ಜನವರಿ 11, 2009

ಭಾಗಿರಥಿ ಮತ್ತು ಬಿಸ್ಲೇರಿ


ಆ ಮಂಜುಮುಸುಕಿದ
ಬೆಳಗಿನ ಜಾವದಲ್ಲಿ

ಗಂಗೆಯ ಸೆರಗು ಹಿಡಿದಿರುವ
ಆತ್ಮಗಳೆಲ್ಲ
ಸಾಲಾಗಿ ಕುಕ್ಕುರು ಕುಳಿತು
ಗುಳಿ ಬಿದ್ದ ಕಣ್ಣುಗಳಿಂದ
ದಡದಲ್ಲಿ ಉರಿಯುತ್ತಿರುವ
ತಮ್ಮ ನಶ್ವರ ಕಾಯಗಳನ್ನು
ದಿಟ್ಟಿಸಿ ನೋಡುತ್ತಿದ್ದಾಗ

ದಾಟಿಹೋದ
ದೋಣಿಯಲ್ಲೊಬ್ಬ ಮಗ
ಕೆಂಪು ಬಟ್ಟೆ ಸುತ್ತಿದ
ಅಸ್ಥಿ ಕರಂಡಕವನ್ನು ತೆರೆದು
ಭಾವುಕನಾಗಿ
ಗಂಗೆಗೆ ಸುರಿಯುತ್ತಿದ್ದಾಗ

ವಾರಣಾಸಿಯ ಅಗಸರೆಲ್ಲರೂ
ಅಸಂಖ್ಯ ಹೋಟೆಲುಗಳ
ವೃದ್ಧಾಶ್ರಮಗಳ
ಆಸ್ಪತ್ರೆಗಳ
ಹಾಸು ಹೊದಿಕೆಗಳನ್ನು
ಬೆಳಗಿಸಲು ಯತ್ನಿಸುತ್ತಿದ್ದಾಗ

ಆ ೮೦ ಪವಿತ್ರ ಘಟ್ಟಗಳ
ಮೇಲಿನಿಂದ
ಅಸಂಖ್ಯ ಅಘನಾಶಿನಿಗಳು
ಗಂಗೆಯೊಳಗೆ
ಸಂಗಮವಾಗುತ್ತಿದ್ದಾಗ

ನಾನು
ಚೌಕಾಸಿ ಹಚ್ಚಿ
ಮೂರುಗಂಟೆ ಪೂರ್ತಾ
ಬೇಕೆಂದು ಇರಿಸಿಕೊಂಡ
ದೋಣಿಯವನು
ನಡು ನೀರಿನಲ್ಲಿ
ದೋಣಿ ನಿಲ್ಲಿಸಿ
ಬಗ್ಗಿ
ನೀರು ಬಾಚಿ
ಕಣ್ಣಿಗೊತ್ತಿ
ಮತ್ತೆ ಮತ್ತೆ
ಮೊಗೆದು
ಕುಡಿಯುತ್ತ
ಬಾಯಾರಿಕೆ
ತಣಿಸಿಕೊಂಡ.

ನಾನು ಅಲ್ಲೇ
ತೇಲಿ ಹೋಗುತ್ತಿರುವ
ಹೊಚ್ಚ ಹೊಸ
ಖಾಲಿ
ಬಿಸ್ಲೇರಿ ಬಾಟಲಿಯನ್ನೇ
ನೋಡುತ್ತಾ
ಸಂತೈಸಿಕೊಂಡೆ

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