂಕಣಿ ಪ್ರಮುಖರ ಹೆಸರುಗಳನ್ನು ಮಂಗಳೂರಿನ ಶಾಲೆಗಳಲ್ಲಿನ ನಾಲ್ಕೈದು ದಶಕಗಳ ಹಿಂದಿನ ದಾಖಲೆಗಳಲ್ಲಿ ಹುಡುಕಿ ತೆಗೆಯಬಹುದು.
ಹಲವು ವ್ಯಾಪಾರಿ ಕುಟುಂಬಗಳು ಹೊಸ ತಲೆಮಾರಿನ ಸದಸ್ಯರ ಹೊರಹೋಗುವಿಕೆಯಿಂದಾಗಿ ತಮ್ಮ ಭಂಡಸಾಲೆಗಳನ್ನು ಮಾರಿದರು. ಅದರಲ್ಲಿ ಹೆಚ್ಚಿನವರು ಮುಸ್ಲಿಮರಿಗೇ ತಮ್ಮ ಭಂಡಸಾಲೆಗಳನ್ನು ಮಾರಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಅದುವರೆಗೆ ಮುಸ್ಲಿಮರ ಮತ್ತು ಕೊಂಕಣಿಗಳ ವ್ಯಾಪಾರಿ ಸ್ಪರ್ಧೆಯು ಆರೋಗ್ಯಕರವಾಗಿದ್ದಿರಬೇಕು ಎಂಬುದನ್ನು ಇದರಿಂದ ಊಹಿಸಬಹುದು.
ಮುಸ್ಲಿಂ ಸಮುದಾಯದಲ್ಲಿಯೂ ಒಂದು ಸ್ಥಿತ್ಯಂತರವಾಗಲಾರಂಭಿಸಿತ್ತು. ವ್ಯಕ್ತಿಗತವಾಗಿ ಸಂಪತ್ತನ್ನು ಗಳಿಸುವತ್ತ ನಿಷ್ಟೆಯಿಂದ ದುಡಿಯುವ ಮುಸ್ಲಿಂ ಸಮುದಾಯ, ಗಲ್ಫ್ ರಾಷ್ಟ್ರಗಳಲ್ಲಿ ತೆರೆಯಲಾರಂಭಿಸಿದ ಉದ್ಯೋಗ ಅವಕಾಶಗಳನ್ನು ಗಳಿಸಿಕೊಂಡು ಒಂದು ಹೊಸ ಮನಿಯಾರ್ಡರ್ ಇಕಾನಮಿಗೆ ಕಾರಣರಾದರು. ಈ ಕಾಲಘಟ್ಟವು ೭೦ರ ದಶಕದ ಮಧ್ಯಭಾಗ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಮುಸ್ಲಿಮರ ಜೀವನ ಮಟ್ಟ ಸುಧಾರಿಸಲಾರಂಭಿಸಿತು. ಹೊಸ ಬಂಡವಾಳ ಸಮುದಾಯದಲ್ಲಿ ಚಲಾವಣೆಯಾಗತೊಡಗಿತು. ವಿದ್ಯಾಭ್ಯಾಸ ಅವರಲ್ಲಿ ಹೊಸ ಹುರುಪನ್ನೂ ನೀಡಿತ್ತು.
ಆದರೆ ಮುಸ್ಲಿಮರಲ್ಲಾದ ಈ ಆರ್ಥಿಕ ಉನ್ನತಿಯಿಂದ ಕೊಂಕಣಿ ಮತ್ತು ಇತರ ಸಮುದಾಯದ ಚಿನ್ನದ ವ್ಯಾಪಾರಕ್ಕೆ ಉತ್ತೇಜನ ನೀಡಿತಲ್ಲದೇ ಮುಸ್ಲಿಮರ ವ್ಯಾಪಾರ ಚಟುವಟಿಕೆಗಳಲ್ಲಿ ಗಣನೀಯ ಬದಲಾವಣೆಯನ್ನು ತರಲಿಲ್ಲ. ಗಲ್ಫ್ ನಿಂದ ಮರಳಿದ ಎಷ್ಟು ಮಂದಿ ಮುಸ್ಲಿಮರು ವ್ಯಾಪಾರದಲ್ಲಿ ತೊಡಗಿದರು ಎನ್ನುವುದು ಅಧ್ಯಯನಕ್ಕೆ ಅವಕಾಶವಿರುವ ಅಂಶ.
ಇತ್ತ ಕಡೆಯಿಂದ ಒಂದೊಂದಾಗಿ ಭಂಡಸಾಲೆಗಳನ್ನು ಮಾರಿ ತಮ್ಮ ಉದ್ಯಮಶೀಲತೆಯನ್ನು ಕಾರ್ಪೋರೆಟ್ ಮತ್ತು ಇನ್ನಿತರ ವೃತ್ತಿಪರ (ವೈದ್ಯಕೀಯ ಮತ್ತು ಇಂಜಿನಿಯರಿಂಗ್) ರಂಗಗಳತ್ತ ದುಡಿಸತೊಡಗಿದ್ದ ಕೊಂಕಣಿ ಸಮುದಾಯದ ಈ ವ್ಯಾಪಾರದಲ್ಲಿ ಇಳಿಮುಖವಾದ ಉತ್ಸಾಹ ಸಹಜವಾಗಿ ಅನೇಕ ವ್ಯಾಪಾರ ಕ್ಷೇತ್ರಗಳಲ್ಲಿ ಗುಜರಾತಿ, ಮಾರ್ವಾಡಿ ಮುಂತಾದ ಉತ್ತರಭಾರತೀಯ ಸಮುದಾಯಗಳಿಗೂ, ಮುಸ್ಲಿಂ ಸಮುದಾಯಕ್ಕೂ ಉತ್ತುಂಗಕ್ಕೇರಲು ಎಡೆಮಾಡಿಕೊಟ್ಟಿತು.

