ಅಕ್ಟೋಬರ್ 31, 2008

ಕ್ಯಥೊಲಿಕರು ಮತ್ತು ಗೌಡ ಸಾರಸ್ವತರು

ಮಂಗಳೂರಿನ ಹೆಚ್ಚಿನ ಕ್ಯಥೊಲಿಕರು ಗೌಡ ಸಾರಸ್ವತ ಕೊಂಕಣಿಗಳ ಹಾಗೆ ಗೋವಾದಿಂದ ಬಂದು ನೆಲೆ ನಿಂತವರು. ಅವರಲ್ಲಿ ಹೆಚ್ಚಿನವರು ಅದೇ ಕೊಂಕಣಿಗಳ ರಕ್ತದವರೇ. ಕ್ಯಥೊಲಿಕರು ತಮ್ಮನ್ನು ತಾವು "ಕ್ರಿಸ್ತಾಂವ್" ಎಂದು ಕರೆದು ಕೊಂಡರೆ ಗೌಡ ಸಾರಸ್ವತರನ್ನು "ಕೊಂಕ್ನೆ" ಅಥವಾ "ಕೊಂಕಣ" ಎಂದು ಕರೆಯುವರು.  

ಕೊಂಕಣಿಗಳು ಪೋರ್ತುಗೀಸರ ಉಪಟಳದ ಕಾರಣ ಓಡಿ ಬಂದು ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ನೆಲೆ ನಿಂತು ನೆಮ್ಮದಿಯನ್ನು ಕಂಡರೆ, ಅದೇ ಪೋರ್ತುಗೀಸರಿಂದ ಮತಾಂತರಗೊಂಡು ಕ್ಯಥೊಲಿಕರಾದ ಅವರ ದಾಯಾದಿಗಳು ನಂತರದ ದಿನಗಳಲ್ಲಿ ಎರಡು ಹಂತಗಳಲ್ಲಿ ವಲಸೆ ಬರಬೇಕಾಯಿತು.  

ಮೊದಲನೆಯದು, ಮತಾಂತರಗೊಂಡವರನ್ನು ಪೋರ್ತುಗೀಸರು ಸಂಶಯದಿಂದ ನೋಡಿ ಅವರ ಆಚಾರ ವಿಚಾರ ಉಡುಗೆ ತೊಡುಗೆಗಳ ಮೇಲೆ ಪ್ರತಿಬಂಧ ಹೇರಿ ಕಿರುಕುಳ ಕೊಟ್ಟಾಗ, ಎರಡನೆಯದು ಮರಾಠರು ತಮ್ಮ ಗೋವ ದಂಡಯಾತ್ರೆಯ ಸಮಯದಲ್ಲಿ ಈ ಕ್ಯಥೊಲಿಕರ ಮೇಲೆ ವಿಕೃತ ಹಿಂಸಾಚಾರವನ್ನು ಕೈಗೊಂಡಾಗ.  

ಅವರು ಮಂಗಳೂರಿನತ್ತ ವಲಸೆ ಬಂದರೂ ಅವರ ಬವಣೆ ನಿಲ್ಲಲಿಲ್ಲ. ಕ್ಯಥೊಲಿಕರು ಪೋರ್ತುಗೀಸರ ಪರವೆಂದು ಟಿಪ್ಪು ನಡೆಸಿದ ಎಥ್ನಿಕ್ ಕ್ಲಿಯೇನ್ಸಿಂಗ್ ನಲ್ಲಿ ಸಾವಿರಾರು ಕ್ಯಥೊಲಿಕರನ್ನು ಶ್ರೀರಂಗ ಪಟ್ಟಣಕ್ಕೆ ಕಾಲು ನಡಿಗೆಯಲ್ಲಿ ಒಯ್ದ ಗಾಥೆ ಮತ್ತು ತದನಂತರದ ಹಿಂಸಾಚಾರ ಕ್ಯಥೊಲಿಕರ ಪೀಳಿಗೆ ಮರೆತಿಲ್ಲ. ಹಾಗೆ ಶ್ರೀರಂಗ ಪಟ್ಟಣಕ್ಕೆ ಒಯ್ದು ಹೆಂಗಸರನ್ನು ಟಿಪ್ಪುವಿನ ಸೈನಿಕರು ಭೋಗಿಸಿ, ಮಕ್ಕಳನ್ನು ಯುವಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದರೂ ಟಿಪ್ಪು ಸತ್ತ ಮೇಲೆ ಮರಳಿ ಬಂದ ಇವರು ದಿಕ್ಕು ತೋಚದೆ ಕೊಡಗಿನಲ್ಲಿ ನೆಲೆ ನಿಂತರು. ಇವತ್ತಿಗೂ ವಿರಾಜ ಪೇಟೆಯ ಬಳಿ ಇರುವ ಹಲವು ಮುಸಲ್ಮಾನರಲ್ಲಿ ಆ ಗೋವಾದ ಸಾರಸ್ವತ ಕೊಂಕಣಿಗಳ ವಂಶ ವಾಹಿಗಳು ಇರಬಹುದು. (ಅಲನ್ ಮಚಾದೋ ಪ್ರಭು ಬರೆದ "ಸರಸ್ವತೀಸ್ ಚಿಲ್ಡ್ರನ್" ನಲ್ಲಿ ಈ ಗಾಥೆಯನ್ನು ಓದಬಹುದು)  ಗೋವಾದಿಂದ ವಿರಾಜ ಪೇಟೆಯವರಿಗಿನ ಬವಣೆ ಒಂದೇ ಪೀಳಿಗೆಯಲ್ಲಿ ಆಗದಿದ್ದರೂ ಇತಿಹಾಸದ ೩೦೦ ವರ್ಷಗಳು ಬಹಳ ದೀರ್ಘವಲ್ಲ. ಆದರೆ ಆ ಮುನ್ನೂರು ವರ್ಷಗಳಲ್ಲಿ ಕ್ಯಥೊಲಿಕರು ಅವರದೇ ವಿಶಿಷ್ಟ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ.  

