ಸೆಪ್ಟೆಂಬರ್ 19, 2008

ದರ್ಶನ

ದೇವಪ್ಪನಿಗೆ ಕಣ್ಣು ಬರ್ತದಂತೆ? ಚಾವಡಿಯಲ್ಲಿ ಕುಳಿತಿದ್ದ ದೇವಪ್ಪನಿಗೆ ಶ್ರೀನಿವಾಸ ನಾಯಕರ ಸ್ವರ ಕಿವಿಗೆ ಬಿತ್ತು. ಹೌದು ನಾಯಕರೇ! ತುಂಬ ಖರ್ಚುಂಟಂತೆ ಮಾತ್ರ. ಎಂದು ಉತ್ತರಿಸಿದ ದೇವಪ್ಪ.

ಇರಲಿ ಮಾರಾಯ! ಸಾಲವೋ ಸೋಲವೋ ಕಣ್ಣು ಬರುವುದಿದ್ದರೆ ಎಷ್ಟು ಖರ್ಚಾದರೂ ಪರ್ವಾಗಿಲ್ಲ! ಅಪ್ಪನಿಗೆ ಅಂಗಡಿಯತ್ರ ಬರ್ಲಿಕ್ಕೆ ಹೇಳು.. ಕೊನೆಯ ವಾಕ್ಯ ತುಸು ದೂರದಿಂದ ಕೇಳಿದಾಗ ದೇವಪ್ಪನಿಗೆ ಅವರ ನಿರ್ಗಮನದ ಅರಿವಾಯ್ತು.

ಕತ್ತಲೆ ಅಂದ್ರೆ ಎಂತಮ್ಮ! ಅಂತ ಉತ್ತರ ಹೇಳಲಾರದ ಅಮ್ಮನನ್ನು ಪೀಡಿಸುತ್ತಿದ್ದ ದೇವಪ್ಪ ಚಿಕ್ಕಂದಿನಲ್ಲಿ. ಚಿತ್ರ, ಬೆಳಕು, ಬಣ್ಣ, ಆಕಾಶ, ಅಕ್ಷರ, ರೂಪ, ಚಂದ ಇತ್ಯಾದಿ ಹಲವು ಶಬ್ದಗಳ ಅರ್ಥ ದೇವಪ್ಪನ ಪೂರ್ಣ ಗ್ರಹಿಕೆಗೆ ಇನ್ನೂ ಬಂದಿರಲಿಲ್ಲ.

ದೇವಳದ ಪೂಜೆಯ ಗಂಟೆ ಸದ್ದು ಕೇಳ ತೊಡಗಿದಾಗ ರೂಢಿಯಂತೆ ಚಾವಡಿಯಿಂದಿಳಿದು ದೇವಳದ ಮೆಟ್ಟಿಲು ಹತ್ತಿದ. ಲಯಬದ್ಧವಾಗಿ ಬಾರಿಸುತ್ತಿದ್ದ ಗಂಟೆಗಳ ಸದ್ದಿನ ನಡುವಿನ ರಿಂಗಣ, ಭಕ್ತಿಯನ್ನು ಮೂಡಿಸಿತು. ಗಂಟೆ ಸದ್ದು ನಿಂತ ಕೊಂಚ ಹೊತ್ತಿನಲ್ಲಿ ಬೆಚ್ಚನೆಯ ಹವೆ ಬಳಿಸುಳಿದಾಗ ಕೈಯಾಡಿಸಿ ಆರತಿ ಆವಾಹಿಸಿದ.