ಕೊಂಕಣಿಗಳು ಮತ್ತು ಮುಸ್ಲಿಮರ ನಡುವೆ ವ್ಯಾವಹಾರಿಕ ಸಾಮರಸ್ಯ:
ಕೊಂಕಣಿ ವರ್ತಕರ ಹಡಗುಗಳಿಗೆ ಮುಸ್ಲಿಂ ನಾವಿಕರು ಇದ್ದ ಉಲ್ಲೇಖಗಳು ಎರಡು ಸಮುದಾಯಗಳ ನಡುವೆ ವ್ಯವಹಾರಿಕ ಸೌಹಾರ್ದವಿತ್ತು ಎನ್ನುವುದಕ್ಕೆ ಸಾಕ್ಷಿಯಾಗುತ್ತವೆ. ಈ ಉಲ್ಲೇಖಗಳನ್ನು ಪೋರ್ಚುಗೀಸರು ಸಮುದ್ರ ಪ್ರಯಾಣಕ್ಕೆ ಹಡಗುಗಳಿಗೆ ನೀಡುತ್ತಿದ್ದ ಕಾರ್ಟೇಝಸ್ ಎಂಬ ರಹದಾರಿಯ ದಾಖಲೆಗಳು ಸೂಚಿಸುತ್ತವೆ. ಇದಕ್ಕೆ ಪೂರಕವಾಗಿ ಇಂದಿಗೂ ಕೊಂಕಣಿಗಳ ಲಾರಿಗಳಿಗೆ ಮುಸ್ಲಿಮರು ಚಾಲಕರಾಗಿರುವುದು ಸರ್ವೇ ಸಾಮಾನ್ಯ.
೧೭೬೪ರಲ್ಲಿ ಹೈದರಾಲಿಯು ತುಳುನಾಡನ್ನು ಆಕ್ರಮಿಸಿ ವಶಪಡಿಸಿಕೊಂಡ ಬಳಿಕ ಮತ್ತು ಟಿಪ್ಪುವಿನ ಆಡಳಿತ ಕಾಲದಲ್ಲಿಯೂ ಕೆನರಾ ಸೊರಗಿತು ಎಂದು ಬ್ರಿಟಿಶ್ ದಾಖಲೆಗಳು ತಿಳಿಸುತ್ತದೆ. ಹೊಸ ತೆರಿಗೆಗಳು ಹುಟ್ಟಿಕೊಂಡವು, ಅಕ್ರಮಣಕಾರಿ ಸೈನಿಕ ಪಡೆಗಳ ದಬ್ಬಾಳಿಕೆಯಿಂದ ವ್ಯಾಪಾರವು ಕುಂಠಿತವಾಯಿತು ಎಂಬ ಉಲ್ಲೇಖಗಳಿವೆ. ಆದರೂ ೧೭೭೦ರ ಆಸುಪಾಸಿನಲ್ಲಿ ತಲ್ಲಿಶೇರಿಗೆ ಮಂಗಳೂರಿನಿಂದ ಕುಂಬಳೆದಾರಿಯಾಗಿ ಸಾಗಿದ ಹೈದರನ ಬೃಹತ್ ದಂಡಿನ ಸೈನಿಕರಿಗೆ ಊಟ ಮತ್ತು ವಸತಿಯ ಹೊಣೆಂiiನ್ನು ಕೊಂಕಣಿ ವ್ಯಾಪಾರಿಗಳಾದ ಕುಂಬಳೆ ನಾಯಕ್ ಕುಟುಂಬದವರು ವಹಿಸಿಕೊಂಡಿದ್ದನ್ನು ಕುಂಬಳೆನಾಯಕರ ಕುಟುಂಬದ ದಾಖಲೆಗಳು ತಿಳಿಸುತ್ತವೆ. ಈ ವಿವರವು ತುಳುನಾಡಿನಲ್ಲಿ ಮುಸ್ಲಿಂ ಆಡಳಿತದ ಕಾಲದಲ್ಲಿಯೂ ಕೊಂಕಣಿಗಳು ಮುಸ್ಲಿಂ ಸಮುದಾಯದೊಂದಿಗೆ ಸೌಹಾರ್ದ ರೀತಿಯಲ್ಲಿದ್ದರು ಎಂಬ ಒಂದು ಊಹೆಯನ್ನು ಒದಗಿಸುತ್ತದೆ.
ಟಿಪ್ಪು ಸುಲ್ತಾನನ ಹಣಕಾಸಿನ ವಹಿವಾಟುಗಳನ್ನು ನೋಡಿಕೊಳ್ಳುವ ವ್ಯಕ್ತಿ ರಾಗವೇಂದ್ರ ನಾಯಕ್ ಎಂಬ ಕೊಂಕಣಿಯಾಗಿದ್ದ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
ಕ್ರಿ.ಶ. ೧೭೭೪ರ ಸುಮಾರಿಗೆ ಕೊಂಕಣಿಗಳ ಹದಿನೆಂಟು ಪೇಟೆಗೆ ಸಲ್ಲುವ ದೇವಸ್ಥಾನವಾದ ಮಂಜೇಶ್ವರ ಶ್ರೀ ಅನಂತೇಶ್ವರ ದೇವರ ಭಂಡಾರಕ್ಕೆ ಕೊಡಿಯಾಲ ಪೇಟೆಯ ಹತ್ತು ಸಮಸ್ತರು ಹರವರು ಸ್ಥಳ ಪರಸ್ಥಳದವರು, ಮಹಾನಾಡು, ಗುಜ್ಜಾರು ಮಹಾಜನಂಗಳು ಸಕಲರು ಮುಂತಾಗಿ ಬರಶಿಕೊಟ್ಟ ಧರ್ಮಶಾಸನ ಪಟ್ಟೆಯಂತೆ ಕೊಡೆಯಾಲ ಪೇಟೆಯಲ್ಲಿ ವ್ಯವಹರಿಸಲಾಗುವ ವಿವಿಧ ದವಸಧಾನ್ಯ ಸಾಮಾಗ್ರಿಗಳ ನಿರ್ದಿಷ್ಟ ಪ್ರಮಾಣದ ಅನುಪಾತದಲ್ಲಿ ಸುಂಕವನ್ನು ಸಂಗ್ರಹಿಸಿ ದೇವರ ಅಮೃತಪಡಿ, ನಂದಾದೀಪ್ತಿ ಮೊದಲಾದ ಸೇವೆಯನ್ನು ಕೈಗೊಳ್ಳುವರೇ ಅನೇಕ ವ್ಯಾಪಾರಿಗಳ ಬಿಂನಹವನ್ನು ಈ ಪಟ್ಟೆಯಲ್ಲಿ ನಮೂದಿಸಲಾಗಿದ್ದು ಮಾಪಳೆ ಬರಹದಲ್ಲಿ ಮಾಪಳೆರ ಗುರ್ತ ಈ ಪಟ್ಟೆಯಲ್ಲಿ ಇರುವುದೆಂದು ಗಣಪತಿ ರಾವ್ ಐಗಳ್ ರವರು ಉಲ್ಲೇಖಿಸಿದ್ದಾರೆ. ಈ ಉಲ್ಲೇಖವು ಮಂಗಳೂರಿನ ಕೊಂಕಣಿ ವ್ಯಾಪಾರಿಗಳ ದೇವಕಾರ್ಯಕ್ಕೆ ಮುಸ್ಲಿಂ ವ್ಯಾಪಾರಿಗಳೂ ಬೆಂಬಲ ಸೂಚಿಸಿದ್ದರು ಎಂದು ತಿಳಿದುಬರುತ್ತದೆ. ತಾವು ವ್ಯವಹರಿಸುವ ವ್ಯಾಪಾರದಲ್ಲಿ ಒಂದು ಸಣ್ಣ ಪಾಲು ಪರರ ದೇವಕಾರ್ಯಕ್ಕೆ ವಿನಿಯೋಗವಾಗುವುದಕ್ಕೆ ಮುಸ್ಲಿಂ ವ್ಯಾಪಾರಿಗಳು ಯಾವುದೇ ಅಭ್ಯಂತರವನ್ನು ಸೂಚಿಸದಿರುವುದು ಕೊಂಕಣಿಗಳೊಂದಿಗೆ ಅವರಿಗಿದ್ದ ಸಾಮರಸ್ಯವನ್ನೂ ಸೂಚಿಸುತ್ತದೆ. ಆ ಹೊತ್ತಿನಲ್ಲಿ ಮಂಗಳೂರು ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು ಎಂದು ಗಮನಿಸಬೇಕು.
೨೦ನೇ ಶತಮಾನದ ಕಾಲಕ್ಕೆ ವ್ಯಾಪಾರ ಚಟುವಟಿಕೆಗಳ ಆಯಾಮ ಬದಲಾಗಿತ್ತು. ಕೊಂಕಣಿಗಳು ದಕ್ಷಿಣಕನ್ನಡದಾದ್ಯಂತ ಹರಡಿಕೊಂಡು ಅವರದೇ ಹಲವು ಪೇಟೆಗಳು ಉಗಮವಾಗಿ ಇನ್ನಷ್ಟು ಪ್ರಬಲರಾಗಿದ್ದರು. ಕೊಂಕಣಿ ಪೇಟೆಗಳಿಗೆ ಹೊಂದಿಕೊಂಡು ಮುಸ್ಲಿಂ ಪೇಟೆಗಳು ಬೆಳೆದವು. ಈ ಯುಗಳ-ವಸಾಹತು (ಟ್ವಿನ್ ಕಾಲನೀಸ್)ಗಳ ಪ್ಯಾಟರ್ನ್ ದಕ್ಷಿಣ ಕನ್ನಡದ ಹಲವು ಪೇಟೆಗಳಲ್ಲಿ ಗಮನಿಸಬಹುದು. ಕೊಂಕಣಿಗಳು ನೆಲೆನಿಂತು ಪೇಟೆ ಬೆಳೆಸಿದರೆ ಮುಸ್ಲಿಮರು ಅವರ ವ್ಯಾಪಾರಕ್ಕೆ ಒಂದು ಸಪೋರ್‍ಟ್ ಸಿಸ್ಟಮ್ ನಿರ್ಮಿಸಿದವರು. ಕೂಲಿಗಳು, ಸರಕು ಸಾಗಣೆ, ಕಾರ್ಮಿಕವರ್ಗ ಇತ್ಯಾದಿ. ಆದಕಾರಣ ಅನತಿದೂರದಲ್ಲಿ ಅವರದೇ ಕಾಲನಿ ಹುಟ್ಟಿಕೊಂಡಿತು. ತುಳುನಾಡಿನ ಇತರ ವರ್ಗಗಳ ಜನರು ಹೆಚ್ಚಾಗಿ ಕೃಷಿಕೆಲಸಗಳನ್ನೇ ನೆಚ್ಚಿಕೊಂಡಿದ್ದರಿಂದ ವ್ಯಾಪಾರಕ್ಕೆ ಸಂಬಂಧಿಸಿದ ಕಾರ್ಮಿಕ ಸಮುದಾಯದಲ್ಲಿ ಅವರ ಸಂಖ್ಯೆ ಕಡಿಮೆಯಿತ್ತು. ಈ ಟ್ವಿನ್ ಕಾಲನಿಗಳು ಕೊಂಕಣಿಗಳ ಮತ್ತು ಮುಸ್ಲಿಮರ ನಡುವಿನ ಪರಸ್ಪರ ವ್ಯಾವಹಾರಿಕ ಆವಲಂಬನೆಯನ್ನೂ ಸಾಮರಸ್ಯವನ್ನೂ ತೋರಿಸುತ್ತದೆ. ಈ ಅವಲಂಬನೆಯು ಅನೇಕ ಸನ್ನಿವೇಶಗಳಲ್ಲಿ ಭಿನಾಭಿಪ್ರಾಯಗಳನ್ನು ಬಗೆಹರಿಸುವ ಅಗತ್ಯವನ್ನು ಈ ಎರಡು ಸಮುದಾಯದವರಿಗೆ ಕಲ್ಪಿಸಿದೆ.
ಉದಾಹರಣೆಗೆ ವ್ಯಾಪಾರದ ಕಾರಣಗಳಿಂದ ಮುಸ್ಲಿಮರನ್ನು ದಮನಿಸಲು ಬಯಸುವುದಿದ್ದರೆ ದೇಶದ ವಿಭಜನೆಯ ಹೊತ್ತಿಗೆ ಕೊಂಕಣಿ ಸಮುದಾಯಕ್ಕೆ ಸುವರ್ಣ ಅವಕಾಶವಿತ್ತು. ಕೊಂಕಣಿಗಳು ಆ ಹೊತ್ತಿಗೆ ಆಧುನಿಕ ವಿದ್ಯೆಯಿಂದಲೂ, ವ್ಯಾಪಾರದ ಪ್ರಾಬಲ್ಯದಿಂದಲೂ ಮುಸ್ಲಿಮರಿಗಿಂತ ಉನ್ನತ ಸ್ತರದಲ್ಲಿದ್ದರು. ಮುಸ್ಲಿಂ ವ್ಯಾಪಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಕೊಂಕಣಿಗಳಿಗೆ ಪ್ರತಿಸ್ಪರ್ಧೆ ನೀಡುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ತುಳುನಾಡಿನಲ್ಲಿ ಅಂತಹ ಯಾವುದೇ ಗಹನ ಕೋಮು ದಂಗೆ ನಡೆದ ಉಲ್ಲೇಖವಿಲ್ಲ. ಆ ಸಂದರ್ಭದಲ್ಲಿ ಕೊಂಕಣಿ ಕಾಂಗ್ರೆಸಿಗರಿಗೆ ಮತ್ತು ಕೊಂಕಣಿ ವ್ಯಾಪಾರಿಗಳಿಗೆ ಸಮಾಜದ ಮೇಲಿದ್ದ ನಿಯಂತ್ರಣವೂ ಇದಕ್ಕೆ ಕಾರಣ. ಹೆಚ್ಚಿನ ಮುಸ್ಲಿಂ ಪೇಟೆಗಳು ಕೊಂಕಣಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದು ಎರಡೂ ಸಮುದಾಯದ ಹಿರಿಯರ ಐಕ್ಯಮತ್ಯಕ್ಕೆ ಕಾರಣವಾಗಿ ಶಾಂತಿ ಕದಡಲಿಲ್ಲ.
ತುಳುನಾಡಿನ ಮುಸ್ಲಿಮರ ಬಗ್ಗೆ ವಿಶೇಷ ಅಧ್ಯಯನ ನಡೆಸಿ ತುಳುನಾಡಿನ ಮುಸ್ಲಿಮರು ಎಂಬ ಗ್ರಂಥವನ್ನು ರಚಿಸಿದ ಡಾ. ವಹಾಬ್ ದೊಡ್ಡಮನೆ ಅವರು ಕೊಂಕಣಿಗಳ ಮತ್ತು ಮುಸ್ಲಿಮರ ನಡುವಿನ ಸಾಮರಸ್ಯವನ್ನು ಈ ರೀತಿ ಉಲ್ಲೇಖಿಸುತ್ತಾರೆ:
ಆ ಕಾಲದಲ್ಲಿ (೧೯೦೦-೧೯೧೦) ಮಂಗಳೂರಿನ ಸಾಂಪ್ರದಾಯಿಕ ಗೌಡ ಸಾರಸ್ವತರು ಆಡಳಿತದಲ್ಲಿದ್ದ ಕೆನರಾ ಹೈಸ್ಕೂಲಿನಲ್ಲಿ ಶೇಕ್ ಅಹಮ್ಮದ್ ಮತ್ತು ನೂರುದ್ದೀನ್ ಅಹಮದ್ ಎನ್ನುವ ಇಬ್ಬರು ಕ್ರೀಡಾ ಉಪಾಧ್ಯಾಯರುಗಳಿದ್ದರು. ಗೌಡ ಸಾರಸ್ವತರು ಮತ್ತು ಮುಸ್ಲಿಮರ ನಡುವೆ ಭಾವೈಕ್ಯತೆ ಇತ್ತು ಮತ್ತು ಯಾವುದೇ ಧಾರ್ಮಿಕ ಕ್ಲೇಶ ಇರಲಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ. ಕೆನರಾ ಹೈಸ್ಕೂಲಿನಲ್ಲಿ ಉರ್ದು ಕೂಡ ಒಂದು ಐಚ್ಛಿಕ ವಿಷಯವಾಗಿದ್ದು, ಒಬ್ಬ ಮುಸ್ಲಿಂ ಮುನ್ಶಿಯೊಬ್ಬರು ಶಾಲಾ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು. ಹೆಚ್ಚಿನ ಮುಸ್ಲಿಂ ಸಾಹುಕಾರರು ಅವಿದ್ಯಾವಂತರಾಗಿದ್ದು ಅವರ ಲೆಕ್ಕಪತ್ರಗಳ ವಹಿವಾಟನ್ನೂ ಗೌಡ ಸಾರಸ್ವತ ಗುಮಾಸ್ತರೇ ನಿರ್ವಹಿಸುತ್ತಿದ್ದರು ಎನ್ನುವುದು ಈಗ ಇತಿಹಾಸ"

