ಮಾರ್ಚ್ 27, 2009

(ಧರ್ಮ) ವಿರೋಧಿಯ ಶುಭಾಶಯಗಳು

ಸಾವಿರಾರು ಕನ್ನಡ ಶಿಲಾ ಶಾಸನಗಳನ್ನು ನೆಟ್ಟ ಮಧ್ಯಯುಗದ ಧರ್ಮಭೀರು ಕನ್ನಡಿಗರು ಸದರಿ ಶಾಸನಗಳಲ್ಲಿ ಉಲ್ಲೇಖಿಸಲಾದ ದಾನ, ದತ್ತಿ, ನಂದಾದೀಪ ಸೇವೆ, ಮೊಸರೋಗರ, ನಿತ್ಯಪಡಿ, ಬ್ರಾಹ್ಮಣ ಸಂತರ್ಪಣೆ, ಕಾಲ ಕಾಲಕ್ಕೆ ಆಚಂದ್ರಾರ್ಕ ಸ್ಥಾಯಿಯಾಗಿ ನಡೆಸಿಕೊಂಡು ಹೋಗುವ ಕಾರ್ಯಗಳನ್ನು ತಮ್ಮ ಮುಂದಿನ ಪೀಳಿಗೆಗಳು ತಪ್ಪದೆ ನಡೆಸಿಕೊಂಡು ಹೋಗುವ ಸಲುವಾಗಿ ಪ್ರತೀ ಶಾಸನಗಳಲ್ಲೂ ಇದಕ್ಕೆ ತಪ್ಪಿದರೆ ಏನಾಗುತ್ತದೆ ಎಂಬ ವಾಕ್ಯಗಳನ್ನು ಹಲವು ರೀತಿಯಲ್ಲಿ ಬರೆದು ತಮ್ಮ ಕ್ರಿಯಾ ಶೀಲತೆಯನ್ನು ಮೆರೆದಿದ್ದಾರೆ.

ಇವುಗಳಲ್ಲಿ ಅನೇಕ ಶಾಸನಗಳು ವಾರಣಾಸಿಯಲ್ಲಿ ಗಂಗೆಯ ತಡಿಯಲ್ಲಿ ಗೋ, ಸ್ತ್ರೀ, ತಾಯಿ, ಮತ್ತು ಬ್ರಾಹ್ಮಣರ ಹತ್ಯೆ ಮಾಡಿದ ಪಾಪದ ಬಗ್ಗೆ ಎಚ್ಚರಿಸುತ್ತವೆ. ಹಲವು ಶಾಸನಗಳು ಸಮಾಜದಲ್ಲಿ ಸಲ್ಲದು ಎನಿಸುವಂತಹ ಕಾರ್ಯಗಳನ್ನು ಮಾಡಿದ ಪಾಪದ ಬಗ್ಗೆ ಎಚ್ಚರಿಸುವವು.

ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿರುವ ಸೌತ್ ಇಂಡಿಯನ್ ಇನ್ಸ್ಕ್ರಿಪ್ಶನ್ಸ್ ಸಂಪುಟ ೯ ಭಾಗ ೨ರಲ್ಲಿ ಕೊಡಲಾದ ಶಾಸನಗಳ ಪೂರ್ಣ ಪಾಠಗಳಲ್ಲಿ ಉಲ್ಲೇಖವಾಗಿರುವ ಅಂತಹ ಕೆಲವು ವಾಕ್ಯಗಳು ಇಲ್ಲಿವೆ.

೧. ಶ್ರೀಗಂಗೆಯಲು ಗೋವಧೆ ಬ್ರಾಹ್ಮಣವಧೆ ಮಾಡಿದ ಪಾಪಕೆ ಹೊಹರು.
೨. ವಾರನಾಸಿಯಲೂ ಸಾವಿರ ಬ್ರಾಹ್ಮರುನೂ ಸಾವಿರ ಕಪಿಲೆಯನೂ ಕೊಂದ ದೋಷ
೩. ತಂನ ಬಸುರಲಿ ಬಂದ ಮಗಳನೂ ತಾನೇ ಮದುವಳಿಗೆಯಾಗಿ ಮಾಡಿಕೊಂಡ ಪಾಪ
೪. ಗಂಗೆಯ ತಡಿಯಲು ತಂಮ ತಂದೆ ತಾಯಿಯರ ಕೊಂದ ಪಾಪ
೫. ವಾರಣಾಸೀಲಿ ಪಂಚ ಮಹಾಪಾತಕಗಳನ್ನು ಮಾಡಿದ ಪಾಪ
೬. ಗಂಗೆಯ ತಡಿಯಲು ಮಧ್ಯನದಲು ಕೊಂದ ಪಾಪ
೭. ಅರಮನೆಗೆ ಗುರುಮನೆಗೆ ಅಪರಾಧ ಕೊಡಬೇಕು.
೮. ಸ್ವಾನ ಮಾಂಸ ತಿಂದವರೂ
೯. ಏಳು ಘಟ್ಟಗಳಿನ್ದಿಳಿದ ಕಪಿಲೆಯರ ಕೊಂದ ದೋಷ

ಈ ಕೆಳಗಿನ ವಾಕ್ಯಗಳನ್ನು ಸ್ವಯಮ್ ಸೆನ್ಸಾರ್ ಮಾಡಿದ್ದೇನೆ:ಮೆಲುಮನಸಿನವರು ಓದದಿರುವುದು ಉಚಿತ

೧೦. ಸ್ವಮಾತ್ರು ಗುರುಪತ್ನಿ ಗಮನವನ್ನು ಮಾಡಿದ ಪಾಪ
೧೧. ಅವನ ಹೆಂಡತಿಯನು ೧೮ ಜಾತಿಗಳು ಸುಂ* ಅವನ ಬಾಯಿಗೆ ಕತೆ ತು* ಸುರಾಪಾನ ಕಲ್ಲುಪ್ಪು
೧೨. ತಂಮ ಹಿರಿಮಗನ ತಲೆಬುರುಡೆಯಲಿ ಮಧ್ಯಪಾನವ ಹೊಯ್ಕೊಂಡು ಅನುಭವಿಸಿದವರು ಕಾಶೀ ಕ್ಷೇತ್ರದಲಿ...
೧೩. ಯೀ ಧರ್ಮಕೆ ತಪ್ಪಿದವರು ಹೇಲೊಳಗಣ ಹುಳುವಾಗಿ ಯಿರಲುಳವರು
೧೪. ಚಾಂಡಾಲರ ಬಸುರು ಬಂದವರು
೧೫. ತಂಮ ಅಭಿಮಾನವ ತಂಮ ಸತಿಯ ಹಿಡಿದವಗೆ ಕೊಟವರು
೧೬. ಹಂದಿ ಭಕ್ಷಿಸಿದವರು, ಗೋಮಾಂಸ ಸ್ವಾನ ಮಾಂಸ ತಿಂದವರು
೧೭. ಕತೆಯ ತು* ತಿಂದವರು ವಾರಣಾಸಿಲಿ ಬ್ರಾಹ್ಮಣನ ಕೊಂದ ಪಾಪ

ಹೆಚ್ಚಿನ ಶಾಸನಗಳು ಕೊನೆಯಾಗುವ ಶ್ಲೋಕ:
ಸ್ವದತ್ತಂ ಪರದತ್ತಾಂ ವಾ ಯೋ ಹರೆತಿ ವಸುಂಧರಾಂ
ಷಷ್ಠಿ ವರ್ಷ ಸಹಸ್ರಾಣಿ ವಿಷ್ಟಾಯಾಂ ಜಾಯತೆ ಕ್ರಿಮಿ
(ಈ ಶ್ಲೋಕವನ್ನು ಶಾಸನಗಳಲ್ಲಿ ಪ್ರಕಟವಾಗಿರುವ ರೀತಿಯಲ್ಲೇ ಉಲ್ಲೇಖಿಸಿದ್ದೇನೆ. ಇದರ ಸರಿಯಾದ ಪಾಠವನ್ನು ಶಾಸ್ತ್ರಗಳಲ್ಲಿ ಹುಡುಕಲು ಹೋಗಿಲ್ಲ)

ಶಾಸನಗಳಲ್ಲಿ ಉಲ್ಲೇಖಿಸಿರುವ ಸೇವಾ ಕಾರ್ಯಗಳನ್ನು ಮಾಡಲು ಭೂಮಿ ಕಾಣಿ ಒದಗಿಸಿ ಅವನ್ನು ಹಸ್ತಾಂತರಿಸುವ ಬಗೆ ಹೀಗಿದೆ.
"ಯಿಂತೀ ಚತುಸ್ಸೀಮೆಯಿಂದೋಳಗುಳ್ಳ ಮನೆ ಬಾವಿ ಗದ್ದೆ ಹಕ್ಕಲು ಹಡು ಬೆಟ್ಟು ತಿಪ್ಪೆ ಮಕ್ಕಿ ಮೆಕ್ಕೆ ಬಯಲು ಕಳೆ ಕೆರೆ ಮರ ನೆಕ್ಕಿ ನಿಡಿಲು ನಿಧಿ ನಿಕ್ಷೇಪ ಜಲ ಪಾಷಾಣ ಆಕ್ಶಿಣೀ ಆಗಾಮಿ ಸಿದ್ಧ ಸಾಧ್ಯ ಯಿಂತೀ ಅಷ್ಟಭೋಗ ತೇಜಸ್ಸಾಂಮ್ಯ ಸಹಿತವಾಗಿ ಸಹಿರಣ್ಯೋದಕದಾನ ಧಾರಾಪೂರ್ವಕವಾಗಿ ಆಚಂದ್ರಾರ್ಕಸ್ಥಾಯೀ ಆಗಿ ಭೋಗಿಸುವರೆಂದು..."
ಹೀಗೆ ದಾನವಾಗಿ ಬಂದ ಭೂಮಿಯಿಂದ ಫಲವನ್ನು ಅನುಭವಿಸಿಕೊಂಡು ಬರುವಂತವರು ಶಾಸನಗಳಲ್ಲಿ ಹೇಳಲಾದಂತಹ ಸೇವಾಕಾರ್ಯಗಳನ್ನು ಕೈಗೊಳ್ಳಬೇಕಾದ ಕೆಲವು ದೇವಾಲಯಗಳೇ ಈಗ ಇಲ್ಲ. ಇರುವ ಹಲವಾರು ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳೇ ನಡೆಯುತ್ತಿಲ್ಲ. ಪುರಾತತ್ವ ಇಲಾಖೆ ವಶ ಪಡಿಸಿಕೊಂಡ ಶಾಸನಗಳೇ ಸಾವಿರಾರು, ಇನ್ನೂ ಸಾವಿರಾರು ಶಾಸನಗಳು ಬಟ್ಟೆ ಒಗೆಯುವ ಕಲ್ಲುಗಳು ಮತ್ತು ಚರಂಡಿ ಪಾಜೆಗಳಾಗಿವೆ. ದಾನವಾಗಿ ಬಂದ ಭೂಮಿಗಳ ಈಗಿನ ಒಡೆಯರಿಗೆ ತಂಮ ಬಚ್ಚಲ ನೀರು ಹರಿವ ಶಾಸನದ ಕಲ್ಲು ಎಂತಹ ಸಂದೇಶವನ್ನು ಕೊಡುತ್ತಿದೆ ಎಂಬ ಅರಿವಿಲ್ಲ. ಹಲವಾರು ಧರ್ಮ ಭೀರುಗಳು ಇಂಥ ಶಾಸನದ ಪ್ರಶಸ್ತ ಕಲ್ಲಿನ ಪಾಜೆಗಳನ್ನು ಕಕ್ಕಸು ಗುಂಡಿ ಮುಚ್ಚಲು ಬಳಸಿ ಸಂಸ್ಕೃತಿ ಉಳಿಸುವ ಧರ್ಮ ಕಾರ್ಯದಲ್ಲಿ ತೊಡಗಿದ್ದಾರೆ.

ಆಚಂದ್ರಾರ್ಕ ಸ್ಥಾಯಿ ಪಾಲಿಸಿಕೊಂಡು ಬರಬೇಕಾದ ಕಾರ್ಯವನ್ನು ಮಾಡದೆ ಮೇಲಿನ ಪಾಪಗಳಿಗೆ ಗುರಿಯಾಗುತ್ತಿರುವ ಅಸಂಖ್ಯ ಕನ್ನಡಿಗರಿಗೆ (ಧರ್ಮ)"ವಿರೋಧಿ"ಯ ಶುಭಾಶಯಗಳು.

ದಾನಾತ್ಸ್ವರ್ಗಮವಾಪ್ನೋತಿ ಪಾಲನಾದಚ್ಯುತಪದಂ

1 comments:

ಪುರುಷೋತ್ತಮ ಬಿಳಿಮಲೆ ಹೇಳಿದರು...

These information needs an indepth study, Thanks for collecting those statements.

ಕಾಮೆಂಟ್‌‌ ಪೋಸ್ಟ್‌ ಮಾಡಿ