ಇಂದಿಗೂ ಸಾರಸ್ವತ ಕೊಂಕಣಿಗಳಿಗೆ ಕ್ಯಥೊಲಿಕರ ಮೇಲೆ ಸಾಫ್ಟ್ ಕಾರ್ನರ್ ಇದೆ. ಉಳಿದ ಜಾತಿಗಳಿಗಿಂತ ಹೆಚ್ಚು ಅವರ ಬಗ್ಗೆ ಒಂದು ಸಣ್ಣಗೆ ತುಡಿಯುವ ಪ್ರೀತಿ ಇದೆ. ಬಹುಶ ಒಬ್ಬ ಕೊಂಕಣಿಯಾಗಿ ನಾನು ಕ್ಯತೋಲಿಕನಿಂದ ಇದೇ ಪ್ರೀತಿಯನ್ನು ಅಪೇಕ್ಷೆ ಪಡುವುದು ಎಷ್ಟು ಸಾಧು ಎನ್ನುವುದು ನನಗೆ ತಿಳಿಯುತ್ತಿಲ್ಲ.  

ಪೋರ್ತುಗೀಸರು ಧರ್ಮ ನಿಷ್ಠರಾದ ಸಾರಸ್ವತರನ್ನು ಮತಾಂತರಿಸಲು ಬಹಳ ಕಷ್ಟ ಪಟ್ಟಿದ್ದರು. ಕೊನೆಗೆ ಅವರು ಜಯಗಳಿಸಿದ್ದು ಭೇಧೋಪಾಯದಲ್ಲಿ. ಸಾರಸ್ವತರ ಇದೇ ಧರ್ಮ ನಿಷ್ಟತೆ ಅವರಿಗೆ ಮುಳುವಾಯಿತು. ಮತಾಂತರಿಗಳು ಒಬ್ಬ ಸಾರಸ್ವತನ ಬಾಯಿಗೆ ಬಲವಂತದಿಂದ ಗೋಮಾಂಸವನ್ನು ತುರುಕಿದಾಗ ಅವನ ಇಡೀ ಕುಟುಂಬವನ್ನೇ ಬಹಿಷ್ಕರಿಸಿದ ಸಾರಸ್ವತ ಸಮಾಜ ಅಂದು ಮಾಡಿದ್ದು "ಸ್ವಜನ ವಿಶ್ವಾಸಘಾತ" ಆ ಕುಟುಂಬ ಅನುಭವಿಸಿರಬಹುದಾದ ಒಂಟಿತನ, ನೋವು, ಅವಮಾನ, ಅಸಹಾಯಕತೆ ನನ್ನಲ್ಲಿ ತಲ್ಲಣ ಉಂಟು ಮಾಡುತ್ತದೆ. ನನ್ನ ಇಡಿ ಬರಹ ಮತ್ತೆ ಜಾಗೃತವಾಗಿರುವ ಸ್ವಜನ ಪ್ರೇಮದಂತೆ ಭಾಸವಾಗುತ್ತಿದೆ. 

ಆದರೆ ಇದೇ ಸ್ವಜನ ಪ್ರೇಮ ಧರ್ಮದ ಅಂತರವನ್ನು ಮರೆಸಿದರೂ ಸಾಕು.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