ದಕ್ಷಿಣ ಕನ್ನಡದ ಯಾವುದೇ ಕೊಂಕಣಿ ರಖಂ ವ್ಯಾಪಾರಿಗೂ ಮುಸ್ಲಿಂ ಕಿರುವ್ಯಾಪಾರಿಗಳೇ ಹೆಚ್ಚು ಗಿರಾಕಿಗಳು. ಇದರ ಬಗ್ಗೆ ಸ್ಪಶ್ಟವಾದ ಅಂಕಿ ಅಂಶಗಳು ನನ್ನಲ್ಲಿಲ್ಲ ಆದರೂ ಮೇಲ್ನೋಟಕ್ಕೆ ನಲುವತ್ತು ಪ್ರತಿಶತಕ್ಕೂ ಹೆಚ್ಚು ಪಾಲು ಮುಸ್ಲಿಂ ಗಿರಾಕಿಗಳದ್ದಿರಬಹುದು. ಆದುದರಿಂದ ಕೊಂಕಣಿಗಳು ಸಂಘವನ್ನು ಮುಸ್ಲಿಂ ದಮನಕ್ಕೋಸ್ಕರ ಬಳಸಿದರೆ ನಷ್ಟವಾಗುವುದು ಕೊಂಕಣಿಗಳಿಗೇ. ಇದನ್ನು ಅರಿಯಲಾರದಷ್ಟು ಮುಗ್ಧರು ಕೊಂಕಣಿಗಳಲ್ಲ.
ಉಳಿದಂತೆ ಈ ವ್ಯಾವಹಾರಿಕ ಅವಲಂಬನೆಯು ಇವತ್ತಿನವರೆಗೂ ಮುಂದುವರೆದುಕೊಂಡು ಬಂದಿದೆ. ಕೊಂಕಣಿಗಳ ಬೀಡಿ ಉದ್ಯಮದ ಬ್ರಾಂಚ್ ಗಳನ್ನು ಮುಸ್ಲಿಮರೆ ನಡೆಸುತ್ತಿದ್ದರು, ಅದು ಇಂದಿಗೂ ಮುಂದುವರೆದಿದೆ. ಇದರ ಪರಿಣಾಮವಾಗಿ ಅನೇಕ ಮುಸ್ಲಿಮರು ತಮ್ಮದೆ ಬೀಡಿ ಬ್ರಾಂಡ್ ಗಳನ್ನು ಹೊರತಂದು ಯಶಸ್ಸು ಸಾಧಿಸಿದ್ದಾರೆ.

ಕ್ರಿಶ್ಚಿಯನ್ ಕ್ಯಥೋಲಿಕರು ಮತ್ತು ಕೊಂಕಣಿಗಳ ಸಂಬಂಧ:
ಮಂಗಳೂರಿನ ಕ್ಯಥೋಲಿಕರ ಬಗ್ಗೆ ಕೊಂಕಣಿಗಳಿಗೊಂದು ಸಾಫ್ಟ್ ಕಾರ್ನರ್ ಇದ್ದೇ ಇದೆ. ಈ ಎರಡೂ ಸಮುದಾಯಗಳು ಸಮಾನ ವಂಶವಾಹಿಗಳಿಂದ ಬಂದಿರುವ ಬಗ್ಗೆ ಯಾವುದೇ ಸಂದೇಹಗಳಿಲ್ಲ. ಎರಡೂ ಸಮುದಾಯಗಳ ಕೊಂಕಣಿ ಭಾಷೆಯ ಬೋಲಿಯಲ್ಲಿ ವ್ಯತ್ಯಾಸವಿದ್ದರೂ ಎರಡು ದಶಕಗಳ ಹಿಂದೆ ಹುಟ್ಟಿಕೊಂಡ ಕೊಂಕಣಿ ಭಾಷಾ ಚಳುವಳಿ ಈ ಎರಡೂ ಸಮುದಾಯದವರನ್ನು ಇನ್ನಷ್ಟು ಹತ್ತಿರಕ್ಕೆ ತಂದಿದೆ. ಕೆ.ಕೆ.ಪೈ, ದಾಮೋದರ ಪ್ರಭು, ರೊನಾಲ್ಡ್ ಕೊಲಾಸೋ, ಬಸ್ತಿವಾಮನ್ ಶೆಣೈ, ಎರಿಕ್ ಒಝಾರಿಯೋ, ಪೌಲ್ ಮೊರಾಸ್ ಮೊದಲಾದವರು ಕಟ್ಟಿದ ಈ ಇಡೀ ಚಳುವಳಿಯ ಒಂದು ಸಮಗ್ರ ಪ್ರತಿಫಲವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕಲಾಂಗಣ್ ಮತ್ತು ವಿಶ್ವಕೊಂಕಣಿಕೇಂದ್ರದಂತಹ ಅಂತರಾಷ್ಟ್ರೀಯಸ್ತರದ ಭಾಶಾ ಯೋಜನೆಗಳು ಮೂಡಿವೆ. ಲಿಪಿಯ ಬಗೆಗಿನ ವಿವಾದಗಳು ತಲೆದೋರಿದ್ದರೂ ಎರಡೂ ಕಡೆಯ ಮುತ್ಸದ್ದಿಗಳು ವೈಚಾರಿಕ ಎಚ್ಚರ ಸಾಧಿಸಿದ್ದರಿಂದ ಚಳುವಳಿಯ ಕೆಲಸ ನಿಂತಿಲ್ಲ. ಜೊತೆಗೆ ಈ ಬಗೆಗಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ಬಗೆಹರಿಸುವ ಪ್ರಯತ್ನಗಳು ಫಲಕಾರಿಯಾಗುತ್ತಿರುವುದು ಕೂಡ ಶ್ಲಾಘನೀಯ.

ಮತಾಂತರದ ಚರ್ಚೆಗಳಲ್ಲಿ ಕೊಂಕಣಿಗಳ ಹಿಂದೂ ಇಗೋ ಎಚ್ಚರವಾಗಿ ಅನೇಕ ವೇದಿಕೆಗಳಲ್ಲಿ ಬಿಸಿ ಚರ್ಚೆಗಳು ಉತ್ಪನ್ನವಾಗಿದ್ದರೂ ಮೂರ್ತಿಭಂಜನೆಯಂತಹ ವಿಕೃತ ಮನೋಭಾವವನ್ನು ಕೊಂಕಣಿಗಳು ಹೊಂದಿಲ್ಲ. ಚರ್ಚ್ ದಾಳಿಗೆ ಸಂಬಂಧಿಸಿ ಬಂಧಿತರಾದವರಲ್ಲಿ ಕೊಂಕಣಿಗಳು ಸೇರಿಲ್ಲ ಎನ್ನುವುದು ಗಮನಾರ್ಹ ಅಂಶವಾದರೂ ಸಂಘದ ಐಡಿಯಾಲಜಿಯ ಸ್ಥಾಪನೆ ಸಮಾಜದ ಇತರ ಸ್ತರಗಳಲ್ಲಿಯೂ ಕೈಗೂಡಿರುವುದರಿಂದ ಬದಲಾದ ಸನ್ನಿವೇಶಗಳಲ್ಲಿ ಈ ಸ್ಥಾಪನೆಯಿಂದ ಉಂಟಾದ ಪರಿಣಾಮಗಳ ನೈತಿಕ ಹೊಣೆಯನ್ನು ಕೊಂಕಣಿಗಳು ಹೊರಲು ಸಿದ್ಧರಿದ್ದಾರೆಯೇ ಎನ್ನುವುದೂ ಒಂದು ಪ್ರಶ್ನೆಯೇ.

ಸಂಘನಿಷ್ಟ ಕೊಂಕಣಿಗಳ ಪಾಪಪ್ರಜ್ಞೆ:
ಕೊಂಕಣಿಗಳ ನಿಷ್ಟಾಂತರದಿಂದ ಸಂಘಕ್ಕೂ ಭಾಜಪಾಕ್ಕೂ ಲಾಭವಾಯಿತಾದರೂ ಕೊಂಕಣಿ ಸಮುದಾಯಕ್ಕೆ ಇದರಿಂದೇನೂ ಲಾಭವಾಗಲಿಲ್ಲ. ಮತ್ತು ಲಾಭ ಇಜ್ಜಾಂದಿನ ಕೊಂಕಣೆ.. ಮುಂತಾದ ತುಳುಗಾದೆಮಾತಿಗೆ ವ್ಯತಿರಿಕ್ತವಾಗಿ ಇಲ್ಲಿ ಭಾವನಾತ್ಮಕ ಆಸರೆಯನ್ನು ಬಿಟ್ಟು ಬೇರಾವ ಲಾಭವನ್ನೂ ಕೊಂಕಣಿ ಸಮುದಾಯ ಅಪೇಕ್ಷಿಸಿಲ್ಲ ಎಂಬುದೂ ಸತ್ಯ.
ಹೆಚ್ಚಿನ ಕೊಂಕಣಿಗಳು ಭಾಜಪಾಗೆ ಮತ ಹಾಕುವುದು ಮತ್ತು ಲೋಕಲ್ ಕಟ್ಟೆ ಹರಟೆಗಳಲ್ಲಿ ಭಾಜಪಾ ಪರವಾಗಿ ವಾದಿಸಿ ತೀರ್ಪು ನೀಡುವಷ್ಟಕ್ಕೆ ತಮ್ಮ ಸಂಘಪ್ರೇಮವನ್ನು ಸೀಮಿತಗೊಳಿಸಿದರೆ ಅನೇಕ ಕೊಂಕಣಿಗಳು ಸಂಘದೊಂದಿಗೆ ದಿನನಿತ್ಯದ ಸಂಪರ್ಕ ಇರಿಸಿಕೊಂಡವರು. ಸಂಘದ ಮನೆಯಾಗಿ ನಡೆದುಕೊಂಡವರು. ಹೆಚ್ಚಿನ ಕೊಂಕಣಿಗಳು ತಮ್ಮ ಚರ್ಚೆ ಮುಗಿದ ಬಳಿಕ ದಿಡ್ಡಿಬಾಗಿಲು ಮುಚ್ಚಿ ಗೂಡಿನೊಳಗೆ ಸೇರಿಕೊಂಡರೆ ಇವರು ಶಿಸ್ತಿನಿಂದ ಸಂಘದ ಏಳು ಬೀಳುಗಳಲ್ಲೂ ಸ್ಥಿರವಾಗಿ ನಿಂತವರು. ಇವರ ಮಾತು, ಚರ್ಯೆಗಳು ಉಳಿದವರಿಗಿಂತ ಹೆಚ್ಚು ತೂಕದ್ದು. ಇವರನ್ನು ಸಂಘನಿಷ್ಟ ಕೊಂಕಣಿಗಳು ಎಂದು ಮುಂದಕ್ಕೆ ಉಲ್ಲೇಖಿಸಬಯಸುತ್ತೇನೆ.

ಕೊಂಕಣಿಗಳು ತಮ್ಮೊಳಗಿನ ಒಗ್ಗಟ್ಟಿಗಾಗಿ ಇತರ ಸಮುದಾಯದವರಿಂದ ಉಲ್ಲೇಖಿಸಲ್ಪಡುತ್ತಾರೆ. ಇದಕ್ಕೆ ಪೂರಕವಾಗಿ ಕೊಂಕಣಿ ಸಮುದಾಯವು ಇಂದಿಗೂ ಒಂದು ಗೇಟೆಡ್ ಕಮ್ಯೂನಿಟಿಯಾಗಿಯೇ ಉಳಿದುಕೊಂಡಿದೆ. ತನ್ನ ಸಮುದಾಯದ ಒಳಗಿನ ಆರ್ಥಿಕ ಅವಶ್ಯಕತೆಗಳನ್ನು ಸ್ವಾವಲಂಬಿಯಾಗಿ ಪೊರೈಸಿಕೊಳ್ಳುತ್ತಾ ತನ್ನ ಧಾರ್ಮಿಕ ಚಟುವಟಿಕೆಗಳನ್ನು ವೈಭವ ಮತ್ತು ವಿಜ್ರಂಬಣೆಗಳಿಂದ ನಡೆಸಿಕೊಂಡು ಬಂದಿದೆ. ಕೊಂಕಣಿಗಳ ದೇವಸ್ಥಾನಗಳು ಇತರ ಸಮುದಾಯಗಳ ದೇವಸ್ಥಾನಗಳಂತೆಯೇ ಜಾತಿವರ್ಗ ಆಧಾರಿತ ನಿರ್ಬಂಧವನ್ನು ಮಾಡದೇ ನಿರ್ಲಿಪ್ತವಾಗಿದ್ದುಕೊಂಡು ಬಂದರೂ ಉಳಿದ ಸಮುದಾಯಗಳು ತೆರೆಯುವಂತೆ ತನ್ನ ಚಟುವಟಿಕೆಗಳಲ್ಲಿ ಇತರ ಸಮುದಾಯಗಳನ್ನು ಸೇರಿಸಿಕೊಂಡಿಲ್ಲ. ಉದಾಹರಣೆಗೆ ಇತರ ಸಮುದಾಯಗಳ ದೇವಸ್ಥಾನಗಳು ಬ್ರಹ್ಮಕಲಶೊತ್ಸವದಂತಹ ಬ್ರಹತ್ ಕಾರ್ಯಗಳಲ್ಲಿ ಆರ್ಥಿಕ ಉಪಯುಕ್ತತೆಯ ದೃಷ್ಟಿಯಿಂದಾದರೂ ಸರಿಯೇ, ಒಂದು ಸ್ವಾಗತ ಸಮಿತಿ, ಕಾರ್ಯಕಾರಿ ಸಮಿತಿ ಮುಂತಾದವುಗಳನ್ನು ರಚಿಸಿ ಇತರ ಸಮುದಾಯದ ಯಾ ಒಟ್ಟೂ ಸಮಾಜದ ಇತರ ಗಣ್ಯರನ್ನು ಆಹ್ವಾನಿಸಿ ಸಮಿತಿಗಳಲ್ಲಿ ಪದಾಧಿಕಾರವನ್ನು ಹಂಚುವುದು ರೂಢಿಯಲ್ಲಿದೆ. ಆದರೆ ಇದುವರೆಗೆ ಕೊಂಕಣಿ ಸಮುದಾಯದ ದೇವಸ್ಥಾನಗಳು ಹಮ್ಮಿಕೊಂಡ ಯಾವ ಪ್ರಮಾಣದ ಕಾರ್ಯಕ್ರಮಗಳಲ್ಲೂ ಇತರ ಸಮುದಾಯದವರನ್ನು ಸೇರಿಸಿಕೊಂಡಿಲ್ಲ.

ಈ ಅಂಶವು ಸಂಘದ ನಿಷ್ಟಾವಂತ ಕೊಂಕಣಿಗಳಿಗೆ ಅಸಮಾಧಾನವನ್ನು ಉಂಟುಮಾಡುತ್ತದೆ. ಕೊಂಕಣಿ ಸಮುದಾಯಕ್ಕೆ ಸೀಮಿತವಾದ ಚಟುವಟಿಕೆಗಳಲ್ಲಿ ಇಂತಹ ಸಂಘನಿಷ್ಟ ಕೊಂಕಣಿಗಳು ಭಾಗವಹಿಸದೇ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಿದೆ. ಸಮಗ್ರ ಹಿಂದೂ ಸಮಾಜಕ್ಕೊಸ್ಕರ ಏನನ್ನಾದರೂ ಮಾಡುವುದಿದ್ದಲ್ಲಿ ಮಾತ್ರ ತಮ್ಮ ಬಳಿಗೆ ಬನ್ನಿ ಎಂಬಂತಹ ಮಾತುಗಳಿಂದ ಜಾತಿ ರಹಿತ ಹಿಂದೂ ಸಮಾಜದ ಏಕೀಕರಣದಂತಹ ಸಂಘೋದ್ದೇಶವನ್ನು ಅವರು ಮುಂದಕ್ಕೊಯ್ಯುತ್ತಾರೆ. ಜಿಲ್ಲೆಯಾದ್ಯಂತ ಹರಡಿರುವ ತಮ್ಮ ದೇವಸ್ಥಾನಗಳಿಂದ ಕೊಂಕಣಿಗಳ ಧಾರ್ಮಿಕ ಅಗತ್ಯಗಳು ಪೂರೈಸಿದರೂ ಸಮುದಾಯದ ಇನ್ನಿತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಗತ್ಯವಾದ ಸಾಮಾಜಿಕ ಒಗ್ಗಟ್ಟು ಕೊಂಕಣಿಗಳಲ್ಲಿ ಬೆಳೆಯಲು ಇದೇ ವಿಚಾರಧಾರೆ ತೊಡಕಾಯಿತು. ಸಂಘನಿಷ್ಟ ಕೊಂಕಣಿಗಳು ಜಿ.ಎಸ್.ಬಿ. ಸಮಾಜ ಸೇವಾ ಸಮಿತಿಗಳಂತಹ ಪ್ರಯತ್ನಗಳು ನಡೆದಾಗ ಅವುಗಳನ್ನು ಪ್ರೋತ್ಸಾಹಿಸದೇ ತಮ್ಮ ಅಸಮ್ಮತಿಯನ್ನು ಸೂಚಿಸಿದರು.
ಕೊಂಕಣಿ ಸಮುದಾಯದ ಉತ್ತಮ ಸಂಘಟಕರು ಸಂಘನಿಷ್ಟರಾದುದರಿಂದ ಸಮುದಾಯದ ಸ್ವಂತದ ಸಾಮಾಜಿಕ ಕೆಲಸಕ್ಕೆ ಸಂಘಟಕರ ಕೊರತೆ ಎದ್ದು ಕಾಣುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಇದರಿಂದ ನಿರ್ಬಾಧಿತವಾದರೂ ಸಾಮಾಜಿಕ ಸಂಘಟನೆಗೆ ಹೆಚ್ಚು ಉತ್ಸಾಹ ಕಂಡು ಬರುತ್ತಿಲ್ಲ. ಸಮುದಾಯ ಒಂದು ರೀತಿಯಲ್ಲಿ ನಿಂತ ನೀರಾದಂತೆ ತೋರುತ್ತದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಯಾವ ಕಾರ್ಯಕ್ರಮಗಳಿಗೂ ತೀವ್ರ ನಿರ್ಲಕ್ಷವನ್ನು ಸಮುದಾಯ ತೋರುತ್ತಿದೆ.