ಕಣ್ಣು ಬರುವುದೆಂದರೆ ಏನು! ಎನ್ನುವ ಬಗ್ಗೆ ಎಲ್ಲ ವಿಷಯಗಳನ್ನು ದೇವಪ್ಪ ಕಲೆ ಹಾಕಿದ್ದರೂ ಅವನ ಗ್ರಹಿಕೆಗೆ ಇನ್ನೂ ಅದು ಸ್ಫುಟವಾಗಿರಲಿಲ್ಲ. ತಾನು ಚಿಕ್ಕಂದಿನಿಂದಲೂ ಸವರಿ, ಆಲಿಸಿ, ಆಘ್ರಾಣಿಸಿ ತನ್ನೊಳಗೆ ಮೂಡಿಸಿಕೊಂಡ ಎಲ್ಲಾ ವಸ್ತು ವಿಷಯ ಜೀವ ಸಂಕುಲ ಚರಾಚರಗಳೂ, ಇತರರು ಹೇಳುವುದನ್ನು ಕೇಳಿ ಊಹಿಸಿ ಗ್ರಹಿಸಿಕೊಂಡ ಭಾವನಾರ್ಥಕಗಳೂ, ಮತ್ತು ಇವೆರಡನ್ನೂ ಮೀರಿ ತನ್ನ ಅರಿವಿಗೆ ಬಂದ ಅವ್ಯಕ್ತ ಅಸ್ತಿತ್ವಗಳೂ, ತನ್ನ ಬದುಕಿನಲ್ಲಿ ಉಂಟಾಗಲಿರುವ ಈ ಬಹುಮುಖ್ಯ ಬದಲಾವಣೆಯ ಬಳಿಕ ಹೇಗೆ ತನ್ನ ಅರಿವನ್ನು ಸ್ಪರ್ಶಿಸಲಿವೆ ಎಂದು ತಿಳಿಯುವ ತವಕದಲ್ಲಿದ್ದ ದೇವಪ್ಪ. ಈ ಜಗತ್ತಿನ ನಿಜ’ರೂಪ’ ಇತರರು ಹೇಳುವಷ್ಟು ತನಗೆ ಮಹತ್ವಪೂರ್ಣವೇ ಎಂಬ ಗೊಂದಲದಲ್ಲಿದ್ದ.

ಅಮ್ಮನನ್ನು ತಾನು ಗ್ರಹಿಸಿಕೊಂಡಿರುವುದು ಅವಳ ದನಿಯಿಂದ, ಅವಳು ತನ್ನನು ಮುದ್ದಿಸುತ್ತಿದ್ದಾಗ ಆವರಿಸಿಕೊಳ್ಳುತ್ತಿದ್ದ ಬೆಚ್ಚನೆಯ ಮಮತೆ ಮತ್ತು ಹಿತವಾದ ಗಂಧದಿಂದ ಹಾಗೂ ಅವಳ ಇರುವಿಕೆಯ ವಲಯಸ್ಪರ್ಶದಿಂದ. ಅಪ್ಪನೂ ಅಕ್ಕನೂ ಹಾಗೇ ತನ್ನೊಳಗೆ ಮೂಡಿರುವುದು. ಇನ್ನು ಗೆಳೆಯರು ಮತ್ತು ನೆಂಟರಿಷ್ಟರನ್ನು ಬಿಟ್ಟರೆ ಉಳಿದವರು ಸ್ಪರ್ಶಕ್ಕೆ ನಿಲುಕದಿದ್ದರೂ ಅವರೂ ತನ್ನ ಆಕಾರದಲ್ಲೇ ಇರುವುದು ಎನ್ನುವ ಅರಿವು ಅನುಭವದಿಂದ ಮೂಡಿತ್ತು. ಅವರ ಧ್ವನಿ, ಮೈಗಂಧ ಮತ್ತು ಅವರು ಬಳಿಬಂದಾಗ ತನ್ನ ಮೈಯರಿವಿಗೆ ಸೋಕುವ ಅವರ ವಲಯ ಇತ್ಯಾದಿಗಳು ಅವರ ಗುರುತನ್ನು ಛಾಪಿಸುತ್ತಿದ್ದವು.

ಹೀಗೇ ಎಂದು ಹೇಳಲಾಗದಿದ್ದರೂ ತಾನೆಸೆದ ಮಾತು ಸುತ್ತಲಿನ ವಸ್ತು ವಿಷಯ ಸಂಕುಲವನ್ನು ಬೇರೆ ಬೇರೆ ಅಂತರಗಳಲ್ಲಿ ತಟ್ಟಿ ಮರಳಿ ಬಂದು ತನ್ನ ಕಿವಿ ಸೇರುವಾಗ ಆಯಾ ವಸ್ತು ವಿಷಯಗಳ ಪ್ರತ್ಯೇಕ ಮೂರ್ತತೆ ತನ್ನ ಗ್ರಹಿಕೆಗೆ ನಿಲುಕುತಿತ್ತು. 

