ಮಾರ್ಚ್ 27, 2009

(ಧರ್ಮ) ವಿರೋಧಿಯ ಶುಭಾಶಯಗಳು

ಸಾವಿರಾರು ಕನ್ನಡ ಶಿಲಾ ಶಾಸನಗಳನ್ನು ನೆಟ್ಟ ಮಧ್ಯಯುಗದ ಧರ್ಮಭೀರು ಕನ್ನಡಿಗರು ಸದರಿ ಶಾಸನಗಳಲ್ಲಿ ಉಲ್ಲೇಖಿಸಲಾದ ದಾನ, ದತ್ತಿ, ನಂದಾದೀಪ ಸೇವೆ, ಮೊಸರೋಗರ, ನಿತ್ಯಪಡಿ, ಬ್ರಾಹ್ಮಣ ಸಂತರ್ಪಣೆ, ಕಾಲ ಕಾಲಕ್ಕೆ ಆಚಂದ್ರಾರ್ಕ ಸ್ಥಾಯಿಯಾಗಿ ನಡೆಸಿಕೊಂಡು ಹೋಗುವ ಕಾರ್ಯಗಳನ್ನು ತಮ್ಮ ಮುಂದಿನ ಪೀಳಿಗೆಗಳು ತಪ್ಪದೆ ನಡೆಸಿಕೊಂಡು ಹೋಗುವ ಸಲುವಾಗಿ ಪ್ರತೀ ಶಾಸನಗಳಲ್ಲೂ ಇದಕ್ಕೆ ತಪ್ಪಿದರೆ ಏನಾಗುತ್ತದೆ ಎಂಬ ವಾಕ್ಯಗಳನ್ನು ಹಲವು ರೀತಿಯಲ್ಲಿ ಬರೆದು ತಮ್ಮ ಕ್ರಿಯಾ ಶೀಲತೆಯನ್ನು ಮೆರೆದಿದ್ದಾರೆ.

ಇವುಗಳಲ್ಲಿ ಅನೇಕ ಶಾಸನಗಳು ವಾರಣಾಸಿಯಲ್ಲಿ ಗಂಗೆಯ ತಡಿಯಲ್ಲಿ ಗೋ, ಸ್ತ್ರೀ, ತಾಯಿ, ಮತ್ತು ಬ್ರಾಹ್ಮಣರ ಹತ್ಯೆ ಮಾಡಿದ ಪಾಪದ ಬಗ್ಗೆ ಎಚ್ಚರಿಸುತ್ತವೆ. ಹಲವು ಶಾಸನಗಳು ಸಮಾಜದಲ್ಲಿ ಸಲ್ಲದು ಎನಿಸುವಂತಹ ಕಾರ್ಯಗಳನ್ನು ಮಾಡಿದ ಪಾಪದ ಬಗ್ಗೆ ಎಚ್ಚರಿಸುವವು.

ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿರುವ ಸೌತ್ ಇಂಡಿಯನ್ ಇನ್ಸ್ಕ್ರಿಪ್ಶನ್ಸ್ ಸಂಪುಟ ೯ ಭಾಗ ೨ರಲ್ಲಿ ಕೊಡಲಾದ ಶಾಸನಗಳ ಪೂರ್ಣ ಪಾಠಗಳಲ್ಲಿ ಉಲ್ಲೇಖವಾಗಿರುವ ಅಂತಹ ಕೆಲವು ವಾಕ್ಯಗಳು ಇಲ್ಲಿವೆ.

೧. ಶ್ರೀಗಂಗೆಯಲು ಗೋವಧೆ ಬ್ರಾಹ್ಮಣವಧೆ ಮಾಡಿದ ಪಾಪಕೆ ಹೊಹರು.
೨. ವಾರನಾಸಿಯಲೂ ಸಾವಿರ ಬ್ರಾಹ್ಮರುನೂ ಸಾವಿರ ಕಪಿಲೆಯನೂ ಕೊಂದ ದೋಷ
೩. ತಂನ ಬಸುರಲಿ ಬಂದ ಮಗಳನೂ ತಾನೇ ಮದುವಳಿಗೆಯಾಗಿ ಮಾಡಿಕೊಂಡ ಪಾಪ
೪. ಗಂಗೆಯ ತಡಿಯಲು ತಂಮ ತಂದೆ ತಾಯಿಯರ ಕೊಂದ ಪಾಪ
೫. ವಾರಣಾಸೀಲಿ ಪಂಚ ಮಹಾಪಾತಕಗಳನ್ನು ಮಾಡಿದ ಪಾಪ
೬. ಗಂಗೆಯ ತಡಿಯಲು ಮಧ್ಯನದಲು ಕೊಂದ ಪಾಪ
೭. ಅರಮನೆಗೆ ಗುರುಮನೆಗೆ ಅಪರಾಧ ಕೊಡಬೇಕು.
೮. ಸ್ವಾನ ಮಾಂಸ ತಿಂದವರೂ
೯. ಏಳು ಘಟ್ಟಗಳಿನ್ದಿಳಿದ ಕಪಿಲೆಯರ ಕೊಂದ ದೋಷ

ಈ ಕೆಳಗಿನ ವಾಕ್ಯಗಳನ್ನು ಸ್ವಯಮ್ ಸೆನ್ಸಾರ್ ಮಾಡಿದ್ದೇನೆ:ಮೆಲುಮನಸಿನವರು ಓದದಿರುವುದು ಉಚಿತ

೧೦. ಸ್ವಮಾತ್ರು ಗುರುಪತ್ನಿ ಗಮನವನ್ನು ಮಾಡಿದ ಪಾಪ
೧೧. ಅವನ ಹೆಂಡತಿಯನು ೧೮ ಜಾತಿಗಳು ಸುಂ* ಅವನ ಬಾಯಿಗೆ ಕತೆ ತು* ಸುರಾಪಾನ ಕಲ್ಲುಪ್ಪು
೧೨. ತಂಮ ಹಿರಿಮಗನ ತಲೆಬುರುಡೆಯಲಿ ಮಧ್ಯಪಾನವ ಹೊಯ್ಕೊಂಡು ಅನುಭವಿಸಿದವರು ಕಾಶೀ ಕ್ಷೇತ್ರದಲಿ...
೧೩. ಯೀ ಧರ್ಮಕೆ ತಪ್ಪಿದವರು ಹೇಲೊಳಗಣ ಹುಳುವಾಗಿ ಯಿರಲುಳವರು
೧೪. ಚಾಂಡಾಲರ ಬಸುರು ಬಂದವರು
೧೫. ತಂಮ ಅಭಿಮಾನವ ತಂಮ ಸತಿಯ ಹಿಡಿದವಗೆ ಕೊಟವರು
೧೬. ಹಂದಿ ಭಕ್ಷಿಸಿದವರು, ಗೋಮಾಂಸ ಸ್ವಾನ ಮಾಂಸ ತಿಂದವರು
೧೭. ಕತೆಯ ತು* ತಿಂದವರು ವಾರಣಾಸಿಲಿ ಬ್ರಾಹ್ಮಣನ ಕೊಂದ ಪಾಪ

ಹೆಚ್ಚಿನ ಶಾಸನಗಳು ಕೊನೆಯಾಗುವ ಶ್ಲೋಕ:
ಸ್ವದತ್ತಂ ಪರದತ್ತಾಂ ವಾ ಯೋ ಹರೆತಿ ವಸುಂಧರಾಂ
ಷಷ್ಠಿ ವರ್ಷ ಸಹಸ್ರಾಣಿ ವಿಷ್ಟಾಯಾಂ ಜಾಯತೆ ಕ್ರಿಮಿ
(ಈ ಶ್ಲೋಕವನ್ನು ಶಾಸನಗಳಲ್ಲಿ ಪ್ರಕಟವಾಗಿರುವ ರೀತಿಯಲ್ಲೇ ಉಲ್ಲೇಖಿಸಿದ್ದೇನೆ. ಇದರ ಸರಿಯಾದ ಪಾಠವನ್ನು ಶಾಸ್ತ್ರಗಳಲ್ಲಿ ಹುಡುಕಲು ಹೋಗಿಲ್ಲ)

ಶಾಸನಗಳಲ್ಲಿ ಉಲ್ಲೇಖಿಸಿರುವ ಸೇವಾ ಕಾರ್ಯಗಳನ್ನು ಮಾಡಲು ಭೂಮಿ ಕಾಣಿ ಒದಗಿಸಿ ಅವನ್ನು ಹಸ್ತಾಂತರಿಸುವ ಬಗೆ ಹೀಗಿದೆ.
"ಯಿಂತೀ ಚತುಸ್ಸೀಮೆಯಿಂದೋಳಗುಳ್ಳ ಮನೆ ಬಾವಿ ಗದ್ದೆ ಹಕ್ಕಲು ಹಡು ಬೆಟ್ಟು ತಿಪ್ಪೆ ಮಕ್ಕಿ ಮೆಕ್ಕೆ ಬಯಲು ಕಳೆ ಕೆರೆ ಮರ ನೆಕ್ಕಿ ನಿಡಿಲು ನಿಧಿ ನಿಕ್ಷೇಪ ಜಲ ಪಾಷಾಣ ಆಕ್ಶಿಣೀ ಆಗಾಮಿ ಸಿದ್ಧ ಸಾಧ್ಯ ಯಿಂತೀ ಅಷ್ಟಭೋಗ ತೇಜಸ್ಸಾಂಮ್ಯ ಸಹಿತವಾಗಿ ಸಹಿರಣ್ಯೋದಕದಾನ ಧಾರಾಪೂರ್ವಕವಾಗಿ ಆಚಂದ್ರಾರ್ಕಸ್ಥಾಯೀ ಆಗಿ ಭೋಗಿಸುವರೆಂದು..."
ಹೀಗೆ ದಾನವಾಗಿ ಬಂದ ಭೂಮಿಯಿಂದ ಫಲವನ್ನು ಅನುಭವಿಸಿಕೊಂಡು ಬರುವಂತವರು ಶಾಸನಗಳಲ್ಲಿ ಹೇಳಲಾದಂತಹ ಸೇವಾಕಾರ್ಯಗಳನ್ನು ಕೈಗೊಳ್ಳಬೇಕಾದ ಕೆಲವು ದೇವಾಲಯಗಳೇ ಈಗ ಇಲ್ಲ. ಇರುವ ಹಲವಾರು ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳೇ ನಡೆಯುತ್ತಿಲ್ಲ. ಪುರಾತತ್ವ ಇಲಾಖೆ ವಶ ಪಡಿಸಿಕೊಂಡ ಶಾಸನಗಳೇ ಸಾವಿರಾರು, ಇನ್ನೂ ಸಾವಿರಾರು ಶಾಸನಗಳು ಬಟ್ಟೆ ಒಗೆಯುವ ಕಲ್ಲುಗಳು ಮತ್ತು ಚರಂಡಿ ಪಾಜೆಗಳಾಗಿವೆ. ದಾನವಾಗಿ ಬಂದ ಭೂಮಿಗಳ ಈಗಿನ ಒಡೆಯರಿಗೆ ತಂಮ ಬಚ್ಚಲ ನೀರು ಹರಿವ ಶಾಸನದ ಕಲ್ಲು ಎಂತಹ ಸಂದೇಶವನ್ನು ಕೊಡುತ್ತಿದೆ ಎಂಬ ಅರಿವಿಲ್ಲ. ಹಲವಾರು ಧರ್ಮ ಭೀರುಗಳು ಇಂಥ ಶಾಸನದ ಪ್ರಶಸ್ತ ಕಲ್ಲಿನ ಪಾಜೆಗಳನ್ನು ಕಕ್ಕಸು ಗುಂಡಿ ಮುಚ್ಚಲು ಬಳಸಿ ಸಂಸ್ಕೃತಿ ಉಳಿಸುವ ಧರ್ಮ ಕಾರ್ಯದಲ್ಲಿ ತೊಡಗಿದ್ದಾರೆ.

ಆಚಂದ್ರಾರ್ಕ ಸ್ಥಾಯಿ ಪಾಲಿಸಿಕೊಂಡು ಬರಬೇಕಾದ ಕಾರ್ಯವನ್ನು ಮಾಡದೆ ಮೇಲಿನ ಪಾಪಗಳಿಗೆ ಗುರಿಯಾಗುತ್ತಿರುವ ಅಸಂಖ್ಯ ಕನ್ನಡಿಗರಿಗೆ (ಧರ್ಮ)"ವಿರೋಧಿ"ಯ ಶುಭಾಶಯಗಳು.

ದಾನಾತ್ಸ್ವರ್ಗಮವಾಪ್ನೋತಿ ಪಾಲನಾದಚ್ಯುತಪದಂ

ಮಾರ್ಚ್ 24, 2009

ಅವನ ಇಳಿಗಾಲ ಹೊರೆಯಾಗದಿರಲಿ


ರಂಜಿಶ್ ಹೀ ಸಹೀ
ದಿಲ್ ಹೀ ದುಖಾನೆ ಕೆ ಲಿಯೇ ಆ
ಆ ಫಿರ್ ಸೆ ಮುಝೆ ಛೋಡ ಕೆ ಜಾನೇ ಕೆ
ಲಿಯೇ ಆ

ದ್ವೇಷಿಸಿದರೂ ಸರಿಯೇ
ನನ್ನ ಮನ ನೋಯಿಸಲಾದರೂ ಬಾ
ಬಾ ಮತ್ತೊಮ್ಮೆ ನನ್ನ ತೊರೆದು ಹೋಗಲಾದರೂ ಬಾ.

ಅಹಮದ್ ಫರಾಜ್ ಎಂಬ ಉರ್ದು ಕವಿ ಬರೆದ ಮೇಲಿನ ಕವನ ಬಹಳ ಮಂದಿ ಸುಮಧುರ ಕಂಠದವರು ಹಾಡಿದ್ದಾರೆ. ಆದರೆ ಈ ಹಾಡು ಮೆಹದಿ ಹಸನ್ ಎಂಬ ಗಝಲ್ ಗಾಯಕನ ಹಾಡೆಂದೇ ಪ್ರಖ್ಯಾತ. ಅಷ್ಟು ಮೋಡಿಯ ಕಂಠ ಅವನದು. ಲತಾ ಮಂಗೇಶ್ಕರ್ ಅವನ ಹಾಡುಗಳನ್ನು "ಭಗವಾನ್ ಕಾ ಸುರ್" ಅಂತಲೇ ಕರೆದಿದ್ದಾಳೆ.

ಮೆಹದಿ ಹಸನ್ ಅವನ ಮೋಡಿಯ ಕಂಠದಿಂದ, ಅವನ ಹಾಡುಗಳ ಆಯ್ಕೆಯಿಂದ ನಮ್ಮಲ್ಲಿ ಯೌವನದ ಪುಳಕವನ್ನು ನಿರಂತರಗೊಳಿಸಿದ್ದಾನೆ. ಅವನ ಅನೇಕ ಹಾಡುಗಳು ಅವನ ಸ್ವರದಲ್ಲಿಯೆ ನನ್ನ ಒಳಗೆ ರಿನ್ಗಣಿಸುತ್ತಲೇ ಇರುತ್ತವೆ. ಅಷ್ಟೊಂದು ಮಾಂತ್ರಿಕತೆ ಅವನ ಸ್ವರದಲ್ಲಿ. ರಾಗಗಳ ಧ್ಯಾನ ಮತ್ತು ಗಝಲ್ ನ ಲಾಲಿತ್ಯ ಎರಡರ ಉತ್ತುಂಗವನ್ನು ವೇದಿಕೆಗೆ ತಂದ ಅಪೂರ್ವ ಗಾಯಕ ಮೆಹದಿ ಹಸನ್.

ಮೆಹದಿ ಹಸನ್ ಹುಟ್ಟಿದ್ದು ರಾಜಸ್ಥಾನದ ಲೂನ ಎಂಬಲ್ಲಿ ಹಲವಾರು ಪೀಳಿಗೆಗಳಿಂದ "ಧ್ರುಪದ" ಶೈಲಿಯ ಹಾಡುಗಾರಿಕೆಯನ್ನು ಬೆಳೆಸಿಕೊಂಡು ಬಂದಂತಹ "ಕಲಾವಂತ" ಸಮುದಾಯದಲ್ಲಿ. ಧ್ರುಪದ್ ಬಗ್ಗೆ ಇನ್ನೊಮ್ಮೆ ಬರೆಯಬೇಕು. ಧ್ರುಪದ್ ಹಾಡುವುದನ್ನು ಕೇಳುವಾಗ, ಅದರ ಮಂತ್ರದಂತಹ ಆಲಾಪ ಸುತ್ತಲೂ ಟ್ರಾನ್ಸ್ ಹರಡುವಾಗ ಮೈಮರೆಯುವುದೇ ಒಂದು ಅನುಭೂತಿ. ಇರಲಿ.

ವಿಭಜನೆಯ ನೋವಿನ ದಿನಗಳಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೊಳ್ಳುವಾಗ ವೈಯಕ್ತಿಕ ಆಯ್ಕೆಗೆ ಬೆಲೆಯಿರದ ಗಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಮೆಹದಿ ಹಸನ್ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಗಬೇಕಾಗಿ ಬಂತು. ಹೊಟ್ಟೆ ಪಾಡಿಗಾಗಿ ಸೈಕಲ್ ರಿಪೇರಿ, ಮೋಟಾರ್ ರಿಪೇರಿ ಮಾಡಿ ಹಲವು ದಿನ ದೂಡಿದರೂ ಮೆಹದಿ ಹಸನ್ ನೊಳಗೆ ಸಂಗೀತದ ತುಡಿತ ಜೀವಂತವಾಗಿತ್ತು. ಕೊನೆಗೊಮ್ಮೆ ರೇಡಿಯೋ ಪಾಕಿಸ್ತಾನ್ ನಲ್ಲಿ ತುಮರಿ ಗಾಯಕನಾಗಿ ಕೆಲಸ ದೊರಕಿದಾಗ ಅವನ ಬದುಕಿನ ಹೋರಾಟ ಕೊನೆಗೊಂಡಿತು. ಮತ್ತೆ ನಡೆದದ್ದು ಒಂದು ಇತಿಹಾಸ. ಅವನ ಅನಭಿಷಿಕ್ತ ಗಝಲ್ ಸಾಮ್ರಾಟ್ ಎನ್ನುವ ಪದಕ್ಕೆ ಸಮನಾದವರು ತಾವಲ್ಲ ಎನ್ನುವುದನ್ನು ಎಲ್ಲ ಗಾಯಕರೂ ಒಪ್ಪಿಕೊಳ್ಳುತ್ತಾರೆ.

ಇಂದು ದೆಹಲಿಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯೊಂದು ನನ್ನನ್ನು ಕಾಡುತ್ತಿದೆ. ಮೆಹದಿ ಹಸನ್ ವೈದ್ಯಕೀಯ ಖರ್ಚುಗಳನ್ನು ಭರಿಸಲು ಅವನ ಕುಟುಂಬಕ್ಕೆ ಕಷ್ಟವಾಗುತ್ತಿದೆ. ಶ್ವಾಸಕೋಶದ ಸೋಂಕಿನಿಂದ ನರಳುತ್ತಿರುವ ಮೆಹದಿ ಹಸನ್ ಆಸ್ಪತ್ರೆಯಿಂದ ಮನೆಗೆ ಮರಳಿದರೂ ಅವನ ಇಳಿಗಾಲದಲ್ಲಿ ವೈದ್ಯಕೀಯ ಖರ್ಚೇ ಹೊರೆಯಾಗುತ್ತಿದೆ. ನಿಜಕ್ಕೂ ಅದು ದೊಡ್ಡ ವಿಷಯವಲ್ಲ. ವಿಶ್ವದಲ್ಲೆಲ್ಲ ಹರಡಿರುವ ಅವನ ಅಭಿಮಾನಿಗಳು ಹಣ ಕಳುಹಿಸಲು ಹಿಂದೆ ಮುಂದೆ ನೋಡಲಾರರು. ಎಲ್ಲಿ, ಹೇಗೆ ಎನ್ನವುದೇ ಸಮಸ್ಯೆ.

ನಮ್ಮ ಹರೆಯವನ್ನು ನಿರಂತರವಾಗಿಸಿದ ಮೆಹದಿ ಹಸನ್ ಗೆ ಇಳಿಗಾಲ ಹೊರೆಯಾಗದಿರಲಿ ಎನ್ನುವುದಷ್ಟೇ ನನ್ನ ಆಶಯ.