ಮಾರ್ಚ್ 13, 2009

ಹಾಡು ಕಟ್ಟಿದ ಬಗೆ

ಹಳೆಯದೊಂದು ನೆನಪು.

ಅದಾಗ ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡಿದ್ದ "ವಿಜಯ ಕರ್ನಾಟಕ" ದ ಪ್ರಚಾರದ ಬಗ್ಗೆ ಯೋಚಿಸಲು ನಮಗೆ (ಮ್ಯಾಗ್ನಂ ಜಾಹಿರಾತು ಸಂಸ್ಥೆ) ಸಿಕ್ಕ ಆಣತಿಯ ಪ್ರಕಾರ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆ.

ಆಗ ಮಂಗಳೂರಿನಲ್ಲಿ ಮಲೇರಿಯ ಹಾವಳಿ. ಈಗಲೂ ಇದೆ ಬಿಡಿ. ನಾನು, ಗೆಳೆಯ ಜಾದೂಗಾರ "ಕುದ್ರೋಳಿ ಗಣೇಶ್" ಜತೆ ಕುಳಿತು ವಿಜಯ ಕರ್ನಾಟಕದ ಪ್ರಾಯೋಜಕತ್ವದಲ್ಲಿ "ಮಲೇರಿಯ ಹುಷಾರ್" ಅಭಿಯಾನ ರೂಪಿಸಿದ್ದೆ. ಜಾದೂ, ರಂಗ ಕಲ್ಪನೆ, ಬೀದಿ ನಾಟಕದ ಒಟ್ಟು ಅಂಶಗಳನ್ನು ಒಳಗೊಂಡ ಈ ಅಭಿಯಾನದ ಜೊತೆ ಜೊತೆ ವಿಜಯ ಕರ್ನಾಟಕದ ಪ್ರಾಯೋಜಕತ್ವಕ್ಕೂ ಕೊಂಚ ಪ್ರಚಾರ ಲಾಭ ಒದಗಿಸುವ ಬಗ್ಗೆ ನಮ್ಮ ಚರ್ಚೆ ಸಾಗಿತ್ತು.

ಜಾನಪದ, ಜಾದೂ ಮತ್ತು ಸಂಗೀತದ ಸಂಯೋಜನೆಯಲ್ಲಿ ವಿಸ್ಮಯ ಎಂಬ ತಂಡ ಕಟ್ಟಿ ಕರ್ನಾಟಕದಾದ್ಯಂತ ಹಲವು ತಿರುಗಾಟ ನಡೆಸಿದ್ದ ಕುದ್ರೋಳಿ ಗಣೇಶ್ ಒಬ್ಬ ಬಹುಮುಖ ಪ್ರತಿಭಾವಂತ.

"ಗುರು, ವಿಜಯ ಕರ್ನಾಟಕಕ್ಕೆ ಒಂದು ಹಾಡು ಕಟ್ಟಬೇಕು. ಅದು ಹೆಂಗಿರಬೇಕು ಗೊತ್ತಾ.. ಒಂದು ಆಂಥೆಮ್ ತರ ಇರಬೇಕು." ಅಂತ ಗಣೇಶ್ ಕಿಡಿ ಹಚ್ಚಿದಾಗ ನನಗೂ ಅದು ಹೌದೆನ್ನಿಸಿತು. ವಿಜಯ ಕರ್ನಾಟಕ ಪ್ರಸಾರ ಸಂಖ್ಯೆ ಎಲ್ಲರನ್ನು ಮೀರಿತ್ತು. ಅದಕ್ಕಾಗ ಬೇಕಿರುವುದು ಒಂದು "ಕಲ್ಟ್ ಇಮೇಜ್ " ಎಂದು ನನ್ನ ಪ್ರತಿಪಾದನೆ. ಜನ ಹಲವು ವರ್ಷಗಳಿಂದ ಓದಿಕೊಂಡು ಬಂದಿದ್ದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಇದ್ದ ಭಕ್ತರೆನ್ನಬಹುದಾದ ಲಾಯಲ್ ಓದುಗರ ಕೊರತೆ ವಿಜಯ ಕರ್ನಾಟಕಕ್ಕೆ ಇದೆ ಎನ್ನುವುದು ನನ್ನ ಆಗಿನ ವೈಯಕ್ತಿಕ ಅಭಿಪ್ರಾಯ. ವಿಜಯ ಕರ್ನಾಟಕ ತನ್ನ ಕಂಟೆಂಟ್ ಮೂಲಕ ಈ ದಿಸೆಯಲ್ಲಿ ಸಾಗುತಿತ್ತೋ ಇಲ್ಲವೊ ಎಂಬುದನ್ನು ನಾನು ಇಲ್ಲಿ ಚರ್ಚಿಸಬಯಸುವುದಿಲ್ಲ. ಆದರೆ ಪ್ರಚಾರ ಕಾರ್ಯದ ದೃಷ್ಟಿಯಿಂದ ಇಂಥ ಒಂದು ಆಂಥೆಮ್ ಅಗತ್ಯ ಇದೆ ಎಂಬುದು ನನ್ನ ಅಭಿಮತವಾಗಿತ್ತು.

ಹಲವು ದಿನಗಳ ಬಳಿಕ ನನ್ನ ಮತ್ತೊಬ್ಬ ಗೆಳೆಯ ನಾಗೇಶ್ (ಇವರೀಗ ಕನ್ನಡ ಸಿನೆಮಾ ರಂಗದಲ್ಲಿ ಕ್ಯಾಮೆರಾ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.) ಜೊತೆಯಲ್ಲಿ ಬೇರೊಬ್ಬ ಕ್ಲಯಂಟ್ ಗೋಸ್ಕರ ಒಂದು ಜಿಂಗಲ್ ರೂಪಿಸಲು ಬೆಂಗಳೂರಿಗೆ ಬಂದಿದ್ದೆ. ಬೆಂಗಳೂರಿನಲ್ಲಾಗ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಮಂಗಳೂರಿನವರೇ ಆದ ಆಲ್ವಿನ್ ನಮಗೆ ಸುಮಧುರ ಟ್ಯೂನುಗಳನ್ನು ರೂಪಿಸಿ ಕೊಟ್ಟಿದ್ದರು. ಅವರೊಂದಿಗೆ ಮಾತನಾಡುವಾಗ ವಿಜಯ ಕರ್ನಾಟಕದ ಆಂಥೆಮ್ ಬಗ್ಗೆ ಮಾತು ಬಂತು.

ಅಲ್ವಿನ್ ಕೆಲಸ ಮಾಡುವುದೇ ಹಾಗೆ, ಯಾವತ್ತೂ ದುಡ್ಡಿನ ಬಗ್ಗೆ ಯೋಚಿಸಿದವರಲ್ಲ. ವಿಚಾರ ಮೂಡುವುದರೊಳಗೆ ಯೋಚನೆ ಶುರು. ಒಂದು ಸುಂದರ ಚೌಕಟ್ಟು ರೂಪಿಸಿ ಬಾಯಿ ಮಾತಿನಲ್ಲೇ ಅವರು ವಿವರಿಸಿದಾಗ ನನಗೆ ಸ್ಥೂಲ ಕಲ್ಪನೆ ದೊರಕಿತು. ಸಂಸ್ಥೆಯಲ್ಲಿ ಒಪ್ಪಿಗೆ ದೊರಕಿಸಿಕೊಂಡು ನಾವು ಕೆಲಸಕ್ಕೆ ತೊಡಗಿದೆವು.

ಸರಿ ಹಾಡು ಬರೆಯುವುದು ಯಾರು. ಚಿತ್ರರಂಗದ ಒಂದೆರಡು ಕವಿಗಳು ಬರೆದು ಕೊಟ್ಟ ಹಾಡುಗಳ ಸಾಹಿತ್ಯ ನನಗೆ ಇಷ್ಟವಾಗಲಿಲ್ಲ. ಮೇಲಾಗಿ ಆಲ್ವಿನ್ ಕೊಟ್ಟ ಮೀಟರ್ ಗೂ ಅದು ಹೊಂದುತ್ತಿರಲಿಲ್ಲ. ರೆಕಾರ್ಡಿಂಗ್ ದಿನ ನಿರ್ಧಾರವಾಗಿದೆ. ಸ್ಟೂಡಿಯೋ ನಿಗದಿಯಾಗಿದೆ. ಕೊನೆಗೆ ನಾನೇ ಹಾಡು ಬರೆಯಲು ಕುಳಿತೆ. ಹೊಟ್ಟೆ ಪಾಡಿನ ನಡುವೆ ಕವನ ಕಟ್ಟುವುದು ಮರೆತೇ ಹೋಗಿತ್ತು. ತಿಣುಕಿ ತಿಣುಕಿ ಕೊನೆಗೊಮ್ಮೆ ಪದ್ಯ ಸಿದ್ಧವಾಯಿತು. ಫೋನಿನಲ್ಲೇ ಆಲ್ವಿನ್ಗೂ ಕೇಳಿಸಿದೆ. ಅವರಿಗೂ ಮೀಟರ್ ಹೊಂದಿತು. ಒಂದು ಹೋಟೆಲ್ ರೂಮಲ್ಲಿ ಕೀ ಬೋರ್ಡ್ ಮತ್ತು ಕಂಪ್ಯೂಟರ್ ಸಜ್ಜುಗೊಳಿಸಿ ಜಿಂಗಲ್ ಚೌಕಟ್ಟಿನ ವಾದ್ಯ ವೃಂದ ಧ್ವನಿಗಳನ್ನು ಕಂಪೋಸಿಂಗ್ ಮಾಡಲಾಯಿತು.

ಮರುದಿನ ಬೆಂಗಳೂರಿನ ಸ್ಟೂಡಿಯೋ ಒಂದರಲ್ಲಿ ಹಾಡಿನ ರೆಕಾರ್ಡಿಂಗ್.

ಈ ಜಿಂಗಲ್ ನ ರಚನೆಯಲ್ಲಿ ಕೋರಸ್ ಅಂಗ ಪ್ರಧಾನವಾಗಿದೆ. ಇಡೀ ಹಾಡು ನಾಲ್ಕೈದು ಜನ ಒಟ್ಟಿಗೆ ಹಾಡುವಂತಹ ಪರಿಕಲ್ಪನೆ ಆಲ್ವಿನ್ ಇಟ್ಟುಕೊಂಡಿದ್ದರು. ಅದ್ಯಾಕೋ ಏನೋ ಬಂದ ಕೋರಸ್ ಕಲಾವಿದರೆಲ್ಲ ತಮಿಳರು. ಏನು ಮಾಡಿದರೂ ನನ್ನ ಕನ್ನಡ ಹಾಡು ಅವರ ಬಾಯಿಯಲ್ಲಿ ಹೊರಳಲೇ ಇಲ್ಲ. ಜೊತೆಗೆ ಹಲವು "ಡ" ಕಾರ ಗಳನ್ನೂ ಹೊಂದಿ ಅದು ನಿಜಕ್ಕೂ ಟಂಗ್ ತ್ವಿಸ್ತರ್ ಆಗಿತ್ತು. ನನ್ನ ಹಾಡಿನ ಶಬ್ದಗಳ ಬಗ್ಗೆಯೇ ಅವರು ನಯವಾಗಿ ಆಕ್ಷೇಪ ಎತ್ತಿದಾಗ ನಾನೂ ನಯವಾಗಿ ಅವರನ್ನು ಬೀಳ್ಕೊಟ್ಟೆ. ಮತ್ತೆ ಲಗುಬಗೆಯಿಂದ ನಾಲ್ಕೈದು ಕನ್ನಡ ಗಾಯಕರನ್ನು ಹೊಂದಿಸಲಾಯಿತು.

ಈ ಜಿಂಗಲ್ ರಚನೆಯಲ್ಲಿ ಇನ್ನೆರಡು ಮುಖ್ಯ ಅಂಗಗಳಿವೆ. ಒಂದು, ಹಾಡಿನ ಮೊದಲು ಮತ್ತು ಒಳಗೆ ಹೆಣೆದುಕೊಂಡಿರುವ ಆಲಾಪ. ಇನ್ನೊಂದು ತೀವ್ರ ಸ್ತರದಲ್ಲಿ ಹಾಡಬೇಕಾದ ಕ್ಲೈಮ್ಯಾಕ್ಸ್. ಆಲಾಪಕ್ಕೆ ಎಂ. ಡಿ. ಪಲ್ಲವಿ ಜೊತೆಗೆ ಕೆಲಸ ಮಾಡುವ ಅವಕಾಶ ನನ್ನದಾಯಿತು. ಬಂದ ಅರ್ಧ ಗಂಟೆಯೊಳಗೆ ನಮಗೆ ಬೇಕಾದಂತೆ ಹಲವು ಆಲಾಪಗಳನ್ನು ಕೊಟ್ಟು ಎಂ.ಡಿ. ಪಲ್ಲವಿ ತೆರಳಿದರು.

ಇನ್ನುಳಿದದ್ದು ಕ್ಲೈಮ್ಯಾಕ್ಸ್. ಇದು ಜಿಂಗಲ್ ನ ಹಿಮ್ಮೇಳದಲ್ಲಿ ಕೆಳಿದನ್ತೆನಿಸಿದರೂ ಒಟ್ಟು ಹಾಡಿಗೆ ವೀರ ರಸವನ್ನು ಕೊಡುವ ಅಂಗ ಇದು. ಆಲ್ವಿನ್ ಹೇಳುವ ಪ್ರಕಾರ ಆ ಸ್ತರದಲ್ಲಿ ಹಾಡುವ ಸಾಮರ್ಥ್ಯ ಇರುವುದು ರಘುಪತಿ ದೀಕ್ಷಿತ್ ಗೆ ಮಾತ್ರ. ರಘು ದೀಕ್ಷಿತ್ ಬ್ಯಾಂಡಿನಲ್ಲಿ ಲೀಡ್ ಗಿಟಾರಿಸ್ಟ್ ಆಗಿದ್ದ ಆಲ್ವಿನ್ಗೂ ರಘು ಅವರಿಗೂ ಸ್ನೇಹ ಚೆನ್ನಾಗಿಯೇ ಇದ್ದರೂ ಅದ್ಯಾಕೋ ಒಂದು ಪುಟಗೋಸಿ ಕೋರಸ್ ಹಾಡುವಂತೆ ಕರೆಯಲು ಆಲ್ವಿನ್ಗೆ ಅಳುಕು. ಆದರೂ ಆಲ್ವಿನ್ ಕರೆದೊಡನೆ ಬಂದು ನಮಗೆ ಬೇಕಾದ್ದನ್ನು ಕೊಟ್ಟು ತಮ್ಮ ಸ್ನೇಹ ಮೆರೆದರು ರಘು ದೀಕ್ಷಿತ್.

ಎಲ್ಲ ಮುಗಿದು ನನ್ನ ಲ್ಯಾಪ್ ಟಾಪ್ ನಲ್ಲಿಟ್ಟು ಹುಬ್ಬಳ್ಳಿಗೆ ಹೋದೆ. ಆನಂದ ಸಂಕೇಶ್ವರರಿಗೆ ಕೇಳಿಸಿದಾಗ ಅವರ ಯೋಚನೆ ಇನ್ನೂ ಎತ್ತರಕ್ಕೆ ಹರಿಯಲಾರಂಭಿಸಿತು. "ಇದಕ್ಕೊಂದು ಫಿಲಂ ಮಾಡಿದ್ರೆ ಚಲೋ ಇರ್ತದ್ರೀ" ಅಂದ್ರು. ಅದಾಗಿ ಕೆಲವೇ ಸಮಯದಲ್ಲಿ ವಿಜಯ ಕರ್ನಾಟಕ ಟೈಮ್ಸ್ ಮಡಿಲಲ್ಲಿತ್ತು. ಹಾಗಾಗಿ ಆ ಯೋಜನೆ ಕೈಗೂಡಲಿಲ್ಲ.

ಈ ಜಿಂಗಲ್ ಗೆ ಮಿಶ್ರ ಪ್ರತಿಕ್ರಿಯೆ ನನಗೆ ದೊರಕಿದೆ. ಒಟ್ಟಿನಲ್ಲಿ ನನ್ನ ಎಲ್ಲ ವೃತ್ತಿಪರ ಕೆಲಸಗಳ ನಡುವೆ ವಿಶೇಷ ಸಾಂತ್ವನ ನೀಡಿದ ಕೆಲಸವಿದು.



VK Jingle | Upload Music

ಮಾರ್ಚ್ 11, 2009

ರಂಗು ಚೆಲ್ಲುವ ಹೋರೀ


ಇಂದು ಹೋಳಿ.

ಇಲ್ಲಿ ದೆಹಲಿಯಲ್ಲಿ ಕುಳಿತು ನಾನು ಈ ಬ್ಲಾಗನ್ನು ಬರೆಯುತ್ತಿರುವಾಗ ಹೊರಗೆ ಹೋಳಿಯ ಸಡಗರ ಮುಗಿಲು ಮುಟ್ಟಿದೆ. ಕೃಷ್ಣಾ ನಗರದ ಗಲೀ ನಂಬರ ೭ ರ ನೆಲ ಕೆಂಪಾಗಿದೆ. ಡೋಲು, ಕೇಕೆ, ನೀರು ಚೆಲ್ಲುವ ಸದ್ದು, ಬಣ್ಣದ ಹುಡಿಯ ಧೂಲಿ ಜೊತೆಗೆ ಕೈಲಾಶ್ ಖೇರ್ ನ ದೊರಗು ಕಂಠದ "ಚಕ್ಕದೆ ಪಟ್ಟೆ" ಹಾಡು ನನ್ನನ್ನು ಮತ್ತೆ ಹೊರಗೆ ಓಡಿ ಬಣ್ಣಗೆಲ್ಲಲ್ಲು ಒತ್ತಾಯಿಸುತ್ತಿದೆ.

ಮೊನ್ನೆ ಮೊನ್ನೆ ಬಂಟ್ವಾಳ ತೇರಿನ ಓಕುಳಿಯ ರಂಗು ಇನ್ನೂ ಬಿಟ್ಟಿಲ್ಲ. ಮೇಲಾಗಿ ಪುಟಾಣಿ ಅನಿರುದ್ಧನ ಆಸ್ತೆಯೂ ಇಂದು ಇಲ್ಲ. ಅವನ ಒತ್ತಾಯದಿಂದಲೇ ಅಲ್ಲವೇ ಹೊರ ಹೋಗಿ ಕೆಂಪಾಗಿದ್ದು. ನೇತ್ರಾವತಿ ನೀರಿಡಿ ಕೆಂಪಾದರೂ ನಮ್ಮ ಓಕುಳಿ ಮುಗಿದಿರಲಿಲ್ಲ. ಶಾಲೆಗೆ ಯಾಕೆ ಬರಲಿಲ್ಲ ಎಂದು ಟೀಚರ್ ಕೇಳಿದ್ದಕ್ಕೆ ಮೊನ್ನೆ ತೇರು ನಿನ್ನೆ ಓಕುಳಿ ಎಂದನಂತೆ. ಸೀಮಾ ಫೋನಿನಲ್ಲಿ ನಗುತ್ತಿದ್ದಾಳೆ.

ಗಿರಿಜಾ ದೇವಿ ಹೋರೀ ಹಾಡುತ್ತಿದ್ದಾಳೆ.
"ರಂಗ ಡಾಲೂಂಗಿ ರೇ ಮೈ
ನಂದಕೆ ಲಾಲನ ಪರ
ಹಾಂ ರಂಗ ಡಾಲೂಂಗಿ"

ಹೋರಿ ಎನ್ನುವುದು ಹಿಂದೂಸ್ತಾನಿ ಸಂಗೀತದ ಒಂದು ಲಘು ಪ್ರಕಾರ. ಗಿರಿಜಾ ದೇವಿ ಹೋರಿ ಹಾಡಿದರೆ ಬಿರ್ಜು ಮಹಾರಾಜ್ ಅಥವಾ ಯಾವುದೇ ನರ್ತಕ ಸುಮ್ಮನೆ ಕುಳಿತಿರಲು ಸಾಧ್ಯವೇ ಇಲ್ಲ. ಕೈ ಕಟ್ಟಿ ಹಾಕಿದರೂ ಹುಬ್ಬು ಕುಣಿಸಿ, ಕಣ್ಣು ಹಿಗ್ಗಿಸಿ, ಗಲ್ಲ ನಡುಗಿಸಿ, ತುಟಿ ಬಗ್ಗಿಸಿ, ಕತ್ತು ಕೊಂಕಿಸಿ ಭಾವ ಚೆಲ್ಲಿಯಾನು. ಅಷ್ಟು ಅನಾಯಾಸ ಅವಳ ಹಾಡುವ ಶೈಲಿ.

ಕಜರೀ, ಚೈತೀ, ಸಾವ್ನೀ, ಝೂಲಾ ಮೊದಲಾದ ಜನಪದ ಶೈಲಿಯ ಲಘು ಸಂಗೀತಕ್ಕೆ ಸಲ್ಲುವ "ಹೋರೀ" ಹೊಲಿಯಾಟದ ರಂಗು ಚೆಲ್ಲುತ್ತದೆ. ಅಲ್ಲಿನ ಒದ್ದೆಯಾಗುವ ಸಂಭ್ರಮ, ಬಣ್ಣ ಗೆದ್ದ ಬಳಿಕ ಕಳಚಿಕೊಳ್ಳುವ ತರಳೆಯರ ಸಂಕೋಚ, ಹಾಗೆ ಸಂಕೋಚ ಕಳಚಿದ ಮೇಲೆ ವಿಜ್ರಂಭಿಸುವ ಆ ನಿರ್ಭಿಡ ಹೆಣ್ಣುತನದ ಶೃಂಗಾರ ಎಲ್ಲವೂ ನವಿರಾಗಿ ತುಂಟ ಪದ ಚಾತುರ್ಯಗಳಲ್ಲಿ ಬಯಲಾಗುತ್ತವೆ.

ಇಲ್ಲಿ ನನಗೆ ಮತ್ತೊಬ್ಬ ಗಾಯಕಿ ನೆನಪಾಗುತ್ತಾಳೆ. ಅವಳ ಹೆಸರು ಬೇಗಂ ಅಖ್ತರ್. ಠುಮ್ರಿ ಸಾಮ್ರಾಜ್ಞಿ ಎಂದೇ ಹೆಸರಾಗಿರುವ ಬೇಗಂ ಅಖ್ತರ್ ಎಂಬ ಐತಿಹ್ಯ ಹಾಡಿರುವ ಒಂದು ಹೋರಿ ಇಲ್ಲಿದೆ.

"ಕೌನ್ ತರಾಹ ಸೆ ತುಮ ಖೇಲತ ಹೋಲೀ ರೆ"
"ಎಂತಹ ಹೋಳಿಯಾಟ ಮಾರಾಯಾ ನಿನ್ನದು" ಆರೋಪಿಸುವ ಗೋಪಿಕೆಯ ಹಾಡು ಇದು.

"ಗಾಲೀ ಮೈ ದೂಂಗಿ, ತೋಸೆ ನಾ ಢರೂಂಗಿ
ದೇಖೋ ಲಲ್ಲಾ ಮೋರೀ..."
ಎಂದು ಎಚ್ಚರಿಸುತ್ತ ಹೋಲಿಯಾಡುವ ಗೋಪಿಕೆಯ ಆಗ್ರಹವನ್ನು ಬೇಗಂ ಅಖ್ತರ್ ಇಲ್ಲಿ ಅಮರಗೊಳಿಸುತ್ತಾಳೆ.
ವಾಹ್!

ಹೋಲೀ ಹೈ!
ಹೋಲೀ ನಿಮ್ಮೆಲ್ಲರ ಬದುಕಿನಲ್ಲೂ ಬಣ್ಣ ಚೆಲ್ಲಲಿ.