ದೇವಪ್ಪ ತನ್ನೆಲ್ಲ ಕೆಲಸಗಳನ್ನೂ ಸ್ವತಂತ್ರವಾಗಿ ಮಾಡುತ್ತಿದ್ದ. ಊರಲ್ಲಿ ತನಗೆ ಬೇಕಾದೆಡೆಗೆಲ್ಲ ಸಂಚರಿಸಲೂ ಶಕ್ತನಾಗಿದ್ದ. ಊರಿನ ರಸ್ತೆಗಳ ಬಗ್ಗೆ ಅವನ ಅರಿವು ಅನೇಕರನ್ನು ಅಚ್ಚರಿಗೊಳಿಸುತ್ತಿದ್ದರೂ ದೇವಪ್ಪನಿಗೆ ಅದೊಂದು ಸಹಜ ಪ್ರಕ್ರಿಯೆಯಾಗಿತ್ತು. ಬೇಕರಿ, ಹೂವು, ಮೀನು ಮಾಂಸದಂಗಡಿ, ಗಟಾರ, ಮಸಣ, ದೇವಳ, ಬಸ್ಸು, ರಸ್ತೆ, ಊರಿನ ಅಂಗುಲ ಅಂಗುಲವೂ ದೇವಪ್ಪನ ಗ್ರಹಿಕೆಗೆ ಸ್ಪಂದಿಸುತ್ತಿದ್ದವು. ಅವನು ಗುರುತಿಸಲು ಸಾಧ್ಯವಾಗುವಂತೇ ಒಂದು ವಾಸನೆಯ ಎಸಳು ಅಥವಾ ಒಂದು ಶಬ್ದದ ಗೀಚನ್ನು ಅವನೆಡೆಗೆ ಎಸೆಯುತ್ತಿದ್ದವು. ಅವನ ಕೈಯಲ್ಲಿರುವ ಕೋಲು ಎಲ್ಲೋ ಒಮ್ಮೆ ನೆಲ ಸವರಿ ಅವನ ಗ್ರಹಿಕೆಗಳು ಸರಿ ಎನ್ನುವ ಸಾಕ್ಷಿ ಹೇಳುತ್ತಿತ್ತು.

ದೇವಪ್ಪನಿಗೆ ಅತ್ಯಂತ ಆಪ್ಯಾಯಮಾನವೆಂದರೆ ಮಳೆ. ಮಳೆ ಸುರಿಯುವಾಗ ಗಂಟೆಗಟ್ಟಲೆ ಚಾವಡಿಯಲ್ಲಿ ಕುಳಿತು ಆಲಿಸುತ್ತಿದ್ದ ದೇವಪ್ಪ. ಮಳೆಯ ನಿರಂತರ ಹನಿಗಳು ರಸ್ತೆ, ಹೆಂಚು, ಪೊದೆ, ಮರ, ತರಗೆಲೆ, ಕೊಳ ಇತ್ಯಾದಿಗಳ ಮೇಲೆ ಬೀಳುತ್ತಾ ಹೊರಡಿಸುವ ನಿನಾದದಲ್ಲಿ ಮುಳುಗಿರುತ್ತಿದ್ದ. ಈ ಮಳೆಹನಿಗಳು ಬೀಳುವಾಗ ಒಂದು ಹೆಂಚು ಹೊರಡಿಸುವ ಶಬ್ದ ತರಂಗಗಳಿಗೂ ಒಂದು ಪೊದೆಯು ಹೊರಡಿಸುವ ಶಬ್ದ ತರಂಗಗಳಿಗೂ ಒಂದು ಬಗೆಯ ಸಾಂದ್ರ ಸಂಪರ್ಕದ ಅಸ್ತಿತ್ವವು ದೇವಪ್ಪನಿಗೆ ಗೋಚರವಾಗುತ್ತಿತ್ತು. 

ಬೇರೆ ಬೇರೆ ಮೂಲದಿಂದ ಹೊರಡುವ ಈ ಶಬ್ದ ತರಂಗಗಳ ಕಾರಣ ಒಂದೇ ಆಗಿರುವುದರಿಂದ ಇವು ಒಂದನ್ನೊಂದು ಹೆಣೆದುಕೊಂಡು ಒಂದು ವಿಶಾಲವಾದ ಶಬ್ದ ಪದರವು ದೇವಪ್ಪನೊಳಗೆ ನಿರ್ಮಾಣವಾಗುತ್ತಿತ್ತು. ಈ ಅಭ್ಯಾಸವು ದೇವಪ್ಪನ ಪ್ರಜ್ಞೆಯನ್ನು ದಿವ್ಯತ್ವದ ಬಳಿಗೊಯ್ಯುತ್ತಿತ್ತು.  

ಇಂತಹ ದೇವಪ್ಪ, ಕಳೆದ ೧೬ ವರ್ಷಗಳಿಂದ ನೆಮ್ಮದಿಯಾಗಿ ಈ ಊರಲ್ಲಿ ಸಂಚರಿಸುತ್ತಿದ್ದ ದೇವಪ್ಪ ಇದೀಗ ತನ್ನ ಬದುಕಿನಲ್ಲಿ ತೆರೆದುಕೊಂಡಿರುವ ಒಂದು ಬಹುಮುಖ್ಯ ಬದಲಾವಣೆಯ ಸಾಧ್ಯತೆಯಿಂದಾಗಿ ತಲ್ಲಣಗೊಂಡಿದ್ದ. ಜೊತೆಗೆ ತಂದೆ, ತಾಯಿ, ಡಾಕ್ಟರು ಮತ್ತು ಇತರ ಸರ್ವಜನ ಸರ್ವಜ್ಞರೂ ತಮ್ಮ ತಮ್ಮ ಸಾಮರ್ಥ್ಯವನ್ನು ಮೀರಿ ಅವನನ್ನು ಇನ್ನಷ್ಟು ಗೊಂದಲಕ್ಕೀಡು ಮಾಡುತಿದ್ದರು.

ದೇವಪ್ಪ ನಿನಗೆ ಕಣ್ಣು ಬರ್ತದಂತಲ್ಲ ಮಾರಾಯ. ಆಮೇಲೆ ನಾನು ನಿನಗೆ ಚಂದ ಚಂದ ಹುಡುಗಿಯರ ಫೋಟೋ ತೋರಿಸ್ತೇನೆ ಆಯ್ತಾ ॒
ಫೋಟೋ ಅಂದ್ರೆ ಎಂತದಾ? ಉತ್ತರವಿರದ ಪ್ರಶ್ನೆಗಳು.  

ತಾನು ಬೆಳೆಯುತ್ತಾ ಬಂದಂತೆಲ್ಲ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಪ್ರಾಮಾಣಿಕವಾಗಿ ಯತ್ನಿಸಿದ್ದ ದೇವಪ್ಪ. ತನ್ನ ಬದುಕಿನಲ್ಲಿರುವ ತಾನು ಅನುಭವಿಸದಿರುವ ಹಲವು ವಿಷಯಗಳನ್ನು ಎಲ್ಲರೂ ಹೇಳಿದ ಮಾತ್ರಕ್ಕೆ ನಂಬಲೇಬೇಕಾದ ಅನಿವಾರ್ಯತೆ ದೇವಪ್ಪನಿಗಿತ್ತು. ಸತ್ಯದ ವೈಚಾರಿಕ ಅರ್ಥವೇ ಈ ರೀತಿಯಾಗಿ ದೇವಪ್ಪನಲ್ಲಿ ರೂಪುಗೊಂಡಿತ್ತು. 

ಅವ್ಯಕ್ತ ಕಳವಳದಿಂದ ಚಡಪಡಿಸುತ್ತಾ ಶಸ್ತ್ರ ಚಿಕಿತ್ಸೆಯ ಸುತ್ತಲಿನ ದಿನಗಳನ್ನು ಕಳೆದ ದೇವಪ್ಪ. 

ಕಣ್ಣಿನ ಪಟ್ಟಿ ಬಿಚ್ಚುತ್ತಿರುವಾಗಂತೂ ಕಾತರದಿಂದ ನಡುಗುತ್ತಿದ್ದ. ಮೆಲ್ಲನೆ ಕಣ್ಣು ತೆರೆದಾಗ ಅತ್ತಿತ್ತ ಸರಿದಾಡುತ್ತಿರುವ ಬೆಳಕಿನ ಗೋಳಗಳು. ಬಳಿಯಿಂದ ಅಮ್ಮ ಮಾತನಾಡಿದಳು. ದೇವೂ.. ಅದೂ ಗೋಳವೇ. ಸ್ವರವೂ ಗೋಳವೂ ತಾಳೆಯಾಗದ ಗೊಂದಲದಲ್ಲಿದ್ದ ದೇವಪ್ಪ ಅನುಭವದ ಅಮ್ಮನೇ ಬೇರೆ ಈ ಗೋಳವೇ ಬೇರೆ. ದಿನಕಳೆದ ಹಾಗೇ ಗೋಳಗಳೆಲ್ಲ ನಿಚ್ಚಳವಾಗ ತೊಡಗಿದವು. ಬಗೆ ಬಗೆಯ ಗೋಳಗಳು. ಬಣ್ಣವೆಂದರೆ ಇದೇ ಇರಬೇಕು. 

ಮೊದಲೆಲ್ಲ ಎರಡೆರಡು ಕಾಣುತ್ತಿದ್ದವೆಲ್ಲ ಒಂದನ್ನೊಂದು ಸೇರತೊಡಗಿದವು.  

ದೃಷ್ಟಿ ಸ್ಪಷ್ಟವಾಗುತ್ತಿದ್ದಂತೆ ಮೊದಲಿನ ಹಾಗೆ ಚಾವಡಿಯಲ್ಲಿ ಕುಳಿತು ತನ್ನ ಶಬ್ದಪ್ರಪಂಚದಲ್ಲಿ ಸುಳಿದಾಡಲು ಇಷ್ಟವಾಗುತ್ತಿರಲಿಲ್ಲ. ಜನರೆಲ್ಲ ವಿವರಿಸಲು ಯತ್ನಿಸುತ್ತಿದ್ದ ಜಗತ್ತು ನಿಜಕ್ಕೂ ಅಷ್ಟು ಸುಂದರವಾಗಿದೆಯೇ ಎಂದು ನೋಡುವ ತವಕ ಕಾಡುತ್ತಿತ್ತು. ಎದ್ದು ನಡೆಯತೊಡಗಿದ ದೇವಪ್ಪ. ಮುಂದಿನ ಹಲವು ದಿನ ನಡೆಯುತ್ತಲೇ ಇದ್ದ. ಜಗತ್ತನ್ನು ಒಂದೇಬಾರಿ ನುಂಗುವವನಂತೇ ಕಣ್ಣು ಬಿಟ್ಟು ನೋಡತೊಡಗಿದ. ದಾರಿ ತಪ್ಪಿದಾಗೆಲ್ಲ ಕಣ್ಣು ಮುಚ್ಚಿ ಶಬ್ದ ಪ್ರಪಂಚಕ್ಕೆ ಮರಳಿ ದಾರಿ ಕಂಡುಕೊಂಡ.  

ದಿನವೆಲ್ಲ ಊರುಸುತ್ತುವ ದೇವಪ್ಪ ಕೆಲವೊಮ್ಮೆ ಗಕ್ಕನೆ ನಿಲ್ಲುವ. ಅದು ಅವನ ಶಬ್ದ ಪ್ರಪಂಚದ ಪರಿಧಿ. ಮತ್ತೆ ಮರಳುವ. ಇಂಚು ಇಂಚಾಗಿ ತನ್ನ ಮನೆ, ವಟಾರ, ಬೀದಿ, ಸುತ್ತಮುತ್ತಲನ್ನೆಲ್ಲ ನೋಡಿ ತನ್ನೊಳಗೆ ಮೂಡಿಸಿಕೊಂಡ. ತಾನು ದಿನವೂ ಸವರಿ ನಡೆಯುತ್ತಿದ್ದ ಗೋಡೆಯಚೆ ಇರುವ ಪಕ್ಕದ ಮನೆಯ ಕೋಣೆಯಲ್ಲಿ ಏನಿದೆ ಎನ್ನುವ ಕುತೂಹಲ ಅಲ್ಲಿ ನುಗ್ಗಿ ನೋಡಿದಾಗಲೇ ಸಾಂತ್ವನ. ಇಂತಹ ತೀವ್ರ ಕುತೂಹಲದಿಂದ ಊರಿನ ಪ್ರತೀ ಮನೆಗೂ ಪ್ರತೀ ಕೋಣೆಗೂ ನುಗ್ಗಿ ನುಂಗುವವನಂತೇ ನೋಡಿ ಬರುವ ದೇವಪ್ಪನನ್ನು ಊರಿನ ಜನ ಒಂದು ಬಗೆಯ ಅನುಕಂಪದಿಂದ ಸಹಿಸಿಕೊಂಡರು.  

ಸುಮಾರು ಒಂದು ತಿಂಗಳಲ್ಲಿ ಊರಿನ ಇಂಚಿಂಚನ್ನು ಗ್ರಹಿಸಿಕೊಂಡ ಬಳಿಕ ದೇವಪ್ಪ ಕೊಂಚ ಸಾಂತ್ವನಗೊಂಡ. ಈ ನಡುವೆ ಮಾನವ ಸ್ವರಗಳೆಲ್ಲ ಈಗ ಸದೃಶವಾಗಿದ್ದವು. ಸುಮ್ಮನೆ ಎದುರುಬಂದು ನಿಂತವರನ್ನು ಗುರುತು ಹಿಡಿಯಲಾಗದಾಗ ಕಣ್ಣು ಮುಚ್ಚಿ ಬಳಿಸರಿದು ಅವರ ವಲಯ ಸ್ಪರ್ಶದಿಂದ ಗುರುತು ಹಿಡಿಯಲು ಯತ್ನಿಸುತ್ತಿದ್ದ. ಮೊದಲಿನ ಪ್ರಜ್ಞೆಗಳೆಲ್ಲ ಬಳಸದೇ ಕೊಂಚ ಜಡ್ಡು ಹಿಡಿದಿದ್ದವು.  

ದೇವಪ್ಪ ಒಂದು ಬಗೆಯಲ್ಲಿ ಜಾಗೃತನಾಗಿದ್ದ. ನಿದ್ದೆಯೆನ್ನುವುದು ಬಳಿಸುಳಿಯುತ್ತಿರಲಿಲ್ಲ. ಮಂಪರು ಕಾಡಿದರೂ ಮರುಕ್ಷಣ ಜಗ್ಗೆಂದು ಎಚ್ಚರಾಗುತ್ತಿದ್ದ. ಒಂದು ಹಗಲಿನಲ್ಲಿ ಎದುರು ಗೋಡೆಯನ್ನು ದುರುಗುಟ್ಟಿ ನೋಡುತ್ತಾ ಬೆರಗುಗೊಂಡವನನ್ನು ನೋಡಿ ಅಮ್ಮ ಕೇಳಿದಳು "ಏನೋ" "ಸೋಮಯಾಜಿಯವರ ಮನೆಯಲ್ಲಿ ಜನ ಸೇರಿದ್ದಾರೆ. ಅವರ ಹೆಂಡತಿ ಬಿದ್ದು ಬಿದ್ದು ಅಳುತ್ತಿದ್ದಾರೆ" ಮಗನ ಕನವರಿಕೆಯಂತಹ ಮಾತುಗಳಿಂದ ಅಮ್ಮ ಚಿಂತೆಗೊಳಗಾದಳು.  

ಅಷ್ಟರಲ್ಲಿ ಪೇಟೆಯಿಂದ ಮರಳಿದ ಅಪ್ಪ ಸುದ್ದಿ ತಂದರು. "ಸೋಮಯಾಜಿಯವರು ತೀರಿಕೊಂಡರಂತೆ" ಅದನ್ನೆಲ್ಲ ತನ್ನ ಮನೆಯಿಂದಲೇ ಹಲವು ಗೋಡೆಗಳ ಹಿಂದೆ ಕುಳಿತು ನೋಡಿದ್ದ ದೇವಪ್ಪ. ತಾಯಿ ಈ ಆಶ್ಚರ್ಯವನ್ನು ಗಂಡನ ಬಳಿ ಹೇಳುತ್ತಿದ್ದಂತೇ ಧಿಗ್ಗನೆದ್ದು ಹೊರನಡೆದ ದೇವಪ್ಪ ಸೋಮಯಜಿಯವರ ಮನೆಗೆ ಹೋಗಿ ಸ್ಮಶಾನದವರೆಗೂ ಹಿಂಬಾಲಿಸಿ ದೇಹ ಸುಡುವುದನ್ನು ಪೂರ್ತಿ ನೋಡಿ ಮನೆಗೆ ಮರಳಿದ.  

ಅದು ದೇವಪ್ಪ ಕಣ್ಣಾರೆ ಕಂಡ ಮೊದಲ ಸಾವು.  

ಸಾವಿನ ಘಟನೆಯ ಬಳಿಕ ದೇವಪ್ಪ ಬದಲಾಗಿದ್ದ. ಚಾವಡಿಯಿಂದ ಕೆಳಗೆ ಕಾಲಿಡುತ್ತಿರಲಿಲ್ಲ. ಕೆಲವೊಮ್ಮೆ ಗೋಡೆಗೆ ಮುಖಮಾಡಿ ಕುಳಿತು ದುರುಗುಟ್ಟಿ ನೋಡುತ್ತ ದೂರದೂರದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳಿಗೆಲ್ಲ ಸಾಕ್ಷಿಯಾಗುತ್ತಿದ್ದ. ಊರಿಗೆ ಊರೇ ದೇವಪ್ಪನ ಗ್ರಹಿಕೆಯೊಳಗೆ ಬಂಧಿಯಾಗಿತ್ತು. ಹೆತ್ತವರು ಚಿಂತೆಗೀಡಾಗಿದ್ದರು. ಅಕ್ಕ ಪಕ್ಕದ ಮನೆಯವರು ಗೊಂದಲಕ್ಕೀಡಾಗಿದ್ದರು. ಏಕೆಂದರೆ ಅವರು ಕದ್ದು ಮುಚ್ಚಿ ಮಾಡುವ ಎಲ್ಲ ಕ್ರಿಯೆಗಳನ್ನು ದೇವಪ್ಪನೆಂಬವನೊಬ್ಬ ನೋಡುತ್ತಿರುತ್ತಾನೆ ಎಂಬ ಸತ್ಯ ಅವರನ್ನು ಕಾಡುತ್ತಿತ್ತು. ಊರಿನ ಮಿಕ್ಕೆಲ್ಲರನ್ನೂ ಸೋಜಿಗ ಕವಿದಿತ್ತು.  

ಒಟ್ಟಿನಲ್ಲಿ ದೇವಪ್ಪನಿಗೆ ಕಣ್ಣು ಬಂದ ಪ್ರಕರಣದ ಪರಿಣಾಮ ಇಡೀ ಊರಿಗೇ ಸಂಭವಿಸಿತ್ತು. ತಂದೆ ಅವನ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದರು. ಮನೆಗೆ ಟಿ.ವಿ. ಬಂತು. ದೇವಪ್ಪನಿಗೆ eಗತ್ತೇ ಟಿ.ವಿ.ಯಾಗಿತ್ತು. ಸುತ್ತಲಿನ ವಿದ್ಯಮಾನಗಳೆಲ್ಲ ಟಿವಿಯ ಕಲ್ಪನೆಗಳಿಗಿಂತ ಹೆಚ್ಚು ಸ್ವಾರಸ್ಯಕರವೆನಿಸುತ್ತಿತ್ತು.  

ಹೀಗೆ, ಹೆತ್ತವರಿಗೆ ಕಣ್ಣು ಕಾಣದ ದೇವಪ್ಪನಿಗಿಂತ ಕಣ್ಣು ಕಾಣುವ ದೇವಪ್ಪನನ್ನು ಸುಧಾರಿಸಿಕೊಳ್ಳುವುದು ಸಮಸ್ಯೆಯೆನಿಸತೊಡಗಿತು. ಸುಮಾರು ಒಂದು ತಿಂಗಳ ಬಳಿಕ ದೇವಪ್ಪನಲ್ಲಿ ಕೊಂಚ ಬದಲಾವಣೆ ಕಂಡು ಬಂತು. ದಿನಬೆಳಗಿನಿಂದ ರಾತ್ರಿಯವರೆಗೆ ಆ ಊರಿನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳೆಲ್ಲ ಯಾಂತ್ರಿಕವೆನಿಸಿ ಏಕತಾನತೆ ಕಾಡತೊಡಗಿತು.

ಮತ್ತೆ ಎದ್ದು ತನ್ನ ಶಬ್ದ ಪರಿಧಿಯ ಹೊರಗಿನ ಪ್ರಪಂಚದತ್ತ ಸಾಗಿದ. ಮತ್ತೆ ಹೊಟ್ಟೆಬಾಕನಂತೆ ಆ ಪ್ರಪಂಚವನ್ನೂ ನುಂಗಿ ಕೊಂಡು ಮನೆಗೆ ಮರಳಿ ಚಾವಡಿಯಲ್ಲಿ ಕುಳಿತು ಆಸ್ವಾದಿಸತೊಡಗಿದ.  

ಹೀಗೆ ಕೆಲವೇ ತಿಂಗಳಲ್ಲಿ ಸುತ್ತಮುತ್ತಲಿನ ಹಲವು ಊರುಗಳು ದೇವಪ್ಪನ ಗ್ರಹಿಕೆಯಳತೆಗೆ ಬಂದವು. ಸರಿಯಾಗಿ ಕಣ್ಣು ಮುಚ್ಚಿ ನಿದ್ದೆ ಮಾಡುತ್ತಿರುವ ದೇವಪ್ಪನನ್ನು ನೋಡದೆ ಹಲವು ತಿಂಗಳಾಗಿದ್ದವು. ಅಂದು ಬೆಳಗ್ಗೆ ತಾಯಿ ಎದ್ದಾಗ ದೇವಪ್ಪ ಇನ್ನೂ ಮಲಗಿರುವುದನ್ನು ಕಂಡು ಗಾಬರಿಗೊಂಡು ಬಳಿ ಬಂದಳು. ದೀರ್ಘವಾಗಿ ಶ್ವಾಸ ಬಿಡುತ್ತಾ ಮಲಗಿರುವವನನ್ನು ನೋಡಿ ಸಮಾಧಾನಗೊಂಡಳು.  

ಆ ದಿನವಿಡೀ ನಿದ್ರೆಯಲ್ಲಿಯೇ ಕಳೆದ ದೇವಪ್ಪನನ್ನು ತಾಯಿಯೂ ಎಚ್ಚರಿಸಲು ಹೆಚ್ಚು ಬಲವಂತ ಮಾಡಲಿ. ಮಧ್ಯಾಹ್ನದ ಹೊತ್ತಿಗೊಮ್ಮೆ ಊಟಕ್ಕೆಂದು ಎಬ್ಬಿಸಲು ಯತ್ನಿಸಿದಾಗ ನಿದ್ರೆಯಲ್ಲಿಯೇ ಊಟ ಬೇಡ ಎಂದು ಅತ್ತ ಹೊರಳಿ ಮಲಗಿದವನನ್ನು ಮತ್ತೆ ಎಚ್ಚರಿಸಲಿಲ್ಲ ತಾಯಿ.  

ಮರುದಿನ ಬೆಳಗ್ಗೆ ಎಚ್ಚರಾಗಿ ಕಣ್ಣು ಬಿಟ್ಟಾಗ ಆಕಾಶ ಕಂಡಿತು ದೇವಪ್ಪನಿಗೆ. ಎದ್ದು ಕುಳಿತು ಸುತ್ತಲೊಮ್ಮೆ ಕಣ್ಣ್ ಹಾಯಿಸಿದ. ಬಟಾಬಯಲು. ಗೋಡೆಗಳೆಲ್ಲ ಮಾಯವಾಗಿ ತಾನೊಂದು ವಿಸ್ತಾರವಾದ ಬಯಲಿನಲ್ಲಿ ಬೆತ್ತಲೆ ಕುಳಿತಿದ್ದೇನೆ ಅನಿಸತೊಡಗಿತು. ತಮ್ಮ ತಮ್ಮ ಮನೆ, ಮಾರುಕಟ್ಟೆಗಳಲ್ಲೆಲ್ಲ ವ್ಯಸ್ತರಾಗಿರುವ ಜನರೆಲ್ಲ ಆ ಬಟಾ ಬಯಲಿನಲ್ಲಿ ಅಲ್ಲಲ್ಲಿ ಬೆತ್ತಲೆ ಸುಳಿದಾಡುತ್ತಿದ್ದರು. ಆ ಬೆತ್ತಲೆ ಬಯಲು ದೇವಪ್ಪನನ್ನು ಕಂಗೆಡಿಸಿತು. ಕೆಳಗೆ ನೋಡಿದರೆ ಗಾಜಿನ ನೆಲ ಮತ್ತು ತಳವೇ ಕಾಣದ ಪ್ರಪಾತ. ಆಕಾಶವೆಲ್ಲ ತೀಕ್ಷ್ಣ ಬೆಳಕು. ಕಣ್ಣು ಕುಕ್ಕಿದಾಗ ಕಣ್ಣು ಮುಚ್ಚಿದ. ಮತ್ತೆ ಕಣ್ಣು ತೆರೆಯಲು ಹೆದರಿ ಬೆವರಿದ. ಸುಸ್ತಾಗಿ ಒರಗಿಕೊಂಡವನಿಗೆ ಮತ್ತೆ ಗಾಢ ನಿದ್ದೆ.  

ನಿದ್ದೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೇವಪ್ಪನನ್ನು ನೋಡಿ ಗಾಬರಿಯಿಂದ ಬಳಿಬಂದ ತಾಯಿ ಎಚ್ಚರಿಸಿದಳು. ಒಂದು ಕ್ಷಣ ಕಣ್ಣು ತೆರೆದವನು ಕಿಟಾರೆಂದು ಕಿರುಚಿ ಮೂಲೆಗೆ ಸರಿದ ದೇವಪ್ಪ. ಕಣ್ಣನ್ನು ಗಟ್ಟಿಯಾಗಿ ಕಿವಿಚಿ ಅಳತೊಡಗಿದ. ತಾಯಿ ಬಳಿಬಂದು ಸಾಂತ್ವನಗೊಳಿಸಲು ಯತ್ನಿಸಿದಾಗ ಎದ್ದು ದೂರಸರಿದ. ಕಣ್ಣು ಮುಚ್ಚಿಕೊಂಡೇ ಒಳಕೋಣೆಗೆ ನುಗ್ಗಿ ತಾನು ಈವರೆಗೆ ಮರೆತುಬಿಟ್ಟಿದ್ದ ಮೂಲೆಸೇರಿದ್ದ ತನ್ನ ಕೋಲನ್ನು ಸೆಳೆದು, ಬಾಚಿ ತಬ್ಬಿಕೊಂಡ. ಅದು ಅವನಿಗೆ ಸಾಂತ್ವನ ನೀಡಿತು.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