ಬಹುಶ ಈ ಮನೋಭಾವವು ಸಂಘದ ಸಂಪರ್ಕ ಈ ನಿಷ್ಟರಲ್ಲಿ ಉಂಟು ಮಾಡಿದ ಮೇಲ್ವರ್ಗಕ್ಕೆ ಫಲಿತವಾದ ಪಾಪಪ್ರಜ್ಞೆಯ ಇನ್ನೊಂದು ರೂಪ ಎಂದು ನನಗೆ ಅನಿಸುತ್ತಿದ್ದೆ. ಸಂಘದ ಉಳಿದ ಮೇಲ್ವರ್ಗದ ಪ್ರಮುಖರು ತುಳುನಾಡಿನ ಪಾರಂಪರಿಕ ಸಮಾಜ ವ್ಯವಸ್ಥೆಯಲ್ಲಿ ಕೊಂಕಣಿಗಳಂತೆ ಹೊರಗಿನವರಲ್ಲ. ಇತರ ಜಾತಿಯವರೊಡನೆ ಸಾಮಾಜಿಕ, ಧಾರ್ಮಿಕ, ಮತ್ತು ವ್ಯಾವಹಾರಿಕ ಸಂವಹನಗಳೂ ಈ ಮೇಲ್ವರ್ಗದವರಿಗೆ ಸಹಜ ಸಾಧ್ಯವಾಗುತ್ತದೆ. ಈ ಕಾರಣಗಳಿಂದ ಬ್ರಾಹ್ಮಣರು, ಮತ್ತು ಇತರ ಮೇಲ್ವರ್ಗದವರಂತೆ ಕೊಂಕಣಿಗಳು ಸಂಘದೊಳಗಿನ ನಾಯಕತ್ವಗಳಿಗೆ ಸ್ವಾಭಾವಿಕ ಆಯ್ಕೆ ಆಗಲು ತೊಡಕಾಯಿತು.

ಜೊತೆಗೆ ಭಾಜಪಾದೊಳಗೂ ಇರುವ ಜಾತಿ ರಾಜಕಾರಣದ ಲೆಕ್ಕಾಚಾರಗಳು ಎಂದಿಗೂ ಕೊಂಕಣಿ ಅಭ್ಯರ್ಥಿಗಳಿಗೊಂದು ಸ್ವಾಭಾವಿಕ ಸ್ಥಾನವನ್ನು ನಿರ್ಮಾಣ ಮಾಡಲೇ ಇಲ್ಲ. ಕೊಂಕಣಿಗಳಿಗಿಂತ ಕಡಿಮೆ ಸಂಖ್ಯೆ ಇರುವ ಕೊಂಕಣೇತರ ಸಮುದಾಯದ ಅಭ್ಯರ್ಥಿ ಸ್ಪರ್ಧಾಳುವಾಗಿ ಆರಿಸಿಬಂದು ಚುನಾವಣೆಯನ್ನು ಗೆದ್ದು ಬರುವ ಸಾಧ್ಯತೆಯಿದ್ದರೂ ಆ ಸ್ಥಾನದಲ್ಲಿ ಕೊಂಕಣಿಯೊಬ್ಬ ಸೋಲುವ ಸಾಧ್ಯತೆಗಳು ಹೆಚ್ಚು ಧ್ವನಿಸುತ್ತದೆ. ಅದಕ್ಕೆ ಕೊಂಕಣಿಗಳು ಪೋಷಿಸಿಕೊಂಡು ಬಂದ ಗೇಟೆಡ್ ಮನೋಭಾವ ಕಾರಣ ಎನ್ನುವ ಸಾರ್ವಕಾಲಿಕ ಸತ್ಯವನ್ನು ಸಂಘನಿಷ್ಟ ಕೊಂಕಣಿಗಳು ಒಪ್ಪಿಕೊಳ್ಳಬಹುದು. ಸಂಘದ ಚಟುವಟಿಕೆಗಳಲ್ಲಿ ತನು ಮನ ಧನಗಳಿಂದ ಪಲಾಪೇಕ್ಷೆಯಿಲ್ಲದೇ ತೊಡಗಿಸಿಕೊಂಡು ಈ ಪಾಪಪ್ರಜ್ಞೆಯನ್ನು ನಿವಾರಿಸಿಕೊಳ್ಳುವ ಅವಕಾಶವನ್ನು ಸಂಘವು ಕೊಂಕಣಿಗಳಿಗೆ ನೀಡಿದೆ.

ಇತರ ಎಲ್ಲ ಸಮುದಾಯಗಳು ತಮ್ಮ ಸಮುದಾಯದ ಅಭ್ಯರ್ಥಿಪದದಿಂದ ತೊಡಗಿ ಮಂತ್ರಿ ಪದವಿಯ ತನಕ ಹಠ ಹಿಡಿದು ಪಡೆದುಕೊಳ್ಳುತ್ತಿರುವಾಗ ಕೊಂಕಣಿ ಸಮುದಾಯಕ್ಕೆ ಸೇರಿದ ಭಾಜಪಾ ಶಾಸಕನ ಸ್ವಂತ ಪದನಿರ್ಮೋಹದ ಹೊರತಾಗಿಯೂ ಸಚಿವ ಪದವಿಗೆ ಸಲ್ಲಿಸಿದ ಸಮುದಾಯದ ಬೇಡಿಕೆಯನ್ನು ಪಿಸುಮಾತಿನ ಗದರಿಕೆಗಳಿಂದ ತಣ್ಣೀರೆರಚಿದ್ದ ಸಂಘ, ಕೊಂಕಣಿ ಸಂಘನಿಷ್ಟೆಯನ್ನು ಟೇಕನ್ ಫಾರ್ ಗ್ರಾಂಟೆಡ್ ಎಂದು ಪರಿಗಣಿಸಿದೆ ಎನ್ನುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ಕೊಂಕಣಿ ಸಮುದಾಯವನ್ನು ಗುಡ್ ಬೊಯ್ ಪದವಿ ನೀಡಿ ನೀವು ಕೂಡ ಹಠ ಹಿಡಿದರೆ ನಿಮಗೂ ಉಳಿದವರಿಗೂ ಏನು ವ್ಯತ್ಯಾಸ ಎಂಬ ದಿವ್ಯ ಸತ್ಯವನ್ನು ಸಂಘ ಉಪದೇಶಿಸಿ ಕೊಂಕಣಿ ಕಾರ್ಯಕರ್ತರನ್ನು ಸಂತೈಸಿದ್ದು ಈಗ ಸಮುದಾಯಕ್ಕೆ ಅರ್ಥವಾಗಿದೆ. ಕೊಂಕಣಿಗಳ ಓಟಿನಿಂದಷ್ಟೆ ಒಬ್ಬ ಅಭ್ಯರ್ಥಿಯು ಗೆಲ್ಲಲು ಸಾಧ್ಯವಿಲ್ಲದಿದ್ದರೂ ಕೊಂಕಣಿಗಳ ಓಟಿಲ್ಲದೆಯೂ ಅದು ಕಷ್ಟ ಸಾಧ್ಯ ಎಂಬುದನ್ನು ಭಾಜಪಾದ ಚುಕ್ಕಾಣಿ ಹಿಡಿದಿರುವ ಸಂಘದ ಮುತ್ಸದ್ದಿಗಳಿಗೆ ಮನವರಿಕೆ ಮಾಡಿಕೊಡುವ ಛಾತಿಯೂ ಕೊಂಕಣಿಗಳಲ್ಲಿ ಇದೆ ಎಂಬುದರ ಬಗ್ಗೆ ನನಗೆ ಸಂಶಯವಿದೆ.

ಸೈದ್ಧಾಂತಿಕವಾಗಿ ಭಾಜಪಾ ಕೊಂಕಣಿ ಸಮುದಾಯ ಬಯಸುತ್ತಿರುವ ಆಶೋತ್ತರಗಳನ್ನು ಉಳಿಸಿಕೊಂಡಿದೆಯೇ? ಎನ್ನುವುದು ಒಂದು ಪ್ರಶ್ನೆ. ಗಣಿವೈಭವ ಸಾಮ್ರಾಜ್ಯವು ಉತ್ತರ ಕರ್ನಾಟಕವನ್ನು ಕುಲಗೆಡಿಸಿಕೊಂಡಿರುವಾಗ ದಕ್ಷಿಣ ಕನ್ನಡದಲ್ಲಿ ತಣ್ಣಗೆ ಕುಳಿತು ಸಂಘದ ಮನಿಬ್ಯಾಗ್ ಆಗಿರುವ ಮಾತ್ರಕ್ಕೆ ನಡೆಯುತ್ತಿರುವ ಸಮಗ್ರ ಆಗುಹೋಗುಗಳಿಗೆ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾದ ಇಂದಿನ ಪರಿಸ್ಥಿತಿಯಲ್ಲಿ ಕೊಂಕಣಿ ಸಮುದಾಯ ತನ್ನ ಸಂಘನಿಷ್ಟೆಯನ್ನು ಪುನರ್ ವಿಮರ್ಶಿಸಿಕೊಳ್ಳಬೇಕು.

ಉಪಸಂಹಾರ:
ಈ ಮೇಲಿನ ಎಲ್ಲ ಆಧಾರಪೂರ್ವಕ ವಿವರಣೆಗಳನ್ನು ಆಧಾರವಾಗಿಟ್ಟುಕೊಂಡು ಈ ಇಡೀ ಪ್ರಬಂಧವು ಶ್ರುತಪಡಿಸುವ ಅಂಶಗಳನ್ನು ಕೆಳಗೆ ನೀಡುತ್ತಿದ್ದೇನೆ.
೧. ತುಳುನಾಡಿನಲ್ಲಿ ೭ನೇ ಶತಮಾನದಿಂದಲೇ ಮುಸ್ಲಿಮರು ವ್ಯಾಪಾರದಲ್ಲಿ ಪ್ರಬಲರಾಗಿದ್ದುದಕ್ಕೆ ಇತಿಹಾಸ ಪುರಾವೆ ನೀಡುತ್ತಿದೆ. ಆದುದರಿಂದ ೨೦ನೇ ಶತಮಾನದ ಉತ್ತರಾರ್ಧದಲ್ಲಿ ಮುಸ್ಲಿಮರು ವ್ಯಾಪಾರದಲ್ಲಿ ಪ್ರಬಲರಾಗತೊಡಗಿದರು ಎಂದು ಊಹಿಸುವುದು ಅಸಮಂಜಸ.
೨. ತುಳುನಾಡಿನಲ್ಲಿ ಕೊಂಕಣಿಗಳು ನೆಲೆಯೂರುವ ಮೊದಲೇ ಹಿಂದುಗಳ ಮತ್ತು ಮುಸ್ಲಿಮರ ನಡುವೆ ಗಹನತರದ ಗಲಭೆಗಳು ನಡೆದಿರುವುದನ್ನು ಇತಿಹಾಸ ಉಲ್ಲೇಖಿಸುತ್ತದೆ. ತುಳುನಾಡಿನಲ್ಲಿ ಮುಸ್ಲಿಮರ ಬಗೆಗೊಂದು ಅಸಹನೆ ಬಹಳ ಹಿಂದಿನಿಂದಲೂ ಇತ್ತು ಎನ್ನುವುದನ್ನು ಈ ಉಲ್ಲೇಖಗಳು ಸೂಚಿಸುತ್ತವೆ. ಆದುದರಿಂದ ಕೊಂಕಣಿ ಮತ್ತು ಮುಸ್ಲಿಂ ವ್ಯಾಪಾರಿಗಳ ನಡುವಿನ ಸ್ಪರ್ಧೆಯು ಕೋಮುದ್ವೇಶದ ಅಗತ್ಯವನ್ನು ಹುಟ್ಟುಹಾಕಿತು ಎಂದು ಊಹಿಸುವುದು ಕೂಡ ಅಸiಂಜಸವೇ.
೩. ಕೊಂಕಣಿ ಮತ್ತು ಮುಸ್ಲಿಮ್ ಈ ಎರಡೂ ಸಮುದಾಯಗಳಲ್ಲಿ ಒಂದು ವ್ಯಾವಹಾರಿಕವಾದ ಸಂಬಂಧವಿದೆ. ಇದು ಎರಡೂ ಸಮುದಾಯಗಳು ಒಂದು ಅವಿನಾಭಾವ ಸಂಬಂಧವನ್ನಿರಿಸಿಕೊಂಡಿರುವುದನ್ನು ಸೂಚಿಸುತ್ತವೆ.
೪. ಕೊಂಕಣಿಗಳು ಸಂಘದತ್ತ ನಿಷ್ಟಾಂತರವಾದದ್ದು ತುರ್ತುಪರಿಸ್ಥಿತಿಯ ಆಸುಪಾಸಿನ ಸಾಮಾಜಿಕ, ರಾಜಕೀಯ ಮತ್ತು ಭಾವನಾತ್ಮಕ ಕಾರಣಗಳಿಂದಲ್ಲದೇ ಮುಸ್ಲಿಂ ವ್ಯಾಪಾರಿಗಳ ದಮನ ವೆನ್ನುವ ವ್ಯಾಪಾರಿ ಕಾರಣದಿಂದಲ್ಲ. ಹಿಂದೂ ಧರ್ಮವೆನ್ನುವ ಇಗೋ ಮತ್ತು ದೇಶ ಪ್ರೇಮದ ಉನ್ಮಾದ ಇವೆರಡನ್ನೂ ಬಿಟ್ಟು ವ್ಯಾಪಾರಿ ಕಾರಣಗಳಿಂದ ಕೊಂಕಣಿಗಳನ್ನು ನಿಯಂತ್ರಿಸಲು ಯಾರಾದರೂ ಬಯಸಿದಲ್ಲಿ ಅದಕ್ಕೆ ಒಳಗಾಗದೆ ತಪ್ಪಿಸಿಕೊಳ್ಳುವಷ್ಟು ಚಾಣಾಕ್ಷತನ ಕೊಂಕಣಿಗಳ ಬಳಿ ಇದೆ. ಆದುದರಿಂದ ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಕೊಂಕಣಿ ವ್ಯಾಪಾರಿಗಳನ್ನು ಸಂಘವು ಎತ್ತಿ ಕಟ್ಟಿತು ಎಂಬಂತಹ ಅಭಿಪ್ರಾಯವೂ ಅಸಮಂಜಸ.
೫. ಸ್ವತಹ ಕೊಂಕಣಿ ವ್ಯಾಪಾರಿಗಳೇ ಮುಸ್ಲಿಂ ವ್ಯಾಪಾರಿಗಳ ದಮನಕ್ಕೋಸ್ಕರ ಸಂಘವನ್ನು ದಕ್ಷಿಣ ಕನ್ನಡದಲ್ಲಿ ಕಟ್ಟಿದರು ಎನ್ನುವುದು ಕೂಡ ಅಸಮಂಜಸವೇ. ಮುಸ್ಲಿಂ ವ್ಯಾಪಾರಿಗಳ ಶಕ್ತಿ, ಸಾಮರ್ಥ್ಯ, ರಿಸ್ಕ್ ತೆಗೆದುಕೊಳ್ಳುವ ಛಾತಿ, ಯಾವ ಕೆಲಸಕ್ಕೂ ಸಿದ್ಧರಾಗಿರುವ ಮನೋಭಾವ, ಕಸುಬುಗಾರಿಕೆ ಇವುಗಳ ಬಗ್ಗೆ ಕೊಂಕಣಿ ವ್ಯಾಪಾರಿಗಳಿಗೆ ಮೆಚ್ಚುಗೆ ಇದೆ. ತಮ್ಮ ವ್ಯಾಪಾರದಲ್ಲಿ ಮುಸ್ಲಿಂ ಗ್ರಾಹಕರ ಗಣನೀಯ ಪಾಲನ್ನು ಗಮನಿಸಿದಾಗ ಅಂತಹ ಯಾವ ಪ್ರಯತ್ನವೂ ತಮಗೆ ಮಾರಕವಾದೀತು ಎಂಬ ಸರಳ ಸತ್ಯದ ಅರಿವು ಕೊಂಕಣಿಗಳಿಗಿದೆ. ಅಂಗಡಿ ವ್ಯಾಪಾರದಲ್ಲಿ ಉತ್ಸಾಹವನ್ನೂ ಕೊಂಕಣಿಗಳು ಕಳೆದುಕೊಂಡು ಕಾರ್ಪೋರೇಟ್ ಜಗತ್ತಿನತ್ತ ತಿರುಗಿ ದಶಕಗಳೇ ಕಳೆದಿವೆ. ಜೊತೆಗೆ ಅಂತಹ ದಮನದ ಉದ್ದೇಶವಿರುತ್ತಿದ್ದರೆ ಕೊಂಕಣಿ ಸಮುದಾಯದ ಸದಸ್ಯರು ಮುಸ್ಲಿಮರಿಗೆ ಭಂಡಸಾಲೆಗಳನ್ನು ಮಾರಿದ ಸನ್ನಿವೇಶಗಳು ನಿರ್ಮಾಣವಾಗುತ್ತಿರಲಿಲ್ಲ.
೬. ಕೊಂಕಣಿಗಳು ಸಂಘನಿಷ್ಟರಾದುದರಿಂದ ಕೊಂಕಣಿ ಸಮುದಾಯಕ್ಕೆ ಯಾವ ತರದ ಲಾಭವೂ ಆಗಲಿಲ್ಲ. ಬದಲಾಗಿ ಕೊಂಕಣಿ ಸಮುದಾಯದ ಒಳಗಿನ ಸಾಮಾಜಿಕ ಒಗ್ಗಟ್ಟು ಬೆಳೆಯಲು ಸಂಘದ ವಿಚಾರಧಾರೆಯು ತೊಡಕಾಯಿತು.

ಒಟ್ಟಿನಲ್ಲಿ ಕೊಂಕಣಿಗಳು ವ್ಯಾಪಾರಿ ಲಾಭಕ್ಕೋಸ್ಕರ ಕೋಮು ದ್ವೇಷವನ್ನು ಹುಟ್ಟು ಹಾಕಿದರು ಎನ್ನುವುದಕ್ಕಿಂತ ಸಂಘ ಪ್ರೇರಿತ ಹಿಂದೂ ಮೂಲಭೂತ ಸಿದ್ಧಾಂತದ ಉಪಉತ್ಪನ್ನವಾಗಿ ಹೊರಹೊಮ್ಮಿದ ಕೋಮು ದ್ವೇಷದಿಂದ ಕೊಂಕಣಿಗಳ ಮತ್ತು ಮುಸ್ಲಿಮರ ನಡುವಿನ ವ್ಯಾಪಾರಿ ಸಂಬಂಧವು ಮೊದಲಿನ ವಿಶ್ವಾಸವನ್ನು ಕಳೆದುಕೊಂಡು ಅಪನಂಬಿಕೆ ಸುತ್ತಿಕೊಂಡಿತು ಎನ್ನುವುದು ಸೂಕ್ತ. ಈ ಎಲ್ಲಾ ಕೋಮುಗಲಭೆಗಳ ಕಾರಣದಿಂದ ಸಂಭವಿಸುವ ನಷ್ಟವು ವ್ಯಾಪಾರಿಗಳದ್ದೇ ಹೆಚ್ಚು ಆಗಿರುವ ಕಾರಣದಿಂದ ಕೊಂಕಣಿ ವ್ಯಾಪಾರಿಗಳನ್ನು ಆರೋಪಿಯನ್ನಾಗಿ ನೋಡದೇ ಸಂತ್ರಸ್ತ ಎಂಬುದಾಗಿಯೇ ಗ್ರಹಿಸಿಕೊಳ್ಳಬೇಕಾಗುತ್ತದೆ.

ವಿಶ್ವಸ್ತರದಲ್ಲಿ ಆಕ್ರಮಿಸಿಕೊಳ್ಳುತ್ತಿರುವ ಭಯೋತ್ಪಾದನೆ ಎಂಬ ಗುಮ್ಮವನ್ನು ಸ್ಥಳೀಯ ಮುಸ್ಲಿಮರ ವಿಶ್ವಾಸವನ್ನು ಗಳಿಸಿಕೊಳ್ಳದೇ ಎದುರಿಸುವುದು ಅಸಾಧ್ಯ. ಸಂಸ್ಕೃತಿ ಉಳಿಸುವ ನೆವದಲ್ಲಿ ಅಸಹನೆಯ ಆಕ್ರಮಣಗಳು, ಪ್ರಚೋದನಾತ್ಮಕ ಪಿಸುಗುಟ್ಟುವಿಕೆಗಳು, ಆಧಾರ ರಹಿತ ಹೇಟ್ ಈಮೇಲ್ಗಳು ಇವೆಲ್ಲ ಈ ಸಮಾಜವನ್ನು ಇನ್ನಷ್ಟು ಶಿಥಿಲಗೊಳಿಸುತ್ತದೆ. ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ಸಾಧಿಸಲು ಮುಸ್ಲಿಮರೊಂದಿಗೆ ಹೆಚ್ಚಿನ ಸಂಪರ್ಕವಿರುವ ಕೊಂಕಣಿಗಳೇ ಮುಂದಾಗಬೇಕು.
ಆಕರಗಳು :
1. M.N. Pearson: Banyas and Brahmins- their role in the Portuguese Indian Economy: Coastal Western India: Page: 93-111
2. B.S.Shastry: Goa-Kanara Portuguese Relations 1498 – 1763: Various Ref.
3. K.V.Ramesh: Tulunadu Jaina Art and Architecture: Encyclopedia of Jainism: Page: 6819
4. ಡಾ. ವಹಾಬ್ ದೊಡ್ಡಮನೆ: ತುಳುನಾಡಿನ ಮುಸ್ಲಿಮರು
5. Ibn Battuta/HAR Gibb: Selections from the travels of Ibn Battuta: Page 233
6. South Indian Inscritpions: Vol VII: No. 182
7. Karnataka Inscriptions: Vol I: 48
8. Francis H. Buchanan: A Journey fro Madras through the countries of Mysore, Canara and Malabar: Vol II
9. ಗಣಪತಿರಾವ್ ಐಗಳ್: ಶ್ರೀ ಮದನಂತೇಶ್ವರ ದೇವಸ್ಥಾನಕ್ಕೆ ಸಂಮ್ಮಂಧಪಟ್ಟ ಶಾಸನಗಳೂ ಕರಾರುಗಳೂ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ: ಪರಿಶಿಷ್ಟ೧.
10. Kuldip Nayyar: Between the Lines:
11. Election Commission of India: Statistical Report on Gen. Elections The Legislative Assembly of Mysore
12. Election Commission of India: Statistical Report on Gen. Elections 1951, The First Loksabha: Vol I
13. Refer Election Commission of India Statistical Reports of consecutive years for Loksabha.
14. Prof. Balraj Mudhok: Indianisation? What, Why and How. 1970: Page 108;
15. Prof. Muzaffar Assadi: Communal Violence in Coastal Belt, Economic and Political Weekly, September, 2004.
16. Christopher Jefferlot: The Hindu Nationalist Movement and Indian Politics. Page: 238
17. B.A.Prakash: Trends and Patterns of Emigration to the West Asian Countries: Page:102 of Kerala’s Economic Development.
18. Historical Archives of Goa: Conselho Da Fazenda, No 2(1618-25) ; M.N.Pearson: Indian Seafarers in the Sixteenth Century: Coastal Western India: Page 116-137
Dharma Kumar: Land and Castes in South India: Page 8
19. ಕುಂಬಳೆ ನಾಯಕರ ಕುಟುಂಬದ ದಾಖಲೆಗಳು.

ಜೂನ್ 13, 2009

ಕೊಂಕಣಿಗಳ ಕೊಂಕಣಿ ಪ್ರೇಮ

"ಇಬ್ಬರು ಕೊಂಕಣಿಗಳು ಒಟ್ಟು ಸೇರಿದರೆ ಮುಗಿಯಿತು. ತಮ್ಮೊಂದಿಗೆ ಬೇರೆಯವರಿದ್ದಾರೆಂದು ಗಣಿಸದೇ ಅವರು ಕೊಂಕಣಿಯಲ್ಲಿಯೇ ಮಾತನಾಡುವುದು." ಎನ್ನುವುದು ತುಳುನಾಡಿನ ಇತರ ಭಾಶಿಕರ ಕಂಪ್ಲೇಂಟು. ಕೊಂಕಣಿಗಳ ಕೊಂಕಣಿ ಪ್ರೇಮ ಅಷ್ಟು ಕುಪ್ರಸಿದ್ಧ. ಮೇಲಿನ ಕಂಪ್ಲೇಂಟು ಬಹುಶ ಹೊರನಾಡಿನಲ್ಲಿ ಒಂದು ಸೇರುವ ಒಂದೇ ಭಾಶೆಯ ಎಲ್ಲರಿಗೂ ಅನ್ವಯವಾಗುವುದು ಸತ್ಯವಾದರೂ ಮಂಗಳೂರಿನಲ್ಲಿ ಅದು ಕೊಂಕಣಿಗಳಿಗೇ ಸೀಮಿತ. ತುಳುನಾಡಿನ ಎರಡು ಪ್ರಮುಖ ಭಾಶೆಗಳಾದ ಕನ್ನಡ ಮತ್ತು ತುಳುವನ್ನು ಎಲ್ಲರೂ ಮಾತನಾಡುವುದು ಅದಕ್ಕೆ ಕಾರಣ.

ಕೊಂಕಣಿಗಳಿಗಿರುವ ಇನ್ನೊಂದು ಹೆಚ್ಚು ಗಮನಕ್ಕೆ ಬಾರದ ಗುಣವೆಂದರೆ ತಾನು ಮಾತನಾಡಬೇಕಾದ ವ್ಯಕ್ತಿಯ ಬಳಿ ಆ ವ್ಯಕ್ತಿಗೆ (ಸಹಜವಾಗಿಯೇ) ಪರಮಪ್ರಿಯವಾಗಿರುವ ಆತನ/ಆಕೆಯ ತಾಯ್ನುಡಿಯಲ್ಲೇ ಮಾತನಾಡುವುದು. ಆದಕಾರಣ ತುಳುನಾಡಿನಲ್ಲಿ ಬಹುಶ ಎಲ್ಲರಿಗಿಂತ ಹೆಚ್ಚು ಭಾಶೆ ಮಾತನಾಡಲು ತಿಳಿದಿರುವುದು ಕೊಂಕಣಿಗಳಿಗೆ. (ಮೇಲಾಗಿ ಅವರಿಗೆ ಕೊಂಕಣಿಯೂ ಗೊತ್ತಲ್ಲ!) ಅದು ತಮ್ಮ ಕುಲವೃತ್ತಿಯಾಗಿರುವ ವ್ಯಾಪಾರದ ಮೂಲಭೂತ ಅಗತ್ಯವೂ ಹೌದು.

ಮನೆಯಾಚೆ ಕಾಲಿಡಲು ಬಿಡದೇ ಅಚ್ಚಾಗಿ ಬೆಳೆಸಿದ ಕೊಂಕಣಿ ಮಗು, ಕೊಂಕಣಿ ಬಿಟ್ಟು ಬೇರಾವ ಭಾಶೆಯನ್ನೂ ಕೇಳಿರದ ಮಗು, ಬಾಲವಾಡಿಗೆ ಹೋದ ಎರಡನೇ ದಿನಕ್ಕೇ ಸಲೀಸಾಗಿ ಕನ್ನಡ ಮಾತನಾಡುವುದು ಹೇಗೆ ಸಾಧ್ಯ ಎಂದು ನಾನು ಯೋಚಿಸಿದ್ದಿದೆ. ಶಾಲೆಗೆ ಹೋಗಲು ಶುರುಹಚ್ಚಿದ ಕೆಲವು ದಿನ ಕನ್ನಡವನ್ನು ನಿದ್ರೆಯಲ್ಲೂ ಕನವರಿಸಿದ್ದು, ಬಡಬಡಿಸಿದ್ದು ಪ್ರತೀ ಕೊಂಕಣಿಯ ಬದುಕಿನಲ್ಲೂ ನಡೆದಿರಬಹುದಾದ ಘಟನೆ.

ಕನ್ನಡದ ಬದಲು ಯಾವ ಭಾಶೆ ಇದ್ದಿದ್ದರೂ ಹಾಗೇ ಆಗಬಹುದು. ಭಾಶೆಯ ಕಲಿಕೆಗೆ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ. ಪ್ಯಾರೀಸಿನ ಬೀದಿಗಳಲ್ಲಿ ಜೋಳ ಮಾರುವ ಬಿಹಾರಿ ಹುಡುಗರು ನಿರರ್ಗಳ ಫ್ರೆಂಚ್ ಮಾತನಾಡುವುದು, ಗಲ್ಫ್ ರಾಷ್ಟ್ರಗಳಲ್ಲಿ ಮನೆಗೆಲಸದ ಮಲಯಾಳಿ ಹುಡುಗಿಯರು ಅರೇಬಿಕ್ ಮಾತನಾಡುವುದು ಇವೆಲ್ಲ ಅನಿವಾರ್ಯ ಸನ್ನಿವೇಶಗಳಲ್ಲಿ ಭಾಶೆ ಬಲವಂತವಾಗಿ ಅನ್ಯಭಾಷಿಕರನ್ನು ಆವರಿಸಿಕೊಳ್ಳುವ ನಿದರ್ಶನಗಳು.

ಆದರೆ ಸಾಹಿತ್ಯಕವಾಗಿ ಒಂದು ಭಾಶೆ ಬೆಳೆಯಬೇಕಾದರೆ ಅದಕ್ಕೆ ವ್ಯವಸ್ಥಿತವಾದ ನೆಲೆಗಟ್ಟು ಇರಬೇಕಾದುದು ಅತ್ಯವಶ್ಯ.

ನನ್ನ ತಾಯ್ನುಡಿ ಕೊಂಕಣಿ. ನನ್ನ ಒಳಗಿನ ಸಂವಹನದಲ್ಲಿ ನಾನು ಬಳಸುವುದು ಕೊಂಕಣಿಯನ್ನೇ. ಆದರೆ ಕೊಂಕಣಿಯಲ್ಲಿ ಇದುವರೆಗೆ ನನಗೆ ಬರೆಯಲು ಸಾಧ್ಯವಾದದ್ದು ಒಂದು ಒಂಟಿ ಕವಿತೆ ಮಾತ್ರ. ಅದೂ ಇಂಗ್ಲಿಷ್ ಕವಿತೆಯೊಂದರ ಅನುವಾದ. ಕನ್ನಡದಲ್ಲಾದರೋ ನಾನು ಒಂದಿಷ್ಟು ಕತೆಗಳನ್ನೂ, ಒಂದಷ್ಟು ಕವಿತೆಗಳನ್ನೂ, ಮತ್ತಷ್ಟು ಲೇಖನಗಳನ್ನೂ ಬರೆದಿದ್ದೇನೆ.

ಕಾಲೇಜು ದಿನಗಳಲ್ಲಿ ಸಾಕಷ್ಟು ಅಪ್ರಬುದ್ಧ ಕವಿತೆಗಳನ್ನು ಕೊರೆದಿದ್ದರೂ ನನ್ನಲ್ಲಿ ಕನ್ನಡ ಸಾಹಿತ್ಯದಲ್ಲಿ ಸೀರಿಯಸ್ಸಾಗಿ ತೊಡಗಿಕೊಳ್ಳುವ ಹುರುಪು ಬಂದಿದ್ದು ನಾನು ದೆಹಲಿಗೆ ಬಂದ ಬಳಿಕ. ದೆಹಲಿಯ ಏಕಾಂಗಿತನದಲ್ಲಿ ಕನ್ನಡದಷ್ಟೇ ಕೊಂಕಣಿಯೂ ಕೊರಗಿದರೂ ನನ್ನೊಳಗಿನ ಸಾಹಿತ್ಯ ಸೃಷ್ಟಿಗೆ ಒದಗಿ ಬಂದ ಭಾಶೆ ಕನ್ನಡ. ಇದು ಬರೇ ನನ್ನ ಒಬ್ಬನ ಅನುಭವವಲ್ಲ. ಕೊಂಕಣಿ ತಾಯ್ನುಡಿಯ ಎಲ್ಲ ಕನ್ನಡ ಬರಹಗಾರರೂ ಕೊಂಕಣಿಯಲ್ಲಿ ಬರೆದಿರುವುದು ಬಹಳ ಕಡಿಮೆ. ಇದು ಕೊಂಕಣಿ ಭಾಶೆಯ ನಷ್ಟವೂ ಹೌದು. ಕನ್ನಡದ ಹೆಸರಾಂತ ಬರಹಗಾರರಾದ ಗೋವಿಂದ ಪೈ, ಪಂಜೆ ಮಂಗೇಶರಾಯರು, ಗುಲ್ವಾಡಿ ವೆಂಕಟರಾಯರು, ಗೌರೀಶ ಕಾಯ್ಕಿಣಿ, ಗಿರೀಶ್ ಕಾರ್ನಾಡ್, ಯಶವಂತ ಚಿತ್ತಾಲ, ದಿನಕರ ದೇಸಾಯಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ ಇನ್ನೂ ಅನೇಕ ಬರಹಗಾರರು ಕೊಂಕಣಿ ಮನೆಮಾತಿನವರು. ಅವರು ಕೊಂಕಣಿಯಲ್ಲಿ ಬರೆದಿರುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಕೊಂಕಣಿ ತಾಯಿಯ ಮೊಲೆಯಲ್ಲಿ ಹಾಲಿಲ್ಲ. ಆದುದರಿಂದ ತಾನು ಕನ್ನಡ ತಾಯ ಮೊಲೆ ಹೀರಿ ಬೆಳೆದೆ ಎಂದ ಮಂ. ಗೋವಿಂದ ಪೈಯವರು ಒಂದಿಷ್ಟು ಕೊಂಕಣಿಯಲ್ಲೂ ಬರೆದಿಡುತ್ತಿದ್ದಿದ್ದರೆ ಬಳಿಕದ ಮಕ್ಕಳಿಗೆ ಕೊಂಚ ಹಾಲಾದರೂ ಊಡುತ್ತಿತ್ತು.

ಬಹುಶ ಇದು ಕನ್ನಡ ನಾಡಿನ ಹೊರಗೆಯೂ ನಡೆದಿರುವ ಸಂಗತಿ. ಕೊಂಕಣಿ- ಮರಾಠಿ, ಕೊಂಕಣಿ- ಮಲಯಾಳಂ, ಮುಂತಾದ ಸಂದರ್ಭಗಳಲ್ಲಿಯೂ ಕೊಂಕಣಿಗೆ ನಷ್ಟವಾಗಿರುವುದನ್ನು ಗಮನಿಸಬೇಕು. ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿರುವ ಸಾರಸ್ವತರು ಇದೀಗ ಹೆಚ್ಚು ಹೆಚ್ಚು ಮರಾಠಿಯನ್ನೇ ಮನೆಮಾತಾಗಿಸಿಕೊಂಡು ಕೊಂಕಣಿಯು ಮರಾಠಿಯ ಉಪಭಾಶೆ ಎನ್ನುವ ಸವಕಲು ಅಪನಂಬಿಕೆಯನ್ನೇ ಅನೌಪಚಾರಿಕ ವೇದಿಕೆಗಳಲ್ಲಿ ಉರುಹೊಡೆಯುವುದು ಕಾಣಸಿಗುತ್ತದೆ.

ಕೊಂಕಣಿಗಳೆಂದೇ ಕರೆಯಲ್ಪಡುವ ಸಾರಸ್ವತರಿಗಿಂತ ಮಂಗಳೂರು ಕ್ಯಾಥೋಲಿಕರಿಗೆ ಕೊಂಕಣಿಯ ಮೇಲೆ ಹೆಚ್ಚು ಅಭಿಮಾನ. ಚರ್ಚಿನ ಕ್ಯಾಥೆಚಿಸಂ ಎನ್ನುವ ಅಧ್ಯಯನದ ಮಾಧ್ಯಮವಾಗಿ ಕನ್ನಡ ಲಿಪಿಯ ಕೊಂಕಣಿಯನ್ನು ದಕ್ಶಿಣಕನ್ನಡದಲ್ಲಿ ಜಾರಿಗೊಳಿಸಿದ್ದು ಕ್ಯಥೋಲಿಕರಲ್ಲಿ ಕೊಂಕಣಿಗೊಂದು ಭದ್ರ ನೆಲೆಗಟ್ಟನ್ನು ನೀಡಿತ್ತು. ಸಾರಸ್ವತರು ತಮ್ಮ ವೈಯಕ್ತಿಕ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ನಡೆಸಿದರೆ ಕ್ಯಾಥೊಲಿಕರು ಕೊಂಕಣಿಯಲ್ಲಿಯೇ ನಡೆಸುವುದು ರೂಢಿಯಾಯಿತು. ಇದರಿಂದಾಗಿಯೇ ಇಂದು ಕ್ಯಾಥೋಲಿಕರ ಸಮುದಾಯದಲ್ಲಿ ಹೆಚ್ಚು ಕೊಂಕಣಿ ಸಾಹಿತಿಗಳಿರುವುದು. ಕೊಂಕಣಿಯ ಲಿಖಿತ ಶಬ್ದ ಭಂಡಾರ ನಿಸ್ಸಂಶಯವಾಗಿ ಸಾರಸ್ವತರಿಗಿಂತ ಕ್ಯಥೊಲಿಕರಲ್ಲಿ ಹೆಚ್ಚು ಬಳಕೆಯಲ್ಲಿದೆ.

ಕ್ಯಥೋಲಿಕರು ಕೊಂಕಣಿಯನ್ನು ಲಿಖಿತ ರೂಪದಲ್ಲಿ ತೊಡಗಿಸಿಕೊಂಡು ಸಾಹಿತ್ಯ ರಚಿದರೆ ಸಾರಸ್ವತರು ಮೌಖಿಕ ಸಾಹಿತ್ಯವನ್ನಷ್ಟೇ ಕೊಂಕಣಿಯಲ್ಲಿ ರೂಢಿಸಿದರು. ಇವುಗಳಲ್ಲಿ ಕೊಂಕಣಿ ನಾಟಕಗಳು ಪ್ರಮುಖ ಮಾಧ್ಯಮವಾಯಿತು. ಟೀವಿ ಯುಗದ ಮೊದಲು ಕೊಂಕಣಿಗಳ ದೇವಸ್ಥಾನಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕೊಂಕಣಿ ನಾಟಕಗಳ ಒಂದು ಜನಪ್ರಿಯ ಚಳುವಳಿಯಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸುತ್ತಿದ್ದೇನೆ. ಆದರೆ ಟೀವಿಯುಗದಲ್ಲಿ ಕೊಂಕಣಿ ನಾಟಕಗಳ ಬೇಡಿಕೆ ಕುಸಿದಿದೆ. ಈ ನಾಟಕಗಳು ಟೀವಿ ಮಾಧ್ಯಮವನ್ನು ಬಳಸಿಕೊಳ್ಳಬಹುದಾಗಿತ್ತಾದರೂ ವೆಚ್ಚದಾಯಕವಾದ ನಿರ್ಮಾಣ ಕಾರ್ಯ ಆಸಕ್ತರನ್ನು ಹಿಂಜರಿಯುವಂತೆ ಮಾಡಿದೆ.

ಉತ್ಸಾಹಿ ಸಾರಸ್ವತರು ಕೊಂಕಣಿ ದೇವರಪದಗಳನ್ನು ರಚಿಸಿ ಹಾಡಿದರು. ಬಾಲಗೀತೆಗಳು, ಹಸೆ ಹಾಡುಗಳು, ಕೊಂಕಣಿ ಜನಪದ ಕತೆಗಳು ವಿಪುಲವಾಗಿದ್ದರೂ ಅವು ಮೌಖಿಕ ಪರಂಪರೆಯಲ್ಲಷ್ಟೆ ಬೆಳೆದಂತವುಗಳು. ಬರೆದವರ ಹೆಸರು ದಾಖಲಾಗದೇ ಜನಪದದಲ್ಲಿ ಹರಡಿದವುಗಳು.

ಭಾಶೆ ಪ್ರಾಥಮಿಕ ಶಾಲಾಸ್ತರದಲ್ಲಿ ಅಧ್ಯಯನದ ಅಂಗವಾದರೆ ಅದು ಸಾಹಿತ್ಯಕವಾಗಿ ಬೆಳೆಯುತ್ತದೆ ಎಂಬುದಕ್ಕೆ ಸಾರಸ್ವತರು ಮತ್ತು ಕ್ಯಥೋಲಿಕರ ಭಾಷೆಯ ಬಳಕೆಯ ತುಲನಾತ್ಮಕ ಅಧ್ಯಯನ ನಿಚ್ಚಳ ತೋರಿಸಿಕೊಡುತ್ತದೆ. ಇದನ್ನು ದಾಖಲಿಸಲು ಒಂದು ಅಕಾಡೆಮಿಕ್ ಅಧ್ಯಯನದ ಅವಕಾಶವಿದೆ.

ದಿನಕರ ದೇಸಾಯಿಯವರ ಒಂದು ಚುಟುಕು ಅಪೇಕ್ಷಿಸುವ ಒಂದು ಉದಾತ್ತ ಸನ್ನಿವೇಶ ಹೀಗಿದೆ.

ಕೊಂಕಣಿಯ ಜೊತೆಗೆ ಕನ್ನಡ ಮಾತನಾಡಿ
ಒಂದುಗೂಡಿದ ಎರಡು ಜೀವನಾಡಿ
ಎರಡು ಪಕಳೆಯ ಹೂವು ಮಿಡಿಯಾಗಿ ಕಾಯಿ
ಕಾಯಿ ಹಣ್ಣಾದೊಡನೆ ಜೀವನ ಮಿಠಾಯಿ

ಎರಡು ಪಕಳೆಯ ಹೂವುಗಳು ಸಾಹಿತ್ಯದಲ್ಲಿಯೂ ಚಿಗುರಿಕೊಳ್ಳಲಿ.