ನವೆಂಬರ್ 26, 2008

ಒಂದು ತುಣುಕು ಗುಲ್ಜಾರ್ ಕವಿತೆ

ಲಾಕಡ್ ಜಲಕೆ ಕೊಯ್ಲಾ ಹೊಯ್ ಜಾಯೆ ರೇ
ಲಾಕಡ್ ಜಲಕೆ ಕೊಯ್ಲಾ ಹೊಯ್ ಜಾಯೆ

ಜಿಯಾ ಜಲೆತೋ ಕುಚ್ ನಾ ಹೊಯ್ ವೇ 
ನಾ ಧುಂವಾ ನಾ ರಾಕ್ 
ಜಿಯಾ ನಾ ಜಲಯ್ಯೋ ರೇ. 

ಇದು ಗುಲ್ಜಾರ್ "ವಿಶಾಲ್ ಭಾರದ್ವಾಜ್" ಗೋಸ್ಕರ "ಓಂಕಾರ" ಚಿತ್ರಕ್ಕೆ ಬರೆದುಕೊಟ್ಟದ್ದು.
ನನಗೇಕೋ ಇದನ್ನು ಕನ್ನಡದಲ್ಲಿ ಬರೆಯೋಣ ಅಂತ ಅನಿಸಿತು.

ಕಟ್ಟಿಗೆ ಉರಿಸಿದೊಡೆ ಕೆಂಡ ಕಾಣೋ
ಕಟ್ಟಿಗೆ ಉರಿಸಿದೊಡೆ ಕೆಂಡ

ಕರುಳು ಉರಿಸಿದೊಡೆ ಏನಾದೀತು.. 
ಹೊಗೆಯೂ ಇಲ್ಲ ಮಸಿಯೂ ಇಲ್ಲ
ಕರುಳ ಉರಿಸದಿರು ಕಾಣೋ

ನವೆಂಬರ್ 24, 2008

ವ್ಯವಸ್ಥೆ, ಏರ್ಪಾಡು, ವಿಲೇವಾರಿ ಮತ್ತು ಜುಗಾಡು.

ಡಾ. ಪ್ರಭಾಕರ ಜೋಷಿ ಯಕ್ಷಗಾನ ಕೋವಿದರೂ, ಸಾಹಿತಿಯೂ, ಚಿಂತಕರೂ ಮತ್ತು ಬಹುನುಡಿ ಬಲ್ಲಿದರೂ ಆಗಿ ಕನ್ನಡಕ್ಕೊಂದು ಹೆಮ್ಮೆ. ಅವರ ನಗೆ ಚಟಾಕಿಗಳು ಸಭೆಗಳಲ್ಲಿ ಭಾರೀ ನಗೆಯಲೆಗಳನ್ನು ಎಬ್ಬಿಸುತ್ತವೆ. ಅವರ ಅಂತಹ ಒಂದು ನುಡಿ ಚತುರತೆ ಇಲ್ಲಿದೆ.

ವ್ಯವಸ್ಥೆ = ನಾನು ಅದನ್ನು ವ್ಯವಸ್ಥೆ ಮಾಡುವೆನು = ಅದನ್ನು ನಾನೆ ಕೈಯಾರ ಮಾಡಿಕೊಡುತ್ತೇನೆ.
ಏರ್ಪಾಡು = ನಾನು ಅದನ್ನು ಏರ್ಪಾಡು ಮಾಡುವೆನು = ಅದನ್ನು ನಾನು ಆ ಸೋಮಶೇಖರನಿಗೆ ಹೇಳಿ ಮಾಡಿಸುತ್ತೇನೆ. 
ವಿಲೇವಾರಿ= ನಾನು ಅದನ್ನು ವಿಲೇವಾರಿ ಮಾಡುವೆನು = ಅದನ್ನು ನಾನು ಆ ಸೋಮಶೇಖರನಿಗೆ ಹೇಳಿ ಅವನ ಪೈಕಿ ಯಾರಾದರೂ ಇದ್ದರೆ ಮಾಡಿಸುವೆನು.

ಇದು ಒಂಥರಾ "ವಾಟ್ ದೈ ಸೇ" ಮತ್ತು "ವಾಟ್ ದೈ ಮೀನ್" ಇದ್ದಂಗೆ. 

ಇಂಥದೇ ಒಂದು ನುಡಿಕಟ್ಟು ದೆಹಲಿಯಲ್ಲಿದೆ.  
"ಕುಚ್ ಜುಗಾಡ್ ಕರ್ಲೆಂಗೆ" 
"ಪೈಸೋಂಕ ಜುಗಾಡ್ ಹೋಜಾಯೆ ತೋ ಅಚ್ಚಾ ಹೈ"
"ಇಸಕಾ ಕುಚ್ ಜುಗಾಡ್ ಬನಾವೋ ಯಾರ್"

ಈ ಜುಗಾಡು ಎಂಬ ಒರೆಯಲ್ಲಿ ನಮ್ಮ ವ್ಯವಸ್ಥೆ, ಏರ್ಪಾಡು ಮತ್ತು ವಿಲೇವಾರಿ ಮೂರರ ಬಂಡವಾಳವೂ ಇದ್ದು ಇನ್ನೂ ಅನೇಕ ಜುಗಾಡಿನಲ್ಲಿ ಜುಗಾಡಾಗುತ್ತದೆ. ಅದ್ಜಸ್ತ್ಮೆಂಟು, ರಿಪೇರಿ, ಪೂರೈಕೆ, ಬಳಕೆ, ವಿಲೇವಾರಿ ;-), ಸಜ್ಜು, ಬಂದೋಬಸ್ತು, ಎರವಲು.... ಇನ್ನೂ ಬಹಳಷ್ಟು.

ಬಾಲಂಗೋಚಿ :- ಅಂದ ಹಾಗೆ "ಏರ್ಪಾಡು" ಅಚ್ಚ ಕನ್ನಡದ ಒರೆಯಲ್ಲವೆ?

ನವೆಂಬರ್ 23, 2008

ಎರಡು ದಿನ ನಿಂತು ಹೋದ ಕನಸು ಕಣ್ಣಿನ ಚೀನಿ ಹುಡುಗ

ಎರಡು ದಿನಗಳ ಮಟ್ಟಿಗೆ ಒಬ್ಬ ಗೆಸ್ಟ್ ಬರುತ್ತಾರೆ. ದೆಹಲಿಯ ಗೆಸ್ಟ್ ಹೌಸ್ನಲ್ಲಿ ನಿಲ್ಲಿಸಿಕೊಳ್ಳಿ ಅಂತ ಗೌತಮರ ಮೇಲು ಬಂದಾಗ ಯಾರಪ್ಪ ಗೆಸ್ಟ್ಉ ಅಂತ ಅಂದುಕೊಳ್ಳುತ್ತಿದ್ದೆ. ಆಮೇಲೆ ಅವರು ಬರೋದು ಅಸ್ಟ್ರೆಲಿಯದಿನ್ದ ಅಂತ ತಿಳಿಯಿತು. ಬಂದರೆ ಬರಲಿ. ಅಂತ ಮತ್ತೆ ಪ್ರದರ್ಶಿನಿಯ ಕೆಲಸದಲ್ಲಿ ವ್ಯಸ್ತನಾಗಿಬಿಟ್ಟೆ.  

ಮತ್ತೆ ನೆನಪಾದದ್ದು ಯಾರೋ ಆಫೀಸಿನ ಹೊರ ಬಾಗಿಲಲ್ಲಿ ವಿಲಾಯತಿ ಉಚ್ಚಾರದಲ್ಲಿ ಏನೋ ಉಲಿದಾಗ. ಬಹುಶ ಮಹೇಶ ರಿಸೆಪ್ಶನ್ ನಲ್ಲಿ ಹೇಳಿಟ್ಟಿದ್ದಿರಬೇಕು. ಮೆರವಣಿಗೆ ಸೀದಾ ನಾನು ಕೂತಲ್ಲಿಗೆ ಬಂತು. ಆರಡಿ ಎತ್ತರದ ದೇಹ. "ಹ್ಯು ಏನ್ ತ್ಸಾಂಗ್" ನಂತೆ ಬೆನ್ನಿಗೊಂದು ತಲೆಯ ಮೇಲಕ್ಕೂ ಬರುವಂತಿದ್ದ ಬ್ಯಾಕ್ ಪ್ಯಾಕ್. ಅದೇ ಚೀನಿ ಪ್ರವಾಸಿಯ ಚಹರೆ. ಆ ಕನಸು ಕಣ್ಣುಗಳಿಗೆ ಕಪ್ಪು ಚೌಕಟ್ಟಿನ ಕನ್ನಡಕ. ತಲೆಯ ಮೇಲೆ ಕೆದರಿದರೂ ಬೆಕ್ಕಿನ ಕ್ಯೂಟ್ ನೆಸ್ಸ್ ಇರುವ ಪುಚ್ಚು ಕೂದಲು.  

"ಹಿ ಐ ಯಾಮ್ ಝಿನ್" ಎಂದ. ಜಿನ್ನು ಎಂದರೆ ಉರ್ದುವಿನಲ್ಲಿ ಪ್ರೇತಾತ್ಮಗಳು ಎಂದು ನಾನು ಅವನಿಗೆ ಹೇಳಿ ಮನಸ್ಸು ಮುರಿಯಲಿಲ್ಲ. 
ಅವನ ಹೆಸರು "ಝಿನ್ ಕ್ಯೂ ಕ್ಷಿಯಾ" ಅಂತೆ ಆಮೇಲೊಮ್ಮೆ ಪೂರ್ತಿ ಹೆಸರು ವಿವರಿಸಿ ಹೇಳಿದಾಗ ನನಗೆ ಜಿನ್ನು ಅಂತ ಮನಸ್ಸಲ್ಲೇ ಅಂದು ಕೊಂಡಿದ್ದು ಮರೆತು ಹೋಗುವಷ್ಟು ಆಪ್ತನಾಗಿದ್ದ.  
ಕ್ಯೂ ಅಂದರೆ "ಆಟಂ" ಅಂದ  
ಕ್ಷಿಯ ಅಂದರೆ "ಸೂರ್ಯನ ಹೊಂಬೆಳಕು" ಅಂತೆ  
ಝಿನ್ ಅಂದರೆ "ಟ್ರೆಶರ್" ಅಂದ ನಾನು ಜೋಡಿಸಿ ಓದಿದೆ ಬಹುಶ : ಶರದ್ಸೂರ್ಯನ ಹೊಂಬೆಳಕ ಸಂಪತ್ತು ಎನ್ನಲೇ?  

"ಐ ಯಾಮ್ ಗುರು" ಅಂದೆ.
"ಹೋ ಯಾ" ಎಂದು ಸೊಂಟ ಬಗ್ಗಿಸಿದ. ಉದ್ಧಾರವಾಗು ಶಿಷ್ಯ ಎಂದು ಆಶೀರ್ವದಿಸಿ, ಆಸನ ನೀಡಿ ಕುಶಲೋಪರಿಯನ್ನು ಮುಂದುವರಿಸಿದೆ. 
"ಗುರು ಮೀನ್ಸ್ ಮಾಸ್ತರ್?" ಎಂದು ಅವನು ಕೇಳಿದ್ದು ಮತ್ತೆ ಅದೇ ಶರದ್ಸೂರ್ಯನ ವಿವರಣೆಗಳ ಬಳಿಕ. 
"ನೋಡು ಮಾರಾಯ ನನ್ನ ಹೆಸರು ಗುರುದತ್ತ ಅಂತ ಅಂದರೆ ಗುರುಗಳ ಆಶೀರ್ವಾದದಿಂದ ಬಂದವನು ಅಂತ ಅಂದೆ"  
"ಹೋ ಯಾ!" ಅಂದು ನಕ್ಕ.  
"ಬತ ಐ ಕಾಲ್ ಯು ಮಾಸ್ತರ್" ಅಂದ 
"ನೋ ನೋ ಕಾಲ್ ಮಿ ಗುರು" ಅಂದೆ. 
ಮತ್ತೆ "ಹೋ ಯಾ!" ಅಂದ.  

ಅವನು ಹಿಮಾಲಯದ ಚಾರಣ ವನ್ನು ಕೈಗೊಳ್ಳುವ ಸಲುವಾಗಿ ಬಂದಿಹನು ಎಂದು ತಿಳಿಯಿತು. ಎರಡು ದಿನ ನಮ್ಮಲ್ಲಿ ತಂಗಿ, ದೆಹಲಿಯ ತಾಣಗಳನ್ನೆಲ್ಲ ನೋಡಿ ಅಮೃತಸರ ಅಲ್ಲಿಂದ ಮರಳಿ ಆಗ್ರಾದ ತಾಜ್ ಮಹಲು ಮುಂದಕ್ಕೆ ವಾರಣಾಸಿಯ ಗಂಗಮ್ಮ ಹಾಗೆಯೇ ಸಿಕ್ಕಿಂ ಮೂಲಕ ಕಾಂಚನ್ ಜುಂಗ ಆರೋಹಣ. ಇದು ಅವನ ಪ್ರವಾಸದ ಪರಿವಿಡಿ. 

ನಾನು ಅವನು ಮಾತನಾಡಲು ಕೂತಿದ್ದು ಬರೇ ಒಂದೆರಡು ಗಂಟೆ. ಅಷ್ಟು ಮಾತಿನಲ್ಲಿಯೇ ನನ್ನಿಂದ ಗಾಂಧಿ, ಕರ್ಮ, ಭಾಷೆ, ತಿಂಡಿ, ರಾಜಕೀಯ, ಇನ್ನೂ ಹಲವು ವಿಷಯಗಳನ್ನು ತಲೆಹರಟೆ ಅನಿಸದಂತೆ ಕೇಳಿ ತಿಳಕೊಂಡ. ಹಿಂಜರಿಯುತ್ತಾ ನನ್ನ ವಯಸ್ಸು ಕೇಳಿದ. ಹೇಳಿದೆ. ತನ್ನದು ಇಪ್ಪತ್ತೆರಡು ಎಂದ. ಅವನು ಬೆಳೆದದ್ದು ನೋಡಿದರೆ ಇಪ್ಪತ್ತೇಳು ಎಂದರೂ ಹಿಡಿಯುತ್ತಿತ್ತು.  

ಅವನ ತಂದೆ ತಾಯಿ ಇಬ್ಬರೂ ಆಸ್ಟ್ರೇಲಿಯ ನಿವಾಸಿಗಳು. ಇವನು ಅಡಿಲೇಡ್ ನಲ್ಲಿ ಇಂಜಿನೀರಿಂಗ್ ಓದುವುದು.

ಇದ್ದ ಎರಡು ದಿನಗಳಲ್ಲಿ ನಮ್ಮೆಲ್ಲರಿಗೂ ಆಪ್ತನಾದ. ದೋಸೆ ಹೊಯ್ದು ಕೊಟ್ಟಾಗ ಫೋಟೋ ತೆಗೆತೆಗೆದು ತಿಂದ. "ಇಟ್ಸ್ ದೆಲಿಶಿಯಸ್" ಎಂದ. ಕೈಯಲ್ಲಿ ಕ್ಯಾಮರ ತಪ್ಪದಂತೆ ಹೆಜ್ಜೆ ಹೆಜ್ಜೆಗೂ ಮಾತು ಮಾತಿಗೂ ಫೋಟೋ ಹೊಡೆದ. ಸ್ವತಂತ್ರವಾಗಿ ಯಾವೊಂದು ಸಹಾಯ ಕೇಳದೆ ನಕ್ಷೆ ಹಿಡಿದು ದೆಹಲಿಯೆಲ್ಲ ನೋಡಿ ಬಂದ. 

ಇರಲಿ ಎಂದು ಅವನು ಬೇಡವೆಂದರೂ ಕೇಳದೆ ಹೋಗುವ ಕಾಲಕ್ಕೆ ರೈಲು ಹತ್ತಿಸಿ ಬಂದೆ